
ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳಿಗೆ ಗಲ್ಲು ಶಿಕ್ಷೆ ಪ್ರಕಟಿಸಲಾಗಿದೆ.
ಹಂಪಿಯಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ; ಮೂವರು ಅಪರಾಧಿಗಳಿಗೆ ಗಲ್ಲುಶಿಕ್ಷೆ
2025ರ ಮಾರ್ಚ್ 6ರಂದು ರಾತ್ರಿ 11 ಗಂಟೆ ಸುಮಾರಿಗೆ ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ಕಳೆದ ವರ್ಷ ನಡೆದ ವಿದೇಶಿ ಮಹಿಳೆ ಹಾಗೂ ಸ್ಥಳೀಯ ಹೋಂ ಸ್ಟೇ ನಿರ್ವಾಹಕಿ ಮೇಲೆ ಸಾಮೂಹಿಕ ಅತ್ಯಾಚಾರ, ಜೊತೆಗೆ ಒಡಿಶಾದ ಪ್ರವಾಸಿಗನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸಷನ್ಸ್ ನ್ಯಾಯಾಲಯವು ಮೂವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಿ ಆದೇಶಿಸಿದೆ.
ಈ ಪ್ರಕರಣದಲ್ಲಿ ಗಂಗಾವತಿ ಸಾಯಿನಗರದ ಮಲ್ಲೇಶ್ (ಹಂದಿಮಲ್ಲ), ಸಾಯಿ (ಚೈತನ್ಯಸಾಯಿ) ಮತ್ತು ಶರಣಪ್ಪ (ಶರಣು ಬಸವರಾಜ್) ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದ್ದು, ಇವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.
ಘಟನೆ ಹೇಗಿತ್ತು?
ಕಳೆದ ವರ್ಷದ ಮಾರ್ಚ್ 6ರಂದು ರಾತ್ರಿ 11 ಗಂಟೆ ಸುಮಾರಿಗೆ ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯ ಸಾಣಾಪುರ ಕೆರೆಯ ಬಳಿ ಈ ಘಟನೆ ನಡೆದಿದೆ. ಐವರು ಪ್ರವಾಸಿಗರು ಕೆರೆಯ ಬಳಿ ನಕ್ಷತ್ರಗಳನ್ನು ನೋಡುತ್ತಾ ಗಿಟಾರ್ ನುಡಿಸುತ್ತಾ ಸಮಯ ಕಳೆಯುತ್ತಿದ್ದ ವೇಳೆ, ಬೈಕ್ನಲ್ಲಿ ಬಂದ ಮೂವರು ವ್ಯಕ್ತಿಗಳು ಪೆಟ್ರೋಲ್ಗೆ 100 ರೂಪಾಯಿ ನೀಡುವಂತೆ ಸ್ಥಳೀಯ ಹೋಂ ಸ್ಟೇ ನಿರ್ವಾಹಕಿಯನ್ನು ಒತ್ತಾಯಿಸಿದ್ದರು. ಹಣ ನೀಡಲು ನಿರಾಕರಿಸಿದಾಗ, ಆರೋಪಿಗಳು ಪುರುಷ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿ ಅವರನ್ನು ಕಾಲುವೆಗೆ ತಳ್ಳಿ, ಇಸ್ರೇಲ್ ಮಹಿಳೆ ಮತ್ತು ಸ್ಥಳೀಯ ಹೋಂ ಸ್ಟೇ ನಿರ್ವಾಹಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಕಾಲುವೆಗೆ ತಳ್ಳಲ್ಪಟ್ಟ ಮೂವರಲ್ಲಿ ಇಬ್ಬರು ಕಷ್ಟಪಟ್ಟು ಈಜಿ ದಡ ಸೇರಿದ್ದು, ಒಡಿಶಾದ ಬಿಬಾಸ್ ಎಂಬಾತ ಪತ್ತೆಯಾಗಿರಲಿಲ್ಲ. ನಂತರ ಶನಿವಾರ ಒಡಿಶಾ ಮೂಲದ ವ್ಯಕ್ತಿಯ ಶವ ಪತ್ತೆಯಾಗಿದೆ ಎಂದು ಪ್ರಕರಣದ ವಿವರಗಳಲ್ಲಿ ಹೇಳಲಾಗಿದೆ.
ಬಂಧನ ಮತ್ತು ತೀರ್ಪು
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು. ಈಗ ನ್ಯಾಯಾಲಯವು ಮೂವರನ್ನೂ ದೋಷಿಗಳೆಂದು ಗುರುತಿಸಿ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶಿಸಿದೆ.

