The Federal

ಕೊನೆಗೊಳ್ಳದ ಯುದ್ಧದ ಸಂಕಟಗಳು: ಇರಾನ್ ವ್ಯವಸ್ಥೆಕುಸಿದರೆ ಜಗತ್ತಿಗೆ ಎದುರಾಗಲಿದೆಯೇ ಭೀಕರ ಸಂಕಷ್ಟ?


ಕೊನೆಗೊಳ್ಳದ ಯುದ್ಧದ ಸಂಕಟಗಳು: ಇರಾನ್ ವ್ಯವಸ್ಥೆಕುಸಿದರೆ ಜಗತ್ತಿಗೆ ಎದುರಾಗಲಿದೆಯೇ ಭೀಕರ ಸಂಕಷ್ಟ?
x
ಇರಾನ್‌ನ ಸರ್ವೋಚ್ಛ ಭದ್ರತಾ ಮಂಡಳಿಯ ಕಾರ್ಯದರ್ಶಿಯಾಗಿರುವ ಅಲಿ ಲಾರಿಜಾನಿ ಅವರನ್ನು ಹತ್ಯೆ ಮಾಡುವ ಮೂಲಕ ಅಮೆರಿಕ-ಇಸ್ರೇಲ್ ಪಡೆಗಳು ಇರಾನ್ಗೆ ಬಹಳ ದೊಡ್ಡ ಆಘಾತ ಉಂಟುಮಾಡಿದೆ.
Click the Play button to hear this message in audio format

ಇರಾನ್‌ ನಾಯಕರನ್ನು ಹತ್ಯೆ ಮಾಡುವ ಮೂಲಕ ಅಲ್ಲಿನ ವ್ಯವಸ್ಥೆಯನ್ನು ನಾಯಕರಹಿತವಾಗಿಸುವುದು ಇಸ್ರೇಲ್-ಅಮೆರಿಕದ ಯುದ್ಧ-ತಂತ್ರ. ಆದರೆ ಇರಾನ್ ಎದುರೇಟು ನೀಡುತ್ತಿರುವುದು ಅವರನ್ನು ಕಂಗೆಡಿಸಿದೆ.

ಇಸ್ರೇಲ್ ಇರಾನಿನ ಉನ್ನತ ಮಟ್ಟದ ನಾಯಕರನ್ನು ಮುಗಿಸುವ ಕೆಲಸವನ್ನು ಮುಂದುವರಿಸಿದೆ. ಮಾರ್ಚ್ 17ರಂದು ನಡೆದ ನಿಖರವಾದ ವೈಮಾನಿಕ ದಾಳಿಯಲ್ಲಿ ಅಲಿ ಲಾರಿಜಾರಿ ಮತ್ತು ಗೊಲಂರೆಜಾ ಸೊಲೈಮಾನಿ ಅವರನ್ನು ಹತ್ಯೆ ಮಾಡಲಾಗಿದೆ. ಸೊಲೈಮಾನಿ ಅವರು ಇರಾನಿನ ಆಂತರಿಕ ಭದ್ರತಾ ವ್ಯವಸ್ಥೆಯ ಭಾಗವೇ ಆಗಿರುವ ʼಬಸೀಜ್ʼ ಪಡೆಯ ಮುಖ್ಯಸ್ಥರು. ದೇಶೀಯವಾಗಿ ಕಾಣಿಸಿಕೊಳ್ಳುವ ಬಂಡಾಯವನ್ನು ಹತ್ತಿಕ್ಕುವುದು ಮತ್ತು ಪ್ರತಿಭಟನಾಕಾರರ ವಿರುದ್ಧ ಹಿಂಸಾಚಾರವನ್ನು ಬಳಸುವುದು ಈ ಪಡೆಯ ಉದ್ದೇಶ. ಹೀಗಾಗಿ ಇರಾನಿನ ಭದ್ರತಾ ವ್ಯವಸ್ಥೆಯಲ್ಲಿ ಸೊಲೈಮಾನಿ ಉನ್ನತ ಸ್ಥಾನವನ್ನು ಹೊಂದಿದ್ದರು.

ಲಾರಿಜಾನಿ ಹತ್ಯೆ ತಂದ ಆಘಾತ

ಸೊಲೈಮಾನಿ ಅವರಿಗಿಂತಲೂ ಲಾರಿಜಾನಿ ಅವರ ಸಾವು ಇರಾನ್‌ಗೆ ಆದ ದೊಡ್ಡ ಪ್ರಹಾರವಾಗಿದೆ. ಲಾರಿಜಾನಿ ಅವರು ಇಸ್ಲಾಮಿಕ್ ಗಣರಾಜ್ಯದ ಸುದೀರ್ಘ ಸೇವೆಯಲ್ಲಿ ಅನೇಕ ಹುದ್ದೆಗಳನ್ನು ಅತ್ಯಂತ ದಕ್ಷತೆಯಿಂದ ನಿಭಾಯಿಸಿದ್ದರು. ಭದ್ರತೆ ಮತ್ತು ರಕ್ಷಣೆಯಿಂದ ಹಿಡಿದು ಮಾಧ್ಯಮ ನಿರ್ವಹಣೆಯ ತನಕ ಅವರ ಅನುಭವ ವಿಸ್ತರಿಸಿತ್ತು. ಪ್ರಬಲ ಕಾರ್ಯಕ್ಷೇತ್ರವಾಗಿದ್ದ ಭದ್ರತಾ ವಲಯದಲ್ಲಿ ಅವರು ಅಪಾರ ಪ್ರಭಾವವನ್ನು ಹೊಂದಿದ್ದರು.

ಇರಾನಿನ ಭದ್ರತೆಯ ವಿಚಾರದಲ್ಲಿ ಸುಪ್ರೀಂ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್‌ಗೆ ಉನ್ನತ ಸ್ಥಾನವಿದೆ. ಆ ಮಂಡಳಿಯಲ್ಲಿ ಆಗಸ್ಟ್ ತಿಂಗಳಿನಿಂದ ಲಾರಿಜಾನಿ ಕಾರ್ಯದರ್ಶಿಯಾಗಿ ಕಾರ್ಯಭಾರ ವಹಿಸಿಕೊಂಡಿದ್ದರು. ಈ ಮೊದಲು 2005-07ರ ಅವಧಿಯಲ್ಲಿಯೂ ಅವರು ಈ ಹುದ್ದೆಯ ಜವಾಬ್ದಾರಿ ಹೊತ್ತಿದ್ದರು. ತಮ್ಮ ಇತ್ತೀಚಿನ ಅಧಿಕಾರದ ಅವಧಿಯಲ್ಲಿ ಅವರು ಇರಾನ್ನ ಪರಮಾಣು ಕಾರ್ಯಕ್ರಮವೂ ಸೇರಿದಂತೆ ದೇಶದ ರಾಜಕೀಯ ಮತ್ತು ಭದ್ರತಾ ವಿಚಾರಗಳಲ್ಲಿ ಅಪಾರವಾದ ಪ್ರಭಾವ ಹೊಂದಿದ್ದರು.

ಫೆ.28ರಂದು ಅಮೆರಿಕ ನಡೆಸಿದ ದಾಳಿಯಲ್ಲಿ ಇರಾನಿನ ಸುಪ್ರೀಂ ನಾಯಕ ಅಯತೊಲ್ಲ ಖಮೇನಿ ಅವರನ್ನು ಹತ್ಯೆ ಮಾಡಿದ ಬಳಿಕ ದೇಶದ ಭದ್ರತೆ ವಿಚಾರದಲ್ಲಿ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದವರು ಲಾರಿಜಾನಿ. ಖಮೇನಿ ಅನುಪಸ್ಥಿತಿಯಲ್ಲಿ ಯಾರಾದರೂ ನಿರ್ಣಾಯಕ ನಿರ್ಧಾರ ಕೈಗೊಳ್ಳಲು ಸಾಧ್ಯವಿದ್ದರೆ ಅದು ಲಾರಿಜಾನಿ ಅವರಿಗೆ ಎಂದು ನಂಬಲಾಗಿತ್ತು. ಖಮೇನಿ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದ ಅವರು ಖಮೇನಿ ಉತ್ತರಾಧಿಕಾರಿಯಾಗಿ ಅವರ ಪುತ್ರ ಮೊಜ್ತಾಬ್ ಖಮೇನಿ ಅವರನ್ನು ಆಯ್ಕೆ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.

ಇವೆಲ್ಲ ಮಾಹಿತಿಗಳು ಲಾರಿಜಾನಿ ಹತ್ಯೆಯ ನಂತರವೇ ಬಹಿರಂಗವಾಗುತ್ತಿವೆ. ದೇಶದ ಭದ್ರತೆ ವಿಚಾರದಲ್ಲಿ ಮತ್ತು ಇಂದಿನ ನಾಯಕತ್ವದ ವಿಚಾರದಲ್ಲಿ ಅವರೆಂತಹ ನಿರ್ಣಾಯಕ ಪಾತ್ರ ವಹಿಸುತ್ತಿದ್ದರು ಎಂಬುದು ಇದರಿಂದ ವೇದ್ಯವಾಗುತ್ತದೆ. ಇರಾನಿನ ಉನ್ನತ ಮಟ್ಟದ ನಾಯಕರನ್ನು ಒಬ್ಬೊಬ್ಬರಾಗಿ ಮುಗಿಸಬೇಕು ಎಂಬುದು ಈಗ ನಡೆಯುತ್ತಿರುವ ಮಿಲಿಟರಿ ಸಂಘರ್ಷದ ಮುಖ್ಯ ಉದ್ದೇಶವೂ ಆಗಿದೆ. ಲಾರಿಜಾನಿ ಹತ್ಯೆ ಅದರ ಒಂದು ಭಾಗವೇ ಆಗಿದೆ.

ಈ ಹೋರಾಟವನ್ನು ಕೈಬಿಡುವ ಬಗ್ಗೆ ಯೋಚಿಸುವ ರೀತಿಯಲ್ಲಿ ಇರಾನ್ ಆಡಳಿತ ವ್ಯವಸ್ಥೆಯ ಮೇಲೆ ಪ್ರಹಾರ ಮಾಡಬೇಕು ಎನ್ನುವುದು ಈ ಯುದ್ಧದ ಕಾರ್ಯತಂತ್ರವಾಗಿದೆ. ಆದರೆ ಸದ್ಯಕ್ಕೆ ಇರಾನ್ ಶರಣಾಗುವ ಯಾವ ಸೂಚನೆಗಳೂ ಕಾಣಿಸುತ್ತಿಲ್ಲ. ಎಂತಹ ಉನ್ನತ ನಾಯಕರನ್ನು ಹತ್ಯೆ ಮಾಡಿದರೂ ಕೂಡ ಅವರ ಸ್ಥಾನಗಳನ್ನು ಇರಾನ್ ವ್ಯವಸ್ಥೆ ಅತ್ಯಂತ ವೇಗವಾಗಿ ಭರ್ತಿ ಮಾಡುತ್ತಿರುವುದು ಸೋಜಿಗದ ಸಂಗತಿಯಾಗಿದೆ.

ಈ ಹತ್ಯೆಗಳ ಹಿಂದೆ ಇನ್ನೂ ಒಂದು ಕಾರಣವಿದೆ; ಅದು ಇರಾನ್ನಲ್ಲಿ ಈಗಿನ ಆಡಳಿತ ವ್ಯವಸ್ಥೆಯನ್ನು ವಿರೋಧಿಸುವವರಲ್ಲಿ ಭರವಸೆಯನ್ನು ಮೂಡಿಸುವುದು. ಆ ಮೂಲಕ ಅವರು ಪ್ರತಿಭಟನೆಗೆ ಇಳಿದು ಈಗಿರುವ ವ್ಯವಸ್ಥೆ ಮತ್ತು ಯುದ್ಧಕ್ಕೆ ಅಂತ್ಯ ಹಾಡುವಂತೆ ಒತ್ತಾಯಿಸಬಹುದು ಎಂಬುದು ತಂತ್ರಗಾರಿಕೆಯಾಗಿದೆ.

ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧ

ಔಪಚಾರಿಕವಾಗಿ ಯುದ್ಧವನ್ನು ಘೋಷಿಸದೇ ಒಂದು ದೇಶದ ಉನ್ನತ ನಾಯಕರನ್ನು ಹತ್ಯೆ ಮಾಡುವುದು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ. ಈ ಅಂಶವು ಮುಖ್ಯವಾಗಿದ್ದರೂ ಕೂಡ ಪರಸ್ಪರ ಸಂಘರ್ಷದಲ್ಲಿ ತೊಡಗಿರುವ ಅನೇಕ ರಾಷ್ಟ್ರಗಳು ಎದುರಾಳಿ ದೇಶದ ನಾಯಕರನ್ನೇ ಗುರಿಯಾಗಿ ಮಾಡುವುದಿಲ್ಲ. ಯಾಕೆಂದರೆ ಇದು ಸಂಬಂಧಪಟ್ಟ ದೇಶದ ಸ್ಥಿರತೆಯ ಮೇಲೇ ಗಂಭೀರ ಪರಿಣಾಮ ಬೀರಬಹುದು ಎಂಬ ಆತಂಕವಿರುತ್ತದೆ.

ಇಂತಹ ಅಸ್ಥಿರತೆಯು ಅನಿರೀಕ್ಷಿತ ಮತ್ತು ಅನಪೇಕ್ಷಿತ ಪರಿಣಾಮಗಳನ್ನು ಬೀರಬಹುದು. ಯುದ್ಧಭೂಮಿಯಲ್ಲಿ ಒಬ್ಬ ನಾಯಕನನ್ನು ಕೊಂದು, ಆ ಮೂಲಕ ವಿಜಯ ಸಾಧಿಸಿ ದೇಶವನ್ನು ವಶಪಡಿಸಿಕೊಳ್ಳುವ ದಿನಗಳು ಹೆಚ್ಚಾಗಿ ಇತಿಹಾಸದ ಪುಟಗಳಲ್ಲಿ ಹೂತುಹೋಗಿವೆ. ಆದ್ದರಿಂದ, ಪ್ರಮುಖ ನಾಯಕರನ್ನು ಗುರಿಯಾಗಿಸಿ ಹತ್ಯೆ ಮಾಡುವ ಅಮೆರಿಕ ಮತ್ತು ಇಸ್ರೇಲ್ನ ಈ ಕಾರ್ಯತಂತ್ರದ ವಿವೇಕವು ಪ್ರಶ್ನಾರ್ಹವಾಗಿದೆ.

ಲಾರಿಜಾನಿ ಹತ್ಯೆಯಾದ ತಕ್ಷಣವೇ, ಇರಾನಿನ ಪಡೆಗಳು ಇಸ್ರೇಲ್ ಮತ್ತು ಗಲ್ಫ್ ದೇಶಗಳ ಗುರಿಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಆರಂಭಿಸಿದವು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಲಾರಿಜಾನಿ ಹತ್ಯೆಯಾಯಿತು ಎಂದು ಎದೆಯುಬ್ಬಿಸಬಹುದು, ಆದರೆ ಹೊರ್ಮುಜ್ ಜಲಸಂಧಿಗೆ ನೌಕಾಪಡೆಗಳನ್ನು ಕಳುಹಿಸಲು ಅಮೆರಿಕದ ಮಿತ್ರರಾಷ್ಟ್ರಗಳು ನಿರಾಕರಿಸುತ್ತಿರುವುದು ಟ್ರಂಪ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ದಿಕ್ಕು ತಪ್ಪಿದ ಟ್ರಂಪ್‌: ಕೆಂಟ್ ಹೇಳಿದ ಕತೆ

ಅವರು ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ನ್ಯಾಟೋ ಮೈತ್ರಿಕೂಟದ ಅಗತ್ಯವನ್ನೂ ಪ್ರಶ್ನಿಸಿದ್ದಾರೆ. ಅಮೆರಿಕದ ಹಿರಿಯ ಗುಪ್ತಚರ ಅಧಿಕಾರಿ ಜೋ ಕೆಂಟ್ ಅವರ ರಾಜೀನಾಮೆಯಿಂದ ಟ್ರಂಪ್ ಅವರಿಗೆ ಮುಜುಗರ ಉಂಟಾಗಿದ್ದರೂ ಸಹ, ಅವರು ಅದನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸದೆ ತಳ್ಳಿಹಾಕಿದ್ದಾರೆ.

ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ನಿರ್ದೇಶಕರಂತಹ ನಿರ್ಣಾಯಕ ಹುದ್ದೆಯಲ್ಲಿದ್ದ ಕೆಂಟ್, ಟ್ರಂಪ್ ಅವರಿಗೆ ಬರೆದ ಪತ್ರವನ್ನು 'X' (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ಮಾತಿನ ಧಾಟಿ ಹೀಗಿತ್ತು: "ಇರಾನ್ ವಿರುದ್ಧ ನಡೆಯುತ್ತಿರುವ ಈ ಯುದ್ಧವನ್ನು ಬೆಂಬಲಿಸಲು ನನ್ನ ಮನಸ್ಸಾಕ್ಷಿ ಒಪ್ಪುತ್ತಿಲ್ಲ. ಇರಾನ್ ನಮ್ಮ ದೇಶಕ್ಕೆ ಯಾವುದೇ ರೀತಿಯ ತಕ್ಷಣದ ಅಪಾಯವನ್ನು ಒಡ್ಡುತ್ತಿರಲಿಲ್ಲ. ಇಸ್ರೇಲ್ ಮತ್ತು ಅಮೆರಿಕದಲ್ಲಿರುವ ಅದರ ಪ್ರಬಲ ಲಾಬಿಗಳ ಒತ್ತಡದಿಂದಾಗಿಯೇ ನಾವು ಈ ಯುದ್ಧವನ್ನು ಪ್ರಾರಂಭಿಸಿದ್ದೇವೆ ಎಂಬುದು ಸ್ಪಷ್ಟವಾಗಿದೆ."

ಇಷ್ಟು ಮಾತ್ರವಲ್ಲದೆ ಟ್ರಂಪ್ ಅವರನ್ನು ಹೇಗೆ ದಾರಿ ತಪ್ಪಿಸಿ ಯುದ್ಧದ ಖೆಡ್ಡಾಕ್ಕೆ ತಳ್ಳಲಾಯಿತು ಎಂಬುದನ್ನು ಉಲ್ಲೇಖಿಸಿದ್ದಾರೆ. "ಈ ಸರ್ಕಾರದ ಆರಂಭದ ದಿನಗಳಲ್ಲೇ, ಇಸ್ರೇಲ್ನ ಉನ್ನತ ಅಧಿಕಾರಿಗಳು ಮತ್ತು ಅಮೆರಿಕದ ಮಾಧ್ಯಮಗಳ ಪ್ರಭಾವಿ ವ್ಯಕ್ತಿಗಳು ತಪ್ಪು ಮಾಹಿತಿಯ ಅಭಿಯಾನವನ್ನೇ ನಡೆಸಿದರು. ಇದು ನಿಮ್ಮ 'ಅಮೆರಿಕಾ ಫಸ್ಟ್' ನೀತಿಯನ್ನೇ ಸಂಪೂರ್ಣವಾಗಿ ಬುಡಮೇಲು ಮಾಡಿತು ಮತ್ತು ಇರಾನ್ ಜೊತೆ ಯುದ್ಧ ಮಾಡಲು ಪ್ರೋತ್ಸಾಹಿಸುವಂತಹ ಯುದ್ಧಕೋರ ಮನಸ್ಥಿತಿಯನ್ನು ಬಿತ್ತಿತು. ಇರಾನ್ ಅಮೆರಿಕಕ್ಕೆ ತಕ್ಷಣದ ಅಪಾಯಕಾರಿಯಾಗಿದೆ ಮತ್ತು ನೀವು ಈಗಲೇ ದಾಳಿ ಮಾಡಿದರೆ ಸುಲಭವಾಗಿ ಜಯ ಸಿಗಲಿದೆ ಎಂದು ನೀವು ನಂಬುವಂತೆ ಮಾಡಲು ಈ ವ್ಯವಸ್ಥಿತ ಸಂಚನ್ನು ರೂಪಿಸಲಾಗಿತ್ತು," ಎಂದು ಕೆಂಟ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಲಭ್ಯವಿರುವ ಸಾಕ್ಷ್ಯಗಳನ್ನು ಗಮನಿಸಿದರೆ ಕೆಂಟ್ ಹೇಳುತ್ತಿರುವ ಮಾತು ಸರಿಯೆಂದು ಕಾಣುತ್ತದೆ. ಅವರು ಈ ನಿರ್ಧಾರವನ್ನು ಹಿಂಪಡೆಯುವಂತೆ ಟ್ರಂಪ್ ಅವರಲ್ಲಿ ಮನವಿ ಮಾಡಿದ್ದಾರೆ. ಆದರೆ ಟ್ರಂಪ್ ಅವರು ಹಾಗೆ ಮಾಡುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.

ಪ್ರಸ್ತುತ, ಇರಾನ್ ದಣಿದು, ಬಸವಳಿದು ಅಮೆರಿಕದ ಷರತ್ತುಗಳನ್ನು ಒಪ್ಪಿಕೊಳ್ಳಬಹುದು ಎಂಬ ನಂಬಿಕೆಯಲ್ಲೇ ಅವರು ಇರುವಂತಿದೆ. ನಿರಂತರ ಬಾಂಬ್ ದಾಳಿಯು ಇರಾನ್‌ನ 'ವಿಲಾಯತ್-ಎ ಫಕೀಹ್' ಅಥವಾ "ಇಸ್ಲಾಮಿಕ್ ನ್ಯಾಯಶಾಸ್ತ್ರಜ್ಞರ ಪಾಲನೆ" (ಅಯತೊಲ್ಲಾ ರುಹೊಲ್ಲಾ ಖೊಮೇನಿ ಜಾರಿಗೆ ತಂದ ಈ ವ್ಯವಸ್ಥೆಯಲ್ಲಿ ಸರ್ವೋಚ್ಚ ಧರ್ಮಗುರುವು ಆಧ್ಯಾತ್ಮಿಕ ಮತ್ತು ಲೌಕಿಕ ವಿಷಯಗಳಲ್ಲಿ ಅಂತಿಮ ಅಧಿಕಾರ ಹೊಂದಿರುತ್ತಾರೆ) ಎಂಬ ಆಡಳಿತ ವ್ಯವಸ್ಥೆಯನ್ನು ಪತನಗೊಳಿಸುತ್ತದೆ ಎಂದು ಅವರು ಭಾವಿಸಿದ್ದಾರೆ. ಅಲ್ಲದೆ, ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಅವರು ಇರಾನ್ ಕರಾವಳಿಯ ಮೇಲೆ ಭೀಕರ ಬಾಂಬ್ ದಾಳಿ ನಡೆಸುತ್ತಿದ್ದಾರೆ.

ಇರಾನ್ ವ್ಯವಸ್ಥೆ ಕುಸಿದರೆ ….

ಈ ಪರಿಸ್ಥಿತಿ ಹೇಗೆ ಬದಲಾಗುತ್ತದೆ ಎಂದು ಖಚಿತವಾಗಿ ಊಹಿಸಲು ಸಾಧ್ಯವಿಲ್ಲ. ಆದರೆ ಈ ಸನ್ನಿವೇಶದಲ್ಲಿ ಆತಂಕಕಾರಿ ವಿಷಯವೇನೆಂದರೆ, ಒಂದು ವೇಳೆ ಅಮೆರಿಕ ಮತ್ತು ಇಸ್ರೇಲ್ ಇರಾನ್ ವ್ಯವಸ್ಥೆಯನ್ನು ಕುಸಿಯುವಂತೆ ಮಾಡುವಲ್ಲಿ ಯಶಸ್ವಿಯಾದರೆ, ಆ ದೇಶದಲ್ಲಿ ಅಸ್ಥಿರತೆಯ ಶಕ್ತಿಗಳು ವಿಜೃಂಭಿಸಬಹುದು. ಇದು ಇಡೀ ಪ್ರಾಂತ್ಯಕ್ಕೆ ಅತ್ಯಂತ ಅಪಾಯಕಾರಿ ಪರಿಣಾಮಗಳನ್ನು ಬೀರಿದರೆ ಅಚ್ಚರಿ ಇಲ್ಲ.

ಇರಾನ್ನ ಕಾರ್ಯತಂತ್ರವೆಂದರೆ, ಮುಖ್ಯವಾಗಿ ಹೊರ್ಮುಜ್ ಜಲಸಂಧಿಯ ಮೂಲಕ ಹರಿಯುವ ಹೈಡ್ರೋಕಾರ್ಬನ್ (ತೈಲ ಮತ್ತು ಅನಿಲ) ಪೂರೈಕೆಯಲ್ಲಿ ಅಡಚಣೆ ಉಂಟುಮಾಡುವ ಮೂಲಕ ಅಮೆರಿಕದ ಮೇಲೆ ಒತ್ತಡ ಹೇರುವುದು. ಇದು ಜಾಗತಿಕ ತೈಲ ಮಾರುಕಟ್ಟೆಯ ಶೇಕಡಾ 20 ರಷ್ಟು ಭಾಗದ ಮೇಲೆ ಪರಿಣಾಮ ಬೀರುವುದರಿಂದ, ಈ ಅಡಚಣೆಯು ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯನ್ನು ಒಡ್ಡುತ್ತಿದೆ. ಅಮೆರಿಕವು ಹೈಡ್ರೋಕಾರ್ಬನ್ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿದ್ದರೂ ಸಹ, ಈ ಜಾಗತಿಕ ಏರಿಳಿತಗಳು ಅದರ ಮೇಲೂ ಪರಿಣಾಮ ಬೀರಲಿವೆ.

ಚುನಾವಣಾ ವರ್ಷದಲ್ಲಿ ಪೆಟ್ರೋಲ್ ಪಂಪ್‌ಗಳಲ್ಲಿ ನಿರಂತರ ಬೆಲೆ ಏರಿಕೆಯನ್ನು ಅಮೆರಿಕದ ಟ್ರಂಪ್ ಆಡಳಿತ ಸಹಿಸಿಕೊಂಡೀತೇ? ಈಗಿರುವ ಸಾಮಾನ್ಯ ಬುದ್ಧಿವಂತಿಕೆ ಪ್ರಕಾರ ಅದು ಸಾಧ್ಯವಿಲ್ಲ ಅನ್ನಿಸುತ್ತದೆ.

ಯುದ್ಧದ ಮುಂದಿನ ಸಾಧ್ಯತೆ

ಇವೆಲ್ಲ ಅಂಶಗಳ ಜೊತೆಗೆ ಇರಾನ್ ಆಡಳಿತ ಯೋಚಿಸುತ್ತಿರುವ ಎರಡನೇ ಹಂತದ ಕಾರ್ಯತಂತ್ರವೆಂದರೆ ಕೊಲ್ಲಿ ರಾಷ್ಟ್ರಗಳಲ್ಲಿರುವ ತೈಲ ಉತ್ಪಾದನೆ ಮತ್ತು ತೈಲಾಗಾರಗಳಿಗೆ ಸಮಸ್ಯೆ ಉಂಟುಮಾಡುವುದು. ಮೂರನೇ ಹಂತದಲ್ಲಿ ಇರಾನ್ ವಿಚಾರದಲ್ಲಿ ಎಲ್ಲವೂ ಕೈಬಿಟ್ಟು ಹೋಯಿತು ಎನ್ನುವಾಗ ಕೊಲ್ಲಿ ರಾಷ್ಟ್ರಗಳ ಜನರ ಮೇಲೇ ದಾಳಿ ಮಾಡುವುದು ಹಾಗೂ ಈ ವಲಯದಲ್ಲಿ ಭಯದ ವಾತಾವರಣ ಸೃಷ್ಟಿಸುವುದು. ಇದರಿಂದ ಜಾಗತಿಕವಾಗಿಯೂ ಆತಂಕ ಸೃಷ್ಟಿಯಾಗುತ್ತದೆ.

ಪರಿಸ್ಥಿತಿ ವಿಕೋಪಕ್ಕೆ ಹೋಗದೇ ಇನ್ನೂ ಕೆಲವು ತಿಂಗಳುಗಳ ಕಾಲ ಈ ಇದೇ ಮಧ್ಯಮ ಮಟ್ಟದಲ್ಲಿ ಸಂಘರ್ಷ ವಿಸ್ತರಿಸಿತು ಅಂತಿಟ್ಟುಕೊಳ್ಳಿ, ಆಗಲೂ ಜಾಗತಿಕವಾಗಿ ಪರಿಸ್ಥಿತಿ ಬಿಗಡಾಯಿಸುತ್ತ ಹೋಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಅಂದರೆ ಮೂರು ರಾಷ್ಟ್ರಗಳು ಜಿದ್ದಿಗೆ ಬಿದ್ದು ಕುಳಿತುಬಿಟ್ಟರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ದೀರ್ಘ ಕಾಲದ ಯುದ್ಧವನ್ನು ಮೂರೂ ರಾಷ್ಟ್ರಗಳು ಸಹಿಸಿಕೊಳ್ಳುವುದು ದುಸ್ಸಾಹಸವೂ ಆಗುತ್ತದೆ. ಜಿದ್ದು, ಹಠ, ವೈರತ್ವ ಎಷ್ಟೇ ದೊಡ್ಡದಾಗಿದ್ದರೂ ಕೂಡ ಹೈಡ್ರೋಕಾರ್ಬನ್ನ ಉತ್ಪಾದನೆ ಮತ್ತು ಅದರ ಪ್ರಸಾರದಿಂದ ಆಗುವ ಪರಿಣಾಮ ಮಾತ್ರ ಅಸಾಧಾರಣವಾದುದು. ಎಲ್ಲಕ್ಕಿಂತ ಹೆಚ್ಚಾಗಿ ಅದು ಇಡೀ ಜಗತ್ತಿನ ಆರ್ಥಿಕ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಂತೂ ನಿಶ್ಚಿತ. ಪರಿಸ್ಥಿತಿ ಇಷ್ಟೊಂದು ಬಿಗಡಾಯಿಸುವುದು ದೂರದ ಮಾತಾದರೂ ಎಲ್ಲ ಯುದ್ಧಗಳ ಪರಿಣಾಮಗಳನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ.

ಯುದ್ಧ ವಿಶ್ವದ ಎಲ್ಲೆಡೆ ಪರಿಣಾಮ ಬೀರಿದಂತೆ ಭಾರತದ ಮೇಲೂ ಸಹಜವಾಗಿ ಆತಂಕವನ್ನು ಸೃಷ್ಟಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇಂಧನ ಮತ್ತು ವ್ಯಾಪಾರಕ್ಕೆ ಗಣನೀಯ ಸಮಸ್ಯೆ ಉಂಟುಮಾಡಲಿದೆ. ಇನ್ನು ಕನಿಷ್ಠ ಕೆಲಕಾಲವಾದರೂ ಕೊಲ್ಲಿ ರಾಷ್ಟ್ರಗಳಲ್ಲಿ ಹೂಡಿಕೆ ಮಾಡುವುದು ಸಾಧ್ಯವೇ ಇಲ್ಲದಂತಾಗುತ್ತದೆ. ಹಾಗಾಗಿ ಭಾರತದ ಮಟ್ಟಿಗೆ ಯುದ್ಧ ಸಾಧ್ಯವಾದಷ್ಟು ಬೇಗ ಕೊನೆಗೊಳ್ಳುವುದು ಅತ್ಯಗತ್ಯ.

Next Story