
ನಟಿ ತ್ರಿಷಾ ಕುರಿತು ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ- ಭಾರೀ ಆಕ್ರೋಶ ವ್ಯಕ್ತ
ತಂಜಾವೂರಿನಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾಗ, ಸಭೆಯಲ್ಲಿದ್ದ ಜನಸಮೂಹದಿಂದ "ತ್ರಿಷಾ, ತ್ರಿಷಾ" ಎಂಬ ಘೋಷಣೆಗಳು ಕೇಳಿಬಂದವು.
ತಮಿಳುನಾಡು ವಿರೋಧ ಪಕ್ಷದ ನಾಯಕ ಹಾಗೂ ಡಿಎಂಕೆ ಮುಖಂಡ ಉದಯನಿಧಿ ಸ್ಟಾಲಿನ್ ಅವರು ಸಮಾವೇಶವೊಂದರಲ್ಲಿ ನಟಿ ತ್ರಿಷಾ ಅವರ ಹೆಸರು ಪ್ರಸ್ತಾಪಿಸಿ ನೀಡಿರುವ ವಿವಾದಾತ್ಮಕ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಉದಯನಿಧಿ ಅವರ ಈ ಹೇಳಿಕೆಯನ್ನು ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಅಸಹ್ಯಕರ ಎಂದು ಕರೆದಿದ್ದರೆ, ಭಾರತೀಯ ಜನತಾ ಪಾರ್ಟಿ (BJP) ಅವರನ್ನು ತಕ್ಷಣವೇ ಬಂಧಿಸಿ ಜೈಲಿಗಟ್ಟಬೇಕೆಂದು ಆಗ್ರಹಿಸಿದೆ.
ಸಮಾವೇಶದಲ್ಲಿ ನಡೆದಿದ್ದೇನು?
ತಂಜಾವೂರಿನಲ್ಲಿ ಕಾವೇರಿ ನೀರಾವರಿ ವಿಷಯಕ್ಕೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾಗ, ಸಭೆಯಲ್ಲಿದ್ದ ಜನಸಮೂಹದಿಂದ "ತ್ರಿಷಾ, ತ್ರಿಷಾ" ಎಂಬ ಘೋಷಣೆಗಳು ಕೇಳಿಬಂದವು.
ಈ ವೇಳೆ ಮಾತು ನಿಲ್ಲಿಸಿದ ಉದಯನಿಧಿ ಸ್ಟಾಲಿನ್, ವ್ಯಂಗ್ಯವಾಗಿ ನಕ್ಕು ದ್ವಂದ್ವಾರ್ಥದ ಹೇಳಿಕೆ ನೀಡಿದರು. ಸಿಎಂ ವಿಜಯ್ ಅವರ ಸಹನಟಿ ಹಾಗೂ ಆಪ್ತ ಸ್ನೇಹಿತೆಯಾಗಿರುವ ತ್ರಿಷಾ ಅವರ ಹೆಸರನ್ನು ಉಲ್ಲೇಖಿಸಿ ನೀಡಲಾದ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಈಡಾಗಿದೆ.
ಟಿವಿಕೆ ಮತ್ತು ಬಿಜೆಪಿ ತೀವ್ರ ಆಕ್ರೋಶ
ಉದಯನಿಧಿ ಅವರ ಹೇಳಿಕೆಗೆ ಟಿವಿಕೆ ಶಾಸಕ ರೇವಂತ್ ಚರಣ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಸಂಪೂರ್ಣವಾಗಿ ಅಸಹ್ಯಕರ. ಯಾರೇ ಆಗಲಿ ಅವರ ವಿರುದ್ಧ ಇಂತಹ ನೀಚ ಹೇಳಿಕೆಗಳನ್ನು ನೀಡುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಇದು ಅವರ ರಾಜಕೀಯ ಸಂಸ್ಕೃತಿ ಮತ್ತು ಕೀಳು ಮನಸ್ಥಿತಿಯನ್ನು ತೋರಿಸುತ್ತದೆ," ಎಂದು ಕಿಡಿಕಾರಿದ್ದಾರೆ.
Udhayanidhi Stalin has landed in controversy after making an alleged double-meaning remark during a Cauvery protest speech when the crowd began chanting "Trisha"
— Nabila Jamal (@nabilajamal_) August 3, 2026
The video has gone viral, ruling TVK calls the comment "disgusting" and BJP demands his arrest over the remark. DMK… pic.twitter.com/Ay4S0i9HCv
ಮತ್ತೊಂದೆಡೆ, ತಮಿಳುನಾಡು ಬಿಜೆಪಿ ಮುಖ್ಯ ವಕ್ತಾರ ನಾರಾಯಣನ್ ತಿರುಪತಿ ಅವರು ಉದಯನಿಧಿ ಅವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. "ಮುಖ್ಯಮಂತ್ರಿ ವಿಜಯ್ ಮತ್ತು ನಟಿ ತ್ರಿಷಾ ಅವರ ಬಗ್ಗೆ ಉದಯನಿಧಿ ಸ್ಟಾಲಿನ್ ಆಡಿರುವ ದ್ವಂದ್ವಾರ್ಥದ ಮಾತುಗಳು ಅಸಹ್ಯಕರ, ಅಶ್ಲೀಲ ಮತ್ತು ನಾಚಿಕೆಗೇಡಿನ ಸಂಗತಿ. ತಾಯಿ, ಹೆಂಡತಿ ಮತ್ತು ಮಗಳನ್ನು ಹೊಂದಿರುವ ಯಾವುದೇ ವ್ಯಕ್ತಿಯೂ ಇಷ್ಟು ಕೀಳಾಗಿ ಮಾತನಾಡುವುದಿಲ್ಲ. 'ದ್ರಾವಿಡ ಮಾಡೆಲ್' ಎಂದು ಹೇಳಿಕೊಳ್ಳುವ ಇಂತಹ ದುಷ್ಟರು ಸಾರ್ವಜನಿಕವಾಗಿ ಈ ರೀತಿ ಮಾತನಾಡುವುದನ್ನು ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ನೋಡುತ್ತಿರುವುದು ನಾಚಿಕೆಗೇಡು. ಈ ಕೀಳುಮಟ್ಟದ ಭಾಷಣಕ್ಕಾಗಿ ಉದಯನಿಧಿಯನ್ನು ಬಂಧಿಸಿ ಜೈಲಿಗಟ್ಟಿದರೆ ಮುಖ್ಯಮಂತ್ರಿ ವಿಜಯ್ ಅವರಿಗೆ ಹೆಮ್ಮೆ ಸಿಗುತ್ತದೆ," ಎಂದಿದ್ದಾರೆ.
ಅಲ್ಲದೆ, ಬಿಜೆಪಿ ನಾಯಕ ವಿನೋಜ್ ಪಿ. ಸೆಲ್ವಂ ಪ್ರತಿಕ್ರಿಯಿಸಿ, "ಉದಯನಿಧಿ ಅವರು ಸ್ವತಃ ಒಬ್ಬ ನಟರಾಗಿದ್ದುಕೊಂಡು, ಸಹ ಕಲಾವಿದರ ಬಗ್ಗೆ ಈ ರೀತಿ ಕೀಳಾಗಿ ಮಾತನಾಡಿರುವುದು ಆಘಾತಕಾರಿ. ಕಲಾವಿದರ ಸಂಘ ಈ ಹೇಳಿಕೆಯನ್ನು ಖಂಡಿಸಬೇಕು," ಎಂದು ಆಗ್ರಹಿಸಿದ್ದಾರೆ. ಸನಾತನ ಧರ್ಮದ ಕುರಿತು ನೀಡಿದ್ದ ಹೇಳಿಕೆಯಿಂದ ಹಿಂದೆ ಸುಪ್ರೀಂ ಕೋರ್ಟ್ನಿಂದಲೂ ತೀಕ್ಷ್ಣ ತೊಳೆಯುವಿಕೆಗೆ ಒಳಗಾಗಿದ್ದ ಉದಯನಿಧಿ ಸ್ಟಾಲಿನ್, ಇದೀಗ ಮತ್ತೊಮ್ಮೆ ತಮ್ಮ ನಾಲಿಗೆ ಹರಿಬಿಟ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ

