ಕೆಸೆಟ್ ನೇಮಕಾತಿ ಪರೀಕ್ಷೆ: ಪರೀಕ್ಷಾರ್ಥಿಗಳಿಗೆ ಎದುರಾದ ಹಲವು ಸಮಸ್ಯೆ
ಶಿಕ್ಷಕ, ಭೂ ಮಾಪನ ಅಧಿಕಾರಿ, ಗ್ರಾಮ ಅಡಳಿತಾಧಿಕಾರಿ ಹುದ್ದೆ ಸೇರಿದಂತೆ ಕೆಸೆಟ್ ನೇಮಕಾತಿ ಪರೀಕ್ಷೆಗಳು ಸಾಲು ಸಾಲು ನಡೆಯುತ್ತಿದ್ದು ಸಮಸ್ಯೆಗಳು ಕೂಡ ಅಷ್ಟೇ ಇವೆ. ಸರ್ವರ್ ಡೌನ್ ಸೇರಿದಂತೆ ಸಮಸ್ಯೆಗಳ ಬಗ್ಗೆ ಪರೀಕ್ಷಾರ್ಥಿಗಳು ಮಾತನಾಡಿದ್ದಾರೆ.
ಶಾಲಾ ಶಿಕ್ಷಕರು ಸೇರಿದಂತೆ ಹಲವು ಉದ್ಯೋಗಗಳಿಗೆ ಪರೀಕ್ಷೆ ನಡೆಸಲು ಸರ್ಕಾರ ಘೋಷಿಸಿದೆ. ಆದರೆ ಪರೀಕ್ಷಾರ್ಥಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ ಶಿಕ್ಷಕರ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸರ್ವರ್ ಸಮಸ್ಯೆ ಎದುರಾಗಿದ್ದು ಭಾರಿ ತೊಂದರೆ ಅನುಭವಿಸುವಂತಾಗಿದೆ. ಕೇವಲ ಇದಷ್ಟೇ ಅಲ್ಲ ಪರೀಕ್ಷೆಗಳು ಒಂದರ ಹಿಂದೆ ಒಂದು ಇರುವುದು ಕೂಡ ಸಮಸ್ಯೆಯಾಗಿದೆ. ಶಿಕ್ಷಕರು, ಭೂಮಾಪಕರು, ಗ್ರಾಮ ಆಡಳಿತಾಧಿಕಾರಿ (VA) ಹಾಗೂ KSET ಸೇರಿದಂತೆ ಸಾಲು ಸಾಲು ನೇಮಕಾತಿ ಪರೀಕ್ಷೆಗಳು ನಡೆಯಲಿದೆ.
ಈ ಬಗ್ಗೆ ದ ಫೆಡರಲ್ ಕರ್ನಾಟಕ ಜತೆ ಪರೀಕ್ಷಾರ್ಥಿಗಳು ಮಾತನಾಡಿದ್ದಾರೆ. ಶಿಕ್ಷಕರ ಪರೀಕ್ಷೆಗೆ ಇಡೀ ದಿನ ಕಾದರೂ ಅರ್ಜಿ ಸಲ್ಲಿಸಲು ಆಗಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಸರ್ವರ್ ಸಮಸ್ಯೆಯಿಂದ ಅರ್ಜಿ ಸಲ್ಲಿಕೆ ಸಾಧ್ಯವಾಗದೆ ಮೂರ್ನಾಲ್ಕು ದಿನ ಕಾಯಬೇಕಾಯಿತು. ಅರ್ಜಿ ಸಲ್ಲಿಸುವಾಗ ಮಧ್ಯದಲ್ಲೇ ಸರ್ವರ್ ಸಮಸ್ಯೆಯಾಗಿ ಅರ್ಜಿ ಸಲ್ಲಿಕೆಗೆ ಪರದಾಡುವಂತಾಯಿತು ಎಂದು ಹೇಳಿದರು. ಇದು ಅನೇಕ ಬಾರಿ ಈ ರೀತಿ ಆದಾಗ ಕೊನೆಗೆ ರಾತ್ರಿ 11ಕ್ಕೆ ಅರ್ಜಿ ಸಲ್ಲಿಸಲಾಯಿತು ಎಂದು ಹೇಳಿದರು.
ಸರ್ವರ್ ಸಮಸ್ಯೆ ಬಗ್ಗೆ ದೂರು ನೀಡಲು ಅಥವಾ ಮಾಹಿತಿ ನೀಡಲು ದೂರವಾಣಿ ಕರೆ ಮಾಡಿದರೆ ಒಬ್ಬರೂ ಕರೆ ಸ್ವೀಕರಿಸಲಿಲ್ಲ ಕೊನೆಗೆ ಹಿರಿಯ ಅಧಿಕಾರಿಯನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಗಮನಕ್ಕೆ ತರಲಾಯಿತು ಎಂದು ಹೇಳಿದರು. ಇದರ ಜತೆಗೆ ಪರೀಕ್ಷೆಗಳು ಎರಡು ದಿನಗಳ ನಡುವೆ ಇದೆ. ಕೆಲವು ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ ಬೇರೆ ಜಿಲ್ಲೆಯಲ್ಲಿರುತ್ತದೆ ಒಂದು ಪರೀಕ್ಷೆ ಬರೆದು ಮತ್ತೊಂದು ಪರೀಕ್ಷೆಗೆ ಬೇರೆ ಜಿಲ್ಲೆಗೆ ಹೋಗಬೇಕು ಮಾನಸಿಕವಾಗಿ ಬಹಳ ಒತ್ತಡವಾಗುತ್ತದೆ ಎಂದು ಹೇಳಿದರು. ಪರೀಕ್ಷೆ ದಿನಾಂಕವನ್ನು ಮುಂದೂಡಬೇಕು ಒಂದು ಪರೀಕ್ಷೆಯಿಂದ ಮತ್ತೊಂದು ಪರೀಕ್ಷೆಗೆ 15 ದಿವಸಗಳ ಕಾಲ ಅಂತರವಿರಬೇಕು ಎಂದು ಆಗ್ರಹಿಸಿದರು
ಕೆಪಿಎಸ್ ಸಿ ನೇಮಕಾತಿಯಲ್ಲಿ ಆದ ಅಕ್ರಮಗಳು ಕಣ್ಣ ಮುಂದಿವೆ ಈಗ ನಡೆಸುತ್ತಿರುವ ಪರೀಕ್ಷೆಗಳಲ್ಲಿ ಅಕ್ರಮ ನಡೆಸದೆ ಪಾರದರ್ಶಕವಾಗಿ ನಡೆಸಬೇಕು ಎಂದು ಮನವಿ ಮಾಡಿದರು.

