ತಿರುಪತಿ ಲಡ್ಡು ಪ್ರಸಾದಕ್ಕೆ ಇ-ಟಂಗ್, ಇ-ನೋಸ್ ಗುಣಮಟ್ಟ ಪರೀಕ್ಷೆ: ಆಂಧ್ರ ಆರೋಗ್ಯ ಸಚಿವ
x

ದೇಶಾದ್ಯಂತ ಕೇವಲ ಸೀಮಿತ ಸಂಖ್ಯೆಯ ಪ್ರಯೋಗಾಲಯಗಳು ಮಾತ್ರ ಈ ಸೌಲಭ್ಯಗಳನ್ನು ಹೊಂದಿವೆ ಎಂದು ಪ್ರಕಟಣೆ ತಿಳಿಸಿದೆ.

ತಿರುಪತಿ ಲಡ್ಡು ಪ್ರಸಾದಕ್ಕೆ 'ಇ-ಟಂಗ್', 'ಇ-ನೋಸ್' ಗುಣಮಟ್ಟ ಪರೀಕ್ಷೆ: ಆಂಧ್ರ ಆರೋಗ್ಯ ಸಚಿವ

ಫ್ರಾನ್ಸ್‌ನಿಂದ ತರಿಸಲಾಗುತ್ತಿರುವ ಇ-ಟಂಗ್ ವ್ಯವಸ್ಥೆಯು ತುಪ್ಪದಲ್ಲಿನ ಸೂಕ್ಷ್ಮ ಮಟ್ಟದ ಗುಣಮಟ್ಟದ ಕುಸಿತವನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದ್ದರೆ, ಇ-ನೋಸ್ (E-Nose) ವ್ಯವಸ್ಥೆ ಪರಿಮಳದ ಮೂಲಕ ಗುಣಮಟ್ಟ ನಿರ್ಣಯಿಸುತ್ತದೆ.


Click the Play button to hear this message in audio format

ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ಗೆ ಪೂರೈಕೆಯಾಗುವ ತುಪ್ಪದ ಗುಣಮಟ್ಟದ ಕುರಿತ ವಿವಾದಗಳ ಹಿನ್ನೆಲೆಯಲ್ಲಿ, ದೇವಸ್ಥಾನದ ಆಡಳಿತ ಮಂಡಳಿಯು ಕಟ್ಟುನಿಟ್ಟಾದ ಗುಣಮಟ್ಟದ ತಪಾಸಣೆ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಸುಧಾರಿತ "ಇ-ಟಂಗ್" ಮತ್ತು "ಇ-ನೋಸ್" ವ್ಯವಸ್ಥೆಗಳನ್ನು ಒಳಗೊಂಡ ಆಧುನಿಕ ಆಹಾರ ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸಲು ಮುಂದಾಗಿದೆ.

ತಿರುಪತಿಯಲ್ಲಿರುವ ಜಗತ್ಪ್ರಸಿದ್ಧ ವೆಂಕಟೇಶ್ವರ ಸ್ವಾಮಿ ದೇವಾಲಯವನ್ನು ಟಿಟಿಡಿ ನಿರ್ವಹಿಸುತ್ತಿದ್ದು 25 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿರುವ ಈ ಅತ್ಯಾಧುನಿಕ ಪ್ರಯೋಗಾಲಯದ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ ಎಂದು ಆಂಧ್ರಪ್ರದೇಶದ ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್ ತಿಳಿಸಿದ್ದಾರೆ.

"ಇ-ಟಂಗ್ ಮತ್ತು ಇ-ನೋಸ್ (ಎರಡೂ ಎಲೆಕ್ಟ್ರಾನಿಕ್ ಉಪಕರಣಗಳು) ಒಳಗೊಂಡಿರುವ ಅತ್ಯಾಧುನಿಕ ಆಹಾರ ಪ್ರಯೋಗಾಲಯವು ತುಪ್ಪದಲ್ಲಿನ ಸೂಕ್ಷ್ಮ ಮಟ್ಟದ ಗುಣಮಟ್ಟದ ಕುಸಿತವನ್ನು ಸಹ ಪತ್ತೆ ಹಚ್ಚಬಲ್ಲದು. ಈ ಪ್ರಯೋಗಾಲಯಗಳು ಶೀಘ್ರದಲ್ಲೇ ತಿರುಮಲದಲ್ಲಿ ಲಭ್ಯವಾಗಲಿವೆ," ಎಂದು ಸಚಿವ ಯಾದವ್ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಚಿವರ ಪ್ರಕಾರ, ಫ್ರಾನ್ಸ್‌ನಿಂದ ಖರೀದಿಸಲಾಗುತ್ತಿರುವ ಇ-ಟಂಗ್ ವ್ಯವಸ್ಥೆಯು ತುಪ್ಪ ಮತ್ತು ಇತರ ಕಚ್ಚಾ ವಸ್ತುಗಳ ರುಚಿಯ ಮಾದರಿಗಳನ್ನು ನಿಖರವಾಗಿ ವಿಶ್ಲೇಷಿಸುವ ಮೂಲಕ ಸೂಕ್ಷ್ಮ ಮಟ್ಟದ ಗುಣಮಟ್ಟದ ಕುಸಿತವನ್ನು ಪತ್ತೆ ಮಾಡುವ ಸಾಮರ್ಥ್ಯ ಹೊಂದಿದೆ.

ಅದೇ ರೀತಿ, ಇ-ನೋಸ್ ವ್ಯವಸ್ಥೆಯು ಪರಿಮಳದ ಮಾದರಿಗಳನ್ನು ನಿರ್ಣಯಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ಪ್ರಸಾದ ತಯಾರಿಕೆಯಲ್ಲಿ ಬಳಸುವ ತುಪ್ಪ ಮತ್ತು ಇತರ ಪದಾರ್ಥಗಳಲ್ಲಿನ ಕಲಬೆರಕೆ ಹಾಗೂ ಗುಣಮಟ್ಟದ ದೋಷಗಳನ್ನು ಗುರುತಿಸಲು ಅಧಿಕಾರಿಗಳಿಗೆ ಅನುವು ಮಾಡಿಕೊಡುತ್ತದೆ.

ದೇಶಾದ್ಯಂತ ಕೇವಲ ಸೀಮಿತ ಸಂಖ್ಯೆಯ ಪ್ರಯೋಗಾಲಯಗಳು ಮಾತ್ರ ಈ ಸೌಲಭ್ಯಗಳನ್ನು ಹೊಂದಿವೆ ಎಂದು ಪ್ರಕಟಣೆ ತಿಳಿಸಿದೆ. ಆದಾಗ್ಯೂ, ಆಂಧ್ರಪ್ರದೇಶದಲ್ಲಿ ಇದೇ ಮೊದಲ ಬಾರಿಗೆ, ಸುಧಾರಿತ ಸೌಲಭ್ಯಗಳನ್ನು ಹೊಂದಿರುವ ಅತ್ಯಾಧುನಿಕ ಪ್ರಯೋಗಾಲಯವೊಂದು ಪುಣ್ಯಕ್ಷೇತ್ರದಲ್ಲಿ ಸ್ಥಾಪನೆಯಾಗುತ್ತಿದೆ.

25 ಕೋಟಿ ರೂಪಾಯಿ ವೆಚ್ಚದ ಈ ಸೌಲಭ್ಯದ ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿದ್ದು, ಮುಂದಿನ ತಿಂಗಳು ಕಾರ್ಯಾಚರಣೆ ಆರಂಭಿಸಲಿದೆ. ಲಡ್ಡು ಪ್ರಸಾದ ತಯಾರಿಕೆಯಲ್ಲಿ ಬಳಸುವ ತುಪ್ಪ, ಒಣಹಣ್ಣುಗಳು ಸೇರಿದಂತೆ ಸುಮಾರು 60 ಕಚ್ಚಾ ವಸ್ತುಗಳನ್ನು ಈ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Read More
Next Story