
ಪರಿಷತ್ ಕದನ: ಅಡ್ಡಮತದಾನದ ಅಬ್ಬರದಲ್ಲಿ ಕಾಂಗ್ರೆಸ್ಗೆ ಭರ್ಜರಿ ಜಯ
ಕಾಂಗ್ರೆಸ್ನ 5 ಅಭ್ಯರ್ಥಿಗಳು ಜಯಗಳಿಸಿದ್ದು, ಬಿಜೆಪಿ 2 ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ನಿರೀಕ್ಷೆಯಂತೆ ಮತಗಳ ಕೊರತೆಯಿಂದ ಸೋಲನುಭವಿಸಿದ್ದಾರೆ.
ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್ನ 7 ಸ್ಥಾನಗಳ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ನ ಪ್ರಾಬಲ್ಯವನ್ನು ಮತ್ತೆ ಸಾಬೀತುಪಡಿಸಿದ್ದು, ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ಗೆ ಅನಿರೀಕ್ಷಿತ ಆಘಾತವನ್ನು ನೀಡಿದೆ. 222 ಶಾಸಕರ ಮತದಾನದ ಬಲದೊಂದಿಗೆ ನಡೆದ ಚುನಾವಣಾ ಕದನದಲ್ಲಿ, ಒಂದು ಮತ ಅಸಿಂಧುಗೊಂಡಿದೆ. ಈ ಹಿನ್ನೆಲೆಯಲ್ಲಿ 211 ಮತಗಳ ಎಣಿಕೆ ಮಾಡಲಾಯಿತು. ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ತನ್ನ ನಿರೀಕ್ಷೆಯನ್ನು ಮೀರಿ 5 ಸ್ಥಾನಗಳನ್ನು ಗೆಲ್ಲುವ ಮೂಲಕ ಸಾಧನೆ ಮಾಡಿದೆ.
ವಿಧಾನ ಪರಿಷತ್ನ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, ಸಂಖ್ಯಾಬಲದ ಪ್ರಕಾರ ಕಾಂಗ್ರೆಸ್ಗೆ 4 ಮತ್ತು ಬಿಜೆಪಿಗೆ 2 ಸ್ಥಾನಗಳು ಖಚಿತವಾಗಿದ್ದವು. 7ನೇ ಸ್ಥಾನಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಆದರೆ, ಮತ ಎಣಿಕೆಯ ನಂತರ ಫಲಿತಾಂಶವು ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿತು. ಕಾಂಗ್ರೆಸ್ ತನ್ನ 5 ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಬಿಜೆಪಿ 2 ಸ್ಥಾನಗಳನ್ನು ಗೆಲ್ಲಿಸಿಕೊಂಡಿದೆ. ಜೆಡಿಎಸ್ ತನ್ನ ಅಭ್ಯರ್ಥಿ ಗೋವಿಂದರಾಜು ಅವರನ್ನು ಕಣಕ್ಕಿಳಿಸಿತ್ತಾದರೂ, ನಿರೀಕ್ಷೆಯಂತೆ ಮತಗಳ ಕೊರತೆಯಿಂದ ಸೋಲನುಭವಿಸಿದ್ದಾರೆ.
ಅಡ್ಡಮತದಾನ: ರಾಜಕೀಯ ಚದುರಂಗದಾಟ
ಈ ಚುನಾವಣೆಯ ಪ್ರಮುಖ ತಿರುವು ಎಂದರೆ ಅದು ಅಡ್ಡಮತದಾನವಾಗಿದೆ. ಒಟ್ಟು 222 ಶಾಸಕರು ಮತ ಚಲಾಯಿಸಿದ್ದು, ಒಂದು ಮತ ಅಸಿಂಧುವಾಗಿದೆ. ಪರಿಣಾಮವಾಗಿ 221 ಮತಗಳು ಎಣಿಕೆಗೆ ಬಂದವು. ಲೆಕ್ಕಾಚಾರದ ಪ್ರಕಾರ, ಕಾಂಗ್ರೆಸ್ನ 5ನೇ ಅಭ್ಯರ್ಥಿಯ ಗೆಲುವಿಗೆ ಹೆಚ್ಚುವರಿ ಮತಗಳ ಅಗತ್ಯವಿತ್ತು. ವಿಪಕ್ಷಗಳ ಪಾಳೆಯದಿಂದ ಅಡ್ಡಮತದಾನ ನಡೆದಿದೆ ಎಂಬುದು ಸ್ಪಷ್ಟವಾಗಿದ್ದು, ಜೆಡಿಎಸ್ನಿಂದ 7 ಮತ್ತು ಬಿಜೆಪಿಯಿಂದ 4 ಅಡ್ಡಮತಗಳು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಪೂರಕವಾಗಿವೆ ಎಂದು ಹೇಳಲಾಗಿದೆ.
ಯಾರು ಎಷ್ಟು ಮತ ಪಡೆದರು?
ಅಭ್ಯರ್ಥಿಗಳ ಮತಗಳಿಕೆಯನ್ನು ಗಮನಿಸಿದರೆ,
ವಿನಯ್ ಕಾರ್ತಿಕ್ (ಕಾಂಗ್ರೆಸ್ - 32 ಮತಗಳು
ಬಿ.ಕೆ. ಹರಿಪ್ರಸಾದ್ (ಕಾಂಗ್ರೆಸ್) - 30 ಮತಗಳು
ತಿಪ್ಪಣ್ಣಪ್ಪ ಕಾಮಕನೂರ್ (ಕಾಂಗ್ರೆಸ್) - 30 ಮತಗಳು
ಶಿವಣ್ಣ ಮಳವಳ್ಳಿ (ಕಾಂಗ್ರೆಸ್) - 30 ಮತಗಳು
ಪಿ.ವಿ. ಮೋಹನ್ (ಕಾಂಗ್ರೆಸ್) - 29 ಮತಗಳು
ಆರ್. ರಘು ಕೌಟಿಲ್ಯ (ಬಿಜೆಪಿ) - 29 ಮತಗಳು
ಲಿಂಗರಾಜ್ ಪಾಟೀಲ್ (ಬಿಜೆಪಿ) - 27 ಮತಗಳು
ಗೋವಿಂದ ರಾಜು (ಜೆಡಿಎಸ್ - 14 ಮತಗಳು
ಅಚ್ಚರಿಯ ಗೆಲುವು: ವಿನಯ್ ಕಾರ್ತಿಕ್
ಐದನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ವಿನಯ್ ಕಾರ್ತಿಕ್ ಅವರ ಗೆಲುವು ಕಾಂಗ್ರೆಸ್ ಪಾಳಯದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ಮೊದಲಿಗೆ ಗೆಲುವಿನ ಬಗ್ಗೆ ಸಂಶಯಗಳಿದ್ದರೂ, ಪಕ್ಷದ ವರಿಷ್ಠರ ರಣತಂತ್ರ ಮತ್ತು ಅಡ್ಡಮತದಾನದ ಫಲವಾಗಿ ಅವರು 32 ಮತಗಳನ್ನು ಪಡೆಯುವ ಮೂಲಕ ಸುಲಭವಾಗಿ ಜಯಶಾಲಿಯಾದರು. ಈ ಮೂಲಕ ಕಾಂಗ್ರೆಸ್ ತನ್ನ ಸಂಖ್ಯಾಬಲಕ್ಕಿಂತ ಹೆಚ್ಚು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.
ಜೆಡಿಎಸ್ಗೆ ಮುಖಭಂಗ, ಬಿಜೆಪಿಗೆ ಪಾಠ
ಜೆಡಿಎಸ್ ಪಾಲಿಗೆ ಈ ಚುನಾವಣೆ ಕಹಿ ಅನುಭವವನ್ನು ನೀಡಿದೆ. ಗೋವಿಂದರಾಜು ಅವರು ಕೇವಲ 14 ಮತಗಳನ್ನು ಪಡೆಯುವ ಮೂಲಕ ಸೋಲನುಭವಿಸಿದ್ದಾರೆ. ತನ್ನ ಶಾಸಕರು ಪಕ್ಷದ ನಿರ್ಧಾರಕ್ಕೆ ಬದ್ಧರಾಗಿಲ್ಲ ಎಂಬುದು ಈ ಫಲಿತಾಂಶದಿಂದ ಸಾಬೀತಾಗಿದೆ. ಜೆಡಿಎಸ್ ಶಾಸಕರ ಅಡ್ಡಮತದಾನವು ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಹೊರಹಾಕಿದೆ. ಅದೇ ರೀತಿ ಬಿಜೆಪಿ ಕೂಡ ತನ್ನ 4 ಮತಗಳನ್ನು ಕಳೆದುಕೊಂಡಿದ್ದು, ಇದು ರಾಜ್ಯ ಮಟ್ಟದ ನಾಯಕತ್ವಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.
ಈ ಫಲಿತಾಂಶವು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮೇಲಿನ ವಿಶ್ವಾಸ ಹೆಚ್ಚಾಗಿರುವುದನ್ನು ಸೂಚಿಸುತ್ತದೆ. ನಿರೀಕ್ಷಿತ 4 ಸ್ಥಾನಗಳಿಗಿಂತ ಹೆಚ್ಚುವರಿಯಾಗಿ 5ನೇ ಸ್ಥಾನವನ್ನು ಗೆದ್ದಿದ್ದು, ವಿರೋಧ ಪಕ್ಷಗಳ ಒಗ್ಗಟ್ಟಿನ ಕೊರತೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಲಾಗಿದೆ. ವಿಧಾನಸಭೆಯಲ್ಲಿ ಪಕ್ಷದ ಬಲ ಹೆಚ್ಚಿರುವಾಗ, ಪರಿಷತ್ನಲ್ಲಿಯೂ ಕಾಂಗ್ರೆಸ್ನ ಬಲ ಹೆಚ್ಚಾಗಿರುವುದು ಮಸೂದೆಗಳ ಅಂಗೀಕಾರ ಮತ್ತು ಸರ್ಕಾರದ ದೈನಂದಿನ ಕಾರ್ಯಕಲಾಪಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ.
ವಿಧಾನ ಪರಿಷತ್ಗೆ ಹೊಸದಾಗಿ ಆಯ್ಕೆಯಾದ ಹತ್ತು ಹಲವು ಮುಖಗಳು ಇನ್ನು ಮುಂದೆ ರಾಜ್ಯದ ಸದನದಲ್ಲಿ ಚರ್ಚೆಗಳನ್ನು ನಡೆಸಲಿವೆ. ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಆಯ್ಕೆಯು ಸದನಕ್ಕೆ ಅನುಭವಿ ನಾಯಕತ್ವವನ್ನು ನೀಡಿದರೆ, ಹೊಸಬರಾದ ವಿನಯ್ ಕಾರ್ತಿಕ್ ಮತ್ತು ಇತರರು ಪಕ್ಷದ ಸಿದ್ಧಾಂತವನ್ನು ಸದನದಲ್ಲಿ ಬಲವಾಗಿ ಮಂಡಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

