
ಕೇಂದ್ರ ಸರ್ಕಾರ ನೂತನವಾಗಿ ಘೋಷಿಸಿರುವ ಕೈಗಾರಿಕಾ ಕಾರಿಡರ್ ಬಳಿ ವಿವಿ ಟೌನ್ಶಿಪ್ ಸ್ಥಾಪಿಸುವ ಯೋಜನೆ(ಸಾಂದರ್ಭಿಕ ಯೋಜನೆ)
ರಾಜ್ಯದ 'ಕ್ವಿನ್ ಸಿಟಿ' ಮಾದರಿಯಲ್ಲೇ ಕೇಂದ್ರದ ಬೃಹತ್ ಉದ್ಯೋಗ ಯೋಜನೆ: ಏನಿದು ವಿವಿ ಟೌನ್ಶಿಪ್ ?
ಕೇಂದ್ರ ಸರ್ಕಾರ ಟೌನ್ಶಿಪ್ಗಳನ್ನು ಸ್ಥಾಪಿಸುವ ರಾಜ್ಯಗಳಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದು, ಇದರಿಂದ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ ಕ್ಷೇತ್ರದಲ್ಲಿ ಯುವ ಜನತೆ ಹೆಚ್ಚಿನದಾಗಿ ಭಾಗವಹಿಸಬಹುದು ಹಾಗೂ ಉದ್ಯೋಗ ಪಡೆಯಬಹುದು.
ಕೇಂದ್ರ ಸರ್ಕಾರ ದೇಶದಲ್ಲಿ ನಿರುದ್ಯೋಗ ಕಡಿಮೆ ಮಾಡುವ ಉದ್ದೇಶದಿಂದ ಕೈಗಾರಿಕಾ ಹಾಗೂ ಲಾಜೆಸ್ಟಿಕ್ ಕಾರಿಡರ್ ಬಳಿ ವಿಶ್ವವಿದ್ಯಾಲಯ ಟೌನ್ಶಿಪ್ಗಳನ್ನು ಮಾಡುವ ಮೂಲಕ ಉದ್ಯೋಗ ಹಾಗೂ ಶಿಕ್ಷಣವನ್ನು ಬೆಸೆಯುವ ಯೋಜನೆಯನ್ನು ಘೋಷಿಸಿದೆ. ನೂತನ ಯೋಜನೆಯು ರಾಜ್ಯ ಸರ್ಕಾರ ಈ ಹಿಂದೆ ಘೋಷಿಸಿದ್ದ ಕ್ವಿನ್ಸಿಟಿಯ ಭಾಗವೇ ಆಗಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ನಲ್ಲಿ ಯುವಕರಿಗೆ ಅನುಕೂಲವಾಗುವ ಉದ್ದೇಶದಿಂದ ಪ್ರಮುಖ ಕೈಗಾರಿಕಾ ಕಾರಿಡಾರ್ಗಳ ಬಳಿ ವಿಶ್ವವಿದ್ಯಾಲಯಗಳ ಟೌನ್ಶಿಪ್ಗಳನ್ನು ಸ್ಥಾಪಿಸುವ ರಾಜ್ಯಗಳಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದು, ಇದರಿಂದ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ ಕ್ಷೇತ್ರದಲ್ಲಿ ಯುವ ಜನತೆ ಹೆಚ್ಚಿನದಾಗಿ ಭಾಗವಹಿಸಬಹುದು ಹಾಗೂ ಉದ್ಯೋಗ ಪಡೆಯಬಹುದು ಎಂದು ತಿಳಿಸಿದ್ದಾರೆ.
ಯೋಜನೆಯು ಏನೆಲ್ಲಾ ಒಳಗೊಂಡಿದೆ ?
ಕೈಗಾರಿಕಾ ಮತ್ತು ಲಾಜಿಸ್ಟಿಕ್ ಕಾರಿಡಾರ್ಗಳ ಸಮೀಪ 5 ವಿಶ್ವವಿದ್ಯಾಲಯಗಳ ಟೌನ್ಶಿಪ್ಗಳನ್ನು ಸ್ಥಾಪಿಸುವ ಯೋಜನೆಯು ಕೈಗಾರಿಕೆ ಹಾಗೂ ಶೈಕ್ಷಣಿಕ ನಂಟನ್ನು ಬಲಪಡಿಸುತ್ತದೆ. ಕೈಗಾರಿಕಾ ಪ್ರದೇಶಗಳ ಸಮೀಪದಲ್ಲೇ ಶಿಕ್ಷಣ ಸಂಸ್ಥೆಗಳಿರುವುದರಿಂದ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ಮತ್ತು ಇಂಟರ್ನ್ಶಿಪ್ ಅವಕಾಶಗಳು ಸುಲಭವಾಗಿ ಸಿಗುತ್ತವೆ. ಇದು ಪದವೀಧರರನ್ನು ನೇರವಾಗಿ ಉದ್ಯೋಗಕ್ಕೆ ಸನ್ನದ್ಧರನ್ನಾಗಿ ಮಾಡುತ್ತದೆ. ಈ ಟೌನ್ಶಿಪ್ಗಳು ಕೇವಲ ಕಾಲೇಜುಗಳಿಗೆ ಸೀಮಿತವಾಗದೆ, ಸಂಶೋಧನಾ ಸಂಸ್ಥೆಗಳು, ಕೌಶಲ್ಯ ಅಭಿವೃದ್ಧಿ ಕೇಂದ್ರಗಳು ಮತ್ತು ವಸತಿ ಸಂಕೀರ್ಣಗಳನ್ನು ಒಳಗೊಂಡಿರುತ್ತವೆ. ಇದು ಒಂದು ಸ್ವಯಂ-ಚಾಲಿತ ಜ್ಞಾನದ ಆರ್ಥಿಕ ವಲಯವನ್ನು ಸೃಷ್ಟಿಸುತ್ತದೆ.
ರಾಜ್ಯದ ಕ್ವಿನ್ಸಿಟಿ ಯೋಜನೆ ಏನು ?
ಕ್ವಿನ್ ಸಿಟಿ ಯೋಜನೆ ದೊಡ್ಡಬಳ್ಳಾಪುರ ಹಾಗೂ ದಾಬಸ್ಪೇಟೆ ನಡುವಿನ ಹುಲಿಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 5,800 ಸಾವಿರ ಎಕರೆಯಲ್ಲಿ ಜಾರಿಗೆ ಬಂದಿದೆ. ಮೊದಲ ಹಂತದಲ್ಲಿ 2 ಸಾವಿರ ಎಕರೆಯಲ್ಲಿ ಇದು ಅನುಷ್ಠಾನಗೊಳ್ಳುತ್ತಿದ್ದು, ಕೆಲಸಗಳು ಪ್ರಗತಿಯಲ್ಲಿವೆ. ಇಲ್ಲಿ ಜಗತ್ತಿನ ಅತ್ಯುತ್ತಮ ವಿಶ್ವವಿದ್ಯಾಲಯಗಳ ಕ್ಯಾಂಪಸ್, ಗುಣಮಟ್ಟದ ಆಸ್ಪತ್ರೆಗಳು, ಸಂಶೋಧನಾ ಸಂಸ್ಥೆಗಳು ಎಲ್ಲವೂ ಬರಲಿವೆ. ಈಗಾಗಲೇ ಈ ನಿಟ್ಟಿನಲ್ಲಿ ಹಲವು ಒಡಂಬಡಿಕೆಗಳು ಆಗಿವೆ. ಇನ್ನು ಎರಡು ವರ್ಷಗಳಲ್ಲಿ ಇವೆಲ್ಲವೂ ಸಂಪೂರ್ಣ ಜಾರಿಗೆ ಬರಲಿವೆ. ಕೇಂದ್ರ ಸರ್ಕಾರ ಬಜೆಟ್ನಲ್ಲಿ ಕೈಗಾರಿಕಾ ಮತ್ತು ಲಾಜಿಸ್ಟಿಕ್ ಕಾರಿಡಾರ್ಗಳ ಸಮೀಪ ಐದು ವಿಶ್ವವಿದ್ಯಾಲಯಗಳ ಟೌನ್ಶಿಪ್ಗಳನ್ನು ಸ್ಥಾಪಿಸುವ ಯೋಜನೆಯನ್ನು ಘೋಷಿಸುವ ಮೂಲಕ ರಾಜ್ಯದ ಯೋಜನೆಯನ್ನು ಅನುಸರಿಸಿದೆ ಎಂದು ಬೃಹತ್ ಕೈಗಾರಿಕ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

