
ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ
ಶಾಲಾ ಶಿಕ್ಷಕರ ನೇಮಕ ಹಗರಣ; ಸಂಸದ ಅಭಿಷೇಕ್ ಬ್ಯಾನರ್ಜಿಗೆ ಇ.ಡಿ ವಿಚಾರಣೆ
ಅಪರಾಧದ ಮೂಲಕ ಗಳಿಸಲಾದ ಅಕ್ರಮ ಹಣದ ಮೂಲ ಹಾಗೂ ವರ್ಗಾವಣೆಯಾದ ಹಾದಿಯನ್ನು ಪತ್ತೆಹಚ್ಚುವುದು ಸದ್ಯ ತನಿಖಾ ಸಂಸ್ಥೆಯ ಪ್ರಮುಖ ಆದ್ಯತೆಯಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆಯನ್ನು ತೀವ್ರಗೊಳಿಸಿದೆ. ಈ ಹಗರಣದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಅವರನ್ನು ಇ.ಡಿ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ವಿಧಾನಸಭೆಯ ವಿರೋಧ ಪಕ್ಷದ ನಾಯಕರ ನೇಮಕಾತಿ ದಾಖಲೆಗಳಲ್ಲಿ ಶಾಸಕರ ಸಹಿ ನಕಲು ಮಾಡಿದ ಆರೋಪದ ಮೇಲೆ ರಾಜ್ಯ ಸಿಐಡಿ ಅಧಿಕಾರಿಗಳು ಅಭಿಷೇಕ್ ಬ್ಯಾನರ್ಜಿ ಅವರನ್ನು ಸತತ ಎಂಟೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದ ಮರುದಿನವೇ, ಇಡಿ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ವೀಡಿಯೋಗ್ರಫಿ ಮೂಲಕ ವಿಚಾರಣೆ
ಅಭಿಷೇಕ್ ಬ್ಯಾನರ್ಜಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ಜಾರಿಗೊಳಿಸಿದ್ದ ಹಿನ್ನೆಲೆಯಲ್ಲಿ, ಅವರು ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಕೋಲ್ಕತಾದ ಸಿಜಿಒ ಕಾಂಪ್ಲೆಕ್ಸ್ನಲ್ಲಿರುವ ಇಡಿ ಕಚೇರಿಗೆ ಹಾಜರಾದರು. ಡೈಮಂಡ್ ಹಾರ್ಬರ್ ಕ್ಷೇತ್ರದ ಸಂಸದರಾಗಿರುವ ಬ್ಯಾನರ್ಜಿ ಅವರಿಗಾಗಿ ತನಿಖಾ ಸಂಸ್ಥೆಯು ಹತ್ತಕ್ಕೂ ಹೆಚ್ಚು ಪ್ರಶ್ನೆಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಇಡೀ ವಿಚಾರಣಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವೀಡಿಯೋಗ್ರಫಿ ಮಾಡಲಾಗುತ್ತಿದೆ. ಅಭಿಷೇಕ್ ಬ್ಯಾನರ್ಜಿ ನೀಡುವ ಹೇಳಿಕೆಗಳನ್ನು, ಪ್ರಕರಣಕ್ಕೆ ಸಂಬಂಧಿಸಿದ ಇತರ ಪುರಾವೆಗಳು ಹಾಗೂ ಈಗಾಗಲೇ ಬಂಧನಕ್ಕೊಳಗಾಗಿರುವ ಇತರ ಆರೋಪಿಗಳ ಹೇಳಿಕೆಗಳೊಂದಿಗೆ ಪರಿಶೀಲನೆ ಮಾಡಲಾಗುವುದು" ಎಂದು ಹಿರಿಯ ಅಧಿಕಾರಿಯೊಬ್ಬರು ಖಾಸಗಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಹಣದ ಜಾಡು ಪತ್ತೆ ಹಚ್ಚುವುದೇ ಪ್ರಮುಖ ಗುರಿ
ಅಪರಾಧದ ಮೂಲಕ ಗಳಿಸಲಾದ ಅಕ್ರಮ ಹಣದ ಮೂಲ ಹಾಗೂ ಅದು ವರ್ಗಾವಣೆಯಾದ ಹಾದಿಯನ್ನು ಪತ್ತೆಹಚ್ಚುವುದು ಸದ್ಯ ತನಿಖಾ ಸಂಸ್ಥೆಯ ಪ್ರಮುಖ ಆದ್ಯತೆಯಾಗಿದೆ. ಇದಕ್ಕಾಗಿ ಬ್ಯಾನರ್ಜಿ ಅವರನ್ನು ಹಣಕಾಸಿನ ದಾಖಲೆಗಳು, ಡಿಜಿಟಲ್ ಪುರಾವೆಗಳು ಮತ್ತು ಇತರ ಆರೋಪಿಗಳ ಹೇಳಿಕೆಗಳನ್ನು ಸಂಗ್ರಹಿಸಿ ಪ್ರಶ್ನಿಸಲಾಗುತ್ತಿದೆ.
ಮಧ್ಯವರ್ತಿಗಳ ಪಾತ್ರದ ಮೇಲೆ ನಿಗಾ
ಫೋರೆನ್ಸಿಕ್ ವಿಶ್ಲೇಷಣೆಯ ಸಂದರ್ಭದಲ್ಲಿ ಪತ್ತೆಯಾದ ಕೆಲವು ಮಧ್ಯವರ್ತಿಗಳು ಮತ್ತು ಫಲಾನುಭವಿ ಸಂಸ್ಥೆಗಳ ಪಾತ್ರದ ಕುರಿತಾಗಿಯೂ ಇಡಿ ಪ್ರಶ್ನೆಗಳನ್ನು ಮುಂದಿಟ್ಟಿದೆ. ಹಗರಣದಲ್ಲಿ ಹಲವು ಪ್ರಭಾವಿಗಳ ಕೈವಾಡ ಇರುವುದನ್ನು ಸೂಚಿಸುವ ಮಹತ್ವದ ಬ್ಯಾಂಕ್ ದಾಖಲೆಗಳು ಹಾಗೂ ಸಂವಹನ ಡೇಟಾವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಈ ದತ್ತಾಂಶಗಳನ್ನು ಅಭಿಷೇಕ್ ಬ್ಯಾನರ್ಜಿ ಅವರ ಹೇಳಿಕೆಗಳೊಂದಿಗೆ ಸಮೀಕರಿಸಲಾಗುತ್ತಿದೆ. ಪ್ರಾಥಮಿಕ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಈಗಾಗಲೇ ರಾಜ್ಯದ ಮಾಜಿ ಸಚಿವ ಚಂದ್ರನಾಥ್ ಸಿನ್ಹಾ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ವಿಚಾರಣೆಗೆ ಒಳಪಡಿಸಿದ್ದು, ತನಿಖೆಯ ಜಾಲವನ್ನು ಮತ್ತಷ್ಟು ವಿಸ್ತರಿಸಿದೆ.

