ತಿರುಪತಿಯಲ್ಲಿ ಮಾರ್ಚ್ 30ರಿಂದ 3 ದಿನಗಳ ಕಾಲ ಶ್ರೀವಾರಿ ಸಾಲಕಟ್ಲ ವಸಂತೋತ್ಸವ ಸಂಭ್ರಮ
x
ತಿರುಪತಿ ದೇವಸ್ಥಾನದ ನೋಟ.

ತಿರುಪತಿಯಲ್ಲಿ ಮಾರ್ಚ್ 30ರಿಂದ 3 ದಿನಗಳ ಕಾಲ ಶ್ರೀವಾರಿ ಸಾಲಕಟ್ಲ ವಸಂತೋತ್ಸವ ಸಂಭ್ರಮ

1360ನೇ ಇಸವಿಯಿಂದಲೇ ತಿರುಮಲದಲ್ಲಿ ಈ ವಸಂತೋತ್ಸವವನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿಯೂ ಸಂಭ್ರಮದಲ್ಲಿ ನಡೆಯಲಿದೆ.


Click the Play button to hear this message in audio format

ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ನಡೆಯುವ ನಿರಂತರ ಉತ್ಸವಗಳ ಸರಮಾಲೆಯಲ್ಲಿ ಇದೀಗ 'ಶ್ರೀವಾರಿ ಸಾಲಕಟ್ಲ ವಸಂತೋತ್ಸವ'ದ ಸಂಭ್ರಮ ಮನೆಮಾಡಲಿದೆ. ಚೈತ್ರ ಶುದ್ಧ ಪೌರ್ಣಮಿಯ ಹಿನ್ನೆಲೆಯಲ್ಲಿ ಮಾರ್ಚ್ 30 ರಿಂದ ಏಪ್ರಿಲ್ 1 ರವರೆಗೆ ಸತತ ಮೂರು ದಿನಗಳ ಕಾಲ ಈ ಅದ್ಧೂರಿ ವಸಂತೋತ್ಸವ ಜರುಗಲಿದೆ.

ಈ ಹಿನ್ನೆಲೆಯಲ್ಲಿ, ಭಕ್ತರ ಅನುಕೂಲಕ್ಕಾಗಿ ಈ ಮೂರು ದಿನಗಳ ಕಾಲ ನಡೆಯಬೇಕಿದ್ದ ಕಲ್ಯಾಣೋತ್ಸವ, ಊಂಜಾಲ್ ಸೇವೆ, ಆರ್ಜಿತ ಬ್ರಹ್ಮೋತ್ಸವ, ಸಹಸ್ರದೀಪಾಲಂಕಾರ ಸೇವೆ ಹಾಗೂ ಮಾರ್ಚ್ 31ರಂದು ನಡೆಯಲಿದ್ದ ಅಷ್ಟದಳ ಪಾದ ಪದ್ಮಾರಾಧನೆ ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ಪ್ರಕಟಿಸಿದ್ದಾರೆ. 1360ನೇ ಇಸವಿಯಿಂದಲೇ ತಿರುಮಲದಲ್ಲಿ ಈ ವಸಂತೋತ್ಸವವನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ಚಿನ್ನದ ರಥದಲ್ಲಿ ಕಂಗೊಳಿಸಲಿರುವ ಮಲಯಪ್ಪ

ವಸಂತೋತ್ಸವದ ಎರಡನೇ ದಿನವಾದ ಮಾರ್ಚ್ 31 ರಂದು ಭಕ್ತರಿಗೆ ಕಣ್ಮನ ಸೆಳೆಯುವ ದೃಶ್ಯಾವಳಿಗಳು ಎದುರಾಗಲಿವೆ. ಅಂದು ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ ಶ್ರೀ ಮಲಯಪ್ಪ ಸ್ವಾಮಿಯು, ಶ್ರೀದೇವಿ ಹಾಗೂ ಭೂದೇವಿಯರೊಂದಿಗೆ ಚಿನ್ನದ ರಥವನ್ನೇರಿ ತಿರುಮಲದ ಮಾದ ಬೀದಿಗಳಲ್ಲಿ ವಿಹರಿಸಲಿದ್ದಾರೆ. ಈ ವೇಳೆ ಗ್ಯಾಲರಿಗಳಲ್ಲಿ ನೆರೆದಿರುವ ಸಹಸ್ರಾರು ಯಾತ್ರಾರ್ಥಿಗಳಿಗೆ ಸ್ವಾಮಿಯ ದರ್ಶನ ಭಾಗ್ಯ ದೊರೆಯಲಿದೆ. ರಥೋತ್ಸವದ ಬಳಿಕ ಅರ್ಚಕರು ವಸಂತ ಮಂಟಪದಲ್ಲಿ ಶಾಸ್ತ್ರೋಕ್ತವಾಗಿ ವಸಂತೋತ್ಸವದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ವಸಂತ ಋತುವಿನ ಆಗಮನದ ಸಂಕೇತವಾಗಿ ಸ್ವಾಮಿಗೆ ವಿವಿಧ ಬಗೆಯ ಪರಿಮಳಯುಕ್ತ ಹೂವುಗಳು ಹಾಗೂ ಹಣ್ಣು-ಹಂಪಲುಗಳನ್ನು ವಿಶೇಷವಾಗಿ ಅರ್ಪಿಸಲಾಗುತ್ತದೆ.

ತ್ರೇತಾಯುಗ, ದ್ವಾಪರಯುಗದ ಸಂಕೇತ: ಉತ್ಸವದ ವಿಶೇಷತೆ

ವಸಂತೋತ್ಸವದ ಮೊದಲ ದಿನ (ಮಾರ್ಚ್ 30) ಬೆಳಿಗ್ಗೆ 6.30ಕ್ಕೆ ಮಲಯಪ್ಪ ಸ್ವಾಮಿ ದೇವಿಯರೊಂದಿಗೆ ನಾಲ್ಕು ಮಾದ ಬೀದಿಗಳಲ್ಲಿ ಮೆರವಣಿಗೆ ಹೊರಟು, ನಂತರ ವಸಂತೋತ್ಸವ ಮಂಟಪದಲ್ಲಿ ಅಭಿಷೇಕ ಸ್ವೀಕರಿಸಲಿದ್ದಾರೆ. ಉತ್ಸವದ ಕಡೆಯ ದಿನವಾದ ಏಪ್ರಿಲ್ 1 ರಂದು ವಿಶಿಷ್ಟ ಆಚರಣೆಯೊಂದಿದೆ. ಅಂದು ಶ್ರೀ ಸೀತಾರಾಮ-ಲಕ್ಷ್ಮಣ-ಹನುಮಾನ್ ಹಾಗೂ ರುಕ್ಮಿಣಿ ಸಮೇತ ಶ್ರೀ ಕೃಷ್ಣ ಸ್ವಾಮಿಯ ಉತ್ಸವ ಮೂರ್ತಿಗಳ ಜೊತೆಯಲ್ಲಿ ಮಲಯಪ್ಪ ಸ್ವಾಮಿಯೂ ವಸಂತೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ನಾನೇ ತ್ರೇತಾಯುಗದ ರಾಮ ಮತ್ತು ದ್ವಾಪರಯುಗದ ಕೃಷ್ಣ ಎಂಬ ಸಂದೇಶವನ್ನು ಸಾರುವ ಉದ್ದೇಶದಿಂದ ಈ ಮೂರ್ತಿಗಳನ್ನು ವಿಶೇಷ ಚಿನ್ನದ ಪೀಠಗಳ ಮೇಲೆ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಈ ಮೂರೂ ದಿನಗಳಲ್ಲಿ ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಸ್ವಾಮಿ-ಅಮ್ಮನವರಿಗೆ ಹಾಲು, ಮೊಸರು, ಜೇನುತುಪ್ಪ, ಎಳನೀರು, ಅರಿಶಿನ ಮತ್ತು ಶ್ರೀಗಂಧದ ಮೂಲಕ ಭವ್ಯವಾದ 'ಸ್ನಪನ ತಿರುಮಂಜನ' (ಅಭಿಷೇಕ) ನಡೆಯಲಿದ್ದು, ಸಂಜೆ 6 ರಿಂದ 6.30 ರವರೆಗೆ ಆಸ್ಥಾನ ಸೇವೆ ಜರುಗಲಿದೆ.

Read More
Next Story