ಪ್ರತಿದಿನದ ಪ್ರತಿರೋಧವನ್ನೇ ಕಲೆಯಾಗಿಸುವವರು ವ್ಯಂಗ್ಯಚಿತ್ರಕಾರರು
x
ಆನ್‌ಲೈನ್ ಮಲಯಾಳಂ ಜರ್ನಲ್ ನವಮಲೆಯಾಳಿ (ತನ್ನ ಸಾಂಸ್ಕೃತಿಕ ಪ್ರಶಸ್ತಿಯನ್ನು ವ್ಯಂಗ್ಯಚಿತ್ರಕಾರ ಇ.ಪಿ. ಉನ್ನಿ ಅವರಿಗೆ ಘೋಷಿಸಿದೆ.

ಪ್ರತಿದಿನದ ಪ್ರತಿರೋಧವನ್ನೇ ಕಲೆಯಾಗಿಸುವವರು ವ್ಯಂಗ್ಯಚಿತ್ರಕಾರರು

ತನ್ನ ಸಾಂಸ್ಕೃತಿಕ ಪ್ರಶಸ್ತಿಯ ಮೂಲಕ ಇ.ಪಿ.ಉನ್ನಿ ಅವರನ್ನು ಗೌರವಿಸುವ ಮೂಲಕ ನವಮಲಯಾಳಿ ವ್ಯಂಗ್ಯಚಿತ್ರಕಾರರನ್ನು ಕಲೆ ಮತ್ತು ಸಂಸ್ಕೃತಿಯ ಜಗತ್ತಿನ ಅರ್ಹ ರಾಯಭಾರಿಯನ್ನಾಗಿ ಗುರುತಿಸಿದೆ.


ತನ್ನ ಸಾಂಸ್ಕೃತಿಕ ಪ್ರಶಸ್ತಿಯ ಮೂಲಕ ಇ.ಪಿ.ಉನ್ನಿ ಅವರನ್ನು ಗೌರವಿಸುವ ಮೂಲಕ ನವಮಲಯಾಳಿ ವ್ಯಂಗ್ಯಚಿತ್ರಕಾರರನ್ನು ಕಲೆ ಮತ್ತು ಸಂಸ್ಕೃತಿಯ ಜಗತ್ತಿನ ಅರ್ಹ ರಾಯಭಾರಿಯನ್ನಾಗಿ ಗುರುತಿಸಿದೆ.

ಇತ್ತೀಚೆಗೆ ಮಲಯಾಳಂನ ಆನ್-ಲೈನ್ ಜರ್ನಲ್ ನವಮಲಯಾಳಿ ತನ್ನ ಏಳನೇ ಸಾಂಸ್ಕೃತಿಕ ಪ್ರಶಸ್ತಿಯನ್ನು ಪ್ರಕಟಿಸಿದೆ. ಅದು ಇಪಿ ಉನ್ನಿ ಅವರಿಗೆ ಸಂದಿದೆ.

ನಮ್ಮ ದೇಶದಲ್ಲಿ ಪ್ರಶಸ್ತಿಗಳು ಮತ್ತು ಬಹುಮಾನಗಳಿಗೇನು ಬರವಿಲ್ಲ. ಯಾಕೆ ಇದರ ಬಗ್ಗೆ ಅಷ್ಟು ಗಮನ ಎಂದು ನೀವು ಅಚ್ಚರಿಪಡಬಹುದು. ಉನ್ನಿ ಅವರು ಒಬ್ಬ ವ್ಯಂಗ್ಯಚಿತ್ರಕಾರ. ಮತ್ತು ಈ ಪ್ರಶಸ್ತಿಯನ್ನು ಸಂಸ್ಕೃತಿಗೆ ನೀಡಿದ ಕೊಡುಗೆಗಳನ್ನು ಗೌರವಿಸುವ ಉದ್ದೇಶವನ್ನು ಹೊಂದಿದೆ.

ಭಾರತದಲ್ಲಿ ವ್ಯಂಗ್ಯಚಿತ್ರಕಾರರನ್ನು ಗೌರವಿಸುತ್ತ ಬರಲಾಗಿದೆ. ಅದರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಕೂಡ ಸೇರಿದೆ. ಕೆಲವು ಪುರಸ್ಕಾರಗಳಂತೂ ವ್ಯಂಗ್ಯಚಿತ್ರಗಳು ಮತ್ತು ವ್ಯಂಗ್ಯಚಿತ್ರಕಾರರನ್ನು ಕಲೆ ಮತ್ತು ಸಂಸ್ಕೃತಿ ಲೋಕದ ಅವಿಭಾಜ್ಯ ಅಂಗ ಎಂಬಂತೆ ಪರಿಗಣಿಸಲಾಗಿದೆ. ಈ ಪವಿತ್ರ ಸ್ಥಳವನ್ನು ಸಾಹಿತಿಗಳು, ಚಿತ್ರಕಾರರು, ಕವಿಗಳು, ಸಂಗೀತಕಾರರು, ನೃತ್ಯ ಕಲಾವಿದರು ಮತ್ತು ಸಾಮಾನ್ಯವಾಗಿ ಉನ್ನತ ಕಲೆ ಎಂದು ಗುರುತಿಸಲ್ಪಟ್ಟವರಿಗೆ ಮೀಸಲಿಡಲಾಗಿದೆ. ಒಂದು ವೇಳೆ ಈ ಕ್ಷೇತ್ರದಲ್ಲಿ ವ್ಯಂಗ್ಯ ಚಿತ್ರಕಾರರು ಕಂಡುಬಂದರೆ ಅನುಮಾನಾಸ್ಪದವಾಗಿ ನೋಡುತ್ತಾರೆ.

ನವಮಲಯಾಳಿಯ ಈ ಹಿಂದಿನ ಪ್ರಶಸ್ತಿಗಳು ಸಂಸ್ಕೃತಿಯ ಸಾಂಪ್ರದಾಯಿಕ ತಿಳುವಳಿಕೆಗೆ ನಿಷ್ಠವಾಗಿದೆ. ಹಾಗಾಗಿ ಪ್ರಶಸ್ತಿಗಳು ಹಿರಿಯ ಲೇಖಕರಿಗೆ ಒಲಿದಿವೆ. ಅವರ ಸಾಲಿನಲ್ಲಿ ಆರುಂಧತಿ ರಾಯ್ ಅವರೂ ಸೇರಿದ್ದಾರೆ. ದೈನಂದಿನ ಪ್ರತಿರೋಧದ ಅಭ್ಯಾಸವನ್ನು ಕಲೆಗೆ ಬಳಸಿದ್ದಕ್ಕಾಗಿ ವ್ಯಂಗ್ಯಚಿತ್ರಕಾರ ಉನ್ನಿ ಅವರಿಗೆ ಈ ಬಾರಿ ಪ್ರಶಸ್ತಿ ಸಂದಿದೆ.

ಕಾರ್ಟೂನ್ ಮತ್ತು ಕಾಮಿಕ್ ಕಲೆಯು ಸಾಮಾನ್ಯವಾಗಿ ಕಲೆ ಎಂಬ ಅರ್ಹತೆಯನ್ನು ಪಡೆದುಕೊಳ್ಳುತ್ತದೆಯೇ? ಫ್ರೆಂಚರು ಇದಕ್ಕೊಂದು ಹೆಸರನ್ನಿಟ್ಟಿದ್ದಾರೆ: ದಿ ನೈನ್ತ್ ಆರ್ಟ್ ಎಂದು. ಆಸ್ಟರಿಕ್ಸ್ ಮತ್ತು ಟಿನ್-ಟಿನ್ ಪಾತ್ರಗಳು ಗೊಡಾರ್ಡ್ ಮತ್ತು ಇತರ ನವ್ಯ ದರ್ಜೆಯ ಕಲಾವಿದರಂತೆ ವಿದ್ವತ್ಪೂರ್ಣ ಗಮನವನ್ನು ಸೆಳೆಯುತ್ತವೆ. ಆದರೆ ನಾವ್ಯಾಕೆ ಫ್ರೆಂಚ್ ಬಗ್ಗೆ ಮಾತನಾಡುತ್ತೇವೆ? ಯಾಕೆಂದರೆ ನಾವು ಬ್ರಿಟಿಷರಿಂದ ವಸಾಹತುಶಾಹಿ ವ್ಯವಸ್ಥೆಗೆ ಒಳಪಟ್ಟವರು. ಅವರಿಗೆ ಕಾರ್ಟೂನ್ ಗಳ ಬಗ್ಗೆ ವಿಶೇಷವಾದ ಆಸ್ಥೆ ಇತ್ತು. ಉದಾಹರಣೆಗೆ, ಪಂಚ್ ಅಥವಾ ಇನ್ಯಾವುದೇ ದಿನಪತ್ರಿಕೆಗಳಲ್ಲಾಗಲಿ ಹಿಟ್ಲರ್ ನನ್ನು ಖಂಡಿಸಲು ಸಂಪಾದಕೀಯ ಸ್ವಾತಂತ್ರ್ಯವಿತ್ತು. ಬ್ರಿಟಿಷ್ ಪ್ರಧಾನಿ ಚೇಂಬರ್ಲೇನ್ ಕೂಡ ಹಿಟ್ಲರ್ ನನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾಗಲೂ ಪತ್ರಿಕೆಗಳು ಹಿಟ್ಲರ್ ನನ್ನು ಗೇಲಿಮಾಡುವ ಸ್ವಾತಂತ್ರ್ಯವನ್ನು ಹೊಂದಿದ್ದವು.

ಅಮೆರಿಕದಲ್ಲಿ ಆಂಗ್ಲೋಸ್ಪಿಯರ್ ನ ಬೃಹತ್ ಮತ್ತು ಪ್ರಭಾವಶಾಲಿ ಭಾಗವಾಗಿ ಕಾರ್ಟೂನ್ ಸಂಪ್ರದಾಯ ನಿಜಕ್ಕೂ ಬಲಶಾಲಿಯಾಗಿದ್ದವು. ಹರ್ಬ್ಲಾಕ್ ನಂತಹ ಮಾಸ್ಟರ್ ಗಳಿಂದ ಆರಂಭಿಸಿ ಆರ್ಟ್ ಸ್ಪೀಗಲ್ ಮನ್ ಮತ್ತು ಜೋ ಸ್ಯಾಕೋನಂತಹ ಗ್ರಾಫಿಕ್ ನೋವೆಲ್ ಗಳ ವರೆಗೆ ಸಂಪಾದಕೀಯ ವ್ಯಂಗ್ಯಚಿತ್ರಗಳು ತಮ್ಮದೇ ಛಾಪನ್ನು ಹೊಂದಿದ್ದವು.

ಆದಾಗ್ಯೂ ಅಮೆರಿಕದ ಸುದ್ದಿಪತ್ರಿಕೆಯ ಸಂಪಾದಕರು ಇತ್ತೀಚಿನ ದಿನಗಳಲ್ಲಿ ಉತ್ತಮ ಮಾರ್ಗವನ್ನೇ ಕಂಡುಕೊಂಡಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ರಾಜಕೀಯ ವ್ಯಂಗ್ಯಚಿತ್ರಗಳನ್ನೇ ಕೈಬಿಟ್ಟಿದೆ. ವಾಷಿಂಗ್ಟನ್ ಪೋಸ್ಟ್ ನಲ್ಲಿ ವ್ಯಂಗಚಿತ್ರಕಾರ ಆ್ಯನ್ ಟೆಲ್ನೇಸ್ ರಾಜೀನಾಮೆ ನೀಡಿದ್ದಾರೆ. ಕಾರಣವಿಷ್ಟೇ, ಟ್ರಂಪ್ ಅವರನ್ನು ಟೀಕಿಸಿದ ಅವರ ವ್ಯಂಗ್ಯಚಿತ್ರವನ್ನು ಪತ್ರಿಕೆ ಪ್ರಕಟಿಸಲು ನಿರಾಕರಿಸಿದ್ದಕ್ಕೆ. ಆ್ಯನ್ ಟೆಲ್ನೇಸ್ ಇತ್ತೀಚೆಗೆ ವ್ಯಂಗ್ಯಚಿತ್ರಕ್ಕಾಗಿ ಪುಲಿಟ್ಜರ್ ಪ್ರಶಸ್ತಿಗೆ ಪಾತ್ರರಾಗಿದ್ದರು.

ರಾಜಕೀಯ ಕಾರ್ಟೂನ್ ಗಳ ಪ್ರಭಾವ:

ಇತರ ರಾಷ್ಟ್ರಗಳು ಕಾರ್ಟೂನ್ ಗಳನ್ನು ಹೇಗೆ ಪರಿಗಣಿಸುತ್ತವೆ ಎಂಬುದನ್ನು ಒತ್ತಟ್ಟಿಗಿಟ್ಟು ರಾಜಕೀಯ ಕಾರ್ಟೂನ್ ಗಳು ಯಾವ ರೀತಿ ಪ್ರಭಾವವನ್ನು ಹೊಂದಿವೆ ಎಂಬುದನ್ನು ನೋಡೋಣ. ಒಂದು ವ್ಯಂಗ್ಯಚಿತ್ರದ ಕೇಂದ್ರಬಿಂದು ಸಾಮಾನ್ಯವಾಗಿ ತಮಾಷೆ ಅಥವಾ ವಿನೋದದ ಭಾಗವಾಗಿರುತ್ತದೆ. ಹಾಗಂತ ಅದು ತಮಾಷೆಯಿಂದಲೇ ಕೂಡಿರಬೇಕು ಎಂದೇನೂ ಇಲ್ಲ. ಇದರ ದೃಶ್ಯವು ತನ್ನದೇ ಆದ ರೀತಿಯ ಅಭಿವ್ಯಕ್ತಿಯನ್ನು ಹೊಂದಿರಬಹುದು ಮತ್ತು ಅದಕ್ಕೆ ಟಿಪ್ಪಣಿಯೂ ಜೊತೆಯಾಗಿರಬಹುದು. ಇವೆಲ್ಲದರ ಜೊತೆಗೆ ಅದು ಇತಿಹಾಸ, ಸಾಹಿತ್ಯ, ಕಲೆ, ಗಣ್ಯ ವ್ಯಕ್ತಿಗಳು, ಸಮಕಾಲೀನ ಹಿರೋಗಳು ಅಥವಾ ಘಟನೆಗಳನ್ನು ಕೂಡ ಉಲ್ಲೇಖಿಸಬಹುದು. ಚಿಂತನೆಯನ್ನು ಉತ್ತೇಜಿಸಲು ಹಾಗೂ ನೋಡುಗರಿಗೆ ಹೊಸ ಅರ್ಥವನ್ನು ಹುಟ್ಟಿಸುವಂತೆ ಮಾಡಲು ಮತ್ತು ಸಮಕಾಲೀನ ಘಟನೆಗಳ ಬಗ್ಗೆ ಒಂದು ಒಳನೋಟವನ್ನು ಪಡೆಯಲು ಒತ್ತು ನೀಡಬಹುದು.

ಝೆಕೊಸ್ಲಾವೆಕಿಯಾದಲ್ಲಿ ನಡೆದ ರಾಜಕೀಯ ವಿಮೋಚನೆ ಹಾಗೂ ಸಾಮೂಹಿಕ ಪ್ರತಿಭಟನೆಯನ್ನು ಹತ್ತಿಕ್ಕಲು (1968ರ ಪ್ರೇಗ್ ಸ್ಪ್ರಿಂಗ್) ಸೋವಿಯತ್ ಯುದ್ಧ ಟ್ಯಾಂಕ್ ಗಳು ಝೆಕ್ ರಾಜಧಾನಿಗೆ ನುಗ್ಗಿದಾಗ ಓವಿ ವಿಜಯನ್ ಅವರು ಒಂದು ಕಾರ್ಟೂನ್ ರಚಿಸಿದ್ದರು. ಸೋವಿಯತ್ ಕಮ್ಯುನಿಸಂ ಹೇಗೆ ತನ್ನ ಮೂಲಕ ಕಮ್ಯುನಿಸಂ ಚಿಂತನೆಗಳಿಂದ ಹೇಗೆ ದೂರ ಸರಿದಿದೆ ಎಂಬುದನ್ನು ಅವಲೋಕಿಸಲು ನಿರಾಕರಿಸಿದ ಭಾರತದ ಎಡಪಂಥೀಯರನ್ನು ಲೇವಡಿ ಮಾಡುವ ಉದ್ದೇಶ ಆ ಕಾರ್ಟೂನ್ ದಾಗಿತ್ತು. ಕಾರ್ಟೂನು ಭರ್ಜರಿ ಯುದ್ಧ ಟ್ಯಾಂಕ್ ಗಳ ಮೇಲೆ ಗಮನವನ್ನು ಕೇಂದ್ರೀಕರಿಸಿ, ಟ್ಯಾಂಕ್ ಗಳ ಮೇಲೆ ಕಾರುತ್ತಿರುವ ಕಪ್ಪು ಹೊಗೆಯ ಮೇಲೆ, ‘ಯುರೋಪ್ ನಲ್ಲಿ ಒಂದು ಭೂತವು ಕಾಡುತ್ತಿದೆ, ಅದು ಕಮ್ಯುನಿಸಂ ಭೂತ’ ಎಂದು ಬರೆಯಲಾಗಿತ್ತು. ಆಗಿನ ದಿನಗಳಲ್ಲಿ ಬಹಳಷ್ಟು ಜನರು ಅದರಲ್ಲಿರುವ ವ್ಯಂಗ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದರು. ಉಳಿದವರಿಗೂ ಅದರ ಸಾರಾಂಶವೇನೆಂದು ತಿಳಿದಿತ್ತು.

ಗಮನಸೆಳೆದ ಅಬು ಅಬ್ರಾಹಂ ಕಾರ್ಟೂನ್

ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿಯನ್ನು ಹೇರಿದ ಸಂದರ್ಭದಲ್ಲಿ ಸಾಂವಿಧಾನಿಕ ಸಭ್ಯತೆಯನ್ನು ಕಗ್ಗೊಲೆ ಮಾಡಿದ್ದನ್ನು ವ್ಯಂಗ್ಯಚಿತ್ರಕಾರ ಅಬು ಅಬ್ರಾಹಂ ಅವರು ಚಿತ್ರಿಸಿದ್ದನ್ನು ಗಮನಿಸಬೇಕು. ದಢೂತಿ ಕಾಯದ ರಾಷ್ಟ್ರಪತಿ ಫಕ್ರುದ್ದಿನ್ ಅಲಿ ಅಹ್ಮದ್ ಅವರು ತಮ್ಮ ಸ್ನಾನದ ತೊಟ್ಟಿಯಲ್ಲಿ ಕುಳಿತಿದ್ದಾರೆ, ತಮ್ಮದೇ ತಲೆಗೂದಲನ್ನು ಬಿಟ್ಟರೆ ಬೇರೆ ಏನೇನೂ ಅವರ ದೇಹದ ಮೇಲಿಲ್ಲ. ಸ್ನಾನದ ತೊಟ್ಟಿಯ ಹಿಂದೆ ಸರಿಸುಮಾರು ಮುಚ್ಚಿದ ಸ್ನಾನಗೃಹದ ಬಾಗಿಲಿನಿಂದ ರಹಸ್ಯವಾಗಿ ಚಾಚಿದ ಕೈಯೊಂದು ದಾಖಲೆಯೊಂದನ್ನು ಹಿಡಿದಿದೆ. ಅದರ ಮೇಲೆ ಸಹಿಹಾಕಲು ಅವರು ತಮ್ಮ ಇಡೀ ದೇಹವನ್ನೇ ತಿರುಗಿಸಿ ಬರೆಯುತ್ತಿದ್ದಾರೆ. ಆ ಕಾರ್ಟೂನ್ ನಲ್ಲಿ ರಾಷ್ಟ್ರಪತಿಯವರ ಪ್ರತಿಕ್ರಿಯೆ ಹೀಗಿದೆ; ಇನ್ನಷ್ಟು ಆದೇಶಗಳಿಗೆ ಸಹಿಹಾಕಬೇಕಿದ್ದರೆ ಕಾಯಲು ಹೇಳಿ!

ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡಾಗ ಗೋಮಾಂಸದ ವಿವಾದ ಭುಗಿಲೆದ್ದಿತ್ತು. ಆಗ ವ್ಯಂಗ್ಯಚಿತ್ರಕಾರ ಉನ್ನಿ ಅವರು ಒಂದು ಕಾರ್ಟೂನ್ ರಚಿಸಿದ್ದರು. ಒಂದು ರೆಸ್ಟೋರೆಂಟ್ ನಲ್ಲಿ ವ್ಯಕ್ತಿಯೊಬ್ಬ ಹೊಟೆಲ್ ಮಾಣಿಗೆ ‘ಮನುಸ್ಮೃತಿ’ ತರುವಂತೆ ಕೇಳುತ್ತಾನೆ. ಈ ಕಾರ್ಟೂನು ಹಿಂದಿನ ಪೂರ್ವಗ್ರಹ ಮತ್ತು ಆಧುನಿಕ ಕಾಲದ ವಾಸ್ತವತೆಯ ನಡುವಿನ ಅಸಂಗತತೆಯನ್ನು ಎತ್ತಿತೋರಿಸುತ್ತದೆ.

ಬೆನ್ನಮೇಲೆ ಭಿನ್ನಮತದ ಭಾರ

ಕೇಂದ್ರ ಸರ್ಕಾರದ ಪೂರ್ವಗ್ರಹ ಪೀಡಿತ ನೀತಿಗಳ ವಿಚಾರದಲ್ಲಿ ಮಾಧ್ಯಮಗಳು ಮೌನವನ್ನೇ ಹೊದ್ದು ಮಲಗಿರುವ ಈ ಕಾಲಘಟ್ಟದಲ್ಲಿ ವ್ಯಂಗ್ಯಚಿತ್ರಕಾರರು ಮಾತ್ರ ಭಿನ್ನಮತದ ದನಿಯನ್ನು ತಮ್ಮ ಬೆನ್ನಮೇಲೆ ಹೊತ್ತಿದ್ದಾರೆ. ಅದಕ್ಕೆ ಸ್ಟಾಂಡಅಪ್ ಕಾಮಿಡಿಯನ್ ಕಲಾವಿದರು ಸಾಥ್ ನೀಡಿರುವುದು ವಿಶೇಷ.

ಸಂದೀಪ್ ಅಧ್ವರ್ಯು, ಮಂಜುಲ್, ಆರ್.ಪ್ರಸಾದ್. ಸಜಿತ್ ಕುಮಾರ್, ಇರ್ಫಾನ್, ಪೊನ್ನಪ್ಪ, ಸತೀಶ್ ಆಚಾರ್ಯ, ಅಲೋಕ್ ಮತ್ತು ಇನ್ನೂ ಅನೇಕರು ಪ್ರತಿದಿನವೂ ಒಂದಲ್ಲ ಒಂದು ರೀತಿಯಲ್ಲಿ ನಿರಂಕುಶ ರಾಜಕೀಯ ಪ್ರವೃತ್ತಿಯನ್ನು ಟೀಕಿಸುತ್ತ ಬಂದಿದ್ದಾರೆ. ಕೆಲವರು ಅತ್ಯಂತ ಸೂಕ್ಷ್ಮವಾಗಿ ಮತ್ತು ಇನ್ನು ಕೆಲವರು ಎಲ್ಲ ವಿಚಾರಗಳು, ಸಮಯ ಮತ್ತು ಪ್ರದೇಶವನ್ನು ಮೀರಿದ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇವರೆಲ್ಲರಿಗೆ ನಾಯಕನಂತಿರುವವರು ಉನ್ನಿ.

ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಜಾಪ್ರಭುತ್ವದ ಸೇವೆಯಲ್ಲಿ ತೊಡಗಿರುವುದು ವಿರೋಧ ಪಕ್ಷಗಳಲ್ಲ ಬದಲಾಗಿ ಹಾಸ್ಯವೇ ಹೆಚ್ಚು ಸಕ್ರಿಯವಾಗಿದೆ. ಆದರೆ ವಿರೋಧ ಪಕ್ಷವು ಹಾಸ್ಯಾಸ್ಪದವಾಗಿ ಕಾಣಿಸಿಕೊಳ್ಳುತ್ತಿರುವ ಪ್ರವೃತ್ತಿ ಕ್ಷಮಾರ್ಹವಲ್ಲ.

ನಿಕಶಕ್ಕೊಡುವ ಕಲೆ

ನಾವೆಲ್ಲವೂ ಗಮನಿಸಿದಂತೆ ವ್ಯಂಗ್ಯಚಿತ್ರಕಾರರು ಸಮಕಾಲೀನ ಬೆಳವಣಿಗೆಗಳ ಮೇಲೆ ದೃಶ್ಯ ಕಲೆ ಮತ್ತು ವಿಮರ್ಶೆಯ ಲೇಪನವನ್ನು ನೀಡುತ್ತಾರೆ. ಇದು ನಮಗೆ ಹೊಸ ಒಳನೋಟ ದಕ್ಕುವಂತೆ ಮಾಡುತ್ತದೆ. ಇದರಿಂದಾಗಿ ಸಮಾಜದಲ್ಲಿ ನಾವೆಲ್ಲ ವ್ಯಕ್ತಿಗಳಾಗಿ ಎಲ್ಲಿ ನಿಂತಿದ್ದೇವೆ ಎಂಬ ತಿಳುವಳಿಕೆಯನ್ನು ಹೆಚ್ಚಿಸುವಂತೆ ಮಾಡುತ್ತದೆ ಹಾಗೂ ನಮ್ಮನ್ನು ನಿಕಶಕ್ಕೊಡಲು ಪ್ರೇರೇಪಿಸುತ್ತದೆ.

ಕಲೆಗಿಂತಲೂ ದೊಡ್ಡದು ಸಂಸ್ಕೃತಿ. ಅದು ಒಂದು ಸಮುದಾಯವು ನಿರ್ದಿಷ್ಟವಾದ ರೀತಿಯಲ್ಲಿ ವರ್ತಿಸುವಂತೆ ಮಾಡುವ ಸಮಷ್ಠಿ ರೂಪವನ್ನು ಹೊಂದಿದೆ. ಜೊತೆಗೆ ಇದನ್ನು ಸಮುದಾಯದ ಹೊಸ ತಲೆಮಾರುಗಳಿಗೆ ಪಸರಿಸುವಂತೆ ಮಾಡುತ್ತದೆ. ಸಂಸ್ಕೃತಿಯು ಬದಲಾವಣೆಯ ಸಾಮರ್ಥ್ಯವನ್ನು ಪಡೆದಿದೆ. ಸಮುದಾಯ ಮತ್ತು ವ್ಯಕ್ತಿಗಳು ಪರಸ್ಪರ ಮಾನವೀಯತೆಯನ್ನು ಹಂಚಿಕೊಳ್ಳಲು ಹಾಗೂ ಪ್ರಮಾಣ ಮತ್ತು ಗುಣಮಟ್ಟದಲ್ಲಿ ವಿಸ್ತರಿಸಲು ಸಂಸ್ಕೃತಿ ಅಧಿಕಾರವನ್ನು ನೀಡುತ್ತದೆ ಅಥವಾ ಅದು ವಿರುದ್ಧವಾಗಿಯೂ ವರ್ತಿಸಬಹುದು.

ಸಾಮಾನ್ಯವಾಗಿ ವ್ಯಂಗ್ಯಚಿತ್ರಗಳು ನಿಷ್ಪ್ರಯೋಜಕ ರೂಢಿಗಳನ್ನು ಗುರುತಿಸಿ ಕಿತ್ತೆಸೆದು ವಿವೇಚನೆ ಮತ್ತು ನೈತಿಕ ಸ್ಥೈರ್ಯದ ವ್ಯಾಪ್ತಿಯನ್ನು ವಿಸ್ತರಿಸುವುದರ ಪರವಾಗಿರುತ್ತದೆ.

ವ್ಯಂಗ್ಯಚಿತ್ರಗಳು ತಮ್ಮ ರೂಪ ಮತ್ತು ಕಾರ್ಯನಿರ್ವಹಣೆಯಲ್ಲಿ ಕಲೆ ಮತ್ತು ಸಂಸ್ಕೃತಿಯೊಂದಿಗೆ ಸ್ಪಷ್ಟವಾಗಿ ಒಂದಾಗುತ್ತವೆ. ಹಾಗಾಗಿ ನಮ್ಮಲ್ಲಿರುವ ಜಡತ್ವವನ್ನು ಹೊಡೆದೋಡಿಸಲು ಹಾಗೂ ಬೆಳಗಿನ ತಾಜಾತವನ್ನು ತುಂಬುವ ಈ ಅಂಕುಡೊಂಕುಗಳ ಕಲಾವಿದರನ್ನು ಜಗತ್ತಿನ ಕಲೆ ಮತ್ತು ಸಂಸ್ಕೃತಿಯ ಶಾಶ್ವತ ರಾಯಭಾರಿಗಳೆಂದು ಪರಿಗಣಿಸಬಾರದೇಕೆ?

ಬಾಬ್ ಡಿಲನ್ ಅವರಿಗೆ ಸಾಹಿತ್ಯಕ್ಕಾಗಿ ನೋಬೆಲ್ ಪ್ರಶಸ್ತಿ ಸಿಕ್ಕಾಗ ಅನೇಕರು ಬಡಬಡಿಸಿದರು. ಜನರು ಪ್ರತಿ ದಿನ ಹಾಡುಗಳನ್ನು ಆಲಿಸುತ್ತಾರೆ. ಅವು ನಮ್ಮೊಳಗಿರುವ ಸೌಂದರ್ಯ ಮತ್ತು ಸಾಮರಸ್ಯದ ಸಹಜವಾದ ಒಲವನ್ನು ಉದ್ದೀಪಿಸುತ್ತವೆ. ವ್ಯಂಗ್ಯಚಿತ್ರಗಳು ಕೂಡ ನಮ್ಮೊಳಗೆ ಇದೇ ರೀತಿಯ ಪ್ರಜ್ಞೆಯನ್ನು ಹುಟ್ಟುಹಾಕುತ್ತವೆ. ಸೌಂದರ್ಯೋಪಾಸಕತೆಯನ್ನು ಮೀರಿ ನಮ್ಮಲ್ಲಿ ನ್ಯಾಯಸಮ್ಮತತೆ ಮತ್ತು ಯುಕ್ತಿಯ ಭಾವನೆಯನ್ನು ಸ್ಪುರಿಸುತ್ತವೆ.

ನವಮಲಯಾಳಿಯು ಒಂದು ಮುಖವಾಡವನ್ನು ಕಿತ್ತುಹಾಕಿದೆ. ಇನ್ನಷ್ಟು ಮಂದಿ ಕಾರ್ಟೂನುಗಳನ್ನು ಮತ್ತು ಜಗತ್ತಿನಲ್ಲಿ ಅವು ಹೊಂದಿರುವ ಸ್ಥಾನವನ್ನು ಮತ್ತಷ್ಟು ಸ್ಪಷ್ಟತೆಯೊಂದಿಗೆ ನೋಡಲಿ ಎಂಬ ಆಶಯ.

(ಮೂಲ ಲೇಖನ The Federalನಲ್ಲಿ ಪ್ರಕಟವಾಗಿದೆ. ಲೇಖನದಲ್ಲಿನ ಮಾಹಿತಿ, ಆಲೋಚನೆಗಳು ಅಥವಾ ಅಭಿಪ್ರಾಯಗಳು ಲೇಖಕರದ್ದು. ಅವು ‘ದ ಫೆಡರಲ್ ಕರ್ನಾಟಕ’ದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸಬೇಕಾಗಿಲ್ಲ)

Read More
Next Story