
ಲೋಕಾಯುಕ್ತ ಬಲೆಗೆ ಬಿದ್ದಿದ್ದ ಇನ್ಸ್ಪೆಕ್ಟರ್ ಗೋವಿಂದರಾಜು ಅಮಾನತು
ನ್ಯಾಯಾಲಯಕ್ಕೆ 'ಬಿ' ವರದಿ ಸಲ್ಲಿಸಲು ಲಂಚದ ಬೇಡಿಕೆ ಇಟ್ಟು, ಲೋಕಾಯುಕ್ತರ ಬಲೆಗೆ ಬಿದ್ದಿದ್ದ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗೋವಿಂದರಾಜು ಅವರನ್ನು ಅಮಾನತುಗೊಳಿಸಲಾಗಿದೆ.
ಚಿಟ್ ಫಂಡ್ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯಕ್ಕೆ 'ಬಿ' ವರದಿ ಸಲ್ಲಿಸಲು ಲಂಚದ ಬೇಡಿಕೆ ಇಟ್ಟು, ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಗೋವಿಂದರಾಜು ಅವರನ್ನು ಅಮಾನತುಗೊಳಿಸಲಾಗಿದೆ.
4 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಗೋವಿಂದರಾಜು ಸಿಕ್ಕಿ ಬಿದ್ದಿದ್ದರು. ಬಂಧನ ವೇಳೆ ಆರೋಪಿ ಗೋವಿಂದ ರಾಜು ರಂಪಾಟ ಸೃಷ್ಟಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಾಷ್ಟು ವೈರಲ್ ಆಗಿ ಸುದ್ದಿಯಾಗಿತ್ತು.
ಯೋಗಮಣಿ ಚೌಧರಿ ಎಂಬುವವರಿಂದ ದೂರುದಾರ ಮೊಹಮ್ಮದ್ ಸ್ನೇಹಿತರಾದ ಸೂಜನ್, ಸೂರಜ್, ಶ್ರೀನಿವಾಸ್ ಮತ್ತು ಲಕ್ಷ್ಮೀ ಎಂಬುವರು ಸಾಲ ಪಡೆದಿದ್ದರು. ಕೆಲವು ತಿಂಗಳಗಳ ಕಾಲ ಬಡ್ಡಿ ಪಾವತಿಸಿದರಾದರೂ ಬಳಿಕ ನೀಡಿರಲಿಲ್ಲ. ಶ್ಯೂರಿಟಿ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಈ ಸಂಬಂಧ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 47.25 ಲಕ್ಷ ರೂ. ಸಾಲಕ್ಕೆ ಸಂಬಂಧಿಸಿದ ಚೆಕ್ ಬೌನ್ಸ್ ಪ್ರಕರಣದಲ್ಲಿ ಬಿ-ವರದಿ ಸಲ್ಲಿಸಲು ಗೋವಿಂದರಾಜು ಬರೋಬ್ಬರಿ 7.50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಲ್ಲಿ ಈಗಾಗಲೇ 6 ಲಕ್ಷ ರೂ. ಹಣವನ್ನು ಪಡೆದಿದ್ದ ಇನ್ಸ್ಪೆಕ್ಟರ್, ಹೆಚ್ಚುವರಿಯಾಗಿ ಮತ್ತೊಂದು ಲಕ್ಷ ರೂ. ಮುಂಗಡ ಪಡೆದಿದ್ದರು. ಉಳಿದ 4 ಲಕ್ಷ ರೂ. ಹಣವನ್ನು ಪಡೆಯುವಾಗ ಮೈಸೂರು ರಸ್ತೆಯ ಸಿಎಆರ್ ಮೈದಾನದ ಬಳಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದ್ದರು.
ಪ್ರಕರಣದಲ್ಲಿ ಮೊಹಮ್ಮದ್ ಪಾತ್ರ ಇಲ್ಲದಿದ್ದರೂ ಅವರಿಗೆ ವಾಟ್ಸ್ಆ್ಯಪ್ ಮೂಲಕ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಇನ್ಸ್ಪೆಕ್ಟರ್, ಹಣ ನೀಡದಿದ್ದರೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಈ ಕಿರುಕುಳ ತಾಳಲಾರದೆ ಮೊಹಮ್ಮದ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಸದ್ಯ ಆರೋಪಿ ಇನ್ಸ್ಪೆಕ್ಟರ್ ಗೋವಿಂದರಾಜು ಬಂಧನದಲ್ಲಿದ್ದು, ತನಿಖೆ ಮುಂದುವರಿಸಲಾಗಿದೆ.

