New record in timely service: Disposal of 99.35% applications during the year
x

ಸಾಂದರ್ಭಿಕ ಚಿತ್ರ

ಸಕಾಲ ಸೇವೆಯಲ್ಲಿ ಹೊಸ ದಾಖಲೆ: ವರ್ಷದಲ್ಲಿ ಶೇ. 99.35 ರಷ್ಟು ಅರ್ಜಿಗಳ ವಿಲೇವಾರಿ

ನಾಡ ಕಚೇರಿ ಹಾಗೂ ತಹಶೀಲ್ದಾರ್ ಕಚೇರಿಗಳಲ್ಲಿ ಜನರಿಗೆ ಎಲ್ಲಾ ಸೇವೆಗಳೂ ತ್ವರಿತವಾಗಿ ಲಭ್ಯವಾಗಬೇಕು ಎಂಬ ನಿಟ್ಟಿನಲ್ಲಿ ಕಳೆದ ಎರಡೂವರೆ ವರ್ಷದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.


Click the Play button to hear this message in audio format

ಜನಸಾಮಾನ್ಯರಿಗೆ ನಿಗದಿತ ಅವಧಿಯೊಳಗೆ ಸೇವೆ ಒದಗಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ʼಸಕಾಲʼದಡಿಯಲ್ಲಿ 2025-2026ನೇ ಸಾಲಿನಲ್ಲಿ ಶೇ. 99.35 ರಷ್ಟು ಅರ್ಜಿಗಳಿಗೆ ಕಾಲ ಮಿತಿಯೊಳಗೆ ಸೇವೆ ಒದಗಿಸಲಾಗಿದೆ ಎಂದು ಸರ್ಕಾರ ಸದನಕ್ಕೆ ಮಾಹಿತಿ ನೀಡಿದೆ.

ಬುಧವಾರ(ಮಾ.18) ವಿಧಾನ ಪರಿಷತ್‌ನಲ್ಲಿ ಕೆ.ಅಬ್ದುಲ್ ಜಬ್ಬಾರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ,“ನಾಡ ಕಚೇರಿ ಹಾಗೂ ತಹಶೀಲ್ದಾರ್ ಕಚೇರಿಗಳಲ್ಲಿ ಜನರಿಗೆ ಎಲ್ಲಾ ಸೇವೆಗಳೂ ತ್ವರಿತವಾಗಿ ಲಭ್ಯವಾಗಬೇಕು ಎಂಬ ನಿಟ್ಟಿನಲ್ಲಿ ಕಳೆದ ಎರಡೂವರೆ ವರ್ಷದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲಾಗಿದೆ. ಪರಿಣಾಮ ಜಾತಿ-ಆದಾಯ ಪ್ರಮಾಣ ಪತ್ರ ಸೇರಿದಂತೆ ಸಕಾಲ ಯೋಜನೆಯ ಅಡಿಯಲ್ಲಿ ಲಭ್ಯವಾಗುವ ಎಲ್ಲಾ ಸೇವೆಗಳನ್ನೂ ನಿಗದಿತ ಅವಧಿಯಲ್ಲಿ ನೀಡಲಾಗುತ್ತಿದೆ” ಎಂದರು.

1.6 ಕೋಟಿ ಅರ್ಜಿ ಸಲ್ಲಿಕೆ

“ಕಳೆದ ವರ್ಷ ವಿವಿಧ ಸೇವೆಗಳಿಗಾಗಿ ನಾಡ ಕಚೇರಿಗೆ ಸುಮಾರು 1.6 ಕೋಟಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 98 ಲಕ್ಷ ಅರ್ಜಿಗಳಿಗೆ ಸಕಾಲದಲ್ಲಿ ಸೇವೆ ನೀಡಲಾಗಿದೆ. ಶೇ.98.92 ರಷ್ಟು ಅರ್ಜಿಗಳಿಗೆ ಸಕಾಲದಲ್ಲಿ ಸೇವೆ ನೀಡಲಾಗಿದ್ದು, ಶೇ.1.1 ರಷ್ಟು ಅರ್ಜಿಗಳಿಗೆ ಮಾತ್ರ ಸಕಾಲ ಮಿತಿಗಿಂತ ವಿಳಂಬವಾಗಿದೆ. ಇನ್ನೂ ಪ್ರಸ್ತುತ ವರ್ಷ ಶೇ. 99.35 ರಷ್ಟು ಅರ್ಜಿಗಳಿಗೆ ಸಕಾಲ ಮಿತಿಯಲ್ಲಿ ದಾಖಲೆ ನೀಡಿದ್ದೇವೆ” ಎಂದು ವಿವರಿಸಿದರು.

ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಲು ಅವಕಾಶ

ಜನ ಸಮಾನ್ಯರು ನಮ್ಮ ಕಚೇರಿಗೆ ಆಗಮಿಸಿದರೆ ಅವರಿಗೆ ಸಮಯ ವ್ಯರ್ಥವಾಗುತ್ತದೆ ಎಂಬ ಕಾರಣಕ್ಕಾಗಿ ಅವರು ಮನೆಯಿಂದಲೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಜಾತಿ-ಆದಾಯ, ನಿವಾಸಿ ದೃಢೀಕರಣ ಪ್ರಮಾಣ ಪತ್ರಗಳಿಗಾಗಿ ಅವರು ಮನೆಯಿಂದಲೇ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಲ್ಲದೆ, ಅವರ ಅರ್ಜಿ ಪ್ರತಿಯೊಂದು ಹಂತ ದಾಟುವಾಗಲೂ ಅದರ ಮಾಹಿತಿಯನ್ನು ಮೆಸೇಜ್ ಮೂಲಕ ಅವರ ಮೊಬೈಲ್ ಗೆ ತಲುಪಿಸುವ ವ್ಯವಸ್ಥೆ ಇದೆ. ಕೊನೆಗೆ ಜನ ಮನೆಯಲ್ಲೇ ಕುಳಿತು ಅವರ ಕೋರಿಕೆಯ ಪ್ರಮಾಣ ಪತ್ರಗಳನ್ನು ಪ್ರಿಂಟ್ಔಟ್ ತೆಗೆದುಕೊಳ್ಳಬಹುದು ಎಂದರು.

ಹೊಸ ತಂತ್ರಾಂಶ ಅಭಿವೃದ್ಧಿ

ಈ ವಿಧಾನವನ್ನು ಮತ್ತಷ್ಟು ಸರಳೀಕರಿಸುವ ಸಲುವಾಗಿ, ಜನ ಸಾಮಾನ್ಯರಿಗೆ ಜಾತಿ-ಆದಾಯ ಪ್ರಮಾಣ ಪತ್ರಗಳನ್ನು ಸ್ವಯಂ ಚಾಲಿತವಾಗಿ ನೀಡುವ ಸಲುವಾಗಿ ಕಳೆದ ಒಂದು ವರ್ಷದಿಂದ ತಂತ್ರಾಂಶವೊಂದನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಕುಟುಂಬ ಡೇಟಾಬೇಸ್‌ನಲ್ಲಿ ಮನೆ ವಿಳಾಸ, ಜಾತಿ ಆದಾಯ ಮಾಹಿತಿ ಇರುತ್ತದೆ. ಅಲ್ಲಿಂದ ಡೇಟಾಗಳನ್ನು ಸ್ವೀಕರಿಸಿ ಸ್ವಯಂ ಚಾಲಿತವಾಗಿ ಪ್ರಮಾಣ ಪತ್ರ ನೀಡುವ ಸಂಬಂಧ ಪ್ರಯತ್ನ ನಡೆಯುತ್ತಿದೆ. ಒಂದು ವರ್ಷದಿಂದ ಈ ತಂತ್ರಾಂಶದ ವಿನ್ಯಾಸ ನಡೆಯುತ್ತಿದ್ದು, ಇನ್ನಷ್ಟಯ ಸರಳೀಕರಣ ಆಗುತ್ತದೆ” ಎಂದು ಭರವಸೆ ನೀಡಿದರು.

74 ಕೋಟಿ ಪುಟಗಳ ಸ್ಕ್ಯಾನ್‌

ಭೂ ಸುರಕ್ಷಾ ಯೋಜನೆಯ ಬಗ್ಗೆ ಸದನಕ್ಕೆ ಮಾಹಿತಿ ನೀಡಿದ ಅವರು, “ರಾಜ್ಯದಲ್ಲಿ ಎಲ್ಲಾ ಮೂಲ ಭೂ ದಾಖಲೆಗಳೂ ಗಣಕೀಕರಣ ಆಗುತ್ತಿದೆ. ಈಗಾಗಲೇ 74 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಈ ಎಲ್ಲಾ ದಾಖಲೆಗಳನ್ನೂ ಮನೆಯಲ್ಲೇ ಕುಳಿತು ಜನ ಸಾಮಾನ್ಯರು ಸರ್ಟಿಫೈಡ್ ಕಾಪಿ ಪಡೆಯಬಹುದು. ಇನ್ಮುಂದೆ ತಮ್ಮ ಭೂ ದಾಖಲೆಗಳಿಗಾಗಿ ಅನಗತ್ಯವಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವ ಅಗತ್ಯ ಇರುವುದಿಲ್ಲ. ಹೀಗಾಗಿ ಕಂದಾಯ ಇಲಾಖೆಯನ್ನು ಜನಸ್ನೇಹಿಗೊಳಿಸುವ ನಿಟ್ಟಿನಲ್ಲಿ ನಿರಂತರ ಸುಧಾರಣೆ ಮಾಡಲಾಗುತ್ತಿದ್ದು, ಮತ್ತಷ್ಟು ಸುಧಾರಣೆಯಾಗಬೇಕಿದೆ. ಆ ನಿಟ್ಟಿನಲಿ ಪ್ರಯತ್ನ ಮಾಡುತ್ತೇವೆ” ಎಂದರು.

Read More
Next Story