
ದೇಶಾದ್ಯಂತ ಕೇವಲ ಸೀಮಿತ ಸಂಖ್ಯೆಯ ಪ್ರಯೋಗಾಲಯಗಳು ಮಾತ್ರ ಈ ಸೌಲಭ್ಯಗಳನ್ನು ಹೊಂದಿವೆ ಎಂದು ಪ್ರಕಟಣೆ ತಿಳಿಸಿದೆ.
ತಿರುಪತಿ ಲಡ್ಡು ಪ್ರಸಾದಕ್ಕೆ 'ಇ-ಟಂಗ್', 'ಇ-ನೋಸ್' ಗುಣಮಟ್ಟ ಪರೀಕ್ಷೆ: ಆಂಧ್ರ ಆರೋಗ್ಯ ಸಚಿವ
ಫ್ರಾನ್ಸ್ನಿಂದ ತರಿಸಲಾಗುತ್ತಿರುವ ಇ-ಟಂಗ್ ವ್ಯವಸ್ಥೆಯು ತುಪ್ಪದಲ್ಲಿನ ಸೂಕ್ಷ್ಮ ಮಟ್ಟದ ಗುಣಮಟ್ಟದ ಕುಸಿತವನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದ್ದರೆ, ಇ-ನೋಸ್ (E-Nose) ವ್ಯವಸ್ಥೆ ಪರಿಮಳದ ಮೂಲಕ ಗುಣಮಟ್ಟ ನಿರ್ಣಯಿಸುತ್ತದೆ.
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ಗೆ ಪೂರೈಕೆಯಾಗುವ ತುಪ್ಪದ ಗುಣಮಟ್ಟದ ಕುರಿತ ವಿವಾದಗಳ ಹಿನ್ನೆಲೆಯಲ್ಲಿ, ದೇವಸ್ಥಾನದ ಆಡಳಿತ ಮಂಡಳಿಯು ಕಟ್ಟುನಿಟ್ಟಾದ ಗುಣಮಟ್ಟದ ತಪಾಸಣೆ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಸುಧಾರಿತ "ಇ-ಟಂಗ್" ಮತ್ತು "ಇ-ನೋಸ್" ವ್ಯವಸ್ಥೆಗಳನ್ನು ಒಳಗೊಂಡ ಆಧುನಿಕ ಆಹಾರ ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸಲು ಮುಂದಾಗಿದೆ.
ತಿರುಪತಿಯಲ್ಲಿರುವ ಜಗತ್ಪ್ರಸಿದ್ಧ ವೆಂಕಟೇಶ್ವರ ಸ್ವಾಮಿ ದೇವಾಲಯವನ್ನು ಟಿಟಿಡಿ ನಿರ್ವಹಿಸುತ್ತಿದ್ದು 25 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿರುವ ಈ ಅತ್ಯಾಧುನಿಕ ಪ್ರಯೋಗಾಲಯದ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ ಎಂದು ಆಂಧ್ರಪ್ರದೇಶದ ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್ ತಿಳಿಸಿದ್ದಾರೆ.
"ಇ-ಟಂಗ್ ಮತ್ತು ಇ-ನೋಸ್ (ಎರಡೂ ಎಲೆಕ್ಟ್ರಾನಿಕ್ ಉಪಕರಣಗಳು) ಒಳಗೊಂಡಿರುವ ಅತ್ಯಾಧುನಿಕ ಆಹಾರ ಪ್ರಯೋಗಾಲಯವು ತುಪ್ಪದಲ್ಲಿನ ಸೂಕ್ಷ್ಮ ಮಟ್ಟದ ಗುಣಮಟ್ಟದ ಕುಸಿತವನ್ನು ಸಹ ಪತ್ತೆ ಹಚ್ಚಬಲ್ಲದು. ಈ ಪ್ರಯೋಗಾಲಯಗಳು ಶೀಘ್ರದಲ್ಲೇ ತಿರುಮಲದಲ್ಲಿ ಲಭ್ಯವಾಗಲಿವೆ," ಎಂದು ಸಚಿವ ಯಾದವ್ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಚಿವರ ಪ್ರಕಾರ, ಫ್ರಾನ್ಸ್ನಿಂದ ಖರೀದಿಸಲಾಗುತ್ತಿರುವ ಇ-ಟಂಗ್ ವ್ಯವಸ್ಥೆಯು ತುಪ್ಪ ಮತ್ತು ಇತರ ಕಚ್ಚಾ ವಸ್ತುಗಳ ರುಚಿಯ ಮಾದರಿಗಳನ್ನು ನಿಖರವಾಗಿ ವಿಶ್ಲೇಷಿಸುವ ಮೂಲಕ ಸೂಕ್ಷ್ಮ ಮಟ್ಟದ ಗುಣಮಟ್ಟದ ಕುಸಿತವನ್ನು ಪತ್ತೆ ಮಾಡುವ ಸಾಮರ್ಥ್ಯ ಹೊಂದಿದೆ.
ಅದೇ ರೀತಿ, ಇ-ನೋಸ್ ವ್ಯವಸ್ಥೆಯು ಪರಿಮಳದ ಮಾದರಿಗಳನ್ನು ನಿರ್ಣಯಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ಪ್ರಸಾದ ತಯಾರಿಕೆಯಲ್ಲಿ ಬಳಸುವ ತುಪ್ಪ ಮತ್ತು ಇತರ ಪದಾರ್ಥಗಳಲ್ಲಿನ ಕಲಬೆರಕೆ ಹಾಗೂ ಗುಣಮಟ್ಟದ ದೋಷಗಳನ್ನು ಗುರುತಿಸಲು ಅಧಿಕಾರಿಗಳಿಗೆ ಅನುವು ಮಾಡಿಕೊಡುತ್ತದೆ.
ದೇಶಾದ್ಯಂತ ಕೇವಲ ಸೀಮಿತ ಸಂಖ್ಯೆಯ ಪ್ರಯೋಗಾಲಯಗಳು ಮಾತ್ರ ಈ ಸೌಲಭ್ಯಗಳನ್ನು ಹೊಂದಿವೆ ಎಂದು ಪ್ರಕಟಣೆ ತಿಳಿಸಿದೆ. ಆದಾಗ್ಯೂ, ಆಂಧ್ರಪ್ರದೇಶದಲ್ಲಿ ಇದೇ ಮೊದಲ ಬಾರಿಗೆ, ಸುಧಾರಿತ ಸೌಲಭ್ಯಗಳನ್ನು ಹೊಂದಿರುವ ಅತ್ಯಾಧುನಿಕ ಪ್ರಯೋಗಾಲಯವೊಂದು ಪುಣ್ಯಕ್ಷೇತ್ರದಲ್ಲಿ ಸ್ಥಾಪನೆಯಾಗುತ್ತಿದೆ.
25 ಕೋಟಿ ರೂಪಾಯಿ ವೆಚ್ಚದ ಈ ಸೌಲಭ್ಯದ ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿದ್ದು, ಮುಂದಿನ ತಿಂಗಳು ಕಾರ್ಯಾಚರಣೆ ಆರಂಭಿಸಲಿದೆ. ಲಡ್ಡು ಪ್ರಸಾದ ತಯಾರಿಕೆಯಲ್ಲಿ ಬಳಸುವ ತುಪ್ಪ, ಒಣಹಣ್ಣುಗಳು ಸೇರಿದಂತೆ ಸುಮಾರು 60 ಕಚ್ಚಾ ವಸ್ತುಗಳನ್ನು ಈ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

