ಮೋದಿ ಸರ್ಕಾರದ ವಿರುದ್ಧ ʼಜನತಾ ಆರೋಪ ಪಟ್ಟಿʼ ಬಿಡುಗಡೆ
x

ಮೋದಿ ಸರ್ಕಾರದ ವಿರುದ್ಧ ʼಜನತಾ ಆರೋಪ ಪಟ್ಟಿʼ ಬಿಡುಗಡೆ

ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು 2024 ರ ಚುನಾವಣೆಯಲ್ಲಿ ಮತ್ತೆ ಆಯ್ಕೆಗೊಳಿಸಬಾರದೆಂದು ಸಮಾನ ಮನಸ್ಕ ಸಂಘಟನೆಗಳು ಆಗ್ರಹಿಸಿದ್ದು, ಸರ್ಕಾರದ ವಿರುದ್ಧ ʼಜನತಾ ಆರೋಪ ಪಟ್ಟಿʼಯನ್ನು ಬಿಡುಗಡೆ ಮಾಡಿದೆ.


ಲೋಕಸಭಾ ಚುನಾವಣಾ ಕಾವು ರಂಗೇರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ‌ ಸಮಾನ ಮನಸ್ಕ ಪ್ರಗತಿಪರ ಸಂಘಟನೆಗಳು ಆಡಳಿತ ವಿರೋಧಿ ಆಂದೋಲನ ಆರಂಭಿಸಿವೆ. ಜನಾಂದೋಲನಗಳ ಮಹಾಮೈತ್ರಿ ಮತ್ತು ಇತರೆ ಸಮಾನ ಮನಸ್ಕ ಸಂಘಟನೆಗಳು ಸೇರಿ ʼಮೋದಿ ಆಳ್ವಿಕೆಯ ವಿರುದ್ಧ ಜನತಾ ಆರೋಪ ಪಟ್ಟಿʼಯನ್ನು ಬಿಡುಗಡೆಗೊಳಿಸಿವೆ

ಕಳೆದ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಸಮಾನ ಮನಸ್ಕ ಸಂಘಟನೆಗಳು ಬಿಜೆಪಿ ಸರ್ಕಾರದ ವಿರುದ್ಧ ಇಂತಹ ಪಟ್ಟಿಯನ್ನು ಬಿಡುಗಡೆ ಮಾಡಿದ್ದವು.

ಬೆಂಗಳೂರಿನ ಜನಾಂದೋಲನಗಳ ಮಹಾಮೈತ್ರಿ, ಧಾರವಾಡದ ಜನತಂತ್ರ ಪ್ರಯೋಗ ಶಾಲೆ, ಸಿಟಿಜನ್‌ ಫಾರ್‌ ಡೆಮಾಕ್ರಸಿ, ಕರ್ನಾಟಕ ರಾಜ್ಯ ರೈತ ಸಂಘ, ಎದ್ದೇಳು ಕರ್ನಾಟಕ, ಗ್ರಾಮೀಣ ಕೂಲಿಕಾರರ ಸಂಘ, ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆಗಳು ಜಂಟಿಯಾಗಿ ಆರೋಪ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ನೀಡಿದ್ದ ಭರವಸೆಗಳನ್ನು ಮತ್ತು ಸರ್ಕಾರದ ಕಳಪೆ ಸಾಧನೆಗಳನ್ನು ಜನರ ಮುಂದಿಟ್ಟಿವೆ.

ನರೇಂದ್ರ ಮೋದಿ ಅವರು 2014 ರ ಚುನಾವಣೆ ವೇಳೆ ಜನರಿಗೆ ನೀಡಿದ್ದ ಆಶ್ವಾಸನೆಗಳೆಲ್ಲವೂ ಸುಳ್ಳಾಗಿದ್ದು, ಜನರಿಗೆ ಮೋದಿ ಮೋಸ ಎಸಗಿದ್ದಾರೆಂದು ಜನತಾ ಆರೋಪಪಟ್ಟಿಯಲ್ಲಿ ʼಆರೋಪಿʼಸಲಾಗಿದೆ.

ಕಪ್ಪು ಹಣ, 15 ಲಕ್ಷ ರೂ.ಗಳ ಆಶ್ವಾಸನೆ, ಅಚ್ಛೇದಿನ್‌, ಪ್ರತಿ ವರ್ಷ 2 ಕೋಟಿ ಉದ್ಯೋಗ, ಪೆಟ್ರೋಲ್-ಡೀಸೆಲ್‌ ಬೆಲೆ ಇಳಿಕೆ, ಡಾಲರ್‌ ಎದುರು ರುಪಾಯಿ ಮೌಲ್ಯ ಕುಸಿತ, ಎಲ್‌ಪಿಜಿ ಬೆಲೆ ಏರಿಕೆ ಮೊದಲಾದ ವಿಚಾರಗಳನ್ನು ಇಟ್ಟುಕೊಂಡು ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡಲಾಗಿದೆ.

ಮೋದಿ ಸರ್ಕಾರವನ್ನು ಕಿತ್ತೊಗೆಯಲು ಬೇಕಾದ 23 ಕಾರಣಗಳನ್ನುಈ ಕಿರು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಎಂದು ಸಂಘಟನೆಯ ಸದಸ್ಯರು ತಿಳಿಸಿದ್ದಾರೆ.

ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬ ಳಿಕ ಅತಿ ಶ್ರೀಮಂತರ ಶ್ರೀಮಂತಿಕೆ ಹೆಚ್ಚಾಗುತ್ತಿದೆ. ದುಡಿಯುವ ಬಡವರ ಬದುಕು ದುರ್ಭರವಾಗುತ್ತಿದೆ. ಧಾರ್ಮಿಕ ಸೌಹಾರ್ದತೆ, ಸಹಬಾಳ್ವೆಯನ್ನು ಕೇಂದ್ರ ಸರ್ಕಾರದ ನೀತಿಗಳು ಹಾಳುಗೆಡವುತ್ತಿವೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಇರುವವರೆಗೆ ದೇಶಕ್ಕೆ, ಸಂವಿಧಾನ, ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆ, ಸಾಂಸ್ಕೃತಿಕ ಬಹುತ್ವಕ್ಕೆ ಅಪಾಯ ತಪ್ಪಿದ್ದಲ್ಲ. ಹಾಗಾಗಿ, 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಪಕ್ಷಗಳನ್ನು ಸೋಲಿಸಬೇಕೆಂದು ಸಂಘಟನೆಗಳು ಕರೆ ನೀಡಿವೆ.

ಕೇಂದ್ರ ಸರ್ಕಾರದ ವಿರುದ್ಧದ ಆರೋಪಗಳು

  • ನ್ಯಾಯಾಂಗ ವ್ಯವಸ್ಥೆಯನ್ನು ಮೋದಿ ಸರ್ಕಾರ ಭ್ರಷ್ಟಗೊಳಿಸುತ್ತಿದೆ.
  • ವ್ಯಕ್ತಿ ಪೂಜೆ ಉಲ್ಬಣಗೊಳ್ಳುತ್ತಿದೆ; ಪ್ರಜಾಪ್ರಭುತ್ವ ಡೇಂಜರ್‌ ಜೋನ್‌ ನಲ್ಲಿದೆ.
  • ಮೋದಿ ಸರ್ಕಾರದಿಂದ ಒಕ್ಕೂಟ ವ್ಯವಸ್ಥೆ ನಾಶ
  • ಡಬಲ್‌ ಎಂಜಿನ್‌ ಸರ್ಕಾರ ಎನ್ನುವ ಅವನತಿ
  • ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಮೋದಿ ಸರ್ಕಾರ ದುರ್ಬಲಗೊಳಿಸುತ್ತಿದೆ
  • ವಿದೇಶಾಂಗ ನೀತಿ: ನೆರೆ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಹಾಳು ಮಾಡಲಾಗುತ್ತಿದೆ.
  • ಮೋದಿ ಸರ್ಕಾರದಲ್ಲಿ ಆರ್ಥಿಕ ಕ್ಷೇತ್ರ ವೈಫಲ್ಯ ಕಂಡಿದೆ
  • ವಾಣಿಜ್ಯ ಬ್ಯಾಂಕುಗಳು ದಿವಾಳಿ ಸುಳಿಗೆ ಸಿಲುಕುವಂತೆ ಮಾಡಲಾಗಿದೆ.
  • ಸಾಮಾಜಿಕ ನ್ಯಾಯ ಕಾರ್ಯಕ್ರಮಗಳಿಗೆ ತಿಲಾಂಜಲಿ
  • ಸಿಎಎ/ಎನ್‌ಆರ್‌ಸಿ ಮೂಲಕ ದೇಶವನ್ನು ಒಡೆಯಲಾಗುತ್ತಿದೆ
  • ಮಾನವ ಹಕ್ಕುಗಳ ನಿರಾಕರಣೆ
  • ಮಹಿಳೆಯರ ಸಮಾನತೆಗೆ ಗೌರವವಿಲ್ಲ
  • ಕಾರ್ಮಿಕ ಹಕ್ಕುಗಳನ್ನು ತುಳಿದುಹಾಕಲಾಗುತ್ತಿದೆ
  • ಅಪಾಯಕಾರಿ ರಾಷ್ಟ್ರೀಯ ಶಿಕ್ಷಣ ನೀತಿ
  • ಎಲೆಕ್ಟೋರಲ್‌ ಬಾಂಡ್‌ ಎಂಬ ಬಹುದೊಡ್ಡ ಹಗರಣ

ಇವಿಷ್ಟು ಮಾತ್ರವಲ್ಲದೆ, ಇನ್ನೂ ನೋಟ್‌ ಬ್ಯಾನ್‌ ನಂತಹ ಇನ್ನೂ ಹಲವು ಕೇಂದ್ರ ಸರ್ಕಾರದ ವಿಫಲ ನೀತಿಗಳನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

Read More
Next Story