
ಸಂಗ್ರಹ ಚಿತ್ರ.
ಯುಗಾದಿ, ರಂಜಾನ್ ರಜೆ: ಹಬ್ಬ ಮುಗಿಸಿ ಮರಳಿದ ಜನರಿಂದ ಬೆಂಗಳೂರು ಪ್ರವೇಶ ಮಾರ್ಗದಲ್ಲಿ ಟ್ರಾಫಿಕ್ ಜಾಮ್
ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಸ್ವಗ್ರಾಮಗಳಿಗೆ ತೆರಳಿದ್ದ ಲಕ್ಷಾಂತರ ಮಂದಿ ಏಕಕಾಲದಲ್ಲಿ ನಗರದತ್ತ ಮುಖಮಾಡಿದ್ದರಿಂದ ಪ್ರಮುಖ ಹೆದ್ದಾರಿಗಳಲ್ಲಿ ವಾಹನಗಳ ದಟ್ಟಣೆ ಮಿತಿಮೀರಿತ್ತು.
ಮಾರ್ಚ್ 19ರಂದು ಯುಗಾದಿ ಮತ್ತು ಮಾರ್ಚ್ 20 ರಂದು ರಂಜಾನ್ (ಈದ್-ಉಲ್-ಫಿತರ್) ಹಬ್ಬದ ಸಾಲು ರಜೆಗಳನ್ನು ಮುಗಿಸಿ ಭಾನುವಾರ (ಮಾರ್ಚ್ 22) ತಮ್ಮ ಊರುಗಳಿಂದ ರಾಜಧಾನಿಗೆ ವಾಪಸಾದ ಜನರಿಂದಾಗಿ ಬೆಂಗಳೂರಿನ ಪ್ರಮುಖ ಮಾರ್ಗಗಳಲ್ಲಿ ತೀವ್ರ ಟ್ರಾಫಿಕ್ ಜಾಮ್ ಉಂಟಾಯಿತು.
ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಸ್ವಗ್ರಾಮಗಳಿಗೆ ತೆರಳಿದ್ದ ಲಕ್ಷಾಂತರ ಮಂದಿ ಏಕಕಾಲದಲ್ಲಿ ನಗರದತ್ತ ಮುಖಮಾಡಿದ್ದರಿಂದ ಪ್ರಮುಖ ಹೆದ್ದಾರಿಗಳಲ್ಲಿ ವಾಹನಗಳ ದಟ್ಟಣೆ ಮಿತಿಮೀರಿತ್ತು.
ಮೈಸೂರು ರಸ್ತೆ ಸೇರಿದಂತೆ ನಗರವನ್ನು ಪ್ರವೇಶಿಸುವ ಪ್ರಮುಖ ಹೆದ್ದಾರಿಗಳಲ್ಲಿ ವಾಹನಗಳ ಉದ್ದುದ್ದ ಸಾಲುಗಳು ಕಂಡುಬಂದಿದ್ದು, ಡ್ರೋನ್ (ಏರಿಯಲ್) ಹಾಗೂ ಗ್ರೌಂಡ್ ಕ್ಯಾಮೆರಾಗಳ ದೃಶ್ಯಾವಳಿಗಳು ಟ್ರಾಫಿಕ್ ಜಾಮ್ನ ನೈಜ ಚಿತ್ರಣವನ್ನು ಬಿಚ್ಚಿಟ್ಟಿವೆ. ರಂಜಾನ್ ಪ್ರಾರ್ಥನೆಯ ಸಂದರ್ಭದಲ್ಲಿ ವಾಹನಗಳ ದಟ್ಟಣೆ ನಿಯಂತ್ರಿಸಲು ಸಂಚಾರ ಪೊಲೀಸರು ಮಾರ್ಗ ಬದಲಾವಣೆ (ಡೈವರ್ಷನ್) ಮಾಡಿ ಟ್ರಾಫಿಕ್ ನಿರ್ವಹಣೆಗೆ ಸಲಹೆಗಳನ್ನು ನೀಡಿದ್ದರೂ, ಹಬ್ಬದ ನಂತರದ ಪ್ರಯಾಣಿಕರ ಹರಿವು ಸಂಚಾರ ವ್ಯವಸ್ಥೆಯನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ.
ಸಾರ್ವಜನಿಕರ ಆಕ್ರೋಶ
ಈ ಟ್ರಾಫಿಕ್ ದಟ್ಟಣೆಯ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ವ್ಯಾಪಕವಾಗಿ ಪ್ರತಿಕ್ರಿಯಿಸಿದ್ದು, ನಗರದ ಸಂಚಾರ ವ್ಯವಸ್ಥೆಯ ಮೂಲ ನ್ಯೂನತೆಗಳನ್ನು ಬೊಟ್ಟು ಮಾಡಿದ್ದಾರೆ. ವಾಹನ ಸವಾರರಲ್ಲಿ ಕನಿಷ್ಠ ಲೇನ್ ಶಿಸ್ತು ಇಲ್ಲದಿರುವುದು ಹಾಗೂ ಕುಣಿಗಲ್-ಬೆಂಗಳೂರು ಹೆದ್ದಾರಿಯಂತಹ ವಿಳಂಬವಾಗಿರುವ ಅಪೂರ್ಣ ರಸ್ತೆ ಕಾಮಗಾರಿಗಳೇ ಈ ಭೀಕರ ಟ್ರಾಫಿಕ್ ಜಾಮ್ಗೆ ಪ್ರಮುಖ ಕಾರಣ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ವಾಹನ ಸಂಚಾರ (ಅರ್ಬನ್ ಮೊಬಿಲಿಟಿ) ಅಧ್ಯಯನಗಳ ಪ್ರಕಾರ, 1.33 ಕೋಟಿಗೂ ( ಅಧಿಕ ಜನಸಂಖ್ಯೆ ಹೊಂದಿರುವ ಬೆಂಗಳೂರು ಮಹಾನಗರದಲ್ಲಿ ಇಂತಹ ದಟ್ಟಣೆಗಳು ದೀರ್ಘಕಾಲಿಕ ಸಮಸ್ಯೆಯಾಗಿ ಪರಿಣಮಿಸಿರುವುದು ಸಾರ್ವಜನಿಕರ ದೈನಂದಿನ ಬದುಕನ್ನು ಹೈರಾಣಾಗಿಸಿದೆ.

