
ಸೆಲೆಬ್ರಿಟಿಗಳ ವಿರುದ್ಧದ ಆಕ್ರೋಶ: ಇದು ಕೇವಲ ಕನ್ನಡವಲ್ಲ, ಗೌರವದ ಪ್ರಶ್ನೆ
ತಮಿಳು ಚಿತ್ರನಟ ಕಮಲ್ ಹಾಸನ್ ಅವರು ನೀಡಿದ ಹೇಳಿಕೆ ದಶಕಗಳಿಂದ ಕನ್ನಡಿಗರು ಮತ್ತು ತಮಿಳರ ನಡುವೆ ಅಸ್ತಿತ್ವದಲ್ಲಿದ್ದ ಗಹನ ಮತ್ತು ಸಂಕೀರ್ಣವಾದ ಬಿರುಕುಗಳನ್ನು ತೆರೆದಿಟ್ಟಿದೆ.
ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂದು ನಟ ಕಮಲ್ ಹಾಸನ್ ಹೇಳಿದಾಗ ತಾವು ಜೇನುತುಪ್ಪದ ಕುಡಿಕೆಗೆ ಕೈಹಾಕುತ್ತಿದ್ದೇನೆ ಎಂದು ಭಾವಿಸಿದ್ದರು. ಆದರೆ ಅವರ ಬೆರಳುಗಳು ಜೇನುಗೂಡನ್ನು ಕೆಣಕಿದೆ.
ಮುಖ್ಯವಾಗಿ ತಮಿಳು ನಟರಾಗಿರುವ ಕಮಲ್ ಹಾಸನ್ ಅವರು ಇತ್ತೀಚಿನ ದಿನಮಾನಗಳಲ್ಲಿ ಬೆಂಗಳೂರು ಮತ್ತು ಕರ್ನಾಟಕದಿಂದ ಹೊರಬರುತ್ತಿರುವ, ಸೆಲಬ್ರಿಟಿಗಳು ಹಾಗೂ ಸಾಮಾನ್ಯರಿಂದ ಕನ್ನಡಕ್ಕೆ ಆಗುತ್ತಿರುವ ಅಗೌರವದ ಹಿನ್ನೆಲೆಯಲ್ಲಿ ಬರುತ್ತಿರುವ ಎಲ್ಲ ಸುದ್ದಿಗಳನ್ನು ಗಮನಿಸುತ್ತಿಲ್ಲ ಎಂದು ಕಾಣುತ್ತದೆ. ಇಂತಹ ಸುದ್ದಿಗಳ ಜಾಡು ಅವರಿಗೆ ಗೊತ್ತಿರುತ್ತಿದ್ದರೆ, ತಮ್ಮ ಇತ್ತೀಚಿನ ಚಿತ್ರ ‘ಥಗ್ ಲೈಫ್’ ಬಿಡುಗಡೆಗೆ ಸಂಬಂಧಿಸಿ ಚೆನ್ನೈನಲ್ಲಿ ನಡೆದ ಆಡಿಯೋ ಕಾರ್ಯಕ್ರಮದಲ್ಲಿ ಭಾಷೆಯ ವಿಷಯದಲ್ಲಿ ತಾನು ಏನು ಹೇಳುತ್ತಿದ್ದೇನೆ ಎಂಬುದರ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಭಾಷಾ ಕಾರ್ಯಕರ್ತರು ಮಾತ್ರವಲ್ಲದೆ ಸಾಮಾನ್ಯ ಕನ್ನಡಿಗರು ಕರ್ನಾಟಕವನ್ನು ತಮ್ಮ ನೆಲೆಯಾಗಿ ಮಾಡಿಕೊಂಡಿರುವ ಅಥವಾ ವೃತ್ತಿಪರವಾಗಿ ರಾಜ್ಯದಿಂದ, ಅದರಲ್ಲೂ ವಿಶೇಷವಾಗಿ ಬೆಂಗಳೂರು ನಗರದಿಂದ ಪ್ರಯೋಜನವನ್ನು ಪಡೆದ ‘ಪರವೂರಿನವರು’ ತಮ್ಮ ಭಾಷೆಗೆ ಅಗೌರವ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತ ಬಂದಿದ್ದಾರೆ.
ಅದಕ್ಕಿಂತ ಕೆಲವೇ ವಾರಗಳ ಹಿಂದೆ ಕನ್ನಡದಲ್ಲಿ ಹಲವಾರು ಸೂಪರ್-ಡೂಪರ್ ಹಿಟ್ ಗಳನ್ನು ನೀಡಿದ್ದ ಜನಪ್ರಿಯ ಗಾಯಕ ಸೋನು ನಿಗಮ್ ಅವರು ಸ್ಥಳೀಯ ಭಾಷೆಯಲ್ಲಿ ಒಂದು ಹಾಡನ್ನು ಹಾಡುವಂತೆ ಕೇಳಿದ ವಿದ್ಯಾರ್ಥಿಗೆ ಛೀಮಾರಿ ಹಾಕಿದಂತೆ ಕಂಡುಬಂದಿತ್ತು. ಸೋನು ನಿಗಮ್ ಅವರು ಆ ಸಂಗೀತ ಕಾರ್ಯಕ್ರಮದಲ್ಲಿ ಒಂದರ ಹಿಂದೆ ಒಂದರಂತೆ ಹಿಂದಿ ಹಾಡುಗಳನ್ನು ಹಾಡಿದ್ದರು. ಕನ್ನಡ ಹಾಡು ಹಾಡುವಂತೆ ವಿದ್ಯಾರ್ಥಿ ಇಟ್ಟ ಬೇಡಿಕೆಗೆ ಪ್ರತಿಕ್ರಿಯೆಯಾಗಿ ಅವರು “ಪಹಲ್ಗಾಮ್ ನಲ್ಲಿ ಏನಾಯಿತು ಎಂಬುದಕ್ಕೆ ಇದೇ ಕಾರಣ” ಎಂದಿದ್ದರು.
ಈ ಸಂಗೀತ ಕಲಾವಿದ ತಮ್ಮ ಹೇಳಿಕೆಯಿಂದ ನಿಜಕ್ಕೂ ಏನನ್ನು ಹೇಳಲು ಹೊರಟಿದ್ದಾರೆ ಎಂಬುದು ಸ್ಪಷ್ಟವಾಗದೇ ಇದ್ದರೂ ಅದು ರಾಜ್ಯಾದ್ಯಂತ ಆಕ್ರೋಶ ಹುಟ್ಟುಹಾಕುವಲ್ಲಿ ಯಶಸ್ವಿಯಾಯಿತು. ಸ್ಥಳೀಯರ ಇಂತಹ ಬೇಡಿಕೆಗಳು ಪಹಲ್ಗಾಮ್ ಹತ್ಯಾಕಾಂಡದಂತಹ ಘಟನೆಗಳಿಗೆ ನಾಂದಿಯಾಗುತ್ತವೆ ಎಂದು ಆ ಹೇಳಿಕೆಯನ್ನು ವ್ಯಾಖ್ಯಾನಿಸಲಾಗಿತ್ತು. ಇದು ಸೋನು ನಿಗಮ್ ಅಭಿಮಾನಿಗಳೂ ಸೇರಿದಂತೆ ಅನೇಕರನ್ನು ಕೆರಳಿಸಿತು. ಅದಾಗುತ್ತಲೇ ಅವರನ್ನು ಮತ್ತು ಅವರ ಹಾಡುಗಳನ್ನು ರಾಜ್ಯದಿಂದ ನಿಷೇಧಿಸಲಾಗುತ್ತದೆ ಎಂಬ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಗಾಯಕರು ಅನಿವಾರ್ಯವಾಗಿ ಕ್ಷಮೆಯಾಚಿಸಬೇಕಾಯಿತು.
ತಣ್ಣಗಾಗದ ಆಕ್ರೋಶ
ಆದರೆ ಕಮಲ್ ಹಾಸನ್ ಹಾಗೆ ಮಾಡಿಲ್ಲ. ಅವರು ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ. ಇದರ ಫಲವಾಗಿ ಜೂನ್ ಐದರಂದು ರಾಜ್ಯದಲ್ಲಿ ಬಿಡುಗಡೆಯಾಗಬೇಕಿದ್ದ ‘ಥಗ್ ಲೈಫ್’ನ್ನು ತಡೆಹಿಡಿಯಲಾಗಿದೆ. “ನಾನಿದನ್ನು ಪ್ರೀತಿಯಿಂದ ಹೇಳಿದ್ದು’ ಎಂದು ಕಥೆಕಟ್ಟಲು ಕಮಲ್ ಹಾಸನ್ ಪ್ರಯತ್ನಪಟ್ಟರಾದರೂ ಜನರ ಆಕ್ರೋಶ ಮಾತ್ರ ತಣ್ಣಗಾಗಿಲ್ಲ.
ತಮಿಳು ಚಿತ್ರನಟ ಕಮಲ್ ಹಾಸನ್ ಅವರು ನೀಡಿದ ಹೇಳಿಕೆ ದಶಕಗಳಿಂದ ಕನ್ನಡಿಗರು ಮತ್ತು ತಮಿಳರ ನಡುವೆ ಅಸ್ತಿತ್ವದಲ್ಲಿದ್ದ ಆಳವಾದ ಮತ್ತು ಸಂಕೀರ್ಣವಾದ ಭಿನ್ನಾಭಿಪ್ರಾಯಗಳನ್ನು ಅನಿವಾರ್ಯವಾಗಿ ಕೆದಕಿದರು. ಈ ಎರಡು ಭಾಷೆಗಳ ಸಮುದಾಯಗಳ ನಡುವೆ ಚಾಲ್ತಿಯಲ್ಲಿರುವ ಸ್ಪರ್ಧೆ ಮತ್ತು ಪೈಪೋಟಿಯು ಒಡಹುಟ್ಟಿದವರ ವೈಷಮ್ಯದಂತೆ ಬಹಳ ಕಾಲದಿಂದಲೂ ನಡೆದಿರುವ ಸಂಗತಿ.
ಯುವ ಇತಿಹಾಸಕಾರ ಅನಿರುದ್ಧ ಕನಿಸೆಟ್ಟಿ ಅವರು ತಮ್ಮ ‘ಲಾರ್ಡ್ಸ್ ಆಫ್ ದಿ ಡೆಕ್ಕನ್’ ಕೃತಿಯಲ್ಲಿ ಒಂದೂವರೆ ಸಾವಿರ ವರ್ಷಗಳಷ್ಟು ಹಿಂದೆ ಚಾಲುಕ್ಯರು, ಚೋಳರು, ಕದಂಬರು ಮತ್ತು ರಾಷ್ಟ್ರಕೂಟರ ಅವಧಿಯಿಂದಲೂ ಕನ್ನಡ ಮತ್ತು ತಮಿಳು ಭಾಷೆಗಳ ನಡುವೆ ಅಸ್ತಿತ್ವದಲ್ಲಿದ್ದ ಆಸಕ್ತಿದಾಯಕ ಸಂಬಂಧವನ್ನು ಪ್ರಸ್ತಾಪಿಸುತ್ತಾರೆ.
ಪೈಪೋಟಿಯ ನಡುವೆಯೂ ಸೌಹಾರ್ದತೆ
1970ರಿಂದೀಚೆಗೆ ಪೈಪೋಟಿ ಎನ್ನುವುದು ಅನೇಕ ಹೊಸ ಅವತಾರಗಳಲ್ಲಿ ಪ್ರತ್ಯಕ್ಷವಾಗಿದೆ. ತಮಿಳಿನಲ್ಲಿ ಖ್ಯಾತ ನಟ, ರಾಜಕಾರಣಿ ಎಂ.ಜಿ,ರಾಮಚಂದ್ರನ್ ಅಥವಾ ಎಂಜಿಆರ್ ಅವರಿಗೆ ಸರಿಸಾಟಿಯಾಗಿ ಕನ್ನಡದಲ್ಲಿ ಡಾ.ರಾಜ್ ಕುಮಾರ್ ಅವರು ಇದ್ದರು. ಆದರೆ ರಾಜ್ ಕುಮಾರ್ ಅವರೇನು ರಾಜಕೀಯ ಪ್ರವೇಶಿಸಲಿಲ್ಲ. ಬದಲಾಗಿ ಭಾಷೆಗೇ ಪ್ರಾಮುಖ್ಯತೆ ನೀಡುವ ದೃಷ್ಟಿಯಿಂದ ಸಾರ್ವಜನಿಕವಾಗಿ ಸಕ್ರಿಯವಾಗಿದ್ದರು. ಆದರೂ ವ್ಯಕ್ತಿಗತವಾಗಿ ರಾಜ್ ಕುಮಾರ್, ಎಂಜಿಆರ್ ಮತ್ತು ಈಗ ರಾಜ್ ಕುಮಾರ್ ಅವರ ಪುತ್ರ ಶಿವರಾಜ್ ಕುಮಾರ್ ಹಾಗೂ ಕಮಲ್ ಹಾಸನ್ ಅವರು ಭಾಷಿಕ ಗುಂಪುಗಳಿಂದ ಸಾರ್ವಜನಿಕವಾಗಿ ಸೃಜಿಸಲ್ಪಟ್ಟ ಪೈಪೋಟಿಯ ಹೊರತಾಗಿಯೂ ಉತ್ತಮ ಬಾಂಧವ್ಯವನ್ನು ಕಾಯ್ದುಕೊಂಡುಬಂದವರು.
ಮೈಸೂರಿಗೆ ಸೇರಿದ ಜೆ.ಜಯಲಲಿತಾ ಮತ್ತು ಸ್ಥಳೀಯವಾಗಿ ನೆಲೆಸಿರುವ ರಜನಿಕಾಂತ್ (ಮೂಲತಃ ಮರಾಠಿ ಮಾತನಾಡುವವರು)-ಇಬ್ಬರು ಕನ್ನಡಿಗರು ತಮಿಳುನಾಡಿನಲ್ಲಿ ಬಹಳ ದೊಡ್ಡ ಹೆಸರು ಮಾಡಿದವರು. ಕನ್ನಡ ಸಾಹಿತ್ಯಕ್ಷೇತ್ರದ ದಿಗ್ಗಜರಾದ ನಾಟಕಕಾರ ಟಿ.ಪಿ.ಕೈಲಾಸಂ ಅವರು ತಮಿಳು ಕುಟುಂಬದಲ್ಲಿ ಜನಿಸಿದವರು. ಕನ್ನಡದ ಇನ್ನೊಬ್ಬ ಮೇರು ಸಾಹಿತಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರೂ ಕೂಡ. ಈ ಪಟ್ಟಿ ಎಷ್ಟು ದೊಡ್ಡದಿದೆ ಎಂದರೆ ಕಲಹ ನಿರತರಾಗಿರುವ ನೆರೆಹೊರೆಯವರಿಂದ ನಿರೀಕ್ಷಿಸುವುದಕ್ಕಿಂತಲೂ ದೊಡ್ಡದು.
ಮುಕ್ತ ಮನಸ್ಸಿನ ಸಂಸ್ಕೃತಿ
ಕಾವೇರಿ ನದಿ ನೀರು ಹಂಚಿಕೆ ವಿವಾದದ ಸಂದರ್ಭಗಳಲ್ಲಿ ಎರಡೂ ರಾಜ್ಯಗಳ ನಡುವಿನ ಸಂಬಂಧ ಸಂಘರ್ಷದ ಸ್ವರೂಪವನ್ನೂ ಪಡೆದಿತ್ತು. ಇದರಿಂದ 1991ರಲ್ಲಿ ಎಸ್.ಬಂಗಾರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ನದಿ ನೀರು ನ್ಯಾಯಾಧಿಕರಣದ ಮಧ್ಯಂತರ ಆದೇಶದ ವಿರುದ್ಧ ಪ್ರತಿಭಟನೆ ನಡೆದಾಗ ಬೆಂಗಳೂರಿನಲ್ಲಿ ಚಳವಳಿಕಾರರು ತಮಿಳರನ್ನು ತಮ್ಮ ಗುರಿಯನ್ನಾಗಿ ಮಾಡಿಕೊಂಡಿದ್ದು ದುರಾದೃಷ್ಟದ ಸಂಗತಿ.
ಎಚ್.ಎ.ಎ̧ಲ್ ಐಟಿಐ, ಎಚ್ಎಂಟಿ ಮತ್ತು ಬಿಇಎಂಎಲ್ ನಂತಹ ಸಾರ್ವಜನಿಕ ವಲಯದ ಕೈಗಾರಿಕೆಗಳು, ಭಾರತೀಯ ವಿಜ್ಞಾನ ಸಂಸ್ಥೆಯಂತಹ ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿರುವ ಬೆಂಗಳೂರು ನಗರವು 1956ರಲ್ಲಿ ಮೈಸೂರು ರಾಜ್ಯ ರೂಪುಗೊಂಡ ಕಾಲದಿಂದಲೂ ವಿಶ್ವನಾಗರಿಕ ಮಹಾನಗರವಾಗಿದೆ. ವಾಸ್ತವವಾಗಿ ಇದೇ ಉದಾರವಾಗಿ ಮನೋಭಾವವು ಬೆಂಗಳೂರ್ ಅನ್ನು ಬೆಂಗಳೂರು ಆಗಿ ರೂಪಿಸಿತು. ವರ್ಷವಿಡೀ ಇಲ್ಲಿರುವ ಉತ್ತಮ ಹವಾಮಾನದ ಜೊತೆಗೆ ಮುಕ್ತ ಮನಸ್ಸಿನ ಸಂಸ್ಕೃತಿಯು ಈ ನಗರವನ್ನು ದೇಶದ ಅತ್ಯಂತ ಬೇಡಿಕೆಯ ನಗರವನ್ನಾಗಿ ಮಾಡಿದೆ.
ವಲಸಿಗರ ಪ್ರವಾಹ; ಉಡಾಫೆ ಬೆಳೆಯಿತು
ಕಳೆದ 25 ವರ್ಷಗಳ ಅವಧಿಯಲ್ಲಿ ಬೆಂಗಳೂರು ಭಾರತದ ಅತ್ಯಂತ ಪ್ರಮುಖ ಐಟಿ ಕೇಂದ್ರವಾಗಿ ಹೊರಹೊಮ್ಮಿರುವುದರಿಂದ ಕನ್ನಡ-ತಮಿಳು ವಿಷಯಗಳು ತೆರೆಮರೆಗೆ ಸರಿದಿದೆ. ಕಾರಣವಿಷ್ಟೆ, ದೇಶದ ಉತ್ತರ ಭಾಗಗಳಿಂದ ಹಿಂದಿ ಮಾತನಾಡುವ ವಲಸಿಗರು ಬೃಹತ್ ಸಂಖ್ಯೆಯಲ್ಲಿ ದಾಂಗುಡಿ ಇಡುತ್ತಿದ್ದಾರೆ. ಸ್ಥಳೀಯರು ಹೊಸ ಜನಪ್ರವಾಹವನ್ನು ಸ್ವಾಗತಿಸಿತು. ಆದರೆ ಅನೇಕ ವಲಸಿಗರು ನಗರದಲ್ಲಿ ಅಸ್ತಿತ್ವದಲ್ಲಿದ್ದ ವಿಶ್ವಭ್ರಾತೃತ್ವದ ಮಟ್ಟವನ್ನು ಕಂಡು ಚಕಿತರಾದರು. ಇದನ್ನು ಕಂಡ ಹೊಸಬರು, “ನಿಮಗೆ ಕನ್ನಡವೂ ತಿಳಿದಿರಬೇಕಾಗಿಲ್ಲ. ಇಲ್ಲಿ ಎಲ್ಲ ಭಾಷೆಯ ಜನರಿದ್ದಾರೆ” ಎಂದು ಉದ್ಗಾರ ತೆಗೆದಿದ್ದಾರೆ.
ವಿಪರ್ಯಾಸದ ಸಂಗತಿ ಎಂದರೆ ಕಾಲಕ್ರಮೇಣ ಕನ್ನಡವನ್ನೇನು ಕಲಿಯುವ ಅಗತ್ಯವಿಲ್ಲ ಎಂಬ ಧೋರಣೆ ದಿನನಿತ್ಯದ ಜೀವನದಲ್ಲಿ ಭಾಷೆಯನ್ನು ಕಡೆಗಣಿಸುವ ಪ್ರವೃತ್ತಿ ಮುಂದುವರಿಯಿತು. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗುತ್ತ ಹೋಯಿತು.
ಬೆಂಗಳೂರಿನಲ್ಲಿ ಬಹುತೇಕ ಪ್ರತಿಯೊಬ್ಬರೂ ಬಹುಭಾಷಿಗರು. ಕನಿಷ್ಠ ಮೂರು ಅಥವಾ ನಾಲ್ಕು ಭಾಷೆಗಳನ್ನು ಮಾತನಾಡುತ್ತಾರೆ. ಸ್ಥಳೀಯ ಎಫ್ಎಂ ಕೇಂದ್ರಗಳು ದಿನದ 24 ಗಂಟೆ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತವೆ. ಕನ್ನಡವೇ ಪ್ರಧಾನವಾಗಿರುವ ವಾಹಿನಿಗಳ ಜೊತೆ ಸ್ಪರ್ಧಿಸುತ್ತವೆ. ಹಿಂದಿ, ತಮಿಳು ಮತ್ತು ಇತರ ಕನ್ನಡೇತರ ಚಲನಚಿತ್ರಗಳು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತಿಂಗಳುಗಟ್ಟಳೆ ಪ್ರದರ್ಶನಗೊಳ್ಳುತ್ತವೆ. ಇವೆಲ್ಲ ಯಾಕೆ ಸಾಧ್ಯವಾಗಿದೆ ಎಂದರೆ ಇಲ್ಲಿ ಯಾವುದೇ ಭಾಷೆಯ ಬಗ್ಗೆ ಅಂತರ್ಗತವಾಗಿ ದ್ವೇಷವೆಂಬುದಿಲ್ಲ.
ಕನಿಷ್ಠ ಕನ್ನಡ ಕಲಿಕೆಗೂ ನಿರಾಕರಣೆ
ಇತರ ರಾಜ್ಯಗಳಿಂದ ಬಂದ ಹೊಸಬರಲ್ಲಿ ಇರುವ ಕನ್ನಡ ಭಾಷೆಯ ಅಜ್ಞಾನದ ಬಗೆಗೇನೂ ತಕರಾರಿಲ್ಲ. ಅದು ಸಹಜ ಮತ್ತು ನಿರೀಕ್ಷಿತ. ಅದರ ಬಗ್ಗೆ ವಿವಾದವೂ ಇಲ್ಲ. ಆದರೆ ವಲಸಿಗರಲ್ಲಿ ಕೆಲವರು ರಾಜ್ಯದಲ್ಲಿ ಕೆಲವು ವರ್ಷಗಳಿಂದ ವಾಸವಿದ್ದರೂ ಕನ್ನಡವನ್ನು ಕಲಿಯಲು, ಅದರಲ್ಲೂ ಮುಖ್ಯವಾಗಿ ವ್ಯವಹಾರಕ್ಕೆ ಬೇಕಾದಷ್ಟು ಕನಿಷ್ಠ ಮಟ್ಟದ ಕಲಿಕೆಗೆ ಬಹಿರಂಗವಾಗಿ ನಿರಾಕರಿಸುತ್ತಿರುವುದೇ ಸಮಸ್ಯೆಗೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಸುಮಾರು 1.4 ಕೋಟಿಯಷ್ಟು ಜನಸಂಖ್ಯೆಯಿದ್ದು ಅವರಲ್ಲಿ ಬಹುತೇಕರು ಕನ್ನಡಿಗೇತರರು ಎನ್ನಲಾಗುತ್ತಿದೆ. ಇದರಿಂದಾಗಿ ಸ್ಥಳೀಯರಲ್ಲಿ ಎಂತಹ ಭಾವನೆ ಬಂದಿದೆ ಎಂದರೆ ನಮ್ಮದೇ ರಾಜ್ಯದಲ್ಲಿ ನಾವೇ ಪರಕೀಯರು ಎನ್ನುವಂತಾಗಿದೆ. ಇದು ರಸ್ತೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಳೀಯರು ಮತ್ತು ವಲಸಿಗರ ನಡುವೆ ಸಣ್ಣಪುಟ್ಟ ಜಗಳಗಳು ಉಂಟಾದಾಗ ಎಲ್ಲವೂ ಕೈಮೀರಿ ಹೋದಂತೆ ಅನ್ನಿಸುತ್ತಿದೆ.
ಸಾಮಾಜಿಕ ಮಾಧ್ಯಮದ ಇಂದಿನ ಯುಗದಲ್ಲಿ ಪ್ರತಿಯೊಂದು ಸಣ್ಣ ವಿವಾದವೂ ಕೂಡ ಸಾರ್ವಜನಿಕರ ದೃಷ್ಟಿಯಲ್ಲಿ ಭೂತಾಕಾರವಾಗಿ ಕಾಣುತ್ತದೆ. ಸಂವಹನದಲ್ಲಿನ ಅಡೆ-ತಡೆಯನ್ನು ಇನ್ನಷ್ಟು ದೊಡ್ಡದಾಗಿಸುತ್ತದೆ. ಇಷ್ಟು ಸಾಲದೆನ್ನುವಂತೆ ಗಾಯಕ್ಕೆ ಉಪ್ಪು ಸವರುವಂತೆ ಕಮಲ್ ಹಾಸನ್ ಮತ್ತು ಸೋನು ನಿಗಮ್ ಅವರು ಕಗ್ಗಂಟಾದ ಹೇಳಿಕೆಗಳನ್ನು ನೀಡುತ್ತಾರೆ. ಕನ್ನಡಿಗರಿಗೆ ಇದು ಅಗೌರವವಾಗಿ ಕಂಡರೆ ಅಚ್ಚರಿಯಿಲ್ಲ.
ಒಬ್ಬ ನಟನಿಗೆ ಅಸಂಗತ ವಿಚಾರ
ಇಂದಿನ ಜಗತ್ತಿನಲ್ಲಿ ಯಾವ ಭಾಷೆ ಮೊದಲು ಹುಟ್ಟಿತು? ಕನ್ನಡವೋ ಅಥವಾ ತಮಿಳೋ ಎಂಬುದು ಅನಗತ್ಯವಾದ ವಿಚಾರ. ಒಬ್ಬ ವೃತ್ತಿಪರ ನಟನಾದವನು ಒಂದು ಸಾರ್ವಜನಿಕ ವೇದಿಕೆಯಲ್ಲಿ ಇಂತಹುದನ್ನು ಚರ್ಚಿಸಲು ಸೂಕ್ತನಲ್ಲ. ಕಮಲ್ ಹಾಸನ್ ಅವರೇ ನಂತರ ಒಪ್ಪಿಕೊಂಡ ಪ್ರಕಾರ ಯಾವುದು ಮೊದಲು ‘ಹುಟ್ಟಿತು’ ಎನ್ನುವುದು ಇತಿಹಾಸಕಾರರಿಗೆ ಬಿಟ್ಟ ವಿಚಾರ.
ಆದರೆ, ಕನ್ನಡಿಗರಲ್ಲೂ ಅಪಾರವಾದ ಅಭಿಮಾನಿಗಳನ್ನು ಹೊಂದಿರುವ ಒಬ್ಬ ಅಗ್ರ ನಟ ನಾಲಿಗೆಯನ್ನು ಹರಿಬಿಟ್ಟು ಅದನ್ನೀಗ ಸರಿಪಡಿಸಲಾಗದೇ ಒದ್ದಾಟ ನಡೆಸಿದ್ದಾರೆ. ಹಾಗಂತ “ಥಗ್ ಲೈಫ್’ ಭಾಷೆಯ ಬಗ್ಗೆ ಇರುವ ಚಿತ್ರವೇ? ಅದೂ ಅಲ್ಲ. ತಮ್ಮ ಮುಂಬರುವ ಚಲನಚಿತ್ರಕ್ಕೆ ಸಂಬಂಧವೇ ಇಲ್ಲದ ಸಂಗತಿಯನ್ನು ಯಾಕಾದರೂ ತಂದರು ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ.
ಚಲನಚಿತ್ರ ತಂತ್ರಜ್ಞರು ಹೇಳುವಂತೆ ಒಂದು ಚಿತ್ರ ಬಿಡುಗಡೆಗೂ ಮುನ್ನ ಯಾವುದೇ ವಿವಾದವನ್ನು ಹರಿಯಬಿಟ್ಟರೆ ಅದರ ಬಾಕ್ಸ್-ಆಫೀಸ್ ಯಶಸ್ಸನ್ನು ಖಾತರಿಪಡಿಸುತ್ತದೆ. ಇದು ಹೌದೆಂದಾದರೆ ಕಮಲ್ ಹಾಸನ್ ಸಾಕಷ್ಟು ಪ್ರಚಾರವನ್ನು ಪಡೆದಿದ್ದಾಗಿದೆ; ಅದು ಚಿತ್ರ ನಿರ್ಮಾಪಕರಿಗೆ ರುಚಿಸದೇ ಹೋದರೂ ಕೂಡ.
ಇನ್ನು ಸೋನು ನಿಗಮ್ ಅವರ ವಿಚಾರಕ್ಕೆ ಬಂದರೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ತಮ್ಮ ಕಾರ್ಯಕ್ರಮದಲ್ಲಿ ಅವರು ಕನ್ನಡ ಚಿತ್ರಗೀತೆಯನ್ನು ಹಾಡದೇ ಇರುವುದಕ್ಕೆ ಯಾವುದೇ ತರ್ಕವಿಲ್ಲ. ವಿಶೇಷವಾಗಿ ಕನ್ನಡ ಚಿತ್ರಗಳಲ್ಲಿ ತಮ್ಮ ವಿಶಿಷ್ಟ ಗಾಯನ ಶೈಲಿಯಿಂದ ಜೀವ ತುಂಬಿದ ಹೆಗ್ಗಳಿಕೆಗೆ ಭಾಜನರಾದವರು. ಆದರ್ಶದ ಮಾತಾಗಿ ಹೇಳಬೇಕೆಂದರೆ ಸೋನು ನಿಗಮ್ ಅವರು ಯಾವುದೇ ತಕರಾರೂ ಇಲ್ಲದೆ ಪ್ರೇಕ್ಷಕರ ಮನತಣಿಸಬೇಕಿತ್ತು. ಆದರೆ ಏನು ಮಾಡುವುದು ನಾವು ಆದರ್ಶದ ಜಗತ್ತಿನಲ್ಲಿ ಬದುಕುತ್ತಿಲ್ಲವಲ್ಲ.