
ತಿರುಪತಿಯಲ್ಲಿ ಮಾರ್ಚ್ 30ರಿಂದ 3 ದಿನಗಳ ಕಾಲ ಶ್ರೀವಾರಿ ಸಾಲಕಟ್ಲ ವಸಂತೋತ್ಸವ ಸಂಭ್ರಮ
1360ನೇ ಇಸವಿಯಿಂದಲೇ ತಿರುಮಲದಲ್ಲಿ ಈ ವಸಂತೋತ್ಸವವನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿಯೂ ಸಂಭ್ರಮದಲ್ಲಿ ನಡೆಯಲಿದೆ.
ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ನಡೆಯುವ ನಿರಂತರ ಉತ್ಸವಗಳ ಸರಮಾಲೆಯಲ್ಲಿ ಇದೀಗ 'ಶ್ರೀವಾರಿ ಸಾಲಕಟ್ಲ ವಸಂತೋತ್ಸವ'ದ ಸಂಭ್ರಮ ಮನೆಮಾಡಲಿದೆ. ಚೈತ್ರ ಶುದ್ಧ ಪೌರ್ಣಮಿಯ ಹಿನ್ನೆಲೆಯಲ್ಲಿ ಮಾರ್ಚ್ 30 ರಿಂದ ಏಪ್ರಿಲ್ 1 ರವರೆಗೆ ಸತತ ಮೂರು ದಿನಗಳ ಕಾಲ ಈ ಅದ್ಧೂರಿ ವಸಂತೋತ್ಸವ ಜರುಗಲಿದೆ.
ಈ ಹಿನ್ನೆಲೆಯಲ್ಲಿ, ಭಕ್ತರ ಅನುಕೂಲಕ್ಕಾಗಿ ಈ ಮೂರು ದಿನಗಳ ಕಾಲ ನಡೆಯಬೇಕಿದ್ದ ಕಲ್ಯಾಣೋತ್ಸವ, ಊಂಜಾಲ್ ಸೇವೆ, ಆರ್ಜಿತ ಬ್ರಹ್ಮೋತ್ಸವ, ಸಹಸ್ರದೀಪಾಲಂಕಾರ ಸೇವೆ ಹಾಗೂ ಮಾರ್ಚ್ 31ರಂದು ನಡೆಯಲಿದ್ದ ಅಷ್ಟದಳ ಪಾದ ಪದ್ಮಾರಾಧನೆ ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ಪ್ರಕಟಿಸಿದ್ದಾರೆ. 1360ನೇ ಇಸವಿಯಿಂದಲೇ ತಿರುಮಲದಲ್ಲಿ ಈ ವಸಂತೋತ್ಸವವನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ಚಿನ್ನದ ರಥದಲ್ಲಿ ಕಂಗೊಳಿಸಲಿರುವ ಮಲಯಪ್ಪ
ವಸಂತೋತ್ಸವದ ಎರಡನೇ ದಿನವಾದ ಮಾರ್ಚ್ 31 ರಂದು ಭಕ್ತರಿಗೆ ಕಣ್ಮನ ಸೆಳೆಯುವ ದೃಶ್ಯಾವಳಿಗಳು ಎದುರಾಗಲಿವೆ. ಅಂದು ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ ಶ್ರೀ ಮಲಯಪ್ಪ ಸ್ವಾಮಿಯು, ಶ್ರೀದೇವಿ ಹಾಗೂ ಭೂದೇವಿಯರೊಂದಿಗೆ ಚಿನ್ನದ ರಥವನ್ನೇರಿ ತಿರುಮಲದ ಮಾದ ಬೀದಿಗಳಲ್ಲಿ ವಿಹರಿಸಲಿದ್ದಾರೆ. ಈ ವೇಳೆ ಗ್ಯಾಲರಿಗಳಲ್ಲಿ ನೆರೆದಿರುವ ಸಹಸ್ರಾರು ಯಾತ್ರಾರ್ಥಿಗಳಿಗೆ ಸ್ವಾಮಿಯ ದರ್ಶನ ಭಾಗ್ಯ ದೊರೆಯಲಿದೆ. ರಥೋತ್ಸವದ ಬಳಿಕ ಅರ್ಚಕರು ವಸಂತ ಮಂಟಪದಲ್ಲಿ ಶಾಸ್ತ್ರೋಕ್ತವಾಗಿ ವಸಂತೋತ್ಸವದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ವಸಂತ ಋತುವಿನ ಆಗಮನದ ಸಂಕೇತವಾಗಿ ಸ್ವಾಮಿಗೆ ವಿವಿಧ ಬಗೆಯ ಪರಿಮಳಯುಕ್ತ ಹೂವುಗಳು ಹಾಗೂ ಹಣ್ಣು-ಹಂಪಲುಗಳನ್ನು ವಿಶೇಷವಾಗಿ ಅರ್ಪಿಸಲಾಗುತ್ತದೆ.
ತ್ರೇತಾಯುಗ, ದ್ವಾಪರಯುಗದ ಸಂಕೇತ: ಉತ್ಸವದ ವಿಶೇಷತೆ
ವಸಂತೋತ್ಸವದ ಮೊದಲ ದಿನ (ಮಾರ್ಚ್ 30) ಬೆಳಿಗ್ಗೆ 6.30ಕ್ಕೆ ಮಲಯಪ್ಪ ಸ್ವಾಮಿ ದೇವಿಯರೊಂದಿಗೆ ನಾಲ್ಕು ಮಾದ ಬೀದಿಗಳಲ್ಲಿ ಮೆರವಣಿಗೆ ಹೊರಟು, ನಂತರ ವಸಂತೋತ್ಸವ ಮಂಟಪದಲ್ಲಿ ಅಭಿಷೇಕ ಸ್ವೀಕರಿಸಲಿದ್ದಾರೆ. ಉತ್ಸವದ ಕಡೆಯ ದಿನವಾದ ಏಪ್ರಿಲ್ 1 ರಂದು ವಿಶಿಷ್ಟ ಆಚರಣೆಯೊಂದಿದೆ. ಅಂದು ಶ್ರೀ ಸೀತಾರಾಮ-ಲಕ್ಷ್ಮಣ-ಹನುಮಾನ್ ಹಾಗೂ ರುಕ್ಮಿಣಿ ಸಮೇತ ಶ್ರೀ ಕೃಷ್ಣ ಸ್ವಾಮಿಯ ಉತ್ಸವ ಮೂರ್ತಿಗಳ ಜೊತೆಯಲ್ಲಿ ಮಲಯಪ್ಪ ಸ್ವಾಮಿಯೂ ವಸಂತೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ನಾನೇ ತ್ರೇತಾಯುಗದ ರಾಮ ಮತ್ತು ದ್ವಾಪರಯುಗದ ಕೃಷ್ಣ ಎಂಬ ಸಂದೇಶವನ್ನು ಸಾರುವ ಉದ್ದೇಶದಿಂದ ಈ ಮೂರ್ತಿಗಳನ್ನು ವಿಶೇಷ ಚಿನ್ನದ ಪೀಠಗಳ ಮೇಲೆ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಈ ಮೂರೂ ದಿನಗಳಲ್ಲಿ ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಸ್ವಾಮಿ-ಅಮ್ಮನವರಿಗೆ ಹಾಲು, ಮೊಸರು, ಜೇನುತುಪ್ಪ, ಎಳನೀರು, ಅರಿಶಿನ ಮತ್ತು ಶ್ರೀಗಂಧದ ಮೂಲಕ ಭವ್ಯವಾದ 'ಸ್ನಪನ ತಿರುಮಂಜನ' (ಅಭಿಷೇಕ) ನಡೆಯಲಿದ್ದು, ಸಂಜೆ 6 ರಿಂದ 6.30 ರವರೆಗೆ ಆಸ್ಥಾನ ಸೇವೆ ಜರುಗಲಿದೆ.

