ಐಪಿಎಲ್ 2026: ಚಿನ್ನಸ್ವಾಮಿಯಲ್ಲಿ ಇಂದು ಆರ್‌ಸಿಬಿ-ಎಸ್‌ಆರ್‌ಹೆಚ್ ಕದನ; ಕಿಂಗ್ ಕೊಹ್ಲಿಯದ್ದೇ ದರ್ಬಾರ್!
x

ಐಪಿಎಲ್ ಟೂರ್ನಿ ಆರಂಭವಾಗುತ್ತಿದೆ ಎಂದರೆ ಸಾಕು, ಅಭಿಮಾನಿಗಳ ಕಣ್ಣು ನೇರವಾಗಿ ವಿರಾಟ್ ಕೊಹ್ಲಿ ಅವರ ಮೇಲೆ ನೆಟ್ಟಿರುತ್ತದೆ. 

ಐಪಿಎಲ್ 2026: ಚಿನ್ನಸ್ವಾಮಿಯಲ್ಲಿ ಇಂದು ಆರ್‌ಸಿಬಿ-ಎಸ್‌ಆರ್‌ಹೆಚ್ ಕದನ; ಕಿಂಗ್ ಕೊಹ್ಲಿಯದ್ದೇ ದರ್ಬಾರ್!

ಐಪಿಎಲ್ ಟೂರ್ನಿ ಆರಂಭವಾಗುತ್ತಿದೆ ಎಂದರೆ ಸಾಕು, ಅಭಿಮಾನಿಗಳ ಕಣ್ಣು ನೇರವಾಗಿ ವಿರಾಟ್ ಕೊಹ್ಲಿ ಅವರ ಮೇಲೆ ನೆಟ್ಟಿರುತ್ತದೆ.


Click the Play button to hear this message in audio format

ಇಂಡಿಯನ್ ಪ್ರೀಮಿಯರ್ ಲೀಗ್‌ನ 19ನೇ ಆವೃತ್ತಿಯ ಮೊದಲ ಪಂದ್ಯಕ್ಕೆ ಇಂದು (ಶನಿವಾರ, ಮಾರ್ಚ್ 28) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗುತ್ತಿದ್ದು, ಅಭಿಮಾನಿಗಳಲ್ಲಿ ತೀವ್ರ ರೋಮಾಂಚನ ಮೂಡಿಸಿದೆ.

ಒಂದು ವರ್ಷದ ಬಳಿಕ ತವರು ಮೈದಾನದಲ್ಲಿ ಆರ್‌ಸಿಬಿ ಕಣಕ್ಕಿಳಿಯುತ್ತಿದ್ದು, ರಾತ್ರಿ 7.30ಕ್ಕೆ ಈ ಹೈವೋಲ್ಟೇಜ್ ಪಂದ್ಯ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಜಿಯೋಸ್ಟಾರ್‌ ಆಪ್‌ನಲ್ಲಿ ಪಂದ್ಯದ ನೇರ ಪ್ರಸಾರ ಲಭ್ಯವಿರಲಿದೆ.

ಬ್ಯಾಟಿಂಗ್‌ ವೈಭವದ ನಿರೀಕ್ಷೆ

ಐಪಿಎಲ್ ಟೂರ್ನಿ ಆರಂಭವಾಗುತ್ತಿದೆ ಎಂದರೆ ಸಾಕು, ಅಭಿಮಾನಿಗಳ ಕಣ್ಣು ನೇರವಾಗಿ ವಿರಾಟ್ ಕೊಹ್ಲಿ ಅವರ ಮೇಲೆ ನೆಟ್ಟಿರುತ್ತದೆ. ಇದೀಗ ಟಿ20 ವಿಶ್ವಕಪ್ ಗೆಲುವಿನ ಅಮೋಘ ಲಯದಲ್ಲಿರುವ 'ರನ್ ಮಷಿನ್' ಕೊಹ್ಲಿ, ತಮ್ಮ ಏಕೈಕ ಫ್ರಾಂಚೈಸಿಯೊಂದಿಗೆ ಹೊಸ ಆವೃತ್ತಿಗೆ ಭರ್ಜರಿಯಾಗಿ ಸಜ್ಜಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಬ್ಬರಿಸುತ್ತಿರುವ ಕೊಹ್ಲಿ, ಅದೇ ಫಾರ್ಮ್ ಅನ್ನು ಐಪಿಎಲ್‌ನಲ್ಲೂ ಮುಂದುವರಿಸುವ ಹುಮ್ಮಸ್ಸಿನಲ್ಲಿದ್ದಾರೆ.

ಆರ್‌ಸಿಬಿ ಮುಖ್ಯ ಕೋಚ್ ಆಂಡಿ ಫ್ಲವರ್ ಅವರು, "ಕೊಹ್ಲಿ ಅತ್ಯುತ್ತಮ ಮಾನಸಿಕ ಸ್ಥಿತಿಯಲ್ಲಿದ್ದಾರೆ ಹಾಗೂ ನೆಟ್ಸ್‌ನಲ್ಲಿ ಚೆಂಡನ್ನು ಬಾರಿಸುವ ರೀತಿ ನೋಡಿದರೆ ಅವರು ತಮ್ಮ ಅತ್ಯುನ್ನತ ಫಾರ್ಮ್‌ನಲ್ಲಿದ್ದಾರೆ" ಎಂದು ಹೇಳುವ ಮೂಲಕ ಎದುರಾಳಿಗಳಿಗೆ ಎಚ್ಚರಿಕೆ ರವಾನಿಸಿದ್ದಾರೆ. ಕೊಹ್ಲಿ ಜೊತೆಗೆ ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್ ಹಾಗೂ ಟಿಮ್ ಡೇವಿಡ್ ಆರ್‌ಸಿಬಿ ಬ್ಯಾಟಿಂಗ್ ಪಡೆಯ ಬಲ ಹೆಚ್ಚಿಸಿದ್ದಾರೆ.

ಮೃತ ಅಭಿಮಾನಿಗಳಿಗೆ ಗೌರವ; 11 ಆಸನಗಳು ಖಾಲಿ

ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಚಾಂಪಿಯನ್ ಪಟ್ಟಕ್ಕೇರಿದಾಗ ಬೆಂಗಳೂರಿನಲ್ಲಿ ನಡೆದಿದ್ದ ಬೃಹತ್ ವಿಜಯೋತ್ಸವದ ವೇಳೆ ಕಾಲ್ತುಳಿತ ಉಂಟಾಗಿ 11 ಮಂದಿ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು. ಆ ಕರಾಳ ಘಟನೆಯನ್ನು ಸ್ಮರಿಸುತ್ತಾ, ದುರಂತದಲ್ಲಿ ಮೃತಪಟ್ಟ 11 ಅಭಿಮಾನಿಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಆಸನಗಳನ್ನು ಖಾಲಿ ಬಿಡಲು ಆರ್‌ಸಿಬಿ ಆಡಳಿತ ಮಂಡಳಿ ನಿರ್ಧರಿಸಿದೆ. ಜೊತೆಗೆ, ಯಾವುದೇ ಅದ್ದೂರಿ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳದಿರಲು ಲೀಗ್ ಆಯೋಜಕರು ತೀರ್ಮಾನಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ, ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಸುರಕ್ಷತೆಗಾಗಿ ವ್ಯಾಪಕ ಭದ್ರತೆ ಹಾಗೂ ನವೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಬ್ಯಾಟಿಂಗ್‌ ಮೇಲೆಯೇ ಹೆಚ್ಚಿನ ಭರವಸೆ

ಇಂದಿನ ಪಂದ್ಯವು ಪ್ರಮುಖವಾಗಿ ಉಭಯ ತಂಡಗಳ ಬ್ಯಾಟಿಂಗ್ ಶಕ್ತಿಗಳ ನಡುವಿನ ಹೋರಾಟವಾಗಲಿದೆ. ಏಕೆಂದರೆ, ಆರ್‌ಸಿಬಿ ಹಾಗೂ ಎಸ್‌ಆರ್‌ಹೆಚ್ ಎರಡೂ ತಂಡಗಳು ಬೌಲಿಂಗ್ ವಿಭಾಗದಲ್ಲಿ ಕೊಂಚ ದುರ್ಬಲವಾಗಿವೆ. ಆರ್‌ಸಿಬಿ ತಂಡವು ಕಳೆದ ಬಾರಿಯ ಪ್ರಮುಖ ಬೌಲರ್‌ಗಳಾದ ಜಾಶ್ ಹ್ಯಾಜಲ್‌ವುಡ್ ಮತ್ತು ಯಶ್ ದಯಾಳ್ ಅಲಭ್ಯತೆಯಿಂದಾಗಿ ಭುವನೇಶ್ವರ್ ಕುಮಾರ್ ಮತ್ತು ಯುವ ವೇಗಿಗಳ ಮೇಲೆ ಅವಲಂಬಿತವಾಗಿದೆ. ಮತ್ತೊಂದೆಡೆ, ನಾಯಕ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ನೇತೃತ್ವದಲ್ಲಿ ಕಣಕ್ಕಿಳಿಯಲಿರುವ ಎಸ್‌ಆರ್‌ಹೆಚ್ ಕೂಡ ಅನುಭವಿ ಬೌಲರ್‌ಗಳ ಕೊರತೆ ಎದುರಿಸುತ್ತಿದೆ. ಆದರೆ, ಎಸ್‌ಆರ್‌ಹೆಚ್ ಪರ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಹೆನ್ರಿಕ್ ಕ್ಲಾಸೆನ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಅವರಂತಹ ಸ್ಫೋಟಕ ಬ್ಯಾಟರ್‌ಗಳಿದ್ದು, ಚಿನ್ನಸ್ವಾಮಿಯ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ರನ್‌ ಸುರಿಮಳೆ ಹರಿಯುವುದು ಖಚಿತ ಎನ್ನಲಾಗಿದೆ.

Read More
Next Story