
ಹೊಟೇಲ್ ಮುಂಭಾಗ ಹಾಕಿರುವ ಪ್ರಕಟಣೆ
ಎಲ್ಪಿಜಿ ಬಿಕ್ಕಟ್ಟು: ಬೆಂಗಳೂರಿನ ಎಂಪೈರ್ ಸೇರಿ ಪ್ರಮುಖ ಹೋಟೆಲ್ಗಳಲ್ಲಿ ಮೆನು ಕಡಿತ
ಬೆಳಗ್ಗಿನ ತಿಂಡಿಯಲ್ಲಿ ದೋಸೆ, ಚಪಾತಿಯಂತಹ ಆಹಾರವನ್ನು ಕಡಿತಗೊಳಿಸಿದ್ದು ಅನ್ನ ಹಾಗೂ ಸಾಂಬರ್ ಮಾಡಲು ಹೆಚ್ಚು ಒತ್ತು ನೀಡಲಾಗಿದೆ ಎಂದು ಕೆ.ಜಿ. ರಸ್ತೆಯ ಬಹುತೇಕ ಹೊಟೇಲ್ಗಳ ಮಾಲೀಕರು ತಿಳಿಸಿದ್ದಾರೆ.
ಇರಾನ್ ಯುದ್ಧದ ಪರಿಣಾಮ ಎಲ್ಪಿಜಿ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಬೇಡಿಕೆಗೆ ತಕ್ಕಷ್ಟು ಸಿಲಿಂಡರ್ ದೊರೆಯದಿರುವುದರಿಂದ ಬೆಂಗಳೂರಿನ ಎಂಪೈರ್ ಸೇರಿದಂತೆ ಪ್ರಮುಖ ಹೊಟೇಲ್ಗಳ ಮೆನು ಕಡಿಮೆ ಮಾಡಲಾಗಿದೆ ಎಂದು ಹೊಟೇಲ್ ಮಾಲೀಕರು ತಮ್ಮ ಅಸಾಹಯಕತೆ ವ್ಯಕ್ತಪಡಿಸಿದ್ದಾರೆ.
ನಗರದ ಬಹುತೇಕ ಹೊಟೇಲ್ಗಳಲ್ಲಿ ಅಡುಗೆ ಅನಿಲ ಇನ್ನು ಕೆಲವೇ ದಿನಗಳಲ್ಲಿ ಖಾಲಿಯಾಗಲಿದೆ. ಈಗಾಗಲೇ ಹಲವು ಕಡೆ ಸೌದೆ ಬಳಸಿ ಅಡುಗೆ ಮಾಡಲಾಗುತ್ತಿದೆ. ಬೆಳಗ್ಗಿನ ತಿಂಡಿಯಲ್ಲಿ ದೋಸೆ, ಚಪಾತಿಯಂತಹ ಆಹಾರವನ್ನು ಕಡಿತಗೊಳಿಸಿದ್ದು ಅನ್ನ ಹಾಗೂ ಸಾಂಬರ್ ಮಾಡಲು ಹೆಚ್ಚು ಒತ್ತು ನೀಡಲಾಗಿದೆ ಎಂದು ಕೆ.ಜಿ. ರಸ್ತೆಯ ಬಹುತೇಕ ಹೊಟೇಲ್ಗಳ ಮಾಲೀಕರು ತಿಳಿಸಿದ್ದಾರೆ.
ಹೊಟೇಲ್ ಮುಂದೆ ಮೆನು ಬೋರ್ಡ್
ಸಿಲಿಂಡರ್ ಅಭಾವದಿಂದ ಮೆನು ಬದಲಾವಣೆಯಾದ ನಂತರ, ಈ ಬಗ್ಗೆ ಹೊಟೇಲ್ ಮುಂದೆ ಬೋರ್ಡ್ಗಳನ್ನು ಹಾಕಲಾಗಿದೆ. ಗ್ಯಾಸ್ ಸರಬರಾಜಿನಲ್ಲಿ ತೊಂದರೆಯಾಗಿದ್ದು, ಸೀಮಿತ ತಿಂಡಿಗಳನ್ನು ಮಾಡಲಾಗುತ್ತದೆ. ಗ್ರಾಹಕರು ಸಹಕಾರ ನೀಡಬೇಕು ಎಂದು ಬೋರ್ಡ್ನಲ್ಲಿ ಹಾಕಲಾಗಿದೆ.
ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ
ಕೆಂಪೇಗೌಡ ರಸ್ತೆಯಲ್ಲಿರುವ ವಿಷ್ಣು ಗ್ರಾಂಡ್ ಹೊಟೇಲ್ ಮ್ಯಾನೇಜರ್ ಮಾತನಾಡಿ, ಹೊಟೇಲ್ಗೆ ಪ್ರತಿದಿನಾ ನೂರಾರು ಗ್ರಾಹಕರು ಬರುತ್ತಾರೆ. ಬೆಳಗಿನ ತಿಂಡಿಗಳಲ್ಲಿ ಸೀಮಿತ ಮಾಡಲಾಗಿದ್ದು, ಕೇವಲ ಅನ್ನ ಸಾಂಬಾರ್ ಮಾತ್ರ ನೀಡಲಾಗುತ್ತಿದೆ. ಸಿಲಿಂಡರ್ ಖಾಲಿಯಾದ ತಕ್ಷಣ ಬಂದ್ ಮಾಡುತ್ತೇವೆ. ಸೌದೆ ಒಲೆಯಲ್ಲಿ ಅಡುಗೆ ಮಾಡುವ ವ್ಯವಸ್ಥೆ ನಮ್ಮಲ್ಲಿಲ್ಲ. ಕಾಳಸಂತೆಯಲ್ಲಿ ಸಿಲಿಂಡರ್ ಸಿಗುತ್ತದೆ. ಆದರೆ, ಅಲ್ಲಿ ಹೆಚ್ಚು ಹಣ ನೀಡಿ ತರಬೇಕು ಎಂದು ಅಳಲು ತೋಡಿಕೊಂಡರು.
ರಾಜ್ಯದ ಬೇಡಿಕೆ ಎಷ್ಟು ?
ರಾಜ್ಯದ ಎಲ್ಪಿಜಿ ಬೇಡಿಕೆಯ ಅಂಕಿಅಂಶಗಳು ಬೆಚ್ಚಿಬೀಳಿಸುವಂತಿವೆ. ಸಚಿವ ಕೆ.ಎಚ್. ಮುನಿಯಪ್ಪ ಅವರ ಮಾಹಿತಿಯಂತೆ, ರಾಜ್ಯದಲ್ಲಿ ಪ್ರತಿದಿನ ಸುಮಾರು 50,000 ಕಮರ್ಷಿಯಲ್ ಸಿಲಿಂಡರ್ಗಳು ಹಾಗೂ ಗೃಹ ಬಳಕೆಗೆ ಸುಮಾರು 3.50 ಲಕ್ಷ ಸಿಲಿಂಡರ್ಗಳ ಅಗತ್ಯವಿದೆ. ಭಾರತದಲ್ಲಿ ಎಲ್ಪಿಜಿ ಉತ್ಪಾದನೆ ಕೇವಲ ಶೇ. 30 ರಷ್ಟಿದ್ದು, ಉಳಿದ ಶೇ. 70 ರಷ್ಟು ಅನಿಲಕ್ಕಾಗಿ ನಾವು ಅಮೆರಿಕ, ರಷ್ಯಾ ಮತ್ತು ಗಲ್ಫ್ ರಾಷ್ಟ್ರಗಳನ್ನೇ ನಂಬಿಕೊಂಡಿದ್ದೇವೆ. ಪ್ರಸ್ತುತ ನಡೆಯುತ್ತಿರುವ ಯುದ್ಧವು ಈ ಆಮದು ಸರಪಳಿಯನ್ನು ಕಡಿದು ಹಾಕಿರುವುದು ಬಿಕ್ಕಟ್ಟು ತೀವ್ರಗೊಳ್ಳಲು ಪ್ರಮುಖ ಕಾರಣವಾಗಿದೆ.

