
ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಈ ವರ್ಷದಲ್ಲಿ ಅಂದಾಜು 3,000 ಕೋಟಿ ರೂಪಾಯಿಗಳ ಆದಾಯ ಕೊರತೆಯನ್ನು ಎದುರಿಸುತ್ತಿದೆ.
ಏಪ್ರಿಲ್ 1 ರಿಂದ ಕರ್ನಾಟಕದಲ್ಲಿ ಆಸ್ತಿ ಮಾರ್ಗಸೂಚಿ ದರ ಶೇ. 15-20ರಷ್ಟು ಹೆಚ್ಚಳ: ಆಸ್ತಿ ಖರೀದಿ ಮತ್ತಷ್ಟು ದುಬಾರಿ
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆಸ್ತಿ ನೋಂದಣಿಗಳಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಿರೀಕ್ಷಿತ ಆದಾಯ ಹರಿದುಬಂದಿಲ್ಲ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಈ ವರ್ಷದಲ್ಲಿ ಅಂದಾಜು 3,000 ಕೋಟಿ ರೂಪಾಯಿಗಳ ಆದಾಯ ಕೊರತೆಯನ್ನು ಎದುರಿಸುತ್ತಿದೆ.
ಕರ್ನಾಟಕದಲ್ಲಿ ಸ್ವಂತ ಮನೆ ಅಥವಾ ನಿವೇಶನ ಖರೀದಿಸುವ ಕನಸು ಕಾಣುತ್ತಿರುವವರಿಗೆ ಸರ್ಕಾರ ಬಿಗ್ ಶಾಕ್ ನೀಡಲು ಸಜ್ಜಾಗಿದೆ. ಮುಂಬರುವ ಆರ್ಥಿಕ ವರ್ಷದ ಆರಂಭ, ಅಂದರೆ 2026ರ ಏಪ್ರಿಲ್ 1 ರಿಂದ ರಾಜ್ಯಾದ್ಯಂತ ಆಸ್ತಿ ಮಾರ್ಗಸೂಚಿ ದರವನ್ನು (ಗೈಡೆನ್ಸ್ ವ್ಯಾಲ್ಯೂ) ಶೇಕಡಾ 15 ರಿಂದ 20ರಷ್ಟು ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು 'ಡೆಕ್ಕನ್ ಹೆರಾಲ್ಡ್' ವರದಿ ಮಾಡಿದೆ.
ಈ ಪರಿಷ್ಕೃತ ದರವು ಜಾರಿಗೆ ಬಂದರೆ, ಆಸ್ತಿ ನೋಂದಣಿ ವೇಳೆ ಪಾವತಿಸಬೇಕಾದ ಸ್ಟ್ಯಾಂಪ್ ಡ್ಯೂಟಿ (ಶೇ. 5), ನೋಂದಣಿ ಶುಲ್ಕ (ಶೇ. 2) ಮತ್ತು ಸೆಸ್ (ಶೇ. 0.6) ಸೇರಿದಂತೆ ಒಟ್ಟಾರೆ ಆಸ್ತಿ ವಹಿವಾಟು ವೆಚ್ಚವು ಶೇಕಡಾ 7.6 ರಷ್ಟು ಹೆಚ್ಚಾಗಲಿದ್ದು, ಆಸ್ತಿ ಖರೀದಿ ಮತ್ತಷ್ಟು ದುಬಾರಿಯಾಗಲಿದೆ.
ಆದಾಯ ಕೊರತೆ ನೀಗಿಸಲು ದರ ಏರಿಕೆ ಅಸ್ತ್ರ
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆಸ್ತಿ ನೋಂದಣಿಗಳಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಿರೀಕ್ಷಿತ ಆದಾಯ ಹರಿದುಬಂದಿಲ್ಲ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಈ ವರ್ಷದಲ್ಲಿ ಅಂದಾಜು 3,000 ಕೋಟಿ ರೂಪಾಯಿಗಳ ಆದಾಯ ಕೊರತೆಯನ್ನು ಎದುರಿಸುತ್ತಿದೆ. ಈ ಬೃಹತ್ ಆರ್ಥಿಕ ಹಿನ್ನಡೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಸರ್ಕಾರವು ವಾರ್ಷಿಕ ನವೀಕರಣದ ಭಾಗವಾಗಿ ಆಸ್ತಿ ಮಾರ್ಗಸೂಚಿ ದರ ಹೆಚ್ಚಳದ ಮೊರೆ ಹೋಗಿದೆ. ಇದಕ್ಕೂ ಮುನ್ನ, 2023ರ ಅಕ್ಟೋಬರ್ನಲ್ಲಿ ಸರ್ಕಾರವು ಮಾರ್ಗಸೂಚಿ ದರವನ್ನು ಬರೋಬ್ಬರಿ ಶೇ. 25 ರಿಂದ 30ರಷ್ಟು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿತ್ತು.
ಸರ್ಕಾರದ ಅಧಿಕೃತ ಮಾರ್ಗಸೂಚಿ ದರ ಮತ್ತು ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ನೈಜ ಬೆಲೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದು ಹಾಗೂ ಆಸ್ತಿ ವಹಿವಾಟಿನಲ್ಲಿ ಕಪ್ಪುಹಣದ ಹರಿವನ್ನು ತಡೆಯುವುದು ಈ ದರ ಏರಿಕೆಯ ಪ್ರಮುಖ ಉದ್ದೇಶವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ: ಗ್ಯಾರಂಟಿ ಯೋಜನೆಗಳತ್ತ ಬೊಟ್ಟು
ಮಾರ್ಗಸೂಚಿ ದರ ಹೆಚ್ಚಳದ ನಿರ್ಧಾರಕ್ಕೆ ಸಾರ್ವಜನಿಕರು ಮತ್ತು ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕನ್ನಡಿಗರಲ್ಲದ ಖರೀದಿದಾರರ ಮೇಲೆ ಹೆಚ್ಚಿನ ಶುಲ್ಕವನ್ನು ವಿಧಿಸುವ ಮೂಲಕ ಸ್ಥಳೀಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹಲವರು ಸಲಹೆ ನೀಡಿದ್ದಾರೆ. ಮತ್ತೊಂದೆಡೆ, ಈ ದರ ಏರಿಕೆಯಿಂದಾಗಿ ಬಿಲ್ಡರ್ಗಳು ಮತ್ತು ಡೆವಲಪರ್ಗಳು ತಮ್ಮ ಲಾಭದ ಪ್ರಮಾಣವನ್ನು ಕಾಯ್ದುಕೊಳ್ಳಲು ಆಸ್ತಿಗಳ ಮಾರುಕಟ್ಟೆ ಬೆಲೆಯನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ, ಇದು ಸಾಮಾನ್ಯ ಗ್ರಾಹಕರ ಮೇಲೆಯೇ ನೇರ ಹೊರೆಯಾಗಲಿದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಇದಲ್ಲದೆ, ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು (ಉಚಿತ ಸೌಲಭ್ಯಗಳು) ಸರ್ಕಾರದ ಮೇಲೆ ತೀವ್ರ ಆರ್ಥಿಕ ಒತ್ತಡವನ್ನು ಸೃಷ್ಟಿಸಿದ್ದು, ಆ ಕೊರತೆಯನ್ನು ನೀಗಿಸಲೇ ಈ ರೀತಿಯ ದರ ಏರಿಕೆಗಳನ್ನು ಮಾಡಲಾಗುತ್ತಿದೆ ಎಂದು ಹಲವರು ಕಟುವಾಗಿ ಟೀಕಿಸಿದ್ದಾರೆ.

