ರಾಜ್ಯ ಬಜೆಟ್ 2026-27: ಸಿಲಿಕಾನ್ ಸಿಟಿಗೆ ಸಿಕ್ಕಿದ್ದೇನು? ಟನೆಲ್ ರಸ್ತೆ, ಕಾವೇರಿ 6ನೇ ಹಂತಕ್ಕೆ ಗ್ರೀನ್ ಸಿಗ್ನಲ್
x

ರಾಜ್ಯ ಬಜೆಟ್ 2026-27: ಸಿಲಿಕಾನ್ ಸಿಟಿಗೆ ಸಿಕ್ಕಿದ್ದೇನು? ಟನೆಲ್ ರಸ್ತೆ, ಕಾವೇರಿ 6ನೇ ಹಂತಕ್ಕೆ ಗ್ರೀನ್ ಸಿಗ್ನಲ್

ಹೊರವರ್ತುಲ ರಸ್ತೆ ಅಭಿವೃದ್ಧಿಗೆ ವಿಶೇಷ ಗಮನಹರಿಸಲಾಗಿದೆ. ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂವರೆಗಿನ ಕಾರಿಡಾರ್ ಅನ್ನು 450 ಕೋಟಿ ರೂ. ವೆಚ್ಚದಲ್ಲಿ ಜಾಗತಿಕ ಮಟ್ಟಕ್ಕೆ ಅಭಿವೃದ್ಧಿಪಡಿಸಲಾಗುವುದು.


Click the Play button to hear this message in audio format

ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ರಾಜಧಾನಿ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಾಹನ ದಟ್ಟಣೆ ನಿಯಂತ್ರಣಕ್ಕೆ ಭಾರಿ ಒತ್ತು ನೀಡಲಾಗಿದೆ. ಐಟಿ-ಬಿಟಿ ನಗರಿಯನ್ನು ಜಾಗತಿಕ ಮಟ್ಟಕ್ಕೆ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ಯೋಜನೆಗಳನ್ನು ಘೋಷಿಸಲಾಗಿದ್ದು, ಈ ವರ್ಷವೂ ನಗರದ ಸಮಗ್ರ ಅಭಿವೃದ್ಧಿಗಾಗಿ ಹಿಂದಿನ ವರ್ಷದಂತೆ ವಾರ್ಷಿಕ 7,000 ಕೋಟಿ ರೂ.ಗಳ ಅನುದಾನವನ್ನು ಸರ್ಕಾರ ಮುಂದುವರಿಸಿದೆ.

ವಾಹನ ದಟ್ಟಣೆಗೆ ಮುಕ್ತಿ: ಟನೆಲ್ ರಸ್ತೆ ಹಾಗೂ ವೈಟ್-ಟಾಪಿಂಗ್

ಬೆಂಗಳೂರಿನ ಬಹುದೊಡ್ಡ ಸಮಸ್ಯೆಯಾಗಿರುವ ಟ್ರಾಫಿಕ್ ಜಾಮ್‌ಗೆ ಶಾಶ್ವತ ಪರಿಹಾರ ಕಲ್ಪಿಸಲು ಬಜೆಟ್‌ನಲ್ಲಿ 40,000 ಕೋಟಿ ರೂ. ವೆಚ್ಚದ 40 ಕಿ.ಮೀ ಉದ್ದದ ಸುರಂಗ ರಸ್ತೆ (ಟನೆಲ್ ರಸ್ತೆ) ಕಾರಿಡಾರ್ ಯೋಜನೆಗೆ (ಉತ್ತರ-ದಕ್ಷಿಣ ಹಾಗೂ ಪೂರ್ವ-ಪಶ್ಚಿಮ) ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ. ಇದರ ಜೊತೆಗೆ ಹೆಬ್ಬಾಳದಿಂದ ಮೇಕ್ರಿ ವೃತ್ತದವರೆಗೆ 2,250 ಕೋಟಿ ರೂ. ವೆಚ್ಚದಲ್ಲಿ ಟನೆಲ್ ಮತ್ತು ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ. ರಸ್ತೆಗಳ ಗುಣಮಟ್ಟ ಸುಧಾರಿಸಲು ಮುಂದಿನ ಮೂರು ವರ್ಷಗಳಲ್ಲಿ 3,000 ಕೋಟಿ ರೂ. ವೆಚ್ಚದಲ್ಲಿ 450 ಕಿ.ಮೀ ಉದ್ದದ ರಸ್ತೆಗಳನ್ನು ವೈಟ್-ಟಾಪಿಂಗ್ ಮಾಡಲು ನಿರ್ಧರಿಸಲಾಗಿದ್ದು, ನಗರದ 5 ಕಾರ್ಪೊರೇಷನ್‌ಗಳ ವ್ಯಾಪ್ತಿಯ ವಾರ್ಡ್ ರಸ್ತೆಗಳ ಅಭಿವೃದ್ಧಿಗಾಗಿ 1,255 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

ಹೊರವರ್ತುಲ ರಸ್ತೆ ಅಭಿವೃದ್ಧಿ ಹಾಗೂ ಮೆಟ್ರೋ ವಿಸ್ತರಣೆ

ಐಟಿ ಕಾರಿಡಾರ್‌ಗಳ ಸಂಪರ್ಕ ಕೊಂಡಿಯಾಗಿರುವ ಹೊರವರ್ತುಲ ರಸ್ತೆ ಅಭಿವೃದ್ಧಿಗೆ ವಿಶೇಷ ಗಮನಹರಿಸಲಾಗಿದೆ. ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂವರೆಗಿನ ಕಾರಿಡಾರ್ ಅನ್ನು 450 ಕೋಟಿ ರೂ. ವೆಚ್ಚದಲ್ಲಿ ಜಾಗತಿಕ ಮಟ್ಟಕ್ಕೆ ಅಭಿವೃದ್ಧಿಪಡಿಸಲಾಗುವುದು. ಅಲ್ಲದೆ, ಓಆರ್‌ಆರ್ ಕಂಪನಿಗಳ ಅಸೋಸಿಯೇಷನ್ ಬೆಂಬಲದೊಂದಿಗೆ 160 ಕೋಟಿ ರೂ. ವೆಚ್ಚದಲ್ಲಿ ಮೆಟ್ರೋ ಮಾರ್ಗದ ಉದ್ದಕ್ಕೂ 9 ಕಿ.ಮೀ ಉದ್ದದ ಪಾದಚಾರಿ ಮಾರ್ಗವನ್ನು ನಿರ್ಮಿಸಲಾಗುವುದು. ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಲು 2026-27ನೇ ಸಾಲಿನಲ್ಲಿ ನಮ್ಮ ಮೆಟ್ರೋದ 41 ಕಿ.ಮೀ ಹೊಸ ಮಾರ್ಗದ ವಿಸ್ತರಣೆ ಕಾರ್ಯ ನಡೆಯಲಿದ್ದು, 73 ಕಿ.ಮೀ ಉದ್ದದ 'ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಫೇಸ್-1' ಕಾಮಗಾರಿಗಳು ಪ್ರಗತಿಯಲ್ಲಿವೆ.

ಕಾವೇರಿ ನೀರು, ಸ್ಕೈವಾಕ್ ಹಾಗೂ ಉದ್ಯಾನವನಗಳು

ಬೆಳೆಯುತ್ತಿರುವ ಬೆಂಗಳೂರಿನ ನೀರಿನ ಬವಣೆ ನೀಗಿಸಲು 6,939 ಕೋಟಿ ರೂ. ವೆಚ್ಚದಲ್ಲಿ ಕಾವೇರಿ 6ನೇ ಹಂತದ ಬೃಹತ್ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೂಲಕ ನಗರಕ್ಕೆ ಹೆಚ್ಚುವರಿ ಕುಡಿಯುವ ನೀರು ಪೂರೈಸಲು ಸರ್ಕಾರ ಮುಂದಾಗಿದೆ. ಪಾದಚಾರಿಗಳ ಸುರಕ್ಷತೆ ಹಾಗೂ ಸೌಂದರ್ಯೀಕರಣದ ದೃಷ್ಟಿಯಿಂದ 175 ಪ್ರಮುಖ ಜಂಕ್ಷನ್‌ಗಳ ಅಭಿವೃದ್ಧಿ, 500 ಕಿ.ಮೀ ಉದ್ದದ ಫುಟ್‌ಪಾತ್‌ಗಳ ಉನ್ನತೀಕರಣ ಹಾಗೂ ನಗರದಾದ್ಯಂತ 100 ಸ್ಕೈವಾಕ್‌ಗಳನ್ನು ನಿರ್ಮಿಸಲು ಬಜೆಟ್‌ನಲ್ಲಿ ಯೋಜನೆ ರೂಪಿಸಲಾಗಿದೆ. ನಗರದ ಪರಿಸರ ಸಂರಕ್ಷಣೆಗಾಗಿ 100 ಮಿಯಾವಾಕಿ (Miyawaki) ಮಾದರಿಯ ನವೀನ ಉದ್ಯಾನವನಗಳನ್ನು ಅಭಿವೃದ್ಧಿಪಡಿಸುವ ಮೂಲಕ ಹಸಿರು ಹೊದಿಕೆಯನ್ನು ಹೆಚ್ಚಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.

Read More
Next Story