
ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ನಿಗದಿ ಜವಾಬ್ದಾರಿ ರಾಜ್ಯ ಸರ್ಕಾರಕ್ಕೆ?
ಸರ್ಕಾರದ ಮುಂದಿರುವ ಎರಡು-ಮೂರು ಪ್ರಮುಖ ಸ್ಥಳಗಳ ಆಯ್ಕೆಗಳ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಚರ್ಚಿಸಿ, ಶೀಘ್ರದಲ್ಲೇ 2 ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಜಾಗ ಅಂತಿಮಗೊಳ್ಳಲಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ನವದೆಹಲಿಯಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬೆನ್ನಲ್ಲೇ, ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾಪನೆ ಪ್ರಕ್ರಿಯೆ ಮತ್ತಷ್ಟು ಚುರುಕುಗೊಂಡಿದೆ.
ಕೇಂದ್ರ ಸರ್ಕಾರವು ಸ್ಥಳ ನಿಗದಿ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯ ಸರ್ಕಾರಕ್ಕೇ ವಹಿಸಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದು, ಶೀಘ್ರದಲ್ಲೇ ಬಹುನಿರೀಕ್ಷಿತ ಎರಡನೇ ವಿಮಾನ ನಿಲ್ದಾಣದ ಜಾಗ ಅಂತಿಮಗೊಳ್ಳುವ ವಿಶ್ವಾಸ ಮೂಡಿದೆ.
ದೆಹಲಿಯಲ್ಲಿ ಸಚಿವರಾದ ಎನ್.ಎಸ್. ಬೋಸರಾಜು ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರೊಂದಿಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಬಳಿಕ ಡಿ.ಕೆ. ಶಿವಕುಮಾರ್ ಅವರು ಈ ಮಾಹಿತಿ ಹಂಚಿಕೊಂಡರು.
ಕೇಂದ್ರ ಸರ್ಕಾರವು ತನ್ನ ಅಭಿಪ್ರಾಯವನ್ನು ಈಗಾಗಲೇ ರಾಜ್ಯಕ್ಕೆ ರವಾನಿಸಿದ್ದು, ಸೂಕ್ತ ಜಾಗವನ್ನು ಗುರುತಿಸುವಂತೆ ಸೂಚಿಸಿದೆ. ಸದ್ಯ ರಾಜ್ಯ ಸರ್ಕಾರದ ಮುಂದೆಯೂ ಎರಡು-ಮೂರು ಪ್ರಮುಖ ಆಯ್ಕೆಗಳಿದ್ದು, ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮೂಲಸೌಕರ್ಯ ಅಭಿವೃದ್ಧಿ ಸಚಿವರಾಗಿರುವ ಎಂ.ಬಿ. ಪಾಟೀಲ್ ಅವರು ಈ ಸಂಪೂರ್ಣ ಪ್ರಕ್ರಿಯೆಯ ಉಸ್ತುವಾರಿ ವಹಿಸಲಿದ್ದಾರೆ.
ಎರಡನೇ ವಿಮಾನ ನಿಲ್ದಾಣ
ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎ) ಪ್ರಯಾಣಿಕರ ದಟ್ಟಣೆಯಲ್ಲಿ ಮಿತಿ ಮೀರಿ ಬೆಳೆಯುತ್ತಿದೆ. 2033ರ ವೇಳೆಗೆ ಈ ನಿಲ್ದಾಣವು ತನ್ನ ಗರಿಷ್ಠ ಪ್ರಯಾಣಿಕ ನಿರ್ವಹಣಾ ಸಾಮರ್ಥ್ಯವನ್ನು ತಲುಪುವ ಅಂದಾಜಿದೆ. ಈ ಹಿನ್ನೆಲೆಯಲ್ಲಿ, ಭವಿಷ್ಯದ ದೃಷ್ಟಿಯಿಂದ ಎರಡನೇ ವಿಮಾನ ನಿಲ್ದಾಣದ ಅನಿವಾರ್ಯತೆಯನ್ನು ಮನಗಂಡು ರಾಜ್ಯ ಸರ್ಕಾರ ಕಳೆದ ಹಲವು ತಿಂಗಳುಗಳಿಂದಲೇ ಸ್ಥಳ ಶೋಧನೆಯನ್ನು ಆರಂಭಿಸಿತ್ತು.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ನಿಯಮಗಳ ಪ್ರಕಾರ, ಹಾಲಿ ವಿಮಾನ ನಿಲ್ದಾಣದಿಂದ ಕನಿಷ್ಠ 150 ಕಿ.ಮೀ ವ್ಯಾಪ್ತಿಯೊಳಗೆ ಹೊಸ ನಿಲ್ದಾಣ ಸ್ಥಾಪನೆಗೆ ಕೆಲವು ತಾಂತ್ರಿಕ ನಿರ್ಬಂಧಗಳಿವೆ. ಆದರೆ, ಬೆಂಗಳೂರಿನಂತಹ ಮಹಾನಗರಗಳ ಭಾರಿ ವಿಸ್ತರಣೆ ಮತ್ತು ಅನಿವಾರ್ಯತೆಗೆ ಅನುಗುಣವಾಗಿ ವಿಶೇಷ ಅನುಮತಿ ಪಡೆಯುವ ಅವಕಾಶಗಳಿರುವುದರಿಂದ ಸರ್ಕಾರ ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿತ್ತು.
ಕೇಂದ್ರ ವಿಮಾನಯಾನ ಸಚಿವರಾದ ರಾಮ್ ಮೋಹನ್ ನಾಯ್ಡು ಅವರನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ ಮತ್ತು ನಿಯೋಗ ಭೇಟಿ ಮಾಡಿತು.
ಸ್ಥಳ ಶೋಧನೆ ಆರಂಭವಾದಾಗಿನಿಂದಲೂ ಹಲವು ಪ್ರದೇಶಗಳ ಹೆಸರುಗಳು ಮುನ್ನೆಲೆಗೆ ಬಂದು ತೀವ್ರ ಚರ್ಚೆಗೆ ಗ್ರಾಸವಾಗಿದ್ದವು. ಮುಖ್ಯವಾಗಿ ತುಮಕೂರು ರಸ್ತೆಯ ನೆಲಮಂಗಲ, ದಾಬಸ್ಪೇಟೆ-ಕುಣಿಗಲ್ ಮಾರ್ಗ, ಮೈಸೂರು ರಸ್ತೆ-ಮಾಗಡಿ ಭಾಗ ಹಾಗೂ ಕನಕಪುರ ರಸ್ತೆ, ಬಿಡದಿ-ಹಾರೋಹಳ್ಳಿ ಭಾಗಗಳಲ್ಲಿ ನೂತನ ನಿಲ್ದಾಣ ಸ್ಥಾಪನೆಗೆ ಸ್ಥಳೀಯ ನಾಯಕರು ಮತ್ತು ಕೈಗಾರಿಕೋದ್ಯಮಿಗಳಿಂದ ಭಾರೀ ಲಾಬಿ ನಡೆದಿತ್ತು. ದಕ್ಷಿಣ ಬೆಂಗಳೂರು ಮತ್ತು ರಾಮನಗರ-ಕನಕಪುರ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಆ ಭಾಗದ ಕೈಗಾರಿಕಾ ಕಾರಿಡಾರ್ಗೆ ಹಾಗೂ ಐಟಿ-ಬಿಟಿ ವಲಯಕ್ಕೆ ದೊಡ್ಡ ಮಟ್ಟದ ಬಲ ಸಿಗಲಿದೆ ಎಂಬುದು ಸರ್ಕಾರದ ಮಟ್ಟದಲ್ಲಿಯೇ ದೊಡ್ಡ ಮಟ್ಟದ ಚರ್ಚೆಯಾಗಿತ್ತು.
ಮತ್ತೊಂದೆಡೆ ತುಮಕೂರು-ನೆಲಮಂಗಲ ಭಾಗದಲ್ಲಿ ಅಪಾರ ಪ್ರಮಾಣದ ಭೂಮಿ ಲಭ್ಯವಿದ್ದು, ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ ಜಾಲದ ಸಂಪರ್ಕ ಉತ್ತಮವಾಗಿರುವುದರಿಂದ ಅದು ಸೂಕ್ತ ಜಾಗ ಎಂಬ ವಾದವೂ ಕೇಳಿಬಂದಿತ್ತು. ಕೆಎಸ್ಐಐಡಿಸಿ (ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ) ಈ ಎಲ್ಲಾ ಆಯಾಮಗಳನ್ನು ಮತ್ತು ವಾಯುಪ್ರದೇಶದ (Airspace) ಲಭ್ಯತೆಯನ್ನು ಪರಿಶೀಲಿಸಿ ಸರ್ಕಾರಕ್ಕೆ ಪ್ರಾಥಮಿಕ ವರದಿಗಳನ್ನೂ ಸಿದ್ಧಪಡಿಸಿತ್ತು.
ರಾಜ್ಯಕ್ಕೆ ಅಧಿಕಾರ
ಇದೀಗ ಕೇಂದ್ರ ಸರ್ಕಾರವು ಜಾಗ ನಿಗದಿ ಮಾಡುವ ಚೆಂಡನ್ನು ಅಧಿಕೃತವಾಗಿ ರಾಜ್ಯ ಸರ್ಕಾರದ ಅಂಗಳಕ್ಕೇ ಎಸೆದಿದೆ. ರಾಜ್ಯದ ಬಳಿ ಇರುವ ಎರಡು-ಮೂರು ಆಯ್ಕೆಗಳಲ್ಲಿ ವಿಮಾನಗಳ ಹಾರಾಟದ ವಾಯುಪ್ರದೇಶದ ತಾಂತ್ರಿಕತೆ, ಸಾವಿರಾರು ಎಕರೆ ಭೂಸ್ವಾಧೀನದ ಸುಲಭತೆ, ರಾಜಧಾನಿಯಿಂದ ಪ್ರಯಾಣಿಕರ ಸಂಪರ್ಕ ವ್ಯವಸ್ಥೆ ಮತ್ತು ಪರಿಸರ ಇಲಾಖೆಯ ಅನುಮತಿಯ ಸಾಧಕ-ಬಾಧಕಗಳನ್ನು ಅಳೆದು ತೂಗಿ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ಉಪಮುಖ್ಯಮಂತ್ರಿಗಳು ಬೆಂಗಳೂರಿಗೆ ಮರಳಿದ ಬಳಿಕ ಸಚಿವ ಎಂ.ಬಿ. ಪಾಟೀಲ್ ಹಾಗೂ ಇತರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೇಂದ್ರದ ಮಾರ್ಗಸೂಚಿಗಳನ್ನು ಪರಿಶೀಲಿಸಲಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಕಿರೀಟಕ್ಕೆ ಮತ್ತೊಂದು ಗರಿ ಎನಿಸಲಿರುವ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕನಸು ಇದೀಗ ನನಸಾಗುವತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಸರ್ಕಾರವು ಅಂತಿಮವಾಗಿ ಯಾವ ಸ್ಥಳದ ಮೇಲೆ ಮೊಹರು ಒತ್ತಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದ್ದು, ಆಯ್ಕೆಯಾಗುವ ಆ ಪ್ರದೇಶದ ಆರ್ಥಿಕ ಹಾಗೂ ರಿಯಲ್ ಎಸ್ಟೇಟ್ ವಲಯದಲ್ಲಿ ಸಂಚಲನ ಮೂಡಿಸಲಿದೆ.

