P John J Kennedy

ನೀಟ್ ಪ್ರತಿಭಟನೆ ಬಯಲು ಮಾಡಿದ ತಮಿಳುನಾಡಿನ ರಾಜಕೀಯ ಪಕ್ಷಗಳ ಕಾರ್ಯತಂತ್ರ


ನೀಟ್ ಪ್ರತಿಭಟನೆ ಬಯಲು ಮಾಡಿದ ತಮಿಳುನಾಡಿನ ರಾಜಕೀಯ ಪಕ್ಷಗಳ ಕಾರ್ಯತಂತ್ರ
x
ಜುಲೈ ತಿಂಗಳಲ್ಲಿ ಅತ್ಯಂತ ತಾರಕಕ್ಕೇರಿದ್ದ ದೆಹಲಿಯ ಜಂತರ್ ಮಂತರ್ ಪ್ರತಿಭಟನೆಯ ವಿಚಾರದಲ್ಲಿ ತಮಿಳುನಾಡಿನ ಪಕ್ಷಗಳಾದ ಡಿಎಂಕೆ, ಅಣ್ಣಾಡಿಎಂಕೆ ಮತ್ತು ಟಿವಿಕೆ ಅತ್ಯಂತ ಸಂಯಮದಿಂದ ವರ್ತಿಸುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.
Click the Play button to hear this message in audio format

ಕೇಂದ್ರ - ರಾಜ್ಯಗಳ ನಡುವಿನ ಸಮಸ್ಯೆ ನಿಭಾಯಿಸುವ ಸಂದರ್ಭದಲ್ಲಿ ಎಂತಹ ಸಂಯಮದ ಅಗತ್ಯವಿದೆ ಎಂಬುದಕ್ಕೆ ಟಿವಿಕೆ ಹಾಗೂ ಡಿಎಂಕೆಯ ಪ್ರತಿಕ್ರಿಯೆಗಳು ಸಾಕ್ಷಿಯಾಗಿವೆ.

ಹೊಸ ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆದ ನೀಟ್‌ ವಿರೋಧಿ ಪ್ರತಿಭಟನೆಗಳು ರಾಷ್ಟ್ರೀಯ ಪರೀಕ್ಷೆಯೊಂದರಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ವಿರುದ್ಧದ ಚಳವಳಿಯ ಸ್ವರೂಪವನ್ನೂ ಮೀರಿ ಮುಂದೆ ಸಾಗಿದೆ. ಇವು ತಮಿಳುನಾಡಿನ ರಾಜಕೀಯ ಪಕ್ಷಗಳಿಗೆ ಒಂದು ಪರೀಕ್ಷೆಯೂ ಹೌದು. ಕಳೆದ ಅನೇಕ ದಶಕಗಳಿಂದ ರಾಜ್ಯದ ರಾಜಕೀಯವು ಸೈದ್ಧಾಂತಿಕ ಪೈಪೋಟಿಯಿಂದ ರೂಪುಗೊಂಡಿತ್ತು. ದ್ರಾವಿಡ ಚಳವಳಿಯ ಉದಯ ಹಾಗೂ 1967ರ ರಾಜಕೀಯ ಪರಿವರ್ತನೆಯ ನಂತರ ಪಕ್ಷಗಳು ಸಾಮಾಜಿಕ ನ್ಯಾಯ, ಒಕ್ಕೂಟ ವ್ಯವಸ್ಥೆ, ಭಾಷೆ, ಜಾತ್ಯತೀತೆ ಮತ್ತು ರಾಜ್ಯದ ಸ್ವಾಯತ್ತತೆಯ ಮೇಲಿನ ತಮ್ಮ ನಿಲುವುಗಳ ಮೂಲಕ ತಮ್ಮನ್ನು ತಾವು ಭಿನ್ನವಾಗಿ ಗುರುತಿಸಿಕೊಂಡಿವೆ.

ಚುನಾವಣಾ ತಿಕ್ಕಾಟವು ತೀವ್ರವಾಗಿತ್ತು ಎಂಬುದು ನಿಜವಾದರೂ ಅದು ಅತ್ಯಂತ ಸ್ಪಷ್ಟವಾಗಿ ಸೈದ್ಧಾಂತಿಕ ಬದ್ಧತೆಗಳಲ್ಲಿ ಬೇರೂರಿತ್ತು ಅಷ್ಟೇ ನಿಜ. ಆದರೆ ಇತ್ತೀಚಿನ ನೀಟ್‌ ಪ್ರತಿಭಟನೆಗಳಿಗೆ ವ್ಯಕ್ತವಾದ ಪ್ರತಿಕ್ರಿಯೆಗಳು ಈ ರಾಜಕೀಯ ಸಂಸ್ಕೃತಿಯು ಬದಲಾಗುತ್ತಿದೆ ಎಂಬುದರ ಸಂಕೇತವಾಗಿವೆ. ಇಲ್ಲಿನ ಪ್ರಮುಖ ಪಕ್ಷಗಳು ಈಗಲೂ ಸಿದ್ಧಾಂತದ ಭಾಷೆಯಲ್ಲಿಯೇ ಮಾತನಾಡುತ್ತವೆಯಾದರೂ ಅವುಗಳ ಕ್ರಮಗಳು ರಾಜಕೀಯ ಲೆಕ್ಕಾಚಾರಗಳನ್ನು ಹೆಚ್ಚು ಬಿಂಬಿಸುವ ಕೆಲಸಮಾಡುತ್ತವೆ. ಹಾಗಾಗಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಮತ್ತು ತಮಿಳು ವೆಟ್ರಿ ಕಳಗಂ (ಟಿವಿಕೆ) ಪಕ್ಷಗಳು ಈ ಪ್ರತಿಭಟನೆಗಳಿಗೆ ಹೇಗೆ ಪ್ರತಿಕ್ರಿಯೆ ನೀಡಿದವು ಎನ್ನುವುದು ಇಲ್ಲಿ ಮುಖ್ಯವಾಗಿ ಕಾಣುತ್ತಿಲ್ಲ.

ಇದಕ್ಕೆ ಬದಲಾಗಿ ಹಿಂದೆ ಇದ್ದಂತೆಯೇ ಸಿದ್ಧಾಂತವು ಇಂದಿಗೂ ರಾಜಕೀಯ ಚಟುವಟಿಕೆಗಳನ್ನು ಮಾರ್ಗದರ್ಶಿಯಾಗಿ ಮುನ್ನಡೆಸುತ್ತಿದೆಯೇ ಎಂಬುದು ನಿಜವಾದ ಪ್ರಶ್ನೆಯಾಗಿದೆ.

ಯಾವ ಪಕ್ಷವೂ ನೀಟ್‌ ಪರೀಕ್ಷೆಯನ್ನು ನಿರಂತರವಾಗಿ, ಕಟ್ಟುನಿಟ್ಟಿನಿಂದ ವಿರೋಧಿಸದೇ ಇರುವ ಕಾಲಘಟ್ಟದಲ್ಲಿ ಡಿಎಂಕೆ ಈ ಬದಲಾವಣೆಯನ್ನು ಅತ್ಯಂತ ಸ್ಪಷ್ಟವಾಗಿ ತೋರಿಸುತ್ತ ಬಂದಿದೆ. ಈ ಪರೀಕ್ಷೆಯನ್ನು ಯಾವ ಕಾರಣಕ್ಕೂ ಮುಂದುವರಿಸಬಾರದು, ಅದನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದೆ. ಅದರ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯಗಳನ್ನು ಅಂಗೀಕರಿಸಿದೆ ಮತ್ತು ಎ.ಕೆ.ರಾಜನ್‌ ಸಮಿತಿಯನ್ನು ಕೂಡ ನೇಮಕ ಮಾಡಿದೆ. ನೀಟ್‌ ಪರೀಕ್ಷೆಯು ಗ್ರಾಮೀಣ ಪ್ರದೇಶದವರು, ಸರ್ಕಾರಿ ಶಾಲೆಗಳಿಗೆ ಸೇರಿದ ವಿದ್ಯಾರ್ಥಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳ ಪಾಲಿಗೆ ಅನುಕೂಲಕರವಾಗಿಲ್ಲ ಎಂಬ ವರದಿಯನ್ನು ಈ ಸಮಿತಿ ನೀಡಿತ್ತು.

ಹಾಗಾಗಿ ಪಕ್ಷ ನೀಟ್‌ ವಿರೋಧಿ ನಿಲುವನ್ನು ಸ್ಪಷ್ಟವಾಗಿ ತಳೆಯಲು ಈ ವರದಿಯೇ ಬೌದ್ಧಿಕ ಆಧಾರವಾಯಿತು.

ಈ ಹಿನ್ನೆಲೆಯನ್ನು ಗಮನಿಸಿದರೆ ಪ್ರಸ್ತುತ ಚಳವಳಿಯ ನೇತೃತ್ವವನ್ನು ಡಿಎಂಕೆ ಪಕ್ಷವೇ ವಹಿಸಿಕೊಳ್ಳುತ್ತದೆ ಎಂಬ ನಿರೀಕ್ಷೆ ಹೊಂದಲಾಗಿತ್ತು. ಅದು ತನ್ನ ಒಗ್ಗಟ್ಟನ್ನು ಕೂಡ ವ್ಯಕ್ತಪಡಿಸಿತು. ಆ ಪಕ್ಷದ ಸಂಸದ ಎ.ರಾಜಾ ಅವರು ಜಂತರ್‌ ಮಂತರ್‌ನಲ್ಲಿ ಉಪವಾಸ ಹೂಡಿದ್ದ ಸೋನಮ್‌ ವಾಂಗ್‌ಚುಕ್‌ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳನ್ನು ಭೇಟಿಯಾಗಿ ಬೆಂಬಲ ನೀಡಿದ್ದರು. ಆದರೆ ಅದಕ್ಕೂ ಮೀರಿದ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳು ಸೀಮಿತವಾಗಿಯೇ ಉಳಿದುಬಿಟ್ಟವು. ಅದರ ವಿದ್ಯಾರ್ಥಿ ಮತ್ತು ಯುವ ಘಟಕಗಳನ್ನು ದೊಡ್ಡ ಮಟ್ಟದಲ್ಲಿ ಕಣಕ್ಕಿಳಿಸುವಲ್ಲಿ ಅದು ಸಫಲವಾಗಲಿಲ್ಲ. ಸಂಸತ್ತಿನಲ್ಲಿಯೂ ನೀಟ್‌ ಸುತ್ತಲೂ ಸಮನ್ವಯತೆಯಿಂದ ವಿರೋಧ ಪಕ್ಷದ ಅಭಿಯಾನವನ್ನು ರೂಪಿಸುವಲ್ಲಿ ಅದು ಕೈಜೋಡಿಸಲಿಲ್ಲ. ಬದಲಾಗಿ ಮೇಕೆದಾಟು ವಿವಾದದ ಮೇಲೆಯೇ ಹೆಚ್ಚು ಗಮನವನ್ನು ಕೇಂದ್ರೀಕರಿಸಿತು.

ಈ ನಿಟ್ಟಿನಲ್ಲಿ ಪಕ್ಷ ವಹಿಸುತ್ತಿರುವ ಸಂಯಮವು ಗಮನಾರ್ಹವಾಗಿದೆ, ಏಕೆಂದರೆ ಈ ಪ್ರತಿಭಟನೆಗಳು ಪಕ್ಷದ ಅತ್ಯಂತ ಸ್ಥಿರವಾದ ಸೈದ್ಧಾಂತಿಕ ನಿಲುವುಗಳಲ್ಲಿ ಒಂದನ್ನು ಬಲಪಡಿಸಲು ಉತ್ತಮ ಅವಕಾಶವನ್ನೇ ಒದಗಿಸಿಕೊಟ್ಟಿದ್ದವು. ಸೈದ್ಧಾಂತಿಕ ಸಮಸ್ಯೆಗಳನ್ನು ಐತಿಹಾಸಿಕವಾಗಿ ಬೃಹತ್ ರಾಜಕೀಯ ಚಳುವಳಿಗಳನ್ನಾಗಿ ಪರಿವರ್ತಿಸುತ್ತ ಬಂದಿರುವ ಪಕ್ಷವೊಂದು ತಳೆದಿರುವ ಇಂತಹ ಎಚ್ಚರಿಕೆಯ ನಡೆ ಅದು ತನ್ನ ಸಾಂಪ್ರದಾಯಿಕ ರಾಜಕೀಯ ಶೈಲಿಯಿಂದ ವಿಮುಖವಾಗುತ್ತಿರುವುದನ್ನು ಸೂಚಿಸುತ್ತದೆ. ಡಿಎಂಕೆ ಬಹಳ ಎಚ್ಚರಿಕೆಯಿಂದ ಅಳೆದು ತೂಗಿದಂತೆ ತನ್ನ ಪ್ರತಿಕ್ರಿಯೆಯನ್ನು ನೀಡಿದ್ದು ವಿಶೇಷವಾಗಿತ್ತು.

ಇವೆಲ್ಲಕ್ಕೆ ಬದಲಾಗುತ್ತಿರುವ ರಾಜಕೀಯ ಪ್ರಾಮುಖ್ಯತೆಗಳಲ್ಲಿ ಉತ್ತರವಿರುವಂತೆ ಕಾಣುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ, ಕಾಂಗ್ರೆಸ್ ಜತೆಗಿನ ಅದರ ಸಂಬಂಧ ಇನ್ನೂ ಡೋಲಾಯಮಾನವಾಗಿದೆ. ಇನ್ನು ಆಂತರಿಕವಾಗಿ ಟಿವಿಕೆ ಪಕ್ಷದ ಉದಯವು ಅದಕ್ಕೆ ಹೊಸ ಚುನಾವಣಾ ಸವಾಲನ್ನು ಸೃಷ್ಟಿಸಿದೆ. ತಮಿಳುನಾಡಿನ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ವಿಷಯದಲ್ಲಿ ಮಾತ್ರ ಡಿಎಂಕೆ ಕೇಂದ್ರ ಸರ್ಕಾರವನ್ನು ವಿರೋಧಿಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಕೆಲವು ನಾಯಕರ ಇತ್ತೀಚಿನ ಹೇಳಿಕೆಗಳು ಕೂಡ ಅದನ್ನು ಪುಷ್ಟೀಕರಿಸುತ್ತಿವೆ.

ಇದು ರಾಜಕೀಯವಾಗಿ ಪ್ರಾಯೋಗಿಕವಾಗಿರಬಹುದು, ಆದರೆ ಇದು ಬಿಜೆಪಿಯ ರಾಷ್ಟ್ರೀಯ ಸಿದ್ಧಾಂತವನ್ನು ವಿರೋಧಿಸುವ ಪಕ್ಷದ ದೀರ್ಘಕಾಲದ ನಿಲುವಿನಿಂದ ದೂರ ಸರಿಯುತ್ತಿದೆಯೇ ಎಂಬ ಅನುಮಾನ ಮೂಡಲು ಕಾರಣವಾಗಿದೆ. ಸೈದ್ಧಾಂತಿಕ ನಿಲುವುಗಳನ್ನು ಯಾವಾಗ ಮತ್ತು ಹೇಗೆ ಪ್ರತಿಪಾದಿಸಬೇಕು ಎಂಬುದರ ಮೇಲೆ ಅದರ ರಾಜಕೀಯ ತಂತ್ರಗಾರಿಕೆ ಅಡಕವಾಗಿದೆ.

ಆಂತರಿಕ ಕಲಹದೊಳಗೆ ಬಂದಿಯಾದ ಅಣ್ಣಾಡಿಎಂಕೆ

ಡಿಎಂಕೆ ಚುನಾವಣಾ ತಂತ್ರಗಾರಿಕೆಯ ಸೆಳೆತವನ್ನು ಪ್ರತಿಬಿಂಬಿಸಿದರೆ, ಅಣ್ಣಾಡಿಎಂಕೆ ವಿಭಿನ್ನವಾದ ಆದರೆ ಅಷ್ಟೇ ಸ್ಪಷ್ಟವಾದ ಚಿತ್ರಣವನ್ನು ನೀಡುತ್ತದೆ. ಇದು ತಮಿಳುನಾಡಿಗೆ ನೀಟ್ನಿಂದ ವಿನಾಯಿತಿ ನೀಡಬೇಕೆಂದು ಸತತವಾಗಿ ಬೆಂಬಲಿಸುತ್ತ ಬಂದಿದೆ, ಆದರೂ ವಿದ್ಯಾರ್ಥಿ ಪ್ರತಿಭಟನೆಗಳ ವಿಚಾರದಲ್ಲಿ ಅದರ ಪ್ರತಿಕ್ರಿಯೆಯು ಅಷ್ಟೇ ಸಂಯಮದಿಂದ ಕೂಡಿತ್ತು. ಡಿಎಂಕೆ ಮತ್ತು ಟಿವಿಕೆ ಪಕ್ಷಗಳ ಸಂಯಮವು ರಾಜಕೀಯ ಆಯ್ಕೆಯಂತೆ ತೋರಿದರೆ, ಅಣ್ಣಾಡಿಮಕೆಯ ಸಂಯಮವು ಅದರ ಕುಗ್ಗುತ್ತಿರುವ ರಾಜಕೀಯ ಸಾಮರ್ಥ್ಯವನ್ನು ಪ್ರತಿಬಿಂಬಿಸುವಂತಿದೆ.

ಆಂತರಿಕ ಭಿನ್ನಾಭಿಪ್ರಾಯಗಳು, ಚುನಾವಣಾ ಹಿನ್ನಡೆಗಳು ಮತ್ತು ದುರ್ಬಲಗೊಳ್ಳುತ್ತಿರುವ ಸಾಂಸ್ಥಿಕ ಶಕ್ತಿಯು ಪಕ್ಷದ ಚಳವಳಿ ನಡೆಸುವ ಸಾಮರ್ಥ್ಯವನ್ನು ತಗ್ಗಿಸುವಂತೆ ಮಾಡಿದೆ ಎಂಬುದು ದಿಟ. ಇದಕ್ಕೆ ಇನ್ನೊಂದು ಮುಖ್ಯ ಕಾರಣ ಬಿಜೆಪಿಯೊಂದಿಗೆ ಅದು ಕಾಯ್ದುಕೊಂಡು ಬಂದಿರುವ ಮೈತ್ರಿ. ಕೇಂದ್ರ ಸರ್ಕಾರದೊಂದಿಗೆ ಅದು ಸಂಬಂಧ ಹೊಂದಿರುವ ಕಾರಣಕ್ಕಾಗಿ ಅದರ ನೀತಿಯ ವಿರುದ್ಧ ಆಕ್ರಮಣಕಾರಿ ಅಭಿಯಾನ ನಡೆಸುವ ಸಾಮರ್ಥ್ಯವಂತೂ ಅದಕ್ಕೆ ಇಲ್ಲದಂತೆ ಮಾಡಿದೆ. ರಾಜಕೀಯ ದೌರ್ಬಲ್ಯವು ಸೈದ್ಧಾಂತಿಕ ಬದ್ಧತೆಯನ್ನು ಮೀರಿ ನಿಂತಿದೆ.

ಟಿವಿಕೆಯ ಬದಲಾದ ಕಾರ್ಯವಿಧಾನ

ಟಿವಿಕೆ ನೇತೃತ್ವದ ಸರ್ಕಾರವು ಮತ್ತೊಂದು ರೀತಿಯ ವಿರೋಧಾಭಾಸವನ್ನು ಪ್ರಸ್ತುತಪಡಿಸುತ್ತದೆ. ಅಧಿಕಾರಕ್ಕೆ ಬರುವ ಮೊದಲು, ಅದು ನೀಟ್ ಪರೀಕ್ಷೆಯನ್ನು ತೀವ್ರವಾಗಿ ವಿರೋಧಿಸಿತು ಮತ್ತು ಅದನ್ನು ರದ್ದುಗೊಳಿಸುವಲ್ಲಿ ವಿಫಲರಾಗಿದ್ದಕ್ಕಾಗಿ ಡಿಎಂಕೆ ಹಾಗೂ ಅಣ್ಣಾಡಿಎಂಕೆ ಎರಡನ್ನೂ ಟೀಕಿಸಿತು. ಜೊತೆಗೆ ಬಿಜೆಪಿ ವಿರುದ್ಧ ತಮಿಳುನಾಡಿನ ಹಿತಾಸಕ್ತಿಗಳನ್ನು ರಕ್ಷಿಸುವುದಾಗಿ ಭರವಸೆ ನೀಡಿತ್ತು. ಈ ನಿಲುವುಗಳು ಅದು ಅಧಿಕಾರಕ್ಕೆ ಬಂದ ನಂತರ ವಿದ್ಯಾರ್ಥಿ ಚಳವಳಿಯೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂಬ ನಿರೀಕ್ಷೆಗಳನ್ನು ಸೃಷ್ಟಿಸಿದ್ದವು.

ಆದರೆ ಸರ್ಕಾರ ತಳೆದಿದ್ದು ಮಾತ್ರ ವಿಭಿನ್ನ ವಿಧಾನ. ಹಲವಾರು ಸ್ಥಳಗಳಲ್ಲಿ ಪ್ರತಿಭಟನೆಗಳಿಗೆ ಅನುಮತಿ ನಿರಾಕರಿಸಲಾಯಿತು, ಪ್ರತಿಭಟನಾಕಾರರನ್ನು ಬಂಧಿಸಲಾಯಿತು ಮತ್ತು ಸರ್ಕಾರದ ಪ್ರತಿಕ್ರಿಯೆಯನ್ನು ಅದರ ಕೆಲವು ಮಿತ್ರಪಕ್ಷಗಳೂ ಪ್ರಶ್ನಿಸಿದವು. ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವುದು ಯಾವುದೇ ಸರ್ಕಾರದ ಕಾನೂನುಬದ್ಧ ಜವಾಬ್ದಾರಿಯಾಗಿದೆ. ಆದರೂ, ಸರ್ಕಾರವು ಅಧಿಕೃತವಾಗಿ ವಿರೋಧಿಸುವ ಸಮಸ್ಯೆಯೊಂದರ ಮೇಲೆ ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಕ್ರಮವನ್ನು ಬಳಸುವುದು, ಆಡಳಿತ ಮತ್ತು ರಾಜಕೀಯ ಬದ್ಧತೆಯ ನಡುವಿನ ಸಮತೋಲನದ ಬಗ್ಗೆ ಅನಿವಾರ್ಯವಾಗಿ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಅಧಿಕಾರದ ವಾಸ್ತವಗಳು ಅದರ ರಾಜಕೀಯ ವಿಧಾನವನ್ನು ಮರುರೂಪಿಸಲು ಪ್ರಾರಂಭಿಸಿವೆ ಎಂಬುದಕ್ಕೆ ಸರ್ಕಾರದ ಪ್ರತಿಕ್ರಿಯೆ ಸಾಕ್ಷಿಯಾಗಿದೆ. ವಿರೋಧ ಪಕ್ಷದ ಸ್ಥಾನದಿಂದ ಆಡಳಿತ ಸ್ಥಾನಕ್ಕೆ ಏರುವ ಅನೇಕ ಪಕ್ಷಗಳ ರೀತಿಯಲ್ಲಿಯೇ ಟಿವಿಕೆಯು ಕೂಡ ಆಡಳಿತಾತ್ಮಕ ಜವಾಬ್ದಾರಿಯನ್ನು ನಿಭಾಯಿಸುವ ಕೆಲಸ ಮಾಡುತ್ತಿದೆ. ವಿರೋಧ ಪಕ್ಷದಲ್ಲಿ ಇದ್ದಾಗ ಇಲ್ಲದ ರಾಜಕೀಯ ಮಿತಿಗಳು ಅಧಿಕಾರ ದಕ್ಕಿದಾಗ ಹೆಚ್ಚಾಗುತ್ತವೆ ಎಂಬುದು ಇದರಿಂದ ಗೋಚರಿಸುತ್ತದೆ. ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರದೊಂದಿಗೆ ಅನಗತ್ಯ ಸಂಘರ್ಷವನ್ನು ತಪ್ಪಿಸುವುದಾಗಿ ಮುಖ್ಯಮಂತ್ರಿ ವಿಜಯ್ ಅವರು ಪದೇ ಪದೇ ಹೇಳುತ್ತಲೇ ಬಂದಿದ್ದಾರೆ.

ಇದು ತಮಿಳುನಾಡು ರಾಜಕೀಯದ ದೀರ್ಘ ಪರಂಪರೆಗೆ ಭಿನ್ನವಾಗಿದೆ. ಇಲ್ಲಿ ರಾಜ್ಯದ ಹಿತಾಸಕ್ತಿಗಳನ್ನು ರಕ್ಷಿಸಲು ಕೇಂದ್ರದೊಂದಿಗೆ ಸಂಘರ್ಷವು ಸಾಮಾನ್ಯವೇ ಹೌದು. ಇದು ಆಡಳಿತಾತ್ಮಕ ವ್ಯಾವಹಾರಿಕತೆಯನ್ನು ಪ್ರತಿಬಿಂಬಿಸುತ್ತದೆಯೋ ಅಥವಾ ವಿಶಾಲವಾದ ರಾಜಕೀಯ ತಂತ್ರಗಾರಿಕೆಯ ಭಾಗವೋ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ. ವಿರೋಧ ಪಕ್ಷದಲ್ಲಿದ್ದಾಗ ಮಾಡಿದ ಭಾಷಣಗಳಿಗಿಂತ ಅಧಿಕಾರದಲ್ಲಿರುವಾಗ ಅದರ ನಡವಳಿಕೆಯು ಹೆಚ್ಚು ಎಚ್ಚರಿಕೆಯಿಂದ ಕೂಡಿರುವುದು ಈಗಾಗಲೇ ಸ್ಪಷ್ಟವಾಗಿದೆ. ಡಿಎಂಕೆ ಮತ್ತು ಅಣ್ಣಾಡಿಎಂಕೆಯಂತೆ, ಟಿವಿಕೆ ಕೂಡ ಸೈದ್ಧಾಂತಿಕ ಬದ್ಧತೆಗಳನ್ನು ರಾಜಕೀಯ ಲೆಕ್ಕಾಚಾರಗಳೊಂದಿಗೆ ಸರಿದೂಗಿಸುತ್ತಿರುವ ಪ್ರಯತ್ನದಲ್ಲಿ ತೊಡಗಿರುವುದು ಕಾಣಿಸುತ್ತಿದೆ.

ಪ್ರತಿಕ್ರಿಯೆಗಳಲ್ಲಿ ಸಮಾನ ಮಾದರಿ

ಎಲ್ಲವನ್ನೂ ಸಮಗ್ರ ದೃಷ್ಟಿಕೋನದಿಂದ ನೋಡಿದಾಗ, ಈ ಮೂರು ಪಕ್ಷಗಳ ಪ್ರತಿಕ್ರಿಯೆಗಳು ಒಂದು ಸಾಮಾನ್ಯ ಮಾದರಿಯನ್ನು ಬಹಿರಂಗಪಡಿಸುತ್ತವೆ. ನೀಟ್ ಕುರಿತು ಅವುಗಳ ಅಧಿಕೃತ ನಿಲುವುಗಳು ಬದಲಾಗಿಲ್ಲ, ಆದರೆ ಅವುಗಳ ರಾಜಕೀಯ ಪ್ರತಿಕ್ರಿಯೆಗಳು ತಕ್ಷಣದ ಸನ್ನಿವೇಶಗಳಿಂದ ರೂಪುಗೊಂಡಿರುವಂತೆ ಕಾಣಿಸುತ್ತಿದೆ. ಡಿಎಂಕೆ ನೀಟ್ ವಿರುದ್ಧದ ತನ್ನ ಸುದೀರ್ಘ ಅಭಿಯಾನದ ಹೊರತಾಗಿಯೂ ಸಂಯಮವನ್ನು ಕಾಯ್ದುಕೊಂಡಿತು. ಸಾಂಸ್ಥಿಕ ದೌರ್ಬಲ್ಯ ಮತ್ತು ಮೈತ್ರಿಯ ಕಟ್ಟುಪಾಡುಗಳಿಂದಾಗಿ ಅಣ್ಣಾಡಿಎಂಕೆ ಮೌನಕ್ಕೆ ಶರಣಾಯಿತು. ವಿಭಿನ್ನ ರಾಜಕೀಯ ಸಂಸ್ಕೃತಿಯ ಭರವಸೆ ನೀಡಿದ್ದ ಟಿವಿಕೆ ಕೂಡ, ಸಾರ್ವಜನಿಕ ಪ್ರತಿಭಟನೆಗಳನ್ನು ಎದುರಿಸಿದ ಇತರ ಸರ್ಕಾರಗಳ ರೀತಿಯಲ್ಲಿಯೇ ಪ್ರತಿಕ್ರಿಯೆ ನೀಡಿತು.

ಈ ಮೂರು ಪಕ್ಷಗಳು ಬೇರೆ ಬೇರೆ ಕಾರಣಗಳಿಗಾಗಿ ಭಿನ್ನವಾದ ರಾಜಕೀಯ ಪ್ರತಿಕ್ರಿಯೆಗಳನ್ನು ನೀಡಿದವು, ಆದರೆ ಅವುಗಳ ಹಿಂದಿನ ಮೂಲ ತತ್ವ ಒಂದೇ ಆಗಿತ್ತು: ಸೈದ್ಧಾಂತಿಕ ಚಳುವಳಿಗಿಂತ ತಕ್ಷಣದ ರಾಜಕೀಯ ಪರಿಗಣನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು. ಈ ಸಮಾನತೆಯು ತಮಿಳುನಾಡು ರಾಜಕೀಯದಲ್ಲಿ ಒಂದು ದೊಡ್ಡ ಪರಿವರ್ತನೆಯನ್ನು ಸೂಚಿಸುತ್ತದೆ.

ದಶಕಗಳಿಂದ, ಪಕ್ಷಗಳು ತಮ್ಮ ಸೈದ್ಧಾಂತಿಕ ಬದ್ಧತೆಗಳಿಂದಲೇ ತಮ್ಮ ರಾಜಕೀಯ ಅಸ್ತಿತ್ವವನ್ನು ಪಡೆದುಕೊಂಡಿದ್ದವು. ಸಾಮಾಜಿಕ ನ್ಯಾಯ, ಒಕ್ಕೂಟ ವ್ಯವಸ್ಥೆ, ಜಾತ್ಯತೀತತೆ ಮತ್ತು ಕೇಂದ್ರ-ರಾಜ್ಯ ಸಂಬಂಧಗಳನ್ನು ಅವು ಹೇಗೆ ನೋಡುತ್ತವೆ ಎಂಬುದರಲ್ಲಿ ಮತದಾರರು ಸ್ಪಷ್ಟ ವ್ಯತ್ಯಾಸಗಳನ್ನು ಗುರುತಿಸಬಹುದಿತ್ತು. ಆದರೆ ಈಗ ರಾಜಕೀಯ ಭಾಷಣಗಳಲ್ಲಿ ಕಾಣುವಷ್ಟು ಸ್ಪಷ್ಟತೆ ರಾಜಕೀಯ ಆಚರಣೆಯಲ್ಲಿ ಗೋಚರಿಸುತ್ತಿಲ್ಲ.

ಇದರರ್ಥ ಸಿದ್ಧಾಂತ ಸಂಪೂರ್ಣವಾಗಿ ಕಣ್ಮರೆಯಾಗಿದೆ ಎಂದೇನೂ ಅಲ್ಲ, ಅಥವಾ ಎಲ್ಲ ಪಕ್ಷಗಳು ಅಂತಿಮವಾಗಿ ಒಂದೇ ತರಹದವು ಎಂಬ ತೀರ್ಮಾನಕ್ಕೂ ಬರುವಂತಿಲ್ಲ. ಬದಲಿಗೆ, ಕೇವಲ ಸಿದ್ಧಾಂತವೊಂದೇ ರಾಜಕೀಯ ನಡವಳಿಕೆಯನ್ನು ವಿವರಿಸುವುದಿಲ್ಲ. ಚುನಾವಣಾ ಲೆಕ್ಕಾಚಾರ ಒಕ್ಕೂಟ ನಿರ್ವಹಣೆ, ಆಡಳಿತ ಮತ್ತು ಹೊಸ ರಾಜಕೀಯ ಪೈಪೋಟಿಗಳು ರಾಜಕೀಯ ನಿರ್ಧಾರಗಳನ್ನು ಹೆಚ್ಚು ಹೆಚ್ಚು ರೂಪಿಸುತ್ತಿವೆ. ಸಿದ್ಧಾಂತದ ಭಾಷೆಯು ಬದಲಾಗದೆ ಉಳಿದಿದ್ದರೂ ಸಹ, ರಾಜಕೀಯ ನಡೆಗಳು ಚುನಾವಣಾ ಲೆಕ್ಕಾಚಾರಗಳನ್ನು ಅವಲಂಬಿಸುತ್ತಿವೆ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story