
ಟ್ರೋಫಿಯೊಂದಿಗೆ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್
ಟಿ20 ವಿಶ್ವಕಪ್ ಗೆಲುವು ದ್ರಾವಿಡ್, ಲಕ್ಷ್ಮಣ್ಗೆ ಅರ್ಪಿಸಿದ ಗಂಭೀರ್: ಟೀಕಾಕಾರರಿಗೆ ಖಡಕ್ ತಿರುಗೇಟು
ಗಂಭೀರ್ ಅವರ ಮಾತುಗಳಿಗೆ ದನಿಗೂಡಿಸಿದ ನಾಯಕ ಸೂರ್ಯಕುಮಾರ್ ಯಾದವ್, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಒಟ್ಟಿಗೆ ಆಡಿದ ದಿನಗಳಿಂದಲೂ ತಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯವಿದೆ ಎಂದರು.
ಅಹಮದಾಬಾದ್ನಲ್ಲಿ ನಡೆದ 2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಬಗ್ಗುಬಡಿದು ಐತಿಹಾಸಿಕ ಸಾಧನೆ ಮಾಡಿರುವ ಟೀಮ್ ಇಂಡಿಯಾದ ಯಶಸ್ಸಿನ ಶ್ರೇಯಸ್ಸನ್ನು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಮಾಜಿ ಕೋಚ್ ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರಿಗೆ ಅರ್ಪಿಸಿದ್ದಾರೆ.
ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಟೀಕಿಸುವವರಿಗೆ ಖಡಕ್ ಎಚ್ಚರಿಕೆ ನೀಡಿರುವ ಅವರು, ತಾವು ಕೇವಲ ಡ್ರೆಸ್ಸಿಂಗ್ ರೂಮ್ನಲ್ಲಿರುವ ಆಟಗಾರರಿಗೆ ಮಾತ್ರ ಉತ್ತರದಾಯಿಯೇ ಹೊರತು ಜಾಲತಾಣದಲ್ಲಿ ಬರೆಯುವ ಮಂದಿಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದ್ರಾವಿಡ್ ಮತ್ತು ಲಕ್ಷ್ಮಣ್ ಕೊಡುಗೆಗೆ ಸಲಾಂ
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 96 ರನ್ಗಳ ಭರ್ಜರಿ ಜಯ ಸಾಧಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, ಈ ವಿಶ್ವಕಪ್ ಗೆಲುವಿನ ರೂವಾರಿಗಳು ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ಎಂದರು. 2024ರಲ್ಲಿ ಭಾರತ ತಂಡವನ್ನು ಅತ್ಯುತ್ತಮ ಹಾದಿಗೆ ತಂದ ದ್ರಾವಿಡ್ ಹಾಗೂ ಬಿಸಿಸಿಐ ಉತ್ಕೃಷ್ಟತಾ ಕೇಂದ್ರದಲ್ಲಿ (CoE) ಭವಿಷ್ಯದ ಅದ್ಭುತ ಆಟಗಾರರ ಪಡೆಯನ್ನು ಸೃಷ್ಟಿಸಿದ ಲಕ್ಷ್ಮಣ್ ಅವರ ಶ್ರಮವನ್ನು ಕೊಂಡಾಡಿದರು. ಇದರ ಜೊತೆಗೆ, ತೀವ್ರ ಟೀಕೆಗಳ ನಡುವೆಯೂ ಪ್ರಾಮಾಣಿಕವಾಗಿ ಕೆಲಸ ಮಾಡಿದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಹಾಗೂ ತವರಿನಲ್ಲಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಕಠಿಣ ಸಮಯದಲ್ಲಿ ತಮಗೆ ಬೆಂಬಲವಾಗಿ ನಿಂತ ಐಸಿಸಿ ಅಧ್ಯಕ್ಷ ಜಯ್ ಶಾ ಅವರಿಗೂ ಗಂಭೀರ್ ವಿಶೇಷ ಕೃತಜ್ಞತೆ ಸಲ್ಲಿಸಿದರು.
ವೈಯಕ್ತಿಕ ಮೈಲಿಗಲ್ಲಿಗಿಂತ ಟ್ರೋಫಿ ಮುಖ್ಯ
ಭಾರತ ತಂಡದ ಆಕ್ರಮಣಕಾರಿ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯ ಕೋಚ್, ಸೋಲಿನ ಭಯವನ್ನು ಬಿಟ್ಟು ಕಣಕ್ಕಿಳಿಯುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಂಪ್ರದಾಯಬದ್ಧವಾಗಿ ಆಡಿ ಸೋಲುವುದಕ್ಕಿಂತ, ದಿಟ್ಟತನದಿಂದ ಆಡಿ 120 ರನ್ಗಳಿಗೆ ಆಲೌಟ್ ಆದರೂ ಪರವಾಗಿಲ್ಲ ಎಂಬುದು ಅವರ ನಿಲುವಾಗಿತ್ತು. ಸೆಮಿಫೈನಲ್ ಮತ್ತು ಫೈನಲ್ನಂತಹ ಒತ್ತಡದ ಪಂದ್ಯಗಳಲ್ಲಿ 250ಕ್ಕೂ ಹೆಚ್ಚು ರನ್ ಗಳಿಸಿದ್ದು ತಂಡದ ಧೈರ್ಯವನ್ನು ತೋರಿಸುತ್ತದೆ ಎಂದರು. ನಾಯಕ ಸೂರ್ಯಕುಮಾರ್ ಯಾದವ್ ಅವರ ಬೆಂಬಲವನ್ನು ಸ್ಮರಿಸಿದ ಗಂಭೀರ್, ಭಾರತೀಯ ಕ್ರಿಕೆಟ್ನಲ್ಲಿ ವೈಯಕ್ತಿಕ ಮೈಲಿಗಲ್ಲುಗಳನ್ನು ಆಚರಿಸುವುದನ್ನು ಬಿಟ್ಟು, ಟ್ರೋಫಿಗಳನ್ನು ಗೆಲ್ಲುವತ್ತ ಗಮನಹರಿಸಬೇಕು ಎಂದು ಕ್ರೀಡಾಭಿಮಾನಿಗಳಲ್ಲಿ ಮನವಿ ಮಾಡಿದರು.
ನಂಬಿಕೆಯ ಆಧಾರದ ಮೇಲೆ ತಂಡದ ಆಯ್ಕೆ
ಗಂಭೀರ್ ಅವರ ಮಾತುಗಳಿಗೆ ದನಿಗೂಡಿಸಿದ ನಾಯಕ ಸೂರ್ಯಕುಮಾರ್ ಯಾದವ್, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಒಟ್ಟಿಗೆ ಆಡಿದ ದಿನಗಳಿಂದಲೂ ತಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯವಿದೆ ಎಂದರು. ತಂಡದ ಗೆಲುವಿಗಾಗಿ ಇಬ್ಬರೂ ಒಟ್ಟಾಗಿ ಹೆಜ್ಜೆ ಹಾಕುತ್ತಿದ್ದು, ಮುಂದಿನ ಪ್ರಮುಖ ಗುರಿ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವುದು ಎಂದು ಘೋಷಿಸಿದರು. ಇದೇ ವೇಳೆ, ಕೇವಲ ಭರವಸೆಯ ಮೇಲೆ ಆಟಗಾರರನ್ನು ಆಯ್ಕೆ ಮಾಡದೆ, ನಂಬಿಕೆ ಮತ್ತು ವಿಶ್ವಾಸದ ಆಧಾರದ ಮೇಲೆ ತಂಡವನ್ನು ಕಟ್ಟಲಾಗಿದೆ ಎಂದು ಸೂರ್ಯಕುಮಾರ್ ಸ್ಪಷ್ಟಪಡಿಸಿದರು. ಫೈನಲ್ ಪಂದ್ಯದಲ್ಲಿ ಭಾರತದ ಪರ ಸಂಜು ಸ್ಯಾಮ್ಸನ್ (89), ಅಭಿಷೇಕ್ ಶರ್ಮಾ (52) ಹಾಗೂ ಇಶಾನ್ ಕಿಶನ್ (54) ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 255 ರನ್ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಬೃಹತ್ ಗುರಿ ಬೆನ್ನಟ್ಟಿದ ಕಿವೀಸ್, ಜಸ್ಪ್ರೀತ್ ಬುಮ್ರಾ (4/15) ಹಾಗೂ ಅಕ್ಷರ್ ಪಟೇಲ್ (3/27) ಅವರ ಮಾರಕ ದಾಳಿಗೆ ಸಿಲುಕಿ ಕೇವಲ 159 ರನ್ಗಳಿಗೆ ಸರ್ವಪತನ ಕಂಡಿತು.

