
Karnataka legislative session: ಡ್ರಗ್ಸ್ ವಿರುದ್ಧ ಜಾಗೃತಿಗೆ ಶಾಸಕ ಧೀರಜ್ ಮುನಿರಾಜು ಆಗ್ರಹ
ಕರ್ನಾಟಕ ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. 2026ರ ಸಾಲಿನ ಈ ಅಧಿವೇಶನದ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ.
ವಿಧಾನ ಮಂಡಲ ಅಧಿವೇಶನವು ರಾಜ್ಯಪಾಲರ ಭಾಷಣದೊಂದಿಗೆ ಆರಂಭವಾಗಿದ್ದು, ಸರ್ಕಾರದ ಸಾಧನೆಗಳು ಮತ್ತು ಮುಂಬರುವ ಯೋಜನೆಗಳ ಬಗ್ಗೆ ಅವರು ಬೆಳಕು ಚೆಲ್ಲಿದ್ದಾರೆ. ಮಾಜಿ ಸಚಿವ ಎನ್. ಸುರೇಶ್ ಕುಮಾರ್ ಅವರು ಧರ್ಮಸ್ಥಳದ ಕುರಿತಾದ ಎಸ್ಐಟಿ ತನಿಖಾ ವರದಿಯನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿದ್ದು, ಸದನದಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು.
Live Updates
- 30 Jan 2026 12:16 PM IST
ಕೇಂದ್ರದ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ: ಶರತ್ ಬಚ್ಚೆಗೌಡ ಆಕ್ರೋಶ
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಶರತ್ ಬಚ್ಚೆಗೌಡ ಅವರು ಕೇಂದ್ರ ಸರ್ಕಾರವು ದಕ್ಷಿಣ ಭಾರತದ ಮೇಲೆ, ವಿಶೇಷವಾಗಿ ಕರ್ನಾಟಕದ ಮೇಲೆ 'ತೆರಿಗೆ ದಬ್ಬಾಳಿಕೆ' ನಡೆಸುತ್ತಿದೆ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಹಂಚಿಕೆಯಲ್ಲಿ ಭಾರಿ ತಾರತಮ್ಯವಾಗುತ್ತಿದ್ದು, ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿತ ವಿಶೇಷ ಅನುದಾನ ಸಿಕ್ಕಿಲ್ಲ ಹಾಗೂ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಬೆಂಗಳೂರಿಗೆ ನೀಡಬೇಕಿದ್ದ 6,000 ಕೋಟಿ ರೂ. ಮತ್ತು ಗ್ರಾಮೀಣ ಸಂಸ್ಥೆಗಳಿಗೆ ಬರಬೇಕಿದ್ದ 774 ಕೋಟಿ ರೂ.ಗಳನ್ನು ಬಿಡುಗಡೆ ಮಾಡದೆ ಅನ್ಯಾಯ ಮಾಡಲಾಗಿದೆ ಎಂದು ಅವರು ಆರೋಪಿಸಿದರು. ಕಳೆದ ವರ್ಷವೊಂದರಲ್ಲೇ ರಾಜ್ಯಕ್ಕೆ ಸುಮಾರು 80,000 ಕೋಟಿ ರೂ. ನಷ್ಟವಾಗಿದ್ದು, ಒಟ್ಟಾರೆಯಾಗಿ 15ನೇ ಹಣಕಾಸು ಆಯೋಗದಿಂದ 1.25 ಲಕ್ಷ ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದೆ ಎಂದು ಅಂಕಿಅಂಶಗಳ ಸಮೇತ ವಿವರಿಸಿದ ಅವರು, ಜಿಎಸ್ಟಿ ಪಾಲಿನಲ್ಲೂ ಮೋಸವಾಗಿದ್ದು ರಾಜ್ಯಕ್ಕೆ ಕೇವಲ 16% ಮಾತ್ರ ಅನುದಾನ ಬರುತ್ತಿದೆ ಎಂದು ಕಿಡಿಕಾರಿದರು. ಕನ್ನಡಿಗರಿಗೆ ನಿರಂತರವಾಗಿ ಆಗುತ್ತಿರುವ ಈ ಅವಮಾನ ಮತ್ತು ಮೋಸವನ್ನು ನೋಡುತ್ತಿದ್ದರೆ ಹೊಟ್ಟೆ ಚುರುಕ್ ಅನ್ನುತ್ತದೆ ಎಂದು ಅವರು ಸದನದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

