
ಚೆಪಾಕ್ ಕ್ರೀಡಾಂಗಣದಲ್ಲಿನ ವಿಶ್ವ ಕಪ್ ಪಂದ್ಯದ ವೇಳೆ 'ವಿಷಲ್ ನಿಷೇಧ; ನಟ ವಿಜಯ್ ಪಕ್ಷದ ಚಿಹ್ನೆ ಕಾರಣವೇ?
ಫೆಬ್ರವರಿ 8ರಂದು ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ನಡುವೆ ನಡೆದ ಟಿ20 ವಿಶ್ವಕಪ್ ಪಂದ್ಯದ ವೇಳೆ ಈ ವಿಚಿತ್ರ ಬೆಳವಣಿಗೆ ಕಂಡುಬಂದಿದೆ ಎಂಬುದಾಗಿ ಎಕ್ಸ್ನಲ್ಲಿ ಪೋಸ್ಟ್ ಒಂದು ಪ್ರಕಟಗೊಂಡಿದೆ.
ಕ್ರಿಕೆಟ್ ಪಂದ್ಯದ ವೇಳೆ ಅಭಿಮಾನಿಗಳು ವಿಷಲ್ ಅನ್ನು ಸ್ಟೇಡಿಯಮ್ಗೆ ತೆಗೆದುಕೊಂಡು ಹೋಗುವುದು ಸರ್ವೇ ಸಾಮಾನ್ಯ. ಫೋರ್, ಸಿಕ್ಸರ್ ಬಾರಿಸಿದಾಗ ವಿಷಲ್ ಹಾಕಿ ಸಂಭ್ರಮಿಸುವುದುಂಟು. ಆದರೆ, ಚೆನ್ನೈನ ಎಂ.ಎ. ಚಿದಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ನಡೆಯುವ ವಿಶ್ವ ಕಪ್ ಪಂದ್ಯದ ವೇಳೆ ಅದಕ್ಕೆ ಅವಕಾಶ ಇಲ್ಲ ಎಂಬುದಾಗಿ ಹೇಳಲಾಗುತ್ತಿದೆ. ಅಲ್ಲಿನ ಕ್ರಿಕೆಟ್ ಸಂಸ್ಥೆಯು ವಿಷಲ್ ನಿಷೇಧಿಸಿರುವುದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಫೆಬ್ರವರಿ 8ರಂದು ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ನಡುವೆ ನಡೆದ ಟಿ20 ವಿಶ್ವಕಪ್ ಪಂದ್ಯದ ವೇಳೆ ಈ ವಿಚಿತ್ರ ಬೆಳವಣಿಗೆ ಕಂಡುಬಂದಿದೆ ಎಂಬುದಾಗಿ ಎಕ್ಸ್ನಲ್ಲಿ ಪೋಸ್ಟ್ ಒಂದು ಪ್ರಕಟಗೊಂಡಿದೆ.
ಏನಿದು 'ವಿಷಲ್' ವಿವಾದ?
ಕ್ರಿಕೆಟ್ ಅಭಿಮಾನಿಗಳು ಮೈದಾನಕ್ಕೆ ವಿಷಲ್ (Whistle) ತೆಗೆದುಕೊಂಡು ಹೋಗುವುದನ್ನು ಪೊಲೀಸರು ತಡೆದಿದ್ದಾರೆ. ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿ ತಪಾಸಣೆ ನಡೆಸಿ ವಿಷಲ್ಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಅಷ್ಟೇ ಅಲ್ಲ, ಕ್ರೀಡಾಂಗಣದ ಹೊರಗೆ ವಿಷಲ್ ಮಾರಾಟವನ್ನೂ ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ತಮಿಳುನಾಡಿನ ಅಭಿಮಾನಿಗಳು ಕ್ರಿಕೆಟ್ ಪಂದ್ಯ ವೀಕ್ಷಣಗೆ ಹೋಗುವ ವೇಳೆ ಕತ್ತಿನಲ್ಲಿ ವಿಷಲ್ ನೇತು ಹಾಕಿಕೊಂಡು ಹೋಗುವುದು ಸಾಮಾನ್ಯ. ಅಲ್ಲಿನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟ್ಯಾಗ್ ಲೈನ್ 'ವಿಷಲ್ ಪೋಡು'. ಹೀಗಾಗಿ ಅವರು ಹಳದಿ ಬಣ್ಣದ ವಿಷಲ್ ತೆಗೆದುಕೊಂಡು ಹೋಗುತ್ತಾರೆ. ಆದರೆ ಈ ಬಾರಿ ಭದ್ರತಾ ಸಿಬ್ಬಂದಿ ತಡೆದಿದ್ದಾರೆ ಎನ್ನಲಾಗಿದೆ.
ರಾಜಕೀಯ ನಂಟು ಏನು?
ಈ ಹಠಾತ್ ನಿಷೇಧದ ಹಿಂದೆ ರಾಜಕೀಯ ಕಾರಣವಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಜನವರಿ 2026ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆಗಾಗಿ ಭಾರತೀಯ ಚುನಾವಣಾ ಆಯೋಗವು (ECI), ತಮಿಳು ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' ಪಕ್ಷಕ್ಕೆ 'ವಿಷಲ್'ಯನ್ನು (Whistle) ಚುನಾವಣಾ ಚಿಹ್ನೆಯನ್ನಾಗಿ ಹಂಚಿಕೆ ಮಾಡಿದೆ.
ಕ್ರೀಡಾಂಗಣದಲ್ಲಿ ಅಭಿಮಾನಿಗಳು ವಿಷಲ್ ಊದಿದರೆ ಅದು ವಿಜಯ್ ಅವರ ಪಕ್ಷಕ್ಕೆ ಪ್ರಚಾರ ನೀಡಿದಂತಾಗುತ್ತದೆ ಎಂಬ ಭೀತಿಯಿಂದ ಆಡಳಿತಾರೂಢ ಪಕ್ಷಗಳು ಈ ನಿಷೇಧ ಹೇರಿದ್ದಾರೆ ಎಂದು ಟಿವಿಕೆ ಬೆಂಬಲಿಗರು ಆರೋಪಿಸುತ್ತಿದ್ದಾರೆ. ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ "ವಿಷಲ್ ಪೋಡು" (Whistle Podu) ಎಂಬ ಘೋಷವಾಕ್ಯದಿಂದಾಗಿ ವಿಷಲ್ ಕ್ರಿಕೆಟ್ ಅಭಿಮಾನಿಗಳ ಅಚ್ಚುಮೆಚ್ಚಿನ ವಸ್ತುವಾಗಿತ್ತು. ಆದರೆ ಈಗ ಅದು ರಾಜಕೀಯ ಚಿಹ್ನೆಯಾಗಿ ಬದಲಾಗಿರುವುದು ಈ ಗೊಂದಲಕ್ಕೆ ಕಾರಣವಾಗಿದೆ.
ಅಧಿಕಾರಿಗಳು ಏನಂತಾರೆ?
ದ ಫೆಡರಲ್ನ ವರದಿಗಾರರು, ತಮಿಳುನಾಡು ಕ್ರಿಕೆಟ್ ಸಂಸ್ಥೆಯನ್ನು (TNCA) ಸಂಪರ್ಕಿಸಿದಾಗ ಯಾವುದೇ ಅಧಿಕೃತ ಆದೇಶಗಳು ಇಲ್ಲ ಎಂದು ಹೇಳಿದೆ. ಈ ವಿಚಾರಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, 2023ರ ವಿಶ್ವಕಪ್ ಮತ್ತು ಐಪಿಎಲ್ ಪಂದ್ಯಗಳ ವೇಳೆ ಚೆಪಾಕ್ ಸುತ್ತಮುತ್ತಲಿನ ನಿವಾಸಿಗಳಿಂದ ಶಬ್ದ ಮಾಲಿನ್ಯದ ದೂರುಗಳು ಬಂದಿದ್ದವು, ಅದನ್ನೇ ನೆಪವಾಗಿಟ್ಟುಕೊಂಡು ಈಗ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ವಾದವೂ ಇದೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ:
ಈ ಬೆಳವಣಿಗೆಯಿಂದ ಕೆರಳಿರುವ ವಿಜಯ್ ಅಭಿಮಾನಿಗಳು ಮತ್ತು ಟಿವಿಕೆ ಕಾರ್ಯಕರ್ತರು, "ಇದು ನಮ್ಮ ಪಕ್ಷದ ಬೆಳವಣಿಗೆಯನ್ನು ಕಂಡು ಎದುರಾಳಿಗಳಿಗೆ ಉಂಟಾಗಿರುವ ಭಯ," ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೈದಾನದಲ್ಲಿ ವಿಷಲ್ ನಿಷೇಧಿಸಿದರೆ ಬೇರೆಡೆ ಅದನ್ನು ಇನ್ನಷ್ಟು ಜೋರಾಗಿ ಮೊಳಗಿಸುತ್ತೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ. ಒಂದು ಕಡೆ ಅಂತಾರಾಷ್ಟ್ರೀಯ ರಾಜಕೀಯ ವಿಷಯ ವಿಶ್ವ ಕಪ್ ತಟ್ಟಿದ್ದು, ಬಾಂಗ್ಲಾದೇಶ ಟೂರ್ನಿಯಿಂದ ಹೊರಕ್ಕೆ ಹೋಗಿದ್ದರೆ, ಪಾಕಿಸ್ತಾನ ಭಾರತ ವಿರುದ್ಧ ಆಡುವುದಿಲ್ಲ ಎಂದು ಹೇಳಿದೆ. ಇದೀಗ ದೇಶದೊಳಗಿನ ರಾಜಕೀಯವೂ ಕ್ರಿಕೆಟ್ನ ಸಂಭ್ರಮವನ್ನು ಕಡಿಮೆ ಮಾಡಿದಂತೆ ತೋರುತ್ತಿದೆ.

