ಹಮಾಸ್‌ ದಾಳಿ | ವ್ಯೂಹಾತ್ಮಕವಾಗಿ ಉತ್ತಮ, ಆದರೆ ಮೂರ್ಖತನದ ಕಾರ್ಯತಂತ್ರ
x
ನವೆಂಬರ್ 12 ರಂದು ವೆಸ್ಟ್ ಬ್ಯಾಂಕ್ ನಗರವಾದ ರಮಲ್ಲಾ ಪ್ರದೇಶದ ಗಾಜಾ ಭಾಗದಲ್ಲಿ ಪ್ಯಾಲೇಸ್ಟಿನಿಯನ್ ಆರೋಗ್ಯ ಸೇವೆಗಳ ಕುಸಿತವನ್ನು ಪ್ರತಿಭಟಿಸಲು, ಪ್ಯಾಲೇಸ್ಟಿನಿಯನ್ ಆರೋಗ್ಯ ಕ್ಷೇತ್ರದ ಸದಸ್ಯರು ಪ್ರದರ್ಶನವೊಂದನ್ನು ನಡೆಸಿದಾಗ ತೆಗೆದ ಚಿತ್ರ

ಹಮಾಸ್‌ ದಾಳಿ | ವ್ಯೂಹಾತ್ಮಕವಾಗಿ ಉತ್ತಮ, ಆದರೆ ಮೂರ್ಖತನದ ಕಾರ್ಯತಂತ್ರ

ದಾಳಿ ನಡೆದ ವರ್ಷದ ನಂತರ, ಜಾಗತಿಕ ಲೋಕವನ್ನು ಕಾಡುತ್ತಿರುವ ಪ್ರಶ್ನೆಯೆಂದರೆ ಹಮಾಸ್ ಇಸ್ರೇಲ್ ಮೇಲೆ ಕಳೆದ ವರ್ಷದ ಅಕ್ಟೋಬರ್‌ ತಿಂಗಳಲ್ಲಿ ಅಂತಹ ದಾಳಿಯನ್ನು ಏಕೆ ನಡೆಸಿತು? ಇದರಿಂದ ಪ್ಯಾಲೆಸ್ತೇನಿಯರು ಏನನ್ನು ಸಾಧಿಸಿದಂತಾಯಿತು?


Click the Play button to hear this message in audio format

ನಿಖರವಾಗಿ ಒಂದು ವರ್ಷದ ಹಿಂದೆ ಹಮಾಸ್ ಇಸ್ರೇಲ್‌ನಲ್ಲಿ ನುಗ್ಗಿ , ನಾಗರಿಕರ ಮೇಲೆ ದಾಳಿ ಮಾಡಿ ರಕ್ತಪಾತ ನಡೆಸಿತು ಎಂಬ ಸುದ್ದಿ ಬಂದಾಗ, ಹಮಾಸ್‌ನ ಪಡೆ ಮತ್ತು ಭದ್ರತಾ ಚಾಣಾಕ್ಷತನದ ಬಗ್ಗೆ ಅವರ ಯುದ್ಧ ಸಂಪನ್ಮೂಲಗಳ ಬಗ್ಗೆ ಭಯದ ಭಾವನೆ ಇತ್ತು. ಅವರು ಒತ್ತೆಯಾಳುಗಳನ್ನು ಕರೆದುಕೊಂಡು ಗಾಜಾಕ್ಕೆ ಮರಳಿದಾಗ ಒಂದು ರೀತಿಯ ಆತಂಕ ಕೂಡ ಎದುರಾಗಿತ್ತು.

ಈ ಅನಿರೀಕ್ಷಿತ ದಾಳಿಯಿಂದ ಆಘಾತದಿಂದ ತತ್ತರಿಸಿದ್ದು ಇಸ್ರೇಲಿಗರಷ್ಟೇ ಅಲ್ಲ. ಹಮಾಸ್ ಕಾರ್ಯಾಚರಣೆಯ ವೇಗ, ಪ್ರಮಾಣ ಮತ್ತು ತೀವ್ರತೆಯನ್ನು ಪ್ಯಾಲೇಸ್ಟಿನಿಯನ್ ಬೆಂಬಲಿಗರು ಸೇರಿದಂತೆ ಪ್ರಪಂಚದ ಉಳಿದ ಭಾಗಗಳು ಆಶ್ಚರ್ಯದಿಂದ ನಂಬಲಾಗದೇ ನೋಡುತ್ತಿದ್ದವು. ಇಸ್ರೇಲಿಗರು ಯಾವಾಗಲೂ ಕೋಟೆ ಎಂದು ಭಾವಿಸಿದ್ದನ್ನು ಸುಲಭವಾಗಿ ಭೇದಿಸುವಲ್ಲಿ ಹಮಾಸ್‌ ಯಶಸ್ವಿಯಾಗಿತ್ತು.

ಗಾಜಾದಲ್ಲಿ ಇಸ್ರೇಲಿ ಪ್ರಚಾರ

ಹಮಾಸ್‌ನ ಈ ದಾಳಿಯಲ್ಲಿ ಸುಮಾರು 1,200 ಇಸ್ರೇಲಿಗಳು ಸಾವನ್ನಪ್ಪಿದರು. ಅದರಲ್ಲಿ ಸುಮಾರು 400 ಸೈನಿಕರೂ ಸೇರಿದಂತೆ ಇನ್ನೂ ಹಲವರು ಗಾಯಗೊಂಡಿದ್ದರು. ಸುಮಾರು 250 ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು.

ಹಲವು ದಶಕಗಳಿಂದ ಇಸ್ರೇಲಿ-ಪ್ಯಾಲೆಸ್ಟೀನಿಯನ್ ಸಂಘರ್ಷವನ್ನು ಗಮನಿಸುತ್ತಿರುವ ಮತ್ತು ವಿಶ್ಲೇಷಿಸುತ್ತಿರುವ ಯಾರಿಗಾದರೂ ಕಾಡುವ ಮೊದಲ ಪ್ರಶ್ನೆಯೆಂದರೆ: ಈ ದಾಳಿ ಏಕಾಯಿತು? ಇದರಿಂದ ಯಾವ ಉದ್ದೇಶ ಸಾಧಿಸಿದಂತಾಯಿತು? ಮತ್ತು, ಹೆಚ್ಚು ಮುಖ್ಯವಾಗಿ, ಇಸ್ರೇಲ್ ಈ ದಾಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ? ಸಣ್ಣ ರಾಕೆಟ್ ಫೈರಿಂಗ್‌ಗಳಿಗೆ ಪ್ರತಿಕ್ರಿಯೆಯಾಗಿ ಗಾಜಾದ ಮೇಲೆ ಬಾಂಬ್ ದಾಳಿ ಮಾಡಲು ಸಾಮಾನ್ಯವಾಗಿ ತನ್ನ F-16 ಫೈಟರ್‌ಗಳನ್ನು ಕಳುಹಿಸುವ ದೇಶ, ಅಕ್ಟೋಬರ್ 7, 2023 ರ ದಾಳಿಯ ಕೆಟ್ಟ ಪರಿಣಾಮ ಮಾಡಬಹುದು ಎಂಬುದು ಭಯದ ವಾತಾವರಣವನ್ನು ಸೃಷ್ಟಿಸಿತ್ತು.

ಒಂದು ವರ್ಷದ ನಂತರ, ಆ ಭಯ ನಿಜವಾಗಿದೆ. ಇಸ್ರೇಲ್ ಈಗ ಹಮಾಸ್ ಶಕ್ತಿಯನ್ನು ಹಾಗೂ ಗಾಜಾವನ್ನು ಅಕ್ಷರಶಃ ನಾಶ ಮಾಡಲು ಸಜ್ಜಾಗುತ್ತಿದೆ. ಹಮಾಸ್ ಅನ್ನು ಬೇಟೆಯಾಡುವ ಕಾರಣ ಮಾಡಿಕೊಂಡು, ಗಾಜಾದಲ್ಲಿ 41,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರ ಮಾರಣ ಹೋಮ ನಡೆಯಿತು. ಇನ್ನೂ, ಸಾವಿರಾರು ಜನರು ಗಾಯಗೊಂಡರು ಮತ್ತು ಈ ಸಣ್ಣ ವಸತಿಯಲ್ಲಿರುವ ಸಂಪೂರ್ಣ ಜನಸಂಖ್ಯೆಯನ್ನು ಅವರ ಮನೆಗಳಿಂದ ಸ್ಥಳಾಂತರಿಸಬೇಕಾದಂಥ ಪರಿಸ್ಥಿತಿ ನಿರ್ಮಾಣವಾಯಿತು.

ಯುನೈಟೆಡ್ ಸ್ಟೇಟ್ಸ್ ನ ಸಂಪೂರ್ಣ ಬೆಂಬಲದೊಂದಿಗೆ, ಇಸ್ರೇಲ್ ತನ್ನ ರಕ್ತಪಾತದ ಮಾರ್ಗವನ್ನು ಬಿಟ್ಟುಕೊಡಲು ಸುತಾರಾಂ ಒಪ್ಪುತ್ತಿಲ್ಲ. ಈ ನಿಟ್ಟಿನಲ್ಲಿ ಇತರ ರಾಷ್ಟ್ರಗಳ ಮನವಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇದು ಈ ಪೀಳಿಗೆಯು ಇತಿಹಾಸದಲ್ಲಿ ಮಾತ್ರ ಕೇಳಿದ, ಆದರೆ ಎಂದಿಗೂ ನೋಡದ ಒಂದು ರೀತಿಯ ಕೊನೆಯಿಲ್ಲದ ಬಿಕ್ಕಟ್ಟಾಗಿ ಪರಿಣಮಿಸಿದೆ.

ದಿನದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಹೋರಾಟ ಈಗ ತೀವ್ರವಾಗುತ್ತಿದೆ. ಇಸ್ರೇಲ್ ಈಗ ಹಮಾಸ್ ಬೆಂಬಲಿಗರು, ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ಮತ್ತು ಅವರ ಮಾರ್ಗದರ್ಶಕ ಇರಾನ್‌ನ ಬೆನ್ನುಹತ್ತಿದೆ. ಈ ಇಡೀ ಪ್ರದೇಶವು ಪೂರ್ಣ ಪ್ರಮಾಣದ ಯುದ್ಧದ ಅಂಚಿನಲ್ಲಿ ನಿಂತು ತತ್ತರಿಸುತ್ತಿದೆ, ಇದರ ಪರಿಣಾಮಗಳು ಆಲೋಚಿಸಲು ತುಂಬಾ ಭಯವಾಗುತ್ತಿದೆ.

ಹಮಾಸ್ ದಾಳಿ: ಆಳವಾದ ಹತಾಶೆಯ ಫಲಿತಾಂಶ

ಈಗ ಕಾಡುತ್ತಿರುವ ಪ್ರಶ್ನೆಯೆಂದರೆ; ಹಮಾಸ್ ಏಕೆ ದಾಳಿ ನಡೆಸಿತು? ಇಸ್ರೇಲ್ ವಿರುದ್ಧದ ಆಘಾತ ಮತ್ತು ವಿಸ್ಮಯ ತಂತ್ರದಿಂದ ಹಮಾಸ್‌ ಗುಂಪು ಏನನ್ನು ಸಾಧಿಸಲು ಪ್ರಯತ್ನಿಸುತ್ತಿದೆ ? ಈ ದಾಳಿಯು ಗಾಜಾದಲ್ಲಿ ಮುತ್ತಿಗೆಯ ಸ್ಥಿತಿಯಲ್ಲಿ ನಾಗರೀಕರು ಜೀವಿಸಬೇಕಾದ ಆಳವಾದ ಹತಾಶೆಯ ಸ್ಥಿತಿಗೆ ತಲುಪಿದಂತಾಗಿದೆ ಎಂಬುದು ಜಾಗತಿಕ ಪ್ರತಿಕ್ರಿಯೆಯಾಗಿದೆ.

ಇಲ್ಲಿನ ಜೀವನ, ಎಲ್ಲಾ ರೀತಿಯಲ್ಲೂ ಕಠಿಣವಾಗಿದೆ. ಇಸ್ರೇಲಿ ಚೆಕ್-ಪಾಯಿಂಟ್‌ಗಳಲ್ಲಿ ಪ್ಯಾಲಸ್ತೀನಿಯರು ನಿರಂತರವಾಗಿ ಕಿರುಕುಳವನ್ನು ಎದುರಿಸುವಂತಾಗಿದೆ. ಯಹೂದಿ ವಸಾಹತುದಾರರು, ಹಮಾಸ್‌ ಮಣಿಸುವು ನೆಪದಲ್ಲಿ ದೈನಂದಿನ ಅಗತ್ಯ ವಸ್ತುಗಳ ಪಡಿತರೀಕರಣ ಮತ್ತು ಯಾವುದೇ ಸ್ವಾತಂತ್ರ್ಯದ ಸಂಪೂರ್ಣ ಅನುಪಸ್ಥಿತಿಯನ್ನು ನಿರ್ಮಿಸಿ ಪ್ಯಾಲೆಸ್ಟೀನಿಯಾದವರನ್ನು ಬದುಕು ನಡೆಸುವುದೇ ಕಷ್ಟ ಎನ್ನುವ ಸ್ಥಿತಿಗೆ ತಂದು ನಿಲ್ಲಿಸಿದೆ.

ಆದರೆ ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ, ಹಮಾಸ್‌ ಬಹುಶಃ ಇಸ್ರೇಲಿಗಳಿಗೆ ಸಂದೇಶ ನೀಡಲು ಪ್ರಯತ್ನಿಸುತ್ತಿದ್ದರೆಂದೇ ಹೇಳಬಹುದು. ಇಸ್ರೇಲಿಗರನ್ನು ಗುರಿಯಾಗಿಸುವುದು ಹಮಾಸ್‌ ನ ಉದ್ದೇಶ, ಅವರ ಜೀವನವನ್ನು ಅಸುರಕ್ಷಿತಗೊಳಿಸುವುದು. ಇಸ್ರೇಲಿಗರು ತಾವು ತಿಳಿದುಕೊಂಡಷ್ಟು ಶಕ್ತಿಶಾಲಿಗಳಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುವುದು.

ಹಮಾಸ್ ನ ಆ ಕ್ಷಣದ ತಂತ್ರ ಸರಿಯಾಗಿರಬಹುದು, ಆದರೆ ಗಾಜಾದಲ್ಲಿ ಅವರ ಸ್ವಂತ ದುರ್ಬಲ ಅನುಭವಗಳಿಂದ ಅವರ ದೃಷ್ಟಿಕೋನವು ಹೆಚ್ಚು ಸ್ಪಷ್ಟವಾಯಿತು. ಹಮಾಸ್ ನಾಯಕತ್ವದಲ್ಲಿ ಯಾರೇ ದಾಳಿಯನ್ನು ಯೋಜಿಸಿದ್ದರೂ ಅವರ ತಂತ್ರದ ಮೂಲಕ ಯೋಚಿಸಿದಂತೆ ಕಾಣುತ್ತಿಲ್ಲ. ಅವರು ಕಾಪಾಡಿಕೊಂಡ ಗೌಪ್ಯತೆಯ ಅಗತ್ಯವು ಅವರ ಸ್ನೇಹಿತರ ನಡುವೆ ನಡೆಯಬಹುದಾದ ವ್ಯಾಪಕವಾದ ಸಮಾಲೋಚನೆಗೆ ಅಡ್ಡಿಯಾಗಬಹುದು.

ಅಕ್ಟೋಬರ್ 7 ರ ದಾಳಿಯು ಇಸ್ರೇಲ್ ನಿರೂಪಣೆಯನ್ನು ತಿರುಚಲು ಸಹಾಯ ಮಾಡಿತು

ಇಸ್ರೇಲ್ ಗಾಜಾದಲ್ಲಿ ಪ್ಯಾಲೆಸ್ಟೀನಿಯಾದವರ ವಿರುದ್ಧ ಎಲ್ಲಾ ಪೂರ್ಣ ಪ್ರಮಾಣದಲ್ಲಿ ಮುಗಿಬೀಳಲು ಹಮಾಸ್‌ ಅವಕಾಶ ಕಲ್ಪಿಸಿತು. ಅಷ್ಟೇ ಅಲ್ಲ. ಇಸ್ರೇಲ್ಗೆ ಅಗತ್ಯವಿದ್ದ ಸನ್ನಿವೇಶವನ್ನು ಸೃಷ್ಟಿಮಾಡಿಕೊಟ್ಟರು.

ಬೆಂಜಮಿನ್ ನೆತನ್ಯಾಹು ಸರ್ಕಾರ ಮತ್ತು ಇಸ್ರೇಲಿನ ರಾಜ ಮತ್ತು ಯುದ್ಧ ಚಾಣಕ್ಷರಿಗೆ ಅಕ್ಟೋಬರ್ 7, 2023,- ಇಸ್ರೇಲಿ-ಪ್ಯಾಲೆಸ್ಟೀನಿಯನ್ ಸಂಘರ್ಷದ ಆರಂಭಿಕ ಹಂತವಾಯಿತು. ಮತ್ತು ಜಾಗತಿಕ ರಾಜಕಾರಣ ಈ ಕಾರಣವನ್ನು ಒಪ್ಪಿಕೊಂಡಂತೆ ತೋರುತ್ತಿದೆ. ಈ ಜಾಗತಿಕ ಸಮಸ್ಯೆ ದಶಕಗಳಷ್ಟು ಹಳೆಯದಾದರೂ, ಅದಕ್ಕೆ ಅಂತಿಮವಾಗಿ ಮತ್ತೆ ಜೀವ ಬಂದದ್ದು ಕಳೆದ ವರ್ಷ ಅಕ್ಟೋಬರ್ 7 ರಂದು ಎಂದು ಸ್ಪಷ್ಟವಾಗಿ ಹೇಳಬಹುದು.

ಯುನೈಟೆಡ್ ಸ್ಟೇಟ್ಸ್ ನತ್ತ ವಾಲಿರುವ ಪ್ರಬಲ ಮುಖ್ಯವಾಹಿನಿಯ ಪಾಶ್ಚಿಮಾತ್ಯ ಮಾಧ್ಯಮವು ಇಸ್ರೇಲ್ ಅನ್ನು ಹೆಚ್ಚಾಗಿ ಬೆಂಬಲಿಸುತ್ತದೆ, ಹಮಾಸ್‌ನ "ಭಯೋತ್ಪಾದಕ" ದಾಳಿಯ ನಿರೂಪಣೆಯನ್ನು ಪೋಷಿಸುತ್ತಿದೆ. ಯುನೈಟೆಡ್ ಸ್ಟೇಟ್ಸ್‌ನಿಂದ ಈಗಾಗಲೇ ಹಮಾಸ್‌ ಭಯೋತ್ಪಾದಕ ಗುಂಪೆಂದು ಗುರುತಿಸಲಾಗಿದೆ. ಜಾಗತಿಕವಾಗಿ ಹಲವು ದೇಶಗಳು ಅಮೇರಿಕಾ ನೀಡಿರುವ ದಾಳಿಯ ಈ ವಿವರಣೆಯನ್ನು ಪ್ರಶ್ನಾತೀತವಾಗಿ ಒಪ್ಪಿಕೊಂಡಿದೆ.

ಇಸ್ರೇಲ್ ಪ್ರಾಯೋಜಿತ ಯಹೂದಿಗಳಿಂದ - ಯಹೂದಿ ತಾಯ್ನಾಡನ್ನು ರಚಿಸಲು ನಡೆದಿದೆ ಎನ್ನಲಾದ ಈ ಹಮಾಸ್ ದಾಳಿಯ ಅಸಮರ್ಪಕ ತೀವ್ರತೆಯು ಕ್ಯಾಮರಾಗಳ ಮೂಲಕ ಸೆರೆಹಿಡಿಯಲ್ಪಟ್ಟಿದೆ, 1948 ರಿಂದ ಆರಂಭಗೊಂಡು ಕಳೆದ ಏಳು ದಶಕಗಳಲ್ಲಿ ತಮ್ಮ ಮನೆಗಳು, ಜಮೀನುಗಳು ಮತ್ತು ಆಸ್ತಿಗಳಿಂದ ಬಲವಂತವಾಗಿ ಹೊರಹಾಕಲ್ಪಟ್ಟ ಪ್ಯಾಲೆಸ್ಟೀನಿಯನ್ನರ ಸುದೀರ್ಘ ಇತಿಹಾಸವನ್ನು ಅಳಿಸಿಹಾಕಿದೆ.

ಹಮಾಸ್, ಇಸ್ರೇಲ್‌ಗೆ ದೀರ್ಘಾವಧಿಯ ಬೆದರಿಕೆ

ಕಳೆದ ವರ್ಷ ದಾಳಿ ನಡೆದಾಗ, ಮೂಲ ಪ್ಯಾಲೆಸ್ತೀನ್ ಪ್ರದೇಶವನ್ನು ಈಗಾಗಲೇ ಇಸ್ರೇಲ್ ಆಕ್ರಮಿಸಿಕೊಂಡಿತ್ತು. ಪಶ್ಚಿಮ ದಂಡೆ ಮತ್ತು ಗಾಜಾ ಪಟ್ಟಿಯು ಕಾಲ್ಪನಿಕವಾಗಿ ಪ್ಯಾಲೇಸ್ಟಿನಿಯನ್ನರಿಗೆ ಸೇರಿದ್ದಾಗಿದ್ದು ಅದರ ಸ್ವಾಯತ್ತತೆಯ ಮೇಲ್ನೋಟ ಪರದೆಯನ್ನು ಮಾತ್ರ ಹೊಂದಿತ್ತು, ಆದರೆ ಅದು ವಾಸ್ತವವಾಗಿ ಇಸ್ರೇಲ್ ನಿಯಂತ್ರಣದಲ್ಲಿದೆ.

ಹಮಾಸ್ (ಇಸ್ಲಾಮಿಕ್ ರೆಸಿಸ್ಟೆನ್ಸ್ ಮೂವ್‌ಮೆಂಟ್‌ಗೆ ಅರೇಬಿಕ್‌ನಲ್ಲಿ ಸಂಕ್ಷಿಪ್ತ ರೂಪ) ಗಾಜಾದಲ್ಲಿ ಬಹಳ ಜನಪ್ರಿಯವಾಗಿತ್ತು. 1987 ರಲ್ಲಿ ರಚನೆಯಾದಾಗಿನಿಂದ, ಇದು ಪ್ರದೇಶದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. 2006 ರಲ್ಲಿ, ಹಮಾಸ್ ಪ್ಯಾಲೇಸ್ಟಿನಿಯನ್ ಶಾಸಕಾಂಗ ಚುನಾವಣೆಯಲ್ಲಿ ಚುನಾವಣೆಯಲ್ಲಿ ಗೆದ್ದು, ಒಂದು ಕಾಲದಲ್ಲಿ ಅಪ್ರತಿಮ ನಾಯಕರಾಗಿದ್ದ ಯಾಸರ್ ಅರಾಫತ್ ನೇತೃತ್ವದ ಜಾತ್ಯತೀತ ಗುಂಪಾದ ಆಡಳಿತಾರೂಢ ಫತಾಹ್ ಅನ್ನು ಸೋಲಿಸಿತು.

ಆದರೆ ಇಸ್ರೇಲ್ ಮತ್ತು ಯುನೈಟೆಡ್‌ ಸ್ಟೇಟ್ಸ್‌ ಹಮಾಸ್‌ನ ಚುನಾವಣಾ ವಿಜಯವನ್ನು ಎಂದಿಗೂ ಒಪ್ಪಿಕೊಳ್ಳಲಿಲ್ಲ. 1993 ರಲ್ಲಿ ಇಸ್ರೇಲ್ ಮತ್ತು ಅದರ ಅಸ್ತಿತ್ವದ ಹಕ್ಕನ್ನು ಔಪಚಾರಿಕವಾಗಿ ಗುರುತಿಸಿದ PLO ಗಿಂತ ಭಿನ್ನವಾಗಿ, ಹಮಾಸ್ ಇಸ್ರೇಲ್ ಅನ್ನು ಒಂದು ಘಟಕವಾಗಿ ಸ್ವೀಕರಿಸಲಿಲ್ಲ. ಆದ್ದರಿಂದ ಯಹೂದಿ ದೇಶವು ಪ್ಯಾಲೇಸ್ಟಿನಿಯನ್ ಗುಂಪನ್ನು ದೀರ್ಘಾವಧಿಯ ಬೆದರಿಕೆ ಎಂದು ಪರಿಗಣಿಸಿತು.

ಚಕಮಕಿಗಳು ಹೇಗೆ ಯುದ್ಧಕ್ಕೆ ದಾರಿ ಮಾಡಿಕೊಟ್ಟವು

ಕಾಲಾನಂತರದಲ್ಲಿ, ಇಸ್ರೇಲ್ ನಿಧಾನವಾಗಿ ಹಮಾಸ್ ಕಾರ್ಯ ಪ್ರವೃತ್ತರಾಗುವುದರಿಂದ ನಿರ್ಭಂಧಿಸಿತು. ತನ್ನ ಚುನಾಯಿತ ಪ್ರತಿನಿಧಿಗಳನ್ನು ಇತರ ವಿಷಯಗಳತ್ತ ನೋಡುವಂತೆ ಮಾಡಿತು. 2007-2021 ರ ನಡುವೆ, ಇಸ್ರೇಲ್-ಹಮಾಸ್‌ ಎರಡೂ ಎದುರುಬದರಾಗಿ ನಾಲ್ಕು ಯುದ್ಧಗಳನ್ನು ನಡೆಸಿದರು. ಹಮಾಸ್ ಅನ್ನು ಉರುಳಿಸಲು ಜನರನ್ನು ಒತ್ತಾಯಿಸುವ ಪ್ರಯತ್ನದಲ್ಲಿ ಇಸ್ರೇಲ್ ಗಾಜಾವನ್ನು ಮುತ್ತಿಗೆ ಹಾಕಿತು. ಈ ಪ್ರಯತ್ನದಲ್ಲಿ ಭಾಗಶಃ ಮಾತ್ರ ಯಶಸ್ವಿಯಾಯಿತು.

ಹಮಾಸ್ ಹೋರಾಟಗಾರರು ತಮ್ಮ ಹತಾಶೆಯನ್ನು ಸಾಂದರ್ಭಿಕವಾಗಿ ತೋರ್ಪಡಿಸಲು ಇಸ್ರೇಲ್‌ಗೆ ರಾಕೆಟ್‌ಗಳನ್ನು (ಸಣ್ಣ-ಮಧ್ಯಮ ಶ್ರೇಣಿ) ಹಾರಿಸಿದರು, ಅದು ಕಡಿಮೆ ಅಥವಾ ಯಾವುದೇ ಹಾನಿ ಮಾಡಲಿಲ್ಲ ಆದರೆ ಪ್ರತಿ ಬಾರಿಯೂ, ಹಮಾಸ್ ರಾಕೆಟ್‌ಗಳನ್ನು ಹಾರಿಸಿದಾಗ, ಇಸ್ರೇಲ್ ತನ್ನ F16 ಫೈಟರ್‌ಗಳು, ಸಶಸ್ತ್ರ ಹೆಲಿಕಾಪ್ಟರ್‌ಗಳನ್ನು ಕಳುಹಿಸುತ್ತದೆ ಮತ್ತು ಗಾಜಾದ ಭಾಗಗಳನ್ನು ಧ್ವಂಸ ಮಾಡುತ್ತಿತ್ತು.

ಸಂಘರ್ಷವು ಇಸ್ರೇಲ್‌ನೊಂದಿಗೆ ನಿಧಾನವಾಗಿ ಮತ್ತು ಸ್ಥಿರವಾಗಿ ಗಾಜಾವನ್ನು ನಿಜವಾದ ಘೆಟ್ಟೋ ಆಗಿ ಪರಿವರ್ತಿಸಿತು. ವರದಿಗಳ ಪ್ರಕಾರ, 17 ವರ್ಷಗಳ ಮುತ್ತಿಗೆಯ ನಂತರ ಅಲ್ಲಿಯ ಜನರ ಜೀವನವು ಕಠಿಣವಾಗಿತ್ತು. ನಾಗರಿಕ ಪ್ರತಿಭಟನೆಗಳು ಉಗ್ರ ಇಸ್ರೇಲಿ ಪ್ರತಿಕ್ರಿಯೆಗಳನ್ನು ಎದುರಿಸಿದವು. ಭವಿಷ್ಯದ ಸ್ವತಂತ್ರ ಪ್ಯಾಲೆಸ್ಟೈನ್ ರಾಷ್ಟ್ರಕ್ಕಾಗಿ ಭೂಮಿಯಲ್ಲಿ ಹೊಸ ಅಕ್ರಮ ವಸಾಹತುಗಳು ಬರುತ್ತಿರುವಾಗ ಅನೇಕ ಪ್ಯಾಲೆಸ್ಟೀನಿಗರನ್ನು ಗುಂಡಿಕ್ಕಿ ಕೊಲ್ಲಲಾಯಿತು, ಹೆಚ್ಚಿನ ಸಂಖ್ಯೆಯವರನ್ನು ಬಂಧಿಸಲಾಯಿತು ಮತ್ತು ಅವರನ್ನು ಇಸ್ರೇಲಿ ಜೈಲುಗಳಲ್ಲಿ ಇರಿಸಲಾಯಿತು.

ಅಕ್ಟೋಬರ್ 7 ರ ದಾಳಿಯು ಪ್ಯಾಲೆಸ್ತೀನ್ ಹೋರಾಟದ ನೆನಪುಗಳನ್ನು ಅಳಿಸಿಹಾಕಿತು

ಇದೆಲ್ಲದರ ಪರಿಣಾವೆಂದರೆ ಪ್ಯಾಲೆಸ್ತೀನ್‌ ಹೋರಾಟವನ್ನೇ ಗಮನದಲ್ಲಿಟ್ಟು ನೋಡಿದರೆ, ಅಥವಾ ಅದೇ ಅದು ಹಮಾಸ್‌ನ ದಾಳಿಯ ಮುಖ್ಯ ಉದ್ದೇಶವಾಗಿದ್ದರೆ ಹತಾಶೆಯು ಅರ್ಥವಾಗುವಂತಹದ್ದಾಗಿತ್ತು. ಆದರೆ ವಿಪರ್ಯಾಸವೆಂದರೆ ವಿರುದ್ಧಾರ್ಥಕ ಪರಿಣಾವನ್ನು ಮಾಡುತ್ತಿದೆ. ಏಳು ದಶಕಗಳ ಪ್ಯಾಲೇಸ್ಟಿನಿಯನ್ ಹೋರಾಟದ ಸ್ಮರಣೆಯನ್ನು ಅಳಿಸಿಹಾಕಲು ಅಕ್ಟೋಬರ್ 7 ಇಸ್ರೇಲ್ಗೆ ಸಹಾಯ ಮಾಡಿದೆ ಎಂದೇ ಹೇಳಬಹುದು. ಕಳೆದ ಒಂದು ವರ್ಷದಲ್ಲಿ ಗಾಜಾದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಅಂದಾಜು 41,000 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. ಹಮಾಸ್ ಸಾಧಿಸಲು ಆಶಿಸಿದ ಯಾವುದೂ ಸಾಧನೆಯಾದಂತೆ ಕಾಣುತ್ತಿಲ್ಲ ಈಗ ಕಾಣುತ್ತಿರುವುದು ಜನರ ಸ್ಥಳಾಂತರ ಮತ್ತು ಸಂಕಟದ ಚಿತ್ರಗಳು. ಅವು ಊಹೆಗೂ ಮೀರಿ ಕಾಣಿಸುತ್ತಿದೆ.

ಪ್ಯಾಲೆಸ್ಟೀನಿಯಾದವರಿಗೆ ಮತ್ತು ಪ್ರಪಂಚದಾದ್ಯಂತದ ಅದರ ಬೆಂಬಲಿಗರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು, ಆದರೆ ವಾಸ್ತವವಾಗಿ ಇಂದು ಜಾಗತಿಕ ಅಧಿಕಾರದ ಸಮತೋಲನವು ಇಸ್ರೇಲ್ಗೆ ಹೆಚ್ಚು ಒಲವು ತೋರುತ್ತಿದೆ. ಯುಎಸ್ ಮತ್ತು ಪಶ್ಚಿಮ ಯುರೋಪ್ ಬೆಂಬಲದೊಂದಿಗೆ, ಇಸ್ರೇಲ್ ಅಕ್ಷರಶಃ ಈ ಪ್ರತಿದಾಳಿಯಿಂದ ತಪ್ಪಿಸಿಕೊಳ್ಳುವಂತೆ ಕಾಣುತ್ತಿದೆ. . ಮಧ್ಯಪ್ರವೇಶಿಸಬಹುದಾದ ಒಂದು ಸಂಸ್ಥೆ, ವಿಶ್ವಸಂಸ್ಥೆಯು ಭದ್ರತಾ ಮಂಡಳಿಯಲ್ಲಿನ ವೀಟೋದ ಅಸಂಬದ್ಧ ತರ್ಕಕ್ಕೆ ʻಧನ್ಯವಾದಗಳುʼ ಎಂದು ದುರ್ಬಲಗೊಳಿಸಲಾಗಿದೆ. ಮತ್ತು ಕೈ ತೊಳೆದುಕೊಳ್ಳಲಾಗಿದೆ ಎಂಬ ಭಾವ ಪ್ಯಾಲೆಸ್ತೀನ್‌ ಪರ ಮನಸ್ಸುಗಳನ್ನು ಕಾಡುತ್ತಿದೆ.

ಇಸ್ರೇಲ್‌ನೊಂದಿಗಿನ ತನ್ನ ಕಾರ್ಯತಂತ್ರದ ಸಂಬಂಧದಿಂದ ಯುನೈಟೆಡ್ ಸ್ಟೇಟ್ಸ್ ಕಣ್ಣುಮುಚ್ಚಿ ಕುಳಿತಿದೆ. ಪರಿಸ್ಥಿತಿ ಎಂದಾದರೂ ಎದುರಾದರೆ ಅದು, ಇಸ್ರೇಲ್ ಅನ್ನು ರಕ್ಷಿಸಲು ನೇರವಾಗಿ ಅಖಾಡಕ್ಕೆ ಇಳಿಯಲು ಹಿಂಜರಿಯುವುದಿಲ್ಲ, ಈ ಬೆಳವಣಿಗೆಯಿಂದ ಕಾಣಿಸುವ ಚಿತ್ರವೆಂದರೆ ಅವರ ಸಂಬಂಧ. ಪ್ರತಿಯೊಂದೂ ಪ್ರತ್ಯೇಕಿಸಲಾಗದ ಅತಿಕ್ರಮಿಸುವ ಆಸಕ್ತಿಗಳನ್ನು ಹೊಂದಿರುವನ್ನು ಸ್ಪಷ್ಟಪಡಿಸುತ್ತದೆ. ಯುಎಸ್‌ ಮತ್ತು ಇಸ್ರೇಲ್‌ ಪ್ರಾಯೋಗಿಕವಾಗಿ ಒಂದು ಘಟಕವಾಗಿ ಕಾರ್ಯನಿರ್ವಹಿಸುವಂತೆ ಕಾಣಿಸುತ್ತಿದೆ. ಪರಿಸ್ಥಿತಿ ಹೀಗಿರುವಾಗ ಪ್ಯಾಲೇಸ್ಟಿನಿಯನ್ನರು ಮತ್ತು ಅದರ ಬೆಂಬಲಿಗರು ನ್ಯಾಯವನ್ನು ನಿರೀಕ್ಷಿಸುವ ಭರವಸೆಯನ್ನು ಹೊಂದಲು ಹೇಗೆ ಸಾಧ್ಯ ಎಂಬುದು ಈಗಿರುವ ಪ್ರಶ್ನೆ.

ಬಳಸದ ಪರ್ಯಾಯ

ಆದರೆ ಏಳು ದಶಕಗಳು ಈ ಐತಿಹಾಸಿಕ ಸಮಯದಲ್ಲಿ ಕೇವಲ ಒಂದು ನೋಟವಷ್ಟೆ ಎನ್ನುವಂತಾಗಿದೆ. . ಹಿಂದೆ, ಕನಿಷ್ಠ ಒಂದೆರಡು ಶತಮಾನಗಳವರೆಗೆ, ಯಹೂದಿಗಳು ಯುರೋಪಿನಾದ್ಯಂತ ತಮ್ಮ ಬೇಟೆಯನ್ನು ನಿರಂತರವಾಗಿ ನಡೆಸಿದ್ದನ್ನು ಮರೆಯಲಾದೀತೇ? ಹಿಟ್ಲರನ ಜರ್ಮನಿಯಲ್ಲಿ ಸಾಮೂಹಿಕ ಹತ್ಯೆ ನಡೆದಿದ್ದನ್ನು ಮರೆಯಲಾದೀತೇ? ಇಂದು, ಅವರು ಯಾವ ಪ್ರತಿಪಾದನೆಯಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳಲು ಸಾಧ್ಯ? 1800 ರ ದಶಕದಲ್ಲಿ ಅಥವಾ 1900 ರ ದಶಕದಲ್ಲಿ, ಇಂದಿನ ಪರಿಸ್ಥಿತಿಯನ್ನು ಯಾರಾದರೂ ಊಹಿಸಲು ಸಾಧ್ಯವೇ?

ಪ್ಯಾಲೆಸ್ಟೀನಿಯಾದವರೂ ವಿರುದ್ಧ ಹವಾಮಾನದಲ್ಲಿ ದಿನ ಕಳೆಯುತ್ತಾರೆ. ಜನರು ನೆನಪು ಕ್ಷಣಿಕವಾಗಿರಬಹುದು. ಆದರೆ ಇತಿಹಾಸ ಮರೆಯುವುದಿಲ್ಲ, ಕ್ಷಮಿಸುವುದಿಲ್ಲ. ಅಕ್ಟೋಬರ್ 7 ರಂದು ತಮ್ಮ ಮಾರಣಾಂತಿಕ ಸಾಹಸಕ್ಕೆ ಹೋಗುವ ಮೊದಲು ಹಮಾಸ್ ಉನ್ನತ ಅಧಿಕಾರಿಗಳು ಇವೆಲ್ಲವನ್ನೂ ಯೋಚಿಸಬೇಕಿತ್ತು. ಹಿಂಸೆಯ ಬದಲಿಗೆ, ಅವರು ಅಹಿಂಸಾತ್ಮಕ, ಶಾಂತಿಯುತ ಪ್ರತಿಭಟನೆಯ ವಿಧಾನವನ್ನು ಕಂಡುಹಿಡಿಯಬಹುದಿತ್ತು. ಈ ಬೆಳವಣಿಗೆ ಒಂದರ್ಥದಲ್ಲಿ ಪ್ರಪಂಚದಾದ್ಯಂತ ಸರ್ಕಾರಗಳು ಭಯಪಡುವ ಪ್ರತಿಭಟನೆಯ ಒಂದು ವಿಧಾನವಾಗಿದೆ ಎಂದು ಯಗ್ಗಿಲ್ಲದೆ ಒಪ್ಪಿಕೊಳ್ಳಬಹುದು. ಇದಕ್ಕೆ ಹಲವಾರು ನಿದರ್ಶನಗಳಿವೆ. ಉದಾಹರಣೆಗೆ ಟುನೀಶಿಯಾ, ಈಜಿಪ್ಟ್‌ನಲ್ಲಿ ಸಿಬ್ಬಂದಿ ಬದಲಾವಣೆ. ಇತ್ತೀಚೆಗೆ, ಬಾಂಗ್ಲಾದೇಶದಲ್ಲಿ ನಡೆದಿರುವ ಜನಾಂಗೀಯ ಸಂಘರ್ಷ.

ಇಸ್ರೇಲ್ ವಿರುದ್ಧದ ಶಾಂತಿಯುತ ಪ್ರತಿಭಟನೆಗಳು ಪ್ರಪಂಚದಾದ್ಯಂತ ಜನರ ಗಮನವನ್ನು ಆಕರ್ಷಿಸದೇ ಇರಬಹುದು, ಆದರೆ ಸಣ್ಣ ಪ್ರಮಾಣದಲ್ಲಾದರೂ ಪರಿಣಾಮವಾಗಿ, ಇಸ್ರೇಲಿ ಸರ್ಕಾರವು ತನ್ನ ಮಾರ್ಗಗಳನ್ನು ಬದಲಾಯಿಸುವಂತೆ ಒತ್ತಡ ಹೇರುತ್ತದೆ. ಈ ಪ್ರಯತ್ನ ಪ್ರಗತಿಗೊಂಡರೆ, ತಕ್ಷಣವೇ ಅಲ್ಲದಿದ್ದರೂ, ನಿರಂತರ ಪ್ರಯತ್ನದಿಂದ ಸ್ವಲ್ಪ ಸಮಯದಲ್ಲಾದರೂ. ಸಾವಿರಾರು ಜನರ ಪ್ರಾಣ ಉಳಿಯಬಹುದು ಎಂಬುದು ದೂರದ ಆಸೆ.

ಆದರೆ ವಿಷಾದಕರ ಸಂಗತಿಯೆಂದರೆ, ಹಾಗಾಗುತ್ತಿಲ್ಲ. ಪ್ರಪಂಚದ ಇತರ ಭಾಗಗಳಲ್ಲಿ ಈಗಾಗಲೇ ಹಿಂಸಾಚಾರ ಮತ್ತು ಯುದ್ಧಗಳಿಂದ ಜಾಗತಿಕ ಲೋಕ ತತ್ತರಿಸುತ್ತಿದೆ, ಆದರೆ, ಈಗ ಪ್ರಪಂಚದ ಉಳಿದ ಭಾಗಗಳನ್ನು ಆವರಿಸುವ ಸಾಮರ್ಥ್ಯವನ್ನು ಹೊಂದಿರುವ ಮಧ್ಯಪ್ರಾಚ್ಯದಲ್ಲಿ ಉಂಟಾಗುತ್ತಿರುವ ಸಂಘರ್ಷವನ್ನು ಎದುರಿಸುವುದು ಅನಿವಾರ್ಯ ಎನ್ನುವಂಥ ಪರಿಸ್ಥಿತಿ ಇರುವುದು ಜಾಗತಿಕ ದುರಂತ.

(ಈ ಲೇಖನವನ್ನು ʼದ ಫೆಡರಲ್‌ʼ ಇಂಗ್ಲಿಷ್ ಆವೃತ್ತಿಯಿಂದ ಅನುವಾದಿಸಲಾಗಿದೆ)

Read More
Next Story