
U30 ಪಟ್ಟಿಯಲ್ಲಿ ಬೆಂಗಳೂರಿನ ಯುವ ಪ್ರತಿಭೆಗಳು: 7ರಿಂದ 21ಕ್ಕೇರಿದ ಸಾಧಕರ ಸಂಖ್ಯೆ
ಕಳೆದ ವರ್ಷ ಹುರುನ್ ಇಂಡಿಯಾ U30 ಪಟ್ಟಿಯಲ್ಲಿ ಬೆಂಗಳೂರಿನಿಂದ ಕೇವಲ 7 ಯುವ ಉದ್ಯಮಿಗಳು ಸ್ಥಾನ ಪಡೆದಿದ್ದರೆ, ಈ ವರ್ಷ ಆ ಸಂಖ್ಯೆ 21ಕ್ಕೆ ಜಿಗಿದಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯು ಇದೀಗ ಐತಿಹಾಸಿಕ ಬದಲಾವಣೆಯ ಹೊಸ್ತಿಲಲ್ಲಿದೆ. ದಶಕಗಳ ಕಾಲ ಸಾಫ್ಟ್ವೇರ್ ಮತ್ತು ಸೇವಾ ವಲಯಕ್ಕೆ ಸೀಮಿತವಾಗಿದ್ದ ಭಾರತೀಯ ನಾವೀನ್ಯತೆ, ಇದೀಗ ಡೀಪ್ಟೆಕ್ ಮತ್ತು ಹಾರ್ಡ್ಟೆಕ್ ಕಡೆಗೆ ವೇಗವಾಗಿ ಮುಖ ಮಾಡುತ್ತಿದೆ. ಈ ಬದಲಾವಣೆಯನ್ನು ಪ್ರತಿಬಿಂಬಿಸುವ ಇತ್ತೀಚಿನ 'ಅವೆಂಡಸ್ ವೆಲ್ತ್-ಹುರುನ್ ಇಂಡಿಯಾ U30 ಪಟ್ಟಿ 2026' ವರದಿಯು, ದೇಶದ ಭವಿಷ್ಯದ ಆರ್ಥಿಕ ಶಕ್ತಿ ಯುವಕರ ಕೈಯಲ್ಲಿದೆ ಎಂಬುದನ್ನು ಪುಷ್ಟೀಕರಿಸಿದೆ. ಈ ಕ್ರಾಂತಿಯ ಕೇಂದ್ರಬಿಂದುವಾಗಿ ಬೆಂಗಳೂರು ನಗರವು ದೇಶದ ನಾಯಕನಾಗಿ ಹೊರಹೊಮ್ಮಿದೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಬೆಂಗಳೂರು ದೇಶದ ಸ್ಟಾರ್ಟ್ಅಪ್ ರಾಜಧಾನಿ ಎಂಬ ಪಟ್ಟವನ್ನು ಮತ್ತೊಮ್ಮೆ ಗಟ್ಟಿಗೊಳಿಸಿಕೊಂಡಿದೆ. ಕಳೆದ ವರ್ಷ U30 ಪಟ್ಟಿಯಲ್ಲಿ ಬೆಂಗಳೂರಿನಿಂದ ಕೇವಲ 7 ಯುವ ಉದ್ಯಮಿಗಳು ಸ್ಥಾನ ಪಡೆದಿದ್ದರೆ, ಈ ವರ್ಷ ಆ ಸಂಖ್ಯೆ 21ಕ್ಕೆ ಜಿಗಿದಿದೆ. ಇದು ಬೆಂಗಳೂರಿನ ಪರಿಸರ ವ್ಯವಸ್ಥೆಯಲ್ಲಿನ ತೀವ್ರ ಬೆಳವಣಿಗೆಯನ್ನು ತೋರಿಸುತ್ತದೆ. ಪಟ್ಟಿ ಮಾಡಲಾದ ಕಂಪನಿಗಳಲ್ಲಿ 18 ಕಂಪನಿಗಳು ಬೆಂಗಳೂರಿನಲ್ಲೇ ತಮ್ಮ ಪ್ರಧಾನ ಕಚೇರಿಯನ್ನು ಹೊಂದಿವೆ. ಭಾರತದ ಬೇರೆ ಯಾವುದೇ ನಗರಕ್ಕಿಂತ ಈ ಸಂಖ್ಯೆ ಅತ್ಯಧಿಕವಾಗಿದೆ. ದೇಶದ ಯುವ ಪ್ರತಿಭೆಗಳು ಹೊಸ ಪ್ರಯೋಗಗಳನ್ನು ಮಾಡಲು ಬೆಂಗಳೂರನ್ನೇ ತಮ್ಮ ಮೊದಲ ಆಯ್ಕೆಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಡೀಪ್ಟೆಕ್ ಮತ್ತು ಹಾರ್ಡ್ಟೆಕ್ನ ಅಲೆ
ಹಿಂದಿನ ವರ್ಷಗಳಲ್ಲಿ ಸ್ಟಾರ್ಟ್ಅಪ್ಗಳು ಕೇವಲ ಇ-ಕಾಮರ್ಸ್ ಅಥವಾ ಫುಡ್ ಡೆಲಿವರಿ ಆಪ್ಗಳ ನಿರ್ಮಾಣಕ್ಕೆ ಸೀಮಿತವಾಗಿದ್ದವು. ಆದರೆ ಈಗಿನ ಯುವ ಉದ್ಯಮಿಗಳು ಹೆಚ್ಚು ಸಂಕೀರ್ಣವಾದ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುತ್ತಿದ್ದಾರೆ. ಡೀಪ್ಟೆಕ್ ಎಂದರೆ ವಿಜ್ಞಾನ ಮತ್ತು ಇಂಜಿನಿಯರಿಂಗ್ ಆಧಾರಿತ ತಂತ್ರಜ್ಞಾನ. ಇಂದಿನ ಸ್ಟಾರ್ಟ್ಅಪ್ಗಳು ಹಲವು ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡುತ್ತಿವೆ. ಜಾಗತಿಕ ಮಟ್ಟದಲ್ಲಿ ಎಐ ತಂತ್ರಜ್ಞಾನದ ಬೇಡಿಕೆ ಹೆಚ್ಚಾಗಿದ್ದು, ಬೆಂಗಳೂರು ಎಐ ತರಬೇತಿ ಮತ್ತು ಅಭಿವೃದ್ಧಿಯ ಹಬ್ ಆಗಿ ಬೆಳೆಯುತ್ತಿದೆ. ಬಾಹ್ಯಾಕಾಶ ಸಂಶೋಧನೆ ಮತ್ತು ಉಪಗ್ರಹ ತಂತ್ರಜ್ಞಾನದಲ್ಲಿ ಖಾಸಗಿ ಪಾಲುದಾರಿಕೆ ಹೆಚ್ಚಾಗುತ್ತಿದ್ದು, ಹಲವು ಯುವ ಸಂಸ್ಥಾಪಕರು ಇಸ್ರೋದ ಸಹಯೋಗದೊಂದಿಗೆ ಸ್ಟಾರ್ಟ್ಅಪ್ಗಳನ್ನು ಕಟ್ಟುತ್ತಿದ್ದಾರೆ. ಡಿಜಿಟಲ್ ಜಗತ್ತಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅತ್ಯಾಧುನಿಕ ಸಾಫ್ಟ್ವೇರ್ ಮತ್ತು ರಕ್ಷಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಹಾರ್ಡ್ವೇರ್ ಕ್ಷೇತ್ರದಲ್ಲಿ ಭಾರತೀಯರು ಸ್ವಾವಲಂಬಿಗಳಾಗುತ್ತಿದ್ದಾರೆ. ಸೆಮಿಕಂಡಕ್ಟರ್ಗಳು, ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಯಾಂತ್ರೀಕೃತ ಉತ್ಪಾದನೆಯಲ್ಲಿ ನಾವೀನ್ಯತೆಗಳು ಕಾಣಿಸಿಕೊಳ್ಳುತ್ತಿವೆ ಎಂದು ತಿಳಿಸಿದ್ದಾರೆ.
ಸರ್ಕಾರದ ನೀತಿಗಳ ಪಾತ್ರ
ರಾಜ್ಯ ಸರ್ಕಾರವು ಸಂಸ್ಥಾಪಕ-ಸ್ನೇಹಿ ನೀತಿಗಳನ್ನು ಜಾರಿಗೆ ತಂದಿದೆ. ಇದರ ಮುಖ್ಯ ಉದ್ದೇಶಗಳು ಕೇವಲ ಸಾಫ್ಟ್ವೇರ್ ಮಾತ್ರವಲ್ಲದೆ, ಭೌತಿಕ ಸಂಶೋಧನೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಯುವಜನತೆಯನ್ನು ಸಿದ್ಧಪಡಿಸಲು ವಿಶೇಷ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಸ್ಟಾರ್ಟ್ಅಪ್ಗಳನ್ನು ನಿರ್ಮಿಸುವ ಯುವಕರು ಕೇವಲ ಭಾರತದ ಮಟ್ಟಿಗೆ ಸೀಮಿತವಾಗದೆ, ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಹೊಂದುವಂತೆ ಪರಿಸರವನ್ನು ನಿರ್ಮಿಸಲಾಗುತ್ತಿದೆ. ಬೆಂಗಳೂರು ಕೇವಲ ಒಂದು ನಗರವಲ್ಲ, ಅದೊಂದು ನಾವೀನ್ಯತೆಯ ತಾಣ. ಇಲ್ಲಿನ ವಿಶ್ವದರ್ಜೆಯ ಪ್ರತಿಭೆಗಳು, ಬಂಡವಾಳ ಹೂಡಿಕೆದಾರರು ಮತ್ತು ಸರ್ಕಾರದ ದೂರದೃಷ್ಟಿಯು ಒಟ್ಟಾಗಿ ಸೇರಿ ನವ ಕರ್ನಾಟಕವನ್ನು ನಿರ್ಮಿಸುತ್ತಿವೆ. ಯುವ ಉದ್ಯಮಿಗಳಿಗೆ ಸಿಗುತ್ತಿರುವ ಈ ಮಾನ್ಯತೆಯು ಮುಂದಿನ ದಿನಗಳಲ್ಲಿ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುವುದಲ್ಲದೆ, ಭಾರತವನ್ನು ಜಾಗತಿಕ ತಂತ್ರಜ್ಞಾನದ ನಕ್ಷೆಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲಿಸಲಿದೆ ಎಂದಿದ್ದಾರೆ.

