ತೆರಿಗೆದಾರರಿಗೆ ಗುಡ್ ನ್ಯೂಸ್ ಸಿಗುತ್ತಾ? ಎರಡು ತೆರಿಗೆ ಪದ್ಧತಿಗಳ ಮೇಲೆ ಬಜೆಟ್ ಪ್ರಭಾವ
ವರ್ಷಗಳು ಕಳೆದಂತೆ ತೆರಿಗೆ ಕಡಿತದ ಪ್ರೋತ್ಸಾಹಕಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನರ ಉಳಿತಾಯದ ಪ್ರವೃತ್ತಿ ಕೂಡ ಕಡಿಮೆಯಾಗುತ್ತಿದೆ. ಇವೆಲ್ಲವೂ ಸರ್ಕಾರವು ಬಜೆಟ್ ನಲ್ಲಿ ಪ್ರಕಟಿಸುವ ತೆರಿಗೆ ವಿನಾಯ್ತಿಯನ್ನು ಅವಲಂಬಿಸಿದೆ ಎನ್ನುವುದು ಸುಳ್ಳಲ್ಲ.

ಕಳೆದ ವರ್ಷದ ಕೇಂದ್ರ ಮುಂಗಡ ಪತ್ರದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಾರ್ಷಿಕ 12ಲಕ್ಷ ರೂ ಆದಾಯ ಹೊಂದಿರುವವರಿಗೆ ಸಂಪೂರ್ಣ ಆದಾಯ ತೆರಿಗೆ ವಿನಾಯಿತಿ ಘೋಷಿಸುವ ಮೂಲಕ ದೇಶದ ಕೋಟ್ಯಂತರ ತೆರಿಗೆದಾರರು ನಿಟ್ಟುಸಿರುವ ಬಿಡುವಂತೆ ಮಾಡಿದ್ದರು.
ವರ್ಷದ ಹಿಂದೆ ತಮ್ಮ ಎಂಟನೇ ಮುಂಗಡ ಪತ್ರವನ್ನು ಮಂಡಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಾರ್ಷಿಕ 12 ಲಕ್ಷ ರೂ ಆದಾಯ ಇರುವವರಿಗೆ ತೆರಿಗೆ ವಿನಾಯಿತಿಯನ್ನು ಘೋಷಿಸುವ ಮೂಲಕ ಕೋಟ್ಯಂತರ ತೆರಿಗೆ ಪಾವತಿದಾರರನ್ನು ಅಚ್ಚರಿಗೆ ಕೆಡವಿದ್ದರು.
ತೀರಾ ಸಂಕ್ಷಿಪ್ತವಾಗಿದ್ದ ಬಜೆಟ್ ಭಾಷಣದಲ್ಲಿ ಹೊರಬಿದ್ದ ಈ ಘೋಷಣೆಯು ಪರ-ವಿರೋಧದ ಚರ್ಚೆಗಳೊಂದಿಗೆ ಭಾರೀ ಸಂಚಲನ ಮೂಡಿಸಿತ್ತು.
ಈಗ ನಿರ್ಮಲಾ ಸೀತಾರಾಮನ್ ಅವರು ತಮ್ಮ ದಾಖಲೆಯ ಒಂಭತ್ತನೇ ಬಜೆಟ್ ಮಂಡನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ವರ್ಷ ನರೇಂದ್ರ ಮೋದಿ ಸರ್ಕಾರವು ತೆರಿಗೆದಾರರು ಮತ್ತು ಪಿಂಚಣಿದಾರರಿಗೆ ಯಾವ ಕೊಡುಗೆ ನೀಡಲಿದೆ? ದೇಶೀಯ ಉಳಿತಾಯ ಮತ್ತು ಹೂಡಿಕೆಗಳಿಗೆ ತೆರಿಗೆ ವಿನಾಯಿತಿ ಸಿಗಲಿದೆಯೇ ಎಂಬ ಪ್ರಶ್ನೆ ಈಗ ಎಲ್ಲರಲ್ಲೂ ಮೂಡಿದೆ.
ಹೊಸ ತೆರಿಗೆ ಪದ್ಧತಿ
ಹಣಕಾಸು ಸಚಿವರು 2020-21ರ ಹಣಕಾಸು ವರ್ಷದ ಬಜೆಟ್ ಮಂಡನೆ ಮಾಡಿದಾಗ ಹೊಸ ಆದಾಯ ತೆರಿಗೆ ಪದ್ಧತಿಯನ್ನು ಪರಿಚಯಿಸಿದ್ದರು. ಆ ಪದ್ಧತಿಯಲ್ಲಿ ಉಳಿತಾಯ, ವಿಮಾ ಪ್ರೀಮಿಯಂ, ಮೆಡಿಕ್ಲೈಮ್ ಅಥವಾ ಗೃಹ ಸಾಲದ ಬಡ್ಡಿ ಮೇಲಿನ ತೆರಿಗೆ ವಿನಾಯ್ತಿಗಳನ್ನು ತೆಗೆದುಹಾಕಿತ್ತು. ಆರಂಭದಲ್ಲಿ ಹೊಸ ತೆರಿಗೆ ಪದ್ಧತಿ ಅಡಿಯಲ್ಲಿ ತೆರಿಗೆದಾರರಿಗೆ ʼಸ್ಟಾಂಡರ್ಡ್ ಡಿಡಕ್ಷನ್ʼ ಪ್ರಯೋಜನ ಕೂಡ ಸಿಕ್ಕಿರಲಿಲ್ಲ. ಇದರ ಪರಿಣಾಮವಾಗಿ ಬಹುತೇಕರು ಆಯ್ಕೆ ಮಾಡಿಕೊಂಡಿದ್ದು ಹಳೆಯ ತೆರಿಗೆ ಪದ್ಧತಿಯನ್ನು.
ಆದಾಗ್ಯೂ, 2023-24ರ ಹಣಕಾಸು ವರ್ಷದ ಬಜೆಟ್ ಮಂಡಿಸುವಾಗ, ಹಣಕಾಸು ಸಚಿವರು ಹೊಸ ತೆರಿಗೆ ಪದ್ಧತಿಯನ್ನು ಹೆಚ್ಚು ಆಕರ್ಷಕವಾಗಿಸುವ ಪ್ರಯತ್ನದಲ್ಲಿ ವಾರ್ಷಿಕ 7 ಲಕ್ಷ ರೂಪಾಯಿ ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಘೋಷಿಸಿದರು. ಜೊತೆಗೆ ಹೊಸ ಪದ್ಧತಿಯಡಿ 50,000 ರೂಪಾಯಿಗಳ 'ಸ್ಟ್ಯಾಂಡರ್ಡ್ ಡಿಡಕ್ಷನ್' ಸೌಲಭ್ಯವನ್ನೂ ಘೋಷಿಸಿದರು. ಈ ವ್ಯವಸ್ಥೆಯನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಹೊಸ ಪದ್ಧತಿಗೆ ಇನ್ನಷ್ಟು ಗಿಲೀಟು
ಪ್ರಧಾನಿ ಮೋದಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ, ಜುಲೈ 2024ರಲ್ಲಿ ಬಜೆಟ್ ಮಂಡಿಸಿದ ಸೀತಾರಾಮನ್ ಅವರು ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು 50,000 ರೂ.ನಿಂದ 75,000 ರೂ.ಗಳಿಗೆ ಏರಿಸಿದರು. ಆದರೆ, ಇದು ಕೇವಲ ಹೊಸ ತೆರಿಗೆ ಪದ್ಧತಿಯನ್ನು ಆಯ್ದುಕೊಂಡವರಿಗೆ ಮಾತ್ರ ಅನ್ವಯ ಎಂದು ತಿಳಿಸಲಾಯಿತು.
ತೆರಿಗೆದಾರರಿಗೆ ನೆರವಾಗಲು ಆದಾಯ ತೆರಿಗೆ ಸ್ಲ್ಯಾಬ್ಗಳಲ್ಲಿಯೂ ಬದಲಾವಣೆ ಮಾಡಲಾಯಿತು. ಆದರೆ ಹೊಸ ಪದ್ಧತಿಯನ್ನು ಅತ್ಯಂತ ಆಕರ್ಷಕವಾಗಿಸಿದ ದೊಡ್ಡ ಘೋಷಣೆ ಹೊರಬಿದ್ದಿದ್ದು 2025-26ರ ಬಜೆಟ್ನಲ್ಲಿ. ಆಗ ಸೀತಾರಾಮನ್ ಅವರು ವಾರ್ಷಿಕ 12 ಲಕ್ಷ ರೂ. ವರೆಗೆ ಆದಾಯ ಗಳಿಸುವವರಿಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಿದರು. ಇದರ ಜೊತೆಗೆ 75,000 ರೂಪಾಯಿಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಸೌಲಭ್ಯವು ಹೆಚ್ಚುವರಿಯಾಗಿ ಲಭ್ಯವಿತ್ತು.
“12 ಲಕ್ಷ ರೂಪಾಯಿ ವರೆಗಿನ ಆದಾಯಕ್ಕೆ (ಅಂದರೆ ತಿಂಗಳಿಗೆ ಸರಾಸರಿ 1 ಲಕ್ಷ ರೂ.ವರೆಗಿನ ಆದಾಯಕ್ಕೆ, ವಿಶೇಷ ದರಗಳ ತೆರಿಗೆ ಹೊರತುಪಡಿಸಿ) ಯಾವುದೇ ಆದಾಯ ತೆರಿಗೆ ಪಾವತಿಸಬೇಕಿಲ್ಲ ಎಂದು ಘೋಷಿಸಲು ನಾನು ಸಂತೋಷಪಡುತ್ತೇನೆ. ಸಂಬಳ ಪಡೆಯುವ ತೆರಿಗೆದಾರರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಸೇರಿಸಿದ ನಂತರ, ಈ ಮಿತಿಯು 12.75 ಲಕ್ಷ ರೂಪಾಯಿ ಆಗಲಿದೆ" ಎಂದು ಅವರು ಕಳೆದ ವರ್ಷದ ಬಜೆಟ್ ಭಾಷಣದಲ್ಲಿ ಹೇಳಿದ್ದರು.
ಉಳಿತಾಯಕ್ಕೆ ಉತ್ತೇಜನ
ಹೊಸ ತೆರಿಗೆ ಪದ್ಧತಿಯನ್ನು ಇನ್ನಷ್ಟು ಆಕರ್ಷಕವಾಗಿ ಮಾಡಲು ಮೋದಿ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಹಲವಾರು ಬದಲಾವಣೆಗಳನ್ನು ಕೈಗೊಂಡಿದೆ. ಆದರೆ, ಹೂಡಿಕೆ ಮತ್ತು ಉಳಿತಾಯದ ಮೇಲೆ ಆದಾಯ ತೆರಿಗೆ ವಿನಾಯಿತಿ ನೀಡಲಾಗಿಲ್ಲ. ಇದು ಜನರು ಉಳಿತಾಯ ಮತ್ತು ಹೂಡಿಕೆ ಮಾಡುವುದಕ್ಕೆ ನಿರುತ್ಸಾಹ ತೋರಿಸುವಂತಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವರ್ಷ ಡಿಸೆಂಬರ್ 30 ರಂದು ಮೋದಿ ಅವರು ನೀತಿ ಆಯೋಗದಲ್ಲಿ ಸಭೆ ನಡೆಸಿದ್ದರು. ಅಲ್ಲಿ ತಜ್ಞರು ಜನರು ಹೆಚ್ಚು ಉಳಿತಾಯ ಮಾಡುವಂತೆ ಪ್ರೇರೇಪಿಸಲು ತೆರಿಗೆ ವಿನಾಯಿತಿ ಅಥವಾ ಪ್ರೋತ್ಸಾಹಕಗಳನ್ನು ನೀಡುವಂತೆ ಸಲಹೆ ನೀಡಿದ್ದರು.
ಆದರೆ, ಎಲ್ಲಾ ತಜ್ಞರು ಇದನ್ನು ಒಪ್ಪುವುದಿಲ್ಲ. ಚಾರ್ಟರ್ಡ್ ಅಕೌಂಟೆಂಟ್ ಮತ್ತು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ (ITAT) ಮಾಜಿ ನ್ಯಾಯಾಧೀಶರಾದ ಗೋಪಾಲ್ ಕೇಡಿಯಾ ಅವರು 'ದ ಫೆಡರಲ್ ದೇಶ್' ಜೊತೆ ಮಾತನಾಡಿ, “ಉಳಿತಾಯದ ಮೂಲಕ ತೆರಿಗೆ ವಿನಾಯಿತಿ ನೀಡುವುದನ್ನು ನಾನು ವಿರೋಧಿಸುತ್ತೇನೆ, ಏಕೆಂದರೆ ಇದು ಕಾನೂನು ವಿವಾದಗಳು ಹೆಚ್ಚಾಗಲು ಕಾರಣವಾಗುತ್ತದೆ” ಎಂದು ಹೇಳಿದ್ದಾರೆ.
“ಜನರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವಾಗ ಉಳಿತಾಯದ ಬಗ್ಗೆ ಸುಳ್ಳು ಮಾಹಿತಿ ನೀಡುವ ಮೂಲಕ ತೆರಿಗೆ ವಿನಾಯಿತಿ ಪಡೆಯುತ್ತಾರೆ. ಅಥವಾ ತಪ್ಪು ಮಾಹಿತಿ ನೀಡಿ ಮನೆ ಬಾಡಿಗೆ ಭತ್ಯೆ (HRA) ಕ್ಲೈಮ್ ಮಾಡುತ್ತಾರೆ, ಮತ್ತು ಕೆಲವರು ಅಸ್ತಿತ್ವದಲ್ಲೇ ಇಲ್ಲದ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಮೂಲಕವೂ ತೆರಿಗೆ ವಿನಾಯಿತಿ ಪಡೆಯುತ್ತಿದ್ದಾರೆ,” ಎಂದು ಕೇಡಿಯಾ ಅವರು ಪ್ರತಿಪಾದಿಸುತ್ತಾರೆ.
ಉಳಿತಾಯದ ಮೇಲೆ ತೆರಿಗೆ ವಿನಾಯಿತಿ ಪಡೆಯಲು ಬಯಸುವವರಿಗೆ ಹಳೆಯ ತೆರಿಗೆ ಪದ್ಧತಿಯು ಇನ್ನೂ ಲಭ್ಯವಿದೆ ಎಂದು ಅವರು ತಿಳಿಸಿದರು.
ಹೊಸ ತೆರಿಗೆ ಪದ್ಧತಿಗೆ ಆದ್ಯತೆ
ಕೇಂದ್ರ ಸರ್ಕಾರವು ಹೊಸ ತೆರಿಗೆ ಪದ್ಧತಿಯನ್ನು ಹೆಚ್ಚು ಹೆಚ್ಚು ಆಕರ್ಷಕವಾಗಿ ಮಾಡಲು ಶ್ರಮಿಸುತ್ತಿರುವುದರಿಂದ, ಇದು ಈಗ 'ಡಿಫಾಲ್ಟ್' (ಪೂರ್ವನಿಯೋಜಿತ) ವ್ಯವಸ್ಥೆಯಾಗಿದೆ. ಹಳೆಯ ಪದ್ಧತಿಯನ್ನು ಆರಿಸಿಕೊಳ್ಳಲು ಬಯಸುವವರು ಐಟಿಆರ್ ಸಲ್ಲಿಸುವ ಸಂದರ್ಭದಲ್ಲಿ ಅದನ್ನು ಪ್ರತ್ಯೇಕವಾಗಿ ಆಯ್ಕೆ ಮಾಡಿಕೊಳ್ಳಬೇಕಾದ ಅಗತ್ಯವಿದೆ.
ಹಳೆಯ ಆದಾಯ ತೆರಿಗೆ ಪದ್ಧತಿಯು ಹೆಚ್ಚಿನ ರಿಯಾಯಿತಿಗಳನ್ನೇನೂ ನೀಡುವುದಿಲ್ಲ. ತೆರಿಗೆ ದರಗಳಾಗಲಿ ಅಥವಾ ಸ್ಲ್ಯಾಬ್ಗಳಾಗಲಿ ಬದಲಾಗಿಲ್ಲ. 2.5 ಲಕ್ಷ ರೂ. ದಿಂದ 5 ಲಕ್ಷದವರೆಗಿನ ಆದಾಯದ ಮೇಲೆ ಪಾವತಿಸಬೇಕಾದ 12,500 ರೂ.ತೆರಿಗೆಯ ಮೇಲೆ ಮಾತ್ರ ಸರ್ಕಾರ ರಿಯಾಯಿತಿ ನೀಡುತ್ತದೆ.
ಆದರೂ ಸೆಕ್ಷನ್ 80C ಅಡಿಯಲ್ಲಿ ಹೂಡಿಕೆ ಮತ್ತು ಉಳಿತಾಯದ ಮೇಲಿನ ತೆರಿಗೆ ವಿನಾಯಿತಿ ಪ್ರಯೋಜನವು ಹಳೆಯ ಪದ್ಧತಿಯಲ್ಲಿ ಮುಂದುವರಿಯುತ್ತದೆ. ಗೃಹ ಸಾಲದ ಬಡ್ಡಿಯ ಮೇಲೆ 2 ಲಕ್ಷ ರೂ. ತೆರಿಗೆ ಕಡಿತ ಮತ್ತು ಮೆಡಿಕ್ಲೈಮ್ ಪ್ರೀಮಿಯಂ ಪಾವತಿಯ ಮೇಲೆ ತೆರಿಗೆ ವಿನಾಯಿತಿಗಳು ಕೂಡ ಲಭ್ಯವಿವೆ.
ಕುಸಿದ ಉಳಿತಾಯ ಪ್ರವೃತ್ತಿ
ಕೌಟುಂಬಿಕ ಉಳಿತಾಯವು ಭಾರತದ ದೊಡ್ಡ ಶಕ್ತಿಯಾಗಿದೆ ಮತ್ತು ಉಳಿತಾಯದ ಮೇಲಿನ ತೆರಿಗೆ ವಿನಾಯಿತಿಗಳು ಅದರ ನಿರಂತರ ಬೆಳವಣಿಗೆಗೆ ಕೊಡುಗೆ ನೀಡಿವೆ. 1970 ರಿಂದ, ಜಿಡಿಪಿಗೆ ಹೋಲಿಸಿದರೆ ಭಾರತದಲ್ಲಿ ಕೌಟುಂಬಿಕ ಉಳಿತಾಯವು ಗಣನೀಯ ಏರಿಕೆ ಕಂಡಿದೆ. 1970ರ ದಶಕದಲ್ಲಿ ಜಿಡಿಪಿಯ ಶೇಕಡಾ 13 ರಷ್ಟಿದ್ದ ಉಳಿತಾಯವು, 2008 ರಲ್ಲಿ ಶೇಕಡಾ 38 ರ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಇದು ಚೀನಾವನ್ನು ಹೊರತುಪಡಿಸಿ ಹೆಚ್ಚಿನ ಅಭಿವೃದ್ಧಿ ಹೊಂದಿದ ಮತ್ತು ಬ್ರಿಕ್ಸ್ ರಾಷ್ಟ್ರಗಳಿಗಿಂತ ಅಧಿಕವಾಗಿತ್ತು.
ಈ ಅಂಕಿ-ಅಂಶವು 2011-12ರ ಹಣಕಾಸು ವರ್ಷದಲ್ಲಿ ಶೇಕಡಾ 34.6 ಕ್ಕೆ ಮತ್ತು 2022-23ರ ವೇಳೆಗೆ ಶೇಕಡಾ 29.7 ಕ್ಕೆ ಕುಸಿದಿದೆ. ಭಾರತದಲ್ಲಿ ಜನರ ಉಳಿತಾಯವು ನಿರಂತರವಾಗಿ ಕಡಿಮೆಯಾಗುತ್ತಿದೆ ಎಂಬುದನ್ನು ಈ ಅಂಕಿಅಂಶಗಳು ಸ್ಪಷ್ಟವಾಗಿ ಸೂಚಿಸುತ್ತವೆ. ಈ ಹಿಂದೆ ಒಟ್ಟು ಉಳಿತಾಯದ ಬಹುಪಾಲು ಪಾಲನ್ನು ಹೊಂದಿದ್ದ ಕೌಟುಂಬಿಕ ಉಳಿತಾಯವು ಈಗ ಅಷ್ಟು ಮಹತ್ವದ್ದಾಗಿ ಉಳಿದಿಲ್ಲ.
ಜನರು ಈಗ ಹಣವನ್ನು ಬ್ಯಾಂಕುಗಳಲ್ಲಿ ಇಡುವ ಬದಲಿಗೆ ಮ್ಯೂಚುವಲ್ ಫಂಡ್, ಈಕ್ವಿಟಿ, ಚಿನ್ನ ಮತ್ತು ರಿಯಲ್ ಎಸ್ಟೇಟ್ಗಳಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ. ಉಳಿತಾಯವನ್ನು ಉತ್ತೇಜಿಸಲು ಸರ್ಕಾರವು ಹೊಸ ತೆರಿಗೆ ಪದ್ಧತಿಯಲ್ಲಿ ಹೂಡಿಕೆ ಮತ್ತು ಉಳಿತಾಯದ ಮೇಲೆ ತೆರಿಗೆ ವಿನಾಯಿತಿಗಳ ನಿಬಂಧನೆಗಳನ್ನು ಜಾರಿಗೆ ತರುತ್ತದೆಯೇ? ಇದಕ್ಕೆ ಭಾನುವಾರವಷ್ಟೇ ಉತ್ತರ ಸಿಗಲಿದೆ.

