ಅಂತಾರಾಷ್ಟ್ರೀಯ ತಂಟೆ ಇತ್ಯರ್ಥಕ್ಕೊಂದು ವೇದಿಕೆ: ಚೀನಾ ಹೊಸ ಕಾರ್ಯತಂತ್ರ
x
ಮೇ 30ರಂದು ನಡೆದ IOMed ಸ್ಥಾಪನೆಯ ಸಮಾವೇಶಕ್ಕೆ ಸಹಿ ಹಾಕಿದ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳ ಬೆಂಬಲ ಬೀಜಿಂಗ್‌ನ ಪ್ರಭಾವ ಹೆಚ್ಚುತ್ತಿರುವುದನ್ನು ಸೂಚಿಸಿತು.

ಅಂತಾರಾಷ್ಟ್ರೀಯ ತಂಟೆ ಇತ್ಯರ್ಥಕ್ಕೊಂದು ವೇದಿಕೆ: ಚೀನಾ ಹೊಸ ಕಾರ್ಯತಂತ್ರ

ಅತ್ಯಂತ ಕಠಿಣ ವಿವಾದಗಳಿಗೆ ಪರಿಹಾರ ಕಂಡುಕೊಳ್ಳಲು ಮಧ್ಯಸ್ಥಿಕೆಯನ್ನು ಉತ್ತೇಜಿಸುವ ಒಂದು ಸಶಕ್ತ ಜಾಗತಿಕ ವೇದಿಕೆಯನ್ನು ಚೀನಾ ಹುಟ್ಟುಹಾಕಿದೆ. ಅದರ ಹೆಸರು- IOMed. ಉಕ್ರೇನ್, ರಷ್ಯಾ ಮತ್ತು ಮಧ್ಯಪ್ರಾಚ್ಯದ ವಿಚಾರದಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ನಡೆಸುತ್ತಿರುವ ಶಾಂತಿ ಪ್ರಯತ್ನಗಳನ್ನು ಕುಗ್ಗಿಸಲು ಚೀನಾ ಮಾಡುತ್ತಿರುವ ಕಾರ್ಯತಂತ್ರ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.


ಕಳೆದ ಕೆಲವು ಸಮಯದಿಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಚ್ಛಿದ್ರಕಾರಕ ಕಾರ್ಯಸೂಚಿಯ ಫಲವಾಗಿ ಮಿತ್ರರು ಹಾಗೂ ಶತ್ರುಗಳನ್ನು ಏಕಕಾಲಕ್ಕೆ ತಲ್ಲಣಗೊಳಿಸಿದ್ದು, ಇದರ ಲಾಭವನ್ನು ಪಡೆದುಕೊಳ್ಳುವ ಸಲುವಾಗಿ ಚೀನಾ ಜಾಗತಿಕ ವ್ಯವಸ್ಥೆಯ ವಿಶ್ವಾಸಾರ್ಹ ಆಧಾರಸ್ತಂಭವಾಗಿ ತನ್ನನ್ನು ಬಿಂಬಿಸಲು ಹೊರಟಿದೆ.

ರಕ್ತಸಿಕ್ತ ಸಂಘರ್ಷಗಳಾಗಿ ರೂಪುಗೊಳ್ಳುವ ಅತ್ಯಂತ ಕಠಿಣವಾದ ವಿವಾದಗಳಿಗೆ ಪರಿಹಾರ ಕಂಡುಕೊಳ್ಳಲು ಮಧ್ಯಸ್ಥಿಕೆಯನ್ನು ಉತ್ತೇಜಿಸುವ ಒಂದು ಸಶಕ್ತ ಜಾಗತಿಕ ವೇದಿಕೆಯನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ಚೀನಾ ಮೇ ತಿಂಗಳ ಕೊನೆಯಲ್ಲಿ ಅತ್ಯಂತ ದಿಟ್ಟ ಹೆಜ್ಜೆಯನ್ನಿಟ್ಟಿದೆ.

ಹಾಂಗ್ ಕಾಂಗ್ ನಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿರುವ ಮಧ್ಯಸ್ಥಿಕೆಗಾಗಿರುವ ಅಂತಾರಾಷ್ಟ್ರೀಯ ಸಂಸ್ಥೆ (IOMed) ಅಂತಾರಾಷ್ಟ್ರೀಯ ವಿವಾದಗಳನ್ನು ಬಗೆಹರಿಸುವಲ್ಲಿ ಮಧ್ಯಸ್ಥಿಕೆಗಾಗಿ ಬಳಸಲಾಗುವ ಜಗತ್ತಿನ ಮೊಟ್ಟಮೊದಲ ಅಂತರ್-ಸರ್ಕಾರಿ ಅಂತಾರಾಷ್ಟ್ರೀಯ ಕಾನೂನು ಸಂಸ್ಥೆಯಾಗಿದೆ.

ಮೇ 30ರಂದು ನಡೆದ IOMed ಸ್ಥಾಪನೆಯ ಸಮಾವೇಶದ ಸಹಿ ಸಮಾರಂಭಕ್ಕೆ ಸಾಕ್ಷಿಯಾಗಲು ವಿಶ್ವಸಂಸ್ಥೆ ಸೇರಿದಂತೆ 80ಕ್ಕೂ ಹೆಚ್ಚು ರಾಷ್ಟ್ರಗಳು ಮತ್ತು ಸುಮಾರು ಇಪ್ಪತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಹಾಂಗ್ ಕಾಂಗ್ ಗೆ ಹಿರಿಯ ಪ್ರತಿನಿಧಿಗಳನ್ನು ಕಳುಹಿಸಿದ್ದವು.

ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಅವರು ಮೊದಲು ಸಹಿಹಾಕಿದರು. ಉಳಿದ 33 ರಾಷ್ಟ್ರಗಳು ಅದನ್ನು ಅನುಸರಿಸಿದವು. ಇದರೊಂದಿಗೆ ಚೀನಾ IOMed ಸಂಸ್ಥೆಯ ಸಂಸ್ಥಾಪಕ ಸದಸ್ಯನಾಗಲಿದೆ. ಆದರೆ ಚೀನಾಗೆ ಅಚ್ಚರಿಯಾಗುವ ಇನ್ನೊಂದು ಸಂಗತಿಯೂ ಇದೆ. ಯಾಕೆಂದರೆ ಈ ಸಮಾವೇಶಕ್ಕೆ ಹಾಜರಾಗಿರುವ 80 ರಾಷ್ಟ್ರಗಳ ಪೈಕಿ 47 ರಾಷ್ಟ್ರಗಳು ಒಪ್ಪಂದಕ್ಕೆ ಸಹಿಹಾಕಿಲ್ಲ. ಇದರಿಂದ ಇಂತಹ ವಿಚಾರದಲ್ಲಿ ಚೀನಾ ಮಧ್ಯಸ್ಥಿಕೆ ಅಥವಾ ಪ್ರಭಾವವನ್ನು ವಹಿಸುವುದು ಅವುಗಳಿಗೆ ಇಷ್ಟವಿಲ್ಲ ಎಂಬುದು ಸ್ಪಷ್ಟವಾಯಿತು.

“ಅಂತಾರಾಷ್ಟ್ರೀಯ ಕಾನೂನು ವ್ಯವಸ್ಥೆಯಲ್ಲಿ ಇದೊಂದು ವಿನೂತನ ಹೆಜ್ಜೆ. ಅಂತಾರಾಷ್ಟ್ರೀಯ ಸಂಬಂಧಗಳ ಇತಿಹಾಸದಲ್ಲಿ ಇದು ಬಹುದೊಡ್ಡ ಪರಿಣಾಮ ಬೀರಲಿದೆ” ಎಂದು ವಾಂಗ್ ಯೀ ಅವರು ವಿಶ್ಲೇಷಿಸಿದ್ದಾರೆ. ‘ಒಂದು ದೇಶ-ಎರಡು ವ್ಯವಸ್ಥೆಗಳು’ ಎಂಬ ಸಿದ್ಧಾಂತದ ಯಶಸ್ಸು ಹಾಂಗ್-ಕಾಂಗ್ ನಲ್ಲಿ ಸಮೃದ್ಧಿ ಮತ್ತು ಸ್ಥಿರತೆಗೆ ಉಜ್ವಲವಾದ ಭವಿಷ್ಯವನ್ನು ಸೃಷ್ಟಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹೊಸ ಕಾನೂನನ್ನು ರೂಪಿಸುವ ಮೂಲಕ ಹಾಂಗ್-ಕಾಂಗ್ ನ್ನು ಚೀನಾದ ರಾಷ್ಟ್ರೀಯ ರಾಜಕೀಯಕ್ಕೆ ಸಂಯೋಜಿಸಲು ಹೆಚ್ಚುತ್ತಿರುವ ಒತ್ತಡವನ್ನು ನಿರ್ಲಕ್ಷಿಸಿದೆ. ಆದರೆ ಚೀನಾ ತನ್ನ ಉದ್ದೇಶಗಳಿಗೆ ಸರಿಹೊಂದುವ ರೀತಿಯಲ್ಲಿ ಹಾಂಗ್-ಕಾಂಗ್ ನ್ನು ಬಳಸಿಕೊಳ್ಳಲು ಸಿದ್ಧವಾಗಿರುವಂತೆ ಕಾಣುತ್ತದೆ.

ಈ ಮೂಲಕ ಹಾಂಗ್-ಕಾಂಗ್ ಗೆ ದೃಢ ಬೆಂಬಲವನ್ನು ನೀಡಿದ ಚೀನಾ ಸರ್ಕಾರಕ್ಕೆ ಹಾಗೂ ವಿಶ್ವಾಸವಿಟ್ಟ ಅಂತಾರಾಷ್ಟ್ರೀಯ ಸಮುದಾಯಕ್ಕೆ ಹಾಂಗ್-ಕಾಂಗ್ ನ ವಿಶೇಷ ಆಡಳಿತ ಪ್ರದೇಶದ ಮುಖ್ಯ ಕಾರ್ಯನಿರ್ವಾಹಕ ಜಾನ್ ಲೀ ಅವರು ಧನ್ಯವಾದ ಸಮರ್ಪಿಸಿದ್ದಾರೆ.

“ಸಂಸ್ಕೃತಿ, ಭಾಷೆ ಮತ್ತು ಕಾನೂನು ವ್ಯವಸ್ಥೆಯನ್ನು ಮೀರಿ ಪರಸ್ಪರ ಗೌರವ ಮತ್ತು ಹೊಂದಾಣಿಕೆಯ ಆಧಾರದಲ್ಲಿ ಅಂತಾರಾಷ್ಟ್ರೀಯ ವಿವಾದಗಳನ್ನು ಬಗೆಹರಿಸಲು IOMed ಅನೇಕ ರಾಷ್ಟ್ರಗಳಿಗೆ ಪಥ ನಿರ್ಮಾಣ ಮಾಡಲಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ದೃಷ್ಟಿಯಿಂದ ಇದಕ್ಕೆ ಹೆಚ್ಚಿನ ಮಹತ್ವ ಬಂದಿದೆ” ಎಂದು ಲೀ ಹೇಳಿದರು.

“ಭೌಗೋಳಿಕ-ರಾಜಕೀಯದ ಉದ್ವಿಗ್ನ ಪರಿಸ್ಥಿತಿಯ ಹೊರತಾಗಿಯೂ ಹಾಂಗ್-ಕಾಂಗ್ ಗೋಡೆಗಳನ್ನು ನಿರ್ಮಿಸುವುದಿಲ್ಲ, ಸೇತುವೆಗಳನ್ನು ಕಟ್ಟುತ್ತದೆ. ನಮ್ಮ ‘ಒಂದು ದೇಶ ಎರಡು ವ್ಯವಸ್ಥೆ’ ಎನ್ನುವ ವಿಶಿಷ್ಟವಾದ ಸಿದ್ಧಾಂತದ ಅಡಿಯಲ್ಲಿ ಚೀನಾ ಮತ್ತು ವಿಶ್ವಕ್ಕೆ ಅನುಕೂಲವಾಗುವುದನ್ನು ಆನಂದಿಸುವ ಏಕೈಕ ನಗರವೆಂದರೆ ಹಾಂಗ್-ಕಾಂಗ್” ಎಂದು ಲೀ ವಿಶ್ಲೇಷಿಸಿದರು.

ಜಾನ್ ಲೀ ಅವರು “ಸದೃಢ, ದಕ್ಷ ಮತ್ತು ಗೌರವಾನ್ವಿತ ಕಾನೂನು ಹಾಗೂ ವಿವಾದ ಇತ್ಯರ್ಥ ಸೇವಾ ವೃತ್ತಿಪರರನ್ನು ಹೊಂದಿದ ವ್ಯವಸ್ಥೆ” ಎಂದು ಹೇಳಿರುವ ಹಿನ್ನೆಲೆಯಲ್ಲಿ ಏಷ್ಯಾ-ಪೆಸಿಫಿಕ್ ವಲಯದಲ್ಲಿ ಮಧ್ಯಸ್ಥಿಕೆಗಾಗಿ ಹಾಂಗ್-ಕಾಂಗ್ ನ್ನು ಅತ್ಯಂತ ಆದ್ಯತೆಯ ಸ್ಥಾನವಾಗಿ ಚೀನಾ ಬಿಂಬಿಸುತ್ತಿರುವುದು ಸ್ಪಷ್ಟವಾಗಿದೆ.

ಸಮಗ್ರ ಭೌಗೋಲಿಕ ರಾಜಕೀಯ ಉದ್ವಿಗ್ನತೆಯ ನಡುವೆಯೇ ಒಪ್ಪಂದಕ್ಕೆ ಸಹಿಹಾಕಿದ ಹಲವಾರು ಅಭಿವೃದ್ಧಿಶೀಲ ರಾಷ್ಟ್ರಗಳ ಬೆಂಬಲವು ದಕ್ಷಿಣದ ಜಾಗತಿಕ ವಲಯದಲ್ಲಿ ಚೀನಾದ ಪ್ರಭಾವಕ್ಕೆ ಸಾಕ್ಷಿಯಾಗಿದೆ.

“ರಾಷ್ಟ್ರಗಳ ನಡುವಿನ ಸಂಘರ್ಷಗಳನ್ನು ಬಗೆಹರಿಸಲು ಮಾತುಕತೆ ಮತ್ತು ಸಹಮತವನ್ನು ನಿರ್ಮಿಸುವ ಮೂಲಕ ಭಿನ್ನಭಿಪ್ರಾಯಗಳನ್ನು ನಿಭಾಯಿಸಲು ಚೀನಾದ ಚತುರತೆಯನ್ನು ಬಳಸುವ ಬಗ್ಗೆ ವಿದೇಶಾಂಗ ಸಚಿವ ವಾಂಗ್ ಅವರ ಹೇಳಿಕೆಗೆ ವಿಶೇಷವಾದ ಮಹತ್ವವಿದೆ. ಯಾಕೆಂದರೆ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಉಕ್ರೇನ್, ರಷ್ಯಾ ಮತ್ತು ಮಧ್ಯಪ್ರಾಚ್ಯದ ವಿಚಾರದಲ್ಲಿ ನಡೆಸುತ್ತಿರುವ ಶಾಂತಿ ಪ್ರಯತ್ನಗಳನ್ನು ಕುಗ್ಗಿಸಲು ಮಾಡುತ್ತಿರುವ ಕಾರ್ಯತಂತ್ರ ಎಂದು ವಿಶ್ಲೇಷಿಸಲಾಗುತ್ತಿದೆ.

ಇತ್ತೀಚಿನ ಭಾರತ-ಪಾಕಿಸ್ತಾನದ ಸೇನಾ ಬಿಕ್ಕಟ್ಟು ಸಂಭವಿಸಿದಾಗಲೂ ಮಾತುಕತೆಯ ಮೂಲಕ ಇದನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಚೀನಾ ಕರೆ ನೀಡಿತ್ತು. ಆದರೆ ಅದು ಟ್ರಂಪ್ ಮಾಡಿದಂತೆ ಮಧ್ಯಸ್ಥಿಕೆ ವಹಿಸುವ ಮಾತನಾಡಿರಲಿಲ್ಲ. ಅದು ಪಾಕಿಸ್ತಾನವನ್ನು ಹೆಸರಿದೇ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಖಂಡಿಸಿತು. ಆದರೆ ಭಾರತದ ಸೇನಾ ಕಾರ್ಯಾಚರಣೆಯ ಬಗ್ಗೆ ವಿಷಾದ ವ್ಯಕ್ತಪಡಿಸಿತು.

Read More
Next Story