
ಸಿಲಿಂಡರ್ ಬೆಲೆ ಏರಿಕೆ: ಶೀಘ್ರದಲ್ಲೇ ಹೋಟೆಲ್ ತಿಂಡಿ, ಊಟದ ದರ ಹೆಚ್ಚಳ? ಹೋಟೆಲ್ ಮಾಲೀಕರು ಹೇಳುವುದೇನು?
ಇತ್ತೀಚೆಗಷ್ಟೇ ರಾಜ್ಯ ಸರ್ಕಾರವು ವಿದ್ಯುತ್ ಮತ್ತು ನೀರಿನ ದರವನ್ನು ಹೆಚ್ಚಿಸಿದೆ. ಇದರ ಬೆನ್ನಲ್ಲೇ ಹೋಟೆಲ್ಗಳಿಂದ ಉತ್ಪತ್ತಿಯಾಗುವ ಕಸ ಸಂಗ್ರಹಣೆಗೆ ಪ್ರತಿ ಕೆಜಿಗೆ 12 ರೂಪಾಯಿಗಳ ದುಬಾರಿ ದರ ನಿಗದಿಪಡಿಸಲಾಗಿದೆ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ.
ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಹೋಟೆಲ್ ಊಟ ಮತ್ತು ತಿಂಡಿಗಳ ದರ ಶೀಘ್ರದಲ್ಲೇ ದುಬಾರಿಯಾಗುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿರುವ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್, ಹೋಟೆಲ್ ಉದ್ಯಮ ಎದುರಿಸುತ್ತಿರುವ ಸವಾಲುಗಳು ಹಾಗೂ ಬೆಲೆ ಏರಿಕೆಯ ಅನಿವಾರ್ಯತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ವಾಣಿಜ್ಯ ಸಿಲಿಂಡರ್ ದರ ಏರಿಕೆಯು ನೇರವಾಗಿ ಹೋಟೆಲ್ ಉದ್ಯಮದ ಮೇಲೆ ಪ್ರಭಾವ ಬೀರಲಿದ್ದು, ಇದರ ಬಿಸಿ ಅಂತಿಮವಾಗಿ ಜನಸಾಮಾನ್ಯರ ಜೇಬಿಗೆ ತಟ್ಟಲಿದೆ. ಕೇವಲ ಯುದ್ಧದ ಕಾರಣವನ್ನು ಮುಂದಿಟ್ಟುಕೊಂಡು ವಾಣಿಜ್ಯ ಸಿಲಿಂಡರ್ ದರವನ್ನು ಹೆಚ್ಚಿಸಿರುವುದು ಸರಿಯಾದ ಕ್ರಮವಲ್ಲ ಎಂದು ಪಿ.ಸಿ. ರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಬಲ್ಕ್ ರೂಪದಲ್ಲಿ (ಸಗಟು) ಸಿಲಿಂಡರ್ ಖರೀದಿಸುವಾಗ ನೀಡಲಾಗುತ್ತಿದ್ದ 150 ರೂಪಾಯಿಗಳ ರಿಯಾಯಿತಿಯನ್ನು ಸರ್ಕಾರ ದಿಢೀರನೆ ರದ್ದುಗೊಳಿಸಿತ್ತು. ಆದರೂ ಗ್ರಾಹಕರ ಹಿತದೃಷ್ಟಿಯಿಂದ ಹೋಟೆಲ್ ಮಾಲೀಕರು ಆಹಾರದ ದರವನ್ನು ಹೆಚ್ಚಿಸದೆ ನಷ್ಟವನ್ನು ಭರಿಸಿದ್ದರು ಎಂಬುದನ್ನು ಅವರು ನೆನಪಿಸಿದ್ದಾರೆ.
ರಾಜ್ಯ ಸರ್ಕಾರದ ಶುಲ್ಕಗಳ ಹೆಚ್ಚಳದ ಹೊರೆ
ಕೇಂದ್ರ ಸರ್ಕಾರದ ಸಿಲಿಂಡರ್ ದರ ಏರಿಕೆಯ ಜೊತೆಗೆ ರಾಜ್ಯ ಸರ್ಕಾರದ ಕೆಲವು ನಿರ್ಧಾರಗಳು ಸಹ ಹೋಟೆಲ್ ಉದ್ಯಮವನ್ನು ಸಂಕಷ್ಟಕ್ಕೆ ಸಿಲುಕಿಸಿವೆ. ಇತ್ತೀಚೆಗಷ್ಟೇ ರಾಜ್ಯ ಸರ್ಕಾರವು ವಿದ್ಯುತ್ ಮತ್ತು ನೀರಿನ ದರವನ್ನು ಹೆಚ್ಚಿಸಿದೆ. ಇದರ ಬೆನ್ನಲ್ಲೇ ಹೋಟೆಲ್ಗಳಿಂದ ಉತ್ಪತ್ತಿಯಾಗುವ ಕಸ ಸಂಗ್ರಹಣೆಗೆ ಪ್ರತಿ ಕೆಜಿಗೆ 12 ರೂಪಾಯಿಗಳ ದುಬಾರಿ ದರವನ್ನು ನಿಗದಿಪಡಿಸಲಾಗಿದೆ. ಈ ಎಲ್ಲಾ ದರಗಳ ಸತತ ಏರಿಕೆಯು ಹೋಟೆಲ್ ಉದ್ಯಮದ ದೈನಂದಿನ ನಿರ್ವಹಣೆಯ ಮೇಲೆ ತೀವ್ರವಾದ ಆರ್ಥಿಕ ಹೊರೆಯನ್ನು ಹೇರಿದೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಮೂರು ದಿನಗಳಲ್ಲಿ ದರ ಏರಿಕೆಯ ಅಂತಿಮ ನಿರ್ಧಾರ
ವಿದ್ಯುತ್, ನೀರು ಮತ್ತು ಕಸದ ಬಿಲ್ ಹೆಚ್ಚಳವಾದಾಗಲೇ ಕಳೆದ ತಿಂಗಳು ಹೋಟೆಲ್ ತಿಂಡಿಗಳ ದರ ಏರಿಕೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ಗ್ರಾಹಕರ ಮೇಲಿನ ಹೊರೆಯನ್ನು ತಪ್ಪಿಸುವ ಉದ್ದೇಶದಿಂದ ಆ ನಿರ್ಧಾರವನ್ನು ಏಪ್ರಿಲ್ ತಿಂಗಳವರೆಗೆ ಮುಂದೂಡಲಾಗಿತ್ತು. ಇದೀಗ ವಾಣಿಜ್ಯ ಸಿಲಿಂಡರ್ ದರವೂ ಏರಿಕೆಯಾಗಿರುವುದರಿಂದ, ಆಹಾರದ ಬೆಲೆ ಏರಿಕೆ ಮಾಡುವುದು ಅನಿವಾರ್ಯ ಎಂಬ ಘಟ್ಟವನ್ನು ತಲುಪಿದೆ. ಪ್ರಸ್ತುತ ಮಾಡಲಾಗಿರುವ ಸಿಲಿಂಡರ್ ದರ ಏರಿಕೆಯು ತಾತ್ಕಾಲಿಕವೋ ಅಥವಾ ಶಾಶ್ವತವೋ ಎಂಬುದನ್ನು ಸ್ಪಷ್ಟಪಡಿಸುವಂತೆ ಕೋರಿ ಹೋಟೆಲ್ ಮಾಲೀಕರ ಸಂಘವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಮುಂದಿನ ಎರಡು-ಮೂರು ದಿನಗಳಲ್ಲಿ ಸಂಘದ ಪದಾಧಿಕಾರಿಗಳ ಮಹತ್ವದ ಸಭೆ ಸೇರಿ ದರ ಏರಿಕೆಯ ಪ್ರಮಾಣದ ಕುರಿತು ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಪಿ.ಸಿ. ರಾವ್ ಸ್ಪಷ್ಟಪಡಿಸಿದ್ದಾರೆ.

