x

ಎಚ್‌ಡಿಕೆ-ಖಂಡ್ರೆ ವಾಕ್ಸಮರ, ಉದಾಸೀನತೆ ತೋರಿದರೆ ಕಠಿಣ ಕ್ರಮ, ಒತ್ತುವರಿ ತೆರವು ಅನಿವಾರ್ಯ

ಎಚ್‌ಎಂಟಿ ಭೂ ವಿವಾದದ ಬೆಂಕಿ ಇನ್ನೂ ಆರಿಲ್ಲ, ಅಷ್ಟರಲ್ಲೇ ಕೆಐಸಿಎಲ್ ವಿಚಾರದಲ್ಲಿ ಕಿತ್ತಾಟ ಶುರುವಾಗಿದೆ. ಉತ್ತರ ಕರ್ನಾಟಕ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಬೀದಿ ಬದಿ ವ್ಯಾಪಾರಿಗಳ ವಿರೋಧದ ನಡುವೆಯೂ, ಸುಪ್ರೀಂ ಕೋರ್ಟ್ ಆದೇಶ ಮತ್ತು ನಗರದ ಹಿತದೃಷ್ಟಿಯಿಂದ ಈ ಕ್ರಮ ಅನಿವಾರ್ಯ. ಈ ಕುರಿತ ವರದಿ


Click the Play button to hear this message in audio format

ಎಚ್‌ಎಂಟಿ ಭೂ ವಿವಾದದ ಕಾವು ಇನ್ನೂ ಆರದ ಬೆನ್ನಲ್ಲೇ, ಇದೀಗ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಲಿಮಿಟೆಡ್ (ಕೆಐಒಸಿಎಲ್‌) ಪುನಶ್ಚೇತನ ಮತ್ತು ಅಭಿವೃದ್ಧಿ ವಿಚಾರ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ರಾಜ್ಯ ಸರ್ಕಾರ ಕೇಂದ್ರದ ಯೋಜನೆಗಳಿಗೆ ಅಸಹಕಾರ ಧೋರಣೆ ತೋರುತ್ತಿದೆ ಎಂದು ಸಚಿವ ಈಶ್ವರ್‌ ಖಂಡ್ರೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಕುದುರೆಮುಖ ಕಬ್ಬಿಣ ಅದಿರು ಕಂಪನಿ ಲಿಮಿಟೆಡ್ ಒಂದು ಕಾಲದಲ್ಲಿ ದಕ್ಷಿಣ ಭಾರತದ ಹೆಮ್ಮೆಯ ಸಾರ್ವಜನಿಕ ಉದ್ಯಮವಾಗಿತ್ತು. ಆದರೂ, ಪರಿಸರ ಸಂಬಂಧಿ ಕಾನೂನುಗಳು ಮತ್ತು ಅದಿರು ಗಣಿಗಾರಿಕೆಯ ನಿಷೇಧದಿಂದಾಗಿ ಕಂಪನಿಯು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಇದೀಗ ಈ ಕಂಪನಿಯನ್ನು ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ಎನ್‌ಎಂಡಿಸಿಯೊಂದಿಗೆ ಕೆಐಸಿಎಲ್ ಅನ್ನು ವಿಲೀನಗೊಳಿಸುವ ಚಿಂತನೆ ನಡೆಸಿದೆ. ಆದರೆ, ಈ ಪ್ರಕ್ರಿಯೆಗೆ ರಾಜ್ಯ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂಬುದು ಕುಮಾರಸ್ವಾಮಿ ಆರೋಪವಾಗಿದೆ.

ಸಚಿವ ಈಶ್ವರ್ ಖಂಡ್ರೆ ಅವರು ಕೆಐಸಿಎಲ್ ಉಕ್ಕಿನ ಕಾರ್ಖಾನೆಯ ಪುನಶ್ಚೇತನಗೊಳಿಸಲಿ ಎಂಬ ಹೇಳಿಕೆಗೆ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದು, ರಾಜ್ಯ ಸರ್ಕಾರ ಕೇಂದ್ರದ ಅಭಿವೃದ್ಧಿ ಯೋಜನೆಗಳಿಗೆ ಕೇವಲ ರಾಜಕೀಯ ಕಾರಣಕ್ಕಾಗಿ ಅಸಹಕಾರ ತೋರುತ್ತಿದೆ. ಎಚ್‌ಎಂಟಿ ಭೂಮಿಯ ವಿಚಾರದಲ್ಲೂ ಇದೇ ರೀತಿ ಮಾಡಿದರು, ಈಗ ಕೆಐಸಿಎಲ್ ವಿಚಾರದಲ್ಲೂ ರಾಜ್ಯ ಸಚಿವರು ಅಡ್ಡಿಪಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಕೇಂದ್ರದ ಯಾವುದೇ ಯೋಜನೆ ರಾಜ್ಯಕ್ಕೆ ಬಂದರೂ, ರಾಜ್ಯ ಸರ್ಕಾರ ಅದನ್ನು ತಾಂತ್ರಿಕ ಅಥವಾ ಕಾನೂನು ನೆಪ ಹೇಳಿ ವಿಳಂಬ ಮಾಡುತ್ತಿದೆ ಎಂದು ಕಿಡಿಕಾರಿದರು.

ಕುದುರೆಮುಖ ಗಣಿಗಾರಿಕೆ ನಿಷೇಧದ ನಂತರ ಕೆಐಸಿಎಲ್ ಅಸ್ತಿತ್ವದ ಪ್ರಶ್ನೆ ಉದ್ಭವಿಸಿತ್ತು. ಹಲವು ವರ್ಷಗಳಿಂದ ಈ ಕಂಪನಿಯು ಹೊಸ ಅದಿರು ಮೂಲಗಳಿಗಾಗಿ ಹುಡುಕಾಟ ನಡೆಸುತ್ತಿದೆ. ಕರ್ನಾಟಕದಲ್ಲಿ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಅವಕಾಶವಿದ್ದರೂ, ಕಚ್ಚಾ ಅದಿರಿನ ಪೂರೈಕೆ ಮತ್ತು ಪರಿಸರ ನಿಯಮಗಳ ಅಡಚಣೆಯಿಂದಾಗಿ ಅದು ಸಾಧ್ಯವಾಗಿಲ್ಲ. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿದ್ದಾಗಲೂ ಕೆಐಸಿಎಲ್ ಜಮೀನು ಮತ್ತು ಗಣಿಗಾರಿಕೆ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರದ ನಡುವೆ ಸಂಘರ್ಷ ನಡೆದಿತ್ತು. ಇದೀಗ ಅದೇ ಕಥೆ ಮರುಕಳಿಸುತ್ತಿದ್ದು, ಎಚ್‌ಎಂಟಿ ಭೂ ವಿವಾದದ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.

ಎಚ್‌ಎಂಟಿ ಭೂ ವಿವಾದದಲ್ಲಿ ರಾಜ್ಯ ಸರ್ಕಾರವು ಕೇಂದ್ರದ ಸಂಸ್ಥೆಗೆ ನೋಟಿಸ್ ನೀಡುವ ಮೂಲಕ ಈಗಾಗಲೇ ಸಂಘರ್ಷದ ದಾರಿ ತುಳಿದಿದೆ. ಈಗ ಕೆಐಸಿಎಲ್ ವಿಚಾರದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನೇರವಾಗಿ ಕಣಕ್ಕಿಳಿದಿರುವುದು, ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರಗಾರಿಕೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೆ, ಕೇಂದ್ರದಲ್ಲಿ ಎನ್‌ಡಿಎ ಸರ್ಕಾರವಿದೆ. ಈ ರಾಜಕೀಯ ವೈಮನಸ್ಸು ಕೇಂದ್ರದ ಬೃಹತ್ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ದೊಡ್ಡ ತೊಡಕಾಗಿ ಪರಿಣಮಿಸಿದೆ.

ಬೆಳಗಾವಿಗೆ ಸಿಎಂ ಭೇಟಿ

ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ಚುರುಕುತನವನ್ನು ಹೆಚ್ಚಿಸುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೈಗೊಂಡಿರುವ ಬೆಳಗಾವಿ ಜಿಲ್ಲಾ ಪ್ರವಾಸ ಮಹತ್ವ ಪಡೆದುಕೊಂಡಿದೆ. ಬಸವಕಲ್ಯಾಣದಿಂದ ಆರಂಭವಾದ ಅವರ ಪ್ರವಾಸ, ಕಲಬುರಗಿ ಮೂಲಕ ಇದೀಗ ಬೆಳಗಾವಿ ತಲುಪಿದ್ದು, ಈ ವೇಳೆ ಅಧಿಕಾರಿಗಳಿಗೆ ಜನಸೇವೆಯ ಪಾಠವನ್ನು ಮಾಡಿದ್ದಾರೆ.

ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಆಡಳಿತದಲ್ಲಿನ ಜವಾಬ್ದಾರಿಯನ್ನು ಮತ್ತಷ್ಟು ಕಠಿಣಗೊಳಿಸಿದ್ದಾರೆ. ಪ್ರತಿಯೊಬ್ಬ ಜಿಲ್ಲಾ ಮಟ್ಟದ ಅಧಿಕಾರಿಯು ತಮ್ಮ ಅಧೀನ ಅಧಿಕಾರಿಗಳ ಸಂಪೂರ್ಣ ಮಾಹಿತಿ ಹೊಂದಿರಬೇಕು ಎಂದು ತಾಕೀತು ಮಾಡಿದ್ದಾರೆ.

ರಾಜ್ಯ ಸರ್ಕಾರವು ಜನರ ಸಮಸ್ಯೆಗಳನ್ನು ಕ್ರಾಂತಿಕಾರಕವಾಗಿ ಬಗೆಹರಿಸಲು ಸ್ಥಾಪಿಸಿರುವ 'ಪ್ರಜಾಸೇವಾ ಇಲಾಖೆ'ಯ ಕುರಿತು ಪ್ರಸ್ತಾಪಿಸಿದ ಡಿ.ಕೆ. ಶಿವಕುಮಾರ್, ಈ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದಾರೆ. ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳು ನಿಯಮಿತವಾಗಿ ಜನರ ಬಳಿಗೆ ತೆರಳುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ.

ಸರ್ಕಾರಿ ಕಚೇರಿಗಳೇ ಜನರ ಬಳಿಗೆ ಹೋಗುವ ಮೂಲಕ ಜನಸ್ಪಂದನೆ ಕಾರ್ಯಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಬೇಕು. ಆಡಳಿತದಲ್ಲಿ ಉದಾಸೀನತೆ ಅಥವಾ ಸಾರ್ವಜನಿಕರೊಂದಿಗೆ ದೌರ್ಜನ್ಯ ಎಸಗುವಂತಹ ಪ್ರಕರಣಗಳನ್ನು ಸರ್ಕಾರ ಸಹಿಸುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ನೀಡಬಹುದಾದ ಎಲ್ಲಾ ರೀತಿಯ ಪರಿಹಾರಗಳನ್ನು ಸ್ಥಳೀಯ ಮಟ್ಟದಲ್ಲೇ ನೀಡಬೇಕು. ಜನರು ಸಣ್ಣ ಪುಟ್ಟ ಕೆಲಸಗಳಿಗೂ ಜಿಲ್ಲಾ ಕೇಂದ್ರಗಳಿಗೆ ಅಥವಾ ಬೆಂಗಳೂರಿಗೆ ಅಲೆದಾಡುವುದನ್ನು ತಪ್ಪಿಸಬೇಕು. ಅಧಿಕಾರಿಗಳು ಜನರಿಗೆ ಸುಲಭವಾಗಿ ಲಭ್ಯವಿರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ದೇಶದ ಸಮಗ್ರತೆ ಹಾಗೂ ಐಕ್ಯತೆ ಕಾಪಾಡಲು 'ಭಾರತ್ ಜೋಡೋ ಯುವಕ ಸಂಘ'ಗಳನ್ನು ಸ್ಥಾಪಿಸಿ, ಪ್ರತಿ ಗ್ರಾಮ ಪಂಚಾಯಿತಿಗೆ 10 ಲಕ್ಷ ರೂ. ನೀಡಲಾಗುವುದು. ರಾಜ್ಯಾದ್ಯಂತ ಇಂತಹ 10 ಸಾವಿರ ಸಂಘಗಳ ಸ್ಥಾಪನೆಗೆ 1,000 ಕೋಟಿ ರೂ. ಮೀಸಲಿಡಲಾಗುವುದು. ಜೊತೆಗೆ ಪ್ರತಿ ಕ್ಷೇತ್ರದಲ್ಲಿ ಬಡವರಿಗೆ 5 ರಿಂದ 10 ಸಾವಿರ ನಿವೇಶನ ವಿತರಣೆ ಹಾಗೂ ಪ್ರತಿ ತಾಲ್ಲೂಕಿನಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪನೆಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಸಿಎಂ ವಿವರಿಸಿದರು. ನಕಲಿ ಸುದ್ದಿಗಳ ತಡೆಗೂ ಸರ್ಕಾರ ಕ್ರಮ ವಹಿಸುತ್ತಿದೆ ಎಂದರು.

ಬೀದಿ ಬದಿ ವ್ಯಾಪಾರಿಗಳಿಗೆ ಮನವರಿಕೆ ಮಾಡಿಕೊಟ್ಟ ಸಚಿವ

ಗ್ರೇಟರ್ ಬೆಂಗಳೂರು ಪ್ರಾಧಿಕಾರವು ನಗರದಲ್ಲಿ ಸುರಕ್ಷಿತ ಪಾದಚಾರಿ ಅಭಿಯಾನ ಕೈಗೊಂಡಿದ್ದು, ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿರುವ ಸ್ಥಳವನ್ನು ತೆರವುಗೊಳಿಸಲಾಗುತ್ತಿದೆ. ಈ ತೆರವು ಕಾರ್ಯಾಚರಣೆಗೆ ಬೀದಿ ಬದಿ ವ್ಯಾಪಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಬೀದಿ ಬದಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ ಬಳಿಕ ಅವರ ಮನವೊಲಿಕೆ ಕಾರ್ಯವನ್ನು ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಕೈಗೊಂಡರು. ಜಿಬಿಎನಲ್ಲಿ ಬೀದಿ ಬದಿ ವ್ಯಾಪಾರಿಗಳೊಂದಿಗೆ ಸಭೆ ನಡೆಸಿ ಒತ್ತುವರಿ ತೆರವು ಕಾರ್ಯದ ಬಗ್ಗೆ ಅರ್ಥ ಮಾಡಿಸುವ ಕೆಲಸ ಮಾಡಿದರು. ಬೆಂಗಳೂರು ಉಳಿದರೆ ಮಾತ್ರ ನಮ್ಮ ಬದುಕು. ಈ ನಗರದ ಮೂಲಸೌಕರ್ಯಗಳು ಸುಧಾರಿಸದಿದ್ದರೆ ಎಲ್ಲರಿಗೂ ನಷ್ಟವೇ ಎಂದು ಹೇಳುವ ಮೂಲಕ ಸಚಿವ ಕೃಷ್ಣ ಬೈರೇಗೌಡ ಅವರು, ನಗರದಲ್ಲಿ ನಡೆಯುತ್ತಿರುವ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆಯ ಅನಿವಾರ್ಯತೆಯನ್ನು ಸಮರ್ಥಿಸಿಕೊಂಡರು.

ವ್ಯಾಪಾರಿಗಳ ಸಂಘಟನೆಯೊಂದಿಗೆ ನಡೆದ ಮಾತುಕತೆಯಲ್ಲಿ, ತೆರವು ಕಾರ್ಯಾಚರಣೆಯನ್ನು ಅಮಾನವೀಯವಾಗಿ ಮಾಡದಂತೆ ಮತ್ತು ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕುರಿತು ಚರ್ಚೆ ನಡೆದಿದೆ. ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವುದು ಸರ್ಕಾರದ ಉದ್ದೇಶವಲ್ಲ, ಬದಲಾಗಿ ನಗರದ ಸೌಂದರ್ಯ ಮತ್ತು ಸುರಕ್ಷತೆಯನ್ನು ಕಾಪಾಡುವುದು ಎಂದು ಸಚಿವರು ಮನವರಿಕೆ ಮಾಡಿಕೊಟ್ಟಿದ್ದಾರೆ.

ನಮ್ಮ ಈ ಕಾರ್ಯಾಚರಣೆ ಬೀದಿ ಬದಿ ವ್ಯಾಪಾರಿಗಳ ವಿರುದ್ಧ ಅಲ್ಲ. ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನವನ್ನು ಪಾಲಿಸುವುದು ನಮ್ಮ ಕರ್ತವ್ಯ. ಪಾದಚಾರಿ ಮಾರ್ಗಗಳು ಸಾರ್ವಜನಿಕರ ಓಡಾಟಕ್ಕೆ ಮೀಸಲಾಗಿರಬೇಕು ಎಂಬುದು ನ್ಯಾಯಾಲಯದ ಸ್ಪಷ್ಟ ಆದೇಶವಾಗಿದೆ. ಸರ್ಕಾರ ಸದಾ ಬಡವರ ಪರವಾಗಿ ಇರುತ್ತದೆ. ವ್ಯಾಪಾರಿಗಳ ಜೀವನ ನಡೆಯಬೇಕು ಎಂಬುದು ನಮ್ಮ ಆಶಯ, ಆದರೆ ನಾಗರಿಕರಿಗೆ ಸುಗಮ ಮಾರ್ಗ ಕಲ್ಪಿಸುವುದು ಕೂಡ ಅಷ್ಟೇ ಮುಖ್ಯ. ಈ ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಭರವಸೆ ನೀಡಿದರು.

Read More
Next Story