ಕೆಎಸ್‌ ಆರ್‌ ಟಿಸಿ ಹೆಸರು ವಿವಾದ: ಕೇರಳಕ್ಕೆ ಮುಖಭಂಗ
x

ಕೆಎಸ್‌ ಆರ್‌ ಟಿಸಿ ಹೆಸರು ವಿವಾದ: ಕೇರಳಕ್ಕೆ ಮುಖಭಂಗ

ಕೆಎಸ್‌ಆರ್‌ಟಿಸಿ ಹೆಸರು ಬಳಕೆ ವಿವಾದಕ್ಕೆ ಸಂಬಂಧಿಸಿದ ಮದ್ರಾಸ್‌ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದ್ದು, ಕರ್ನಾಟಕಕ್ಕೆ ಆ ಹೆಸರು ಬಳಸುವ ಎಲ್ಲಾ ಅಧಿಕಾರವಿದೆ ಎಂದು ಹೇಳುವ ಮೂಲಕ, ಕೇರಳದ ವಾದವನ್ನು ತಳ್ಳಿಹಾಕಿದೆ.


ಬೆಂಗಳೂರು: ಕರ್ನಾಟಕ ಸರ್ಕಾರ ತನ್ನ ಸಾರಿಗೆ ನಿಗಮಕ್ಕೆ ಕೆಎಸ್‌ಆರ್‌ಟಿಸಿ ಹೆಸರು ಬಳಸುವುದನ್ನು ಪ್ರಶ್ನಿಸಿ ಕೇರಳ ರಸ್ತೆ ಸಾರಿಗೆ ನಿಗಮ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ ವಜಾಗೊಳಿಸಿದೆ. ಕರ್ನಾಟಕ ತನ್ನ ಸಾರಿಗೆ ನಿಗಮಕ್ಕೆ ಕೆಎಸ್‌ಆರ್‌ಟಿಸಿ ಹೆಸರು ಬಳಕೆಗೆ ಯಾವುದೇ ಅಭ್ಯಂತರವಿಲ್ಲ ಎಂದು ಕೋರ್ಟ್‌ ತಿಳಿಸಿದೆ.

2021ರಲ್ಲಿ ಕರ್ನಾಟಕದಲ್ಲಿ ಕೆಎಸ್‌ಆರ್‌ಟಿಸಿ ಹೆಸರು ಬಳಸುವಂತಿಲ್ಲ ಎಂದು ಕೇಂದ್ರದ ಟ್ರೆಂಡ್‌ ಮಾರ್ಕ್‌ ರಿಜಿಸ್ಟ್ರಾರ್‌ ಆದೇಶ ಹೊರಡಿಸಿತ್ತು. ‘ಕೆಎಸ್‌ಆರ್‌ಟಿಸಿ’ ಟ್ರೇಡ್‌ ಮಾರ್ಕ್‌ ಕೇರಳ ಪಾಲಾಗಿತ್ತು. ಆದರೆ ಅದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕೋರ್ಟ್‌ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್‌ ಹೈಕೋರ್ಟ್‌, ಇದೀಗ ಕರ್ನಾಟಕದ ಪರ ತೀರ್ಪು ನೀಡಿದೆ.

ಕಳೆದ 27 ವರ್ಷಗಳಿಂದಲೂ ಕೇರಳ ಹಾಗೂ ಕರ್ನಾಟಕದ ನಡುವೆ ಕೆಎಸ್‌ಆರ್‌ಟಿಸಿ ಟ್ರೇಡ್‌ ಮಾರ್ಕ್‌ನ ಕಾನೂನು ಹೋರಾಟ ನಡೆಯುತ್ತಿತ್ತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ‘ಕೆಎಸ್ಆರ್ ಟಿ ಸಿ’ಎಂದು ಸಂಕ್ಷಿಪ್ತ ಬಳಕೆಗಾಗಿ ಟ್ರೇಡ್ ಮಾರ್ಕ್ ಪ್ರಮಾಣಪತ್ರವನ್ನು ನೀಡಲು ಅರ್ಜಿ ಸಲ್ಲಿಸಿದ್ದು ಭಾರತ ಸರ್ಕಾರದ ಟ್ರೇಡ್ ಮಾರ್ಕ್ ರಿಜಿಸ್ಟ್ರಿಯಿಂದ 2013 ರಲ್ಲಿ ಟ್ರೇಡ್ ಮಾರ್ಕ್ ಪ್ರಮಾಣಪತ್ರಗಳನ್ನು ಸಂಸ್ಥೆಯು 1973ರಿಂದ ಬಳಸುತ್ತಿರುವುದನ್ನು ಪರಿಗಣಿಸಿ ಮಂಜೂರು ಮಾಡಲಾಗಿತ್ತು. ಭಾರತ ಸರ್ಕಾರದ ರಿಜಿಸ್ಟ್ರಾರ್ ಆಫ್ ಕಾಪಿ ರೈಟ್ಸ್, ರವರಿಂದ 'ಕೆಎಸ್‌ಆರ್‌ಟಿಸಿ' ಲೋಗೋ ಮತ್ತು 'ಗಂಡಭೇರುಂಡ ಗುರುತು' ಬಳಕೆಗಾಗಿ ಕಾಪಿ ರೈಟ್ ಅನ್ನು ಸಹ ಪಡೆಯಲಾಗಿತ್ತು.

ಇದಾದ ನಂತರ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಚೆನ್ನೈನಲ್ಲಿರುವ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯ ಮುಂದೆ ಇದನ್ನು ಪ್ರಶ್ನಿಸಿತ್ತು. ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ, ಕರ್ನಾಟಕ ಸಾರಿಗೆ ಸಂಸ್ಥೆ 42 ವರ್ಷಗಳಿಂದ ಕೆಎಸ್‌ಆರ್‌ಟಿಸಿ ಹೆಸರನ್ನು ಬಳಸುತ್ತಿರುವ ಬಗ್ಗೆ ತಿಳಿದಿತ್ತು. ಕೇರಳ ಸಾರಿಗೆ ನಿಗಮ ಪಡೆದಿರುವ ಟ್ರೇಡ್ ಮಾರ್ಕ್ ನೋಂದಣಿ ಅಮಾನ್ಯವಾಗಿದೆ. ಹಾಗಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ ಎಂದು ಕೆಎಸ್‌ಆರ್‌ಟಿಸಿ ವಾದಿಸಿತ್ತು.

ಕೇರಳ ಸಾರಿಗೆ ನಿಗಮ ಕೂಡ 2019ರಲ್ಲಿ ಕೆಎಸ್‌ಆರ್‌ಟಿಸಿ ಗೂ ಹಿಂದಿನಿಂದ ಸಂಕ್ಷಿಪ್ತ ಹೆಸರನ್ನು ಬಳಸುತ್ತಿರುವ ಕುರಿತು ನೋಂದಣಿಯನ್ನು ಪಡೆದುಕೊಂಡಿತ್ತು. ನಂತರ ಕೇಂದ್ರ ಸರ್ಕಾರವು ಐಪಿಎಬಿಯನ್ನು ರದ್ದುಗೊಳಿಸಿತ್ತು. ಐಪಿಎಬಿ ಮುಂದೆ ಬಾಕಿ ಉಳಿದಿದ್ದ ಪ್ರಕರಣಗಳನ್ನು ಚೆನ್ನೈನಲ್ಲಿರುವ ಮದ್ರಾಸ್ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. ಡಿ.12ರಂದು ಈ ಅರ್ಜಿಯು ಮದ್ರಾಸ್ ಹೈಕೋರ್ಟ್ ಮುಂದೆ ಬಂದಿದ್ದು, ವಾದ-ವಿವಾದವನ್ನು ಆಲಿಸಿ ಕೇರಳ ಆರ್‌ಟಿಸಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

Read More
Next Story