x

ಕಾವೇರಿ ವಿವಾದ: ತಮಿಳುನಾಡು ಸಿಎಂ ವಿಜಯ್‌ಗೆ ಡಿಕೆ ಶಿವಕುಮಾರ್ ಸವಾಲು

ಕಾವೇರಿ ನೀರು ಬಿಡುಗಡೆ ಆದೇಶದ ವಿರುದ್ಧ ಕರ್ನಾಟಕ ಮೇಲ್ಮನವಿ ಸಲ್ಲಿಸಿದೆ. ಸಿಡಬ್ಲ್ಯೂಎಂಎ ಸಭೆಗೂ ಮುನ್ನ ಡಿಕೆ ಶಿವಕುಮಾರ್ ತಮಿಳುನಾಡು ಸಿಎಂ ವಿಜಯ್‌ಗೆ ಕರ್ನಾಟಕಕ್ಕೆ ಬರುವಂತೆ ಸವಾಲು ಹಾಕಿದ್ದಾರೆ.


Click the Play button to hear this message in audio format

ಕಾವೇರಿ ನದಿ ನೀರು ಹಂಚಿಕೆ ವಿವಾದ ಮತ್ತೆ ತೀವ್ರ ಸ್ವರೂಪ ಪಡೆದಿದೆ. ಕರ್ನಾಟಕದಲ್ಲಿ ನೀರಿನ ಕೊರತೆ ಇರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದ್ದರೂ, ಕಾವೇರಿ ಜಲ ನಿಯಂತ್ರಣ ಸಮಿತಿ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಆದೇಶಿಸಿದೆ. ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA)ಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಅದರ ಬೆನ್ನಲ್ಲೇ ಇಂದು ತುರ್ತು ಸಭೆ ನಡೆಯಲಿದೆ.

ಈ ಬೆಳವಣಿಗೆಗಳ ನಡುವೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರಿಗೆ ನೇರ ಸವಾಲು ಹಾಕಿದ್ದಾರೆ. "ಮೊದಲು ಕರ್ನಾಟಕಕ್ಕೆ ಬಂದು ಕಾವೇರಿ ನದಿ ತೀರದ ಪ್ರದೇಶಗಳ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ. ರೈತರು ಮತ್ತು ಜನರು ಎದುರಿಸುತ್ತಿರುವ ಸಂಕಷ್ಟವನ್ನು ಕಣ್ಣಾರೆ ನೋಡಿ. ಬಳಿಕ ನೀರಿನ ಬಗ್ಗೆ ನಿರ್ಧಾರ ತೆಗೆದುಕೊಳ್ಳಿ. ಅದಕ್ಕಾಗಿ ಬೇಕಾದ ಹೆಲಿಕಾಪ್ಟರ್ ವ್ಯವಸ್ಥೆಯನ್ನೂ ನಾನು ಮಾಡಿಕೊಡುತ್ತೇನೆ" ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ವಾದವೇನು?

ಜುಲೈ 28ರಂದು ನಡೆದ ಸಿಡಬ್ಲ್ಯೂಆರ್ಸಿ ಸಭೆಯಲ್ಲಿ ಕರ್ನಾಟಕ ತನ್ನ ವಾದವನ್ನು ಮಂಡಿಸಿತ್ತು. ತಮಿಳುನಾಡಿನ ಜಲಾಶಯಗಳಲ್ಲಿ ಈಗಾಗಲೇ ಸುಮಾರು 41 ಟಿಎಂಸಿ ನೀರು ಸಂಗ್ರಹವಿದ್ದು, ಮುಂದಿನ ಹಲವು ದಿನಗಳ ಅಗತ್ಯಕ್ಕೆ ಅದು ಸಾಕಾಗುತ್ತದೆ ಎಂದು ಸರ್ಕಾರ ತಿಳಿಸಿತ್ತು. ಆದರೆ ಕರ್ನಾಟಕದಲ್ಲಿ ಮಳೆಯ ಕೊರತೆಯಿಂದ ಮೈಸೂರು, ಬೆಂಗಳೂರು ಸೇರಿದಂತೆ ಕಾವೇರಿ ನೀರನ್ನೇ ಅವಲಂಬಿಸಿರುವ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ವಾದಿಸಿತ್ತು. ಜೊತೆಗೆ ಈಶಾನ್ಯ ಮುಂಗಾರು ಆರಂಭವಾಗಲಿರುವುದರಿಂದ ತಮಿಳುನಾಡಿಗೆ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯನ್ನೂ ಸರ್ಕಾರ ಉಲ್ಲೇಖಿಸಿತ್ತು.

ಸಿಡಬ್ಲ್ಯೂಎಂಎ ಸಭೆಯತ್ತ ಚಿತ್ತ

ಸಚಿವ ರಾಮಲಿಂಗಾರೆಡ್ಡಿ, "ನಾಲ್ಕು ಪ್ರಮುಖ ಜಲಾಶಯಗಳಲ್ಲಿ ಒಟ್ಟು 56 ಟಿಎಂಸಿ ನೀರು ಇದ್ದರೂ, ಡೆಡ್ ಸ್ಟೋರೇಜ್ ತೆಗೆದರೆ ಬಳಕೆಗೆ ಲಭ್ಯವಿರುವುದು ಕೇವಲ 46 ಟಿಎಂಸಿ ಮಾತ್ರ. ಇದು ಕುಡಿಯುವ ನೀರಿನ ಅಗತ್ಯಕ್ಕೇ ಸಾಕಾಗುವಷ್ಟು ಇದೆ. ಹೀಗಾಗಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

ಇಂದು ನಡೆಯಲಿರುವ ಸಿಡಬ್ಲ್ಯೂಎಂಎ ಸಭೆಯಲ್ಲಿ ಕರ್ನಾಟಕದ ಮೇಲ್ಮನವಿಗೆ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಸಭೆಯ ತೀರ್ಮಾನವು ಕಾವೇರಿ ನೀರು ಹಂಚಿಕೆ, ರೈತರ ಪ್ರತಿಭಟನೆ ಹಾಗೂ ಕರ್ನಾಟಕ–ತಮಿಳುನಾಡು ನಡುವಿನ ಮುಂದಿನ ಬೆಳವಣಿಗೆಗಳ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.

Read More
Next Story