
ಡಿಎಂಕೆ ನಾಯಕ ವಿ. ಸೆಂಥಿಲ್ ಬಾಲಾಜಿ ಅವರ ಸಹೋದರ ಅಶೋಕ್ ಕುಮಾರ್ (ಎಡ) ಈ ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ.
ಟಿವಿಕೆ ಸರ್ಕಾರ ಉರುಳಿಸಲು ಭಾರಿ ಸಂಚು: ಶಾಸಕರಿಗೆ 35 ಕೋಟಿ ರೂ. ಲಂಚದ ಆಮಿಷ!
ಕೇವಲ ಏಳು ವಾರಗಳ ಹಿಂದೆಯಷ್ಟೇ (ಮೇ 10) ಅಧಿಕಾರಕ್ಕೆ ಬಂದಿದ್ದ ವಿಜಯ್ ಸರ್ಕಾರವನ್ನು ಕುದುರೆ ವ್ಯಾಪಾರದ ಮೂಲಕ ಉರುಳಿಸಲು ವಿರೋಧ ಪಕ್ಷಗಳು ಯತ್ನಿಸಿವೆ ಎಂಬ ಆರೋಪಗಳು ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿವೆ.
ತಮಿಳುನಾಡಿನ ರಾಜಕೀಯ ವಲಯದಲ್ಲಿ ಭಾರಿ ಬಿರುಗಾಳಿ ಎದ್ದಿದೆ. ನಟ, ರಾಜಕಾರಣಿ ಸಿ. ಜೋಸೆಫ್ ವಿಜಯ್ ನೇತೃತ್ವದ ನೂತನ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಸರ್ಕಾರವನ್ನು ಅಸ್ಥಿರಗೊಳಿಸಲು ಭಾರಿ ಸಂಚು ರೂಪಿಸಲಾಗಿದ್ದ ಆಘಾತಕಾರಿ ವಿಷಯ ಬಯಲಾಗಿದೆ. ಟಿವಿಕೆ ಶಾಸಕರೊಬ್ಬರಿಗೆ ಬರೋಬ್ಬರಿ 35 ಕೋಟಿ ರೂ. ಲಂಚದ ಆಮಿಷ ಒಡ್ಡಿದ ಆರೋಪದ ಮೇಲೆ ಚೆನ್ನೈ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಕೇವಲ ಏಳು ವಾರಗಳ ಹಿಂದೆಯಷ್ಟೇ (ಮೇ 10) ಅಧಿಕಾರಕ್ಕೆ ಬಂದಿದ್ದ ವಿಜಯ್ ಸರ್ಕಾರವನ್ನು ಕುದುರೆ ವ್ಯಾಪಾರದ ಮೂಲಕ ಉರುಳಿಸಲು ವಿರೋಧ ಪಕ್ಷಗಳು ಯತ್ನಿಸಿವೆ ಎಂಬ ಆರೋಪಗಳು ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿವೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ವ್ಯಕ್ತಿಗಳು ಡಿಎಂಕೆ ನಾಯಕ ವಿ. ಸೆಂಥಿಲ್ ಬಾಲಾಜಿ ಅವರೊಂದಿಗೆ ನಿಕಟ ಸಂಬಂಧ ಹೊಂದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಯಾರನ್ನು ಬಂಧಿಸಲಾಗಿದೆ?
ಪೊಲೀಸ್ ಮೂಲಗಳ ಪ್ರಕಾರ, ಬಂಧಿತರಲ್ಲಿ ಇಂಡಿಯನ್ ಪೊಲಿಟಿಕಲ್ ಡೆಮಾಕ್ರಟಿಕ್ ಸ್ಟ್ರಾಟಜೀಸ್ (IPDS) ಅಧಿಕಾರಿ ಮತ್ತು ಸರ್ವೇಯರ್ ಆಗಿರುವ ಸಿ. ತಿರುನಾವುಕ್ಕರಸು ಹಾಗೂ ಕರೂರಿನ ಉದ್ಯಮಿ ಮತ್ತು ಉಪಾಹಾರ ಗೃಹದ ಮಾಲೀಕ ನರೇಶ್ (ರಮೇಶ್) ಪ್ರಮುಖರಾಗಿದ್ದಾರೆ. ನರೇಶ್ ಅವರು ಮಾಜಿ ಸಚಿವ ವಿ. ಸೆಂಥಿಲ್ ಬಾಲಾಜಿ ಅವರ ಅತ್ಯಾಪ್ತ ಎನ್ನಲಾಗಿದೆ. ಕೆಲವು ವರದಿಗಳ ಪ್ರಕಾರ ತ್ಯಾಗರಾಜನ್ ಮತ್ತು ಕಾರ್ತಿಕ್ ಎಂಬ ಇನ್ನಿಬ್ಬರನ್ನೂ ವಶಕ್ಕೆ ಪಡೆಯಲಾಗಿದೆ. ಸದ್ಯ ಬಂಧಿತ ಮೂವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇನ್ನೂ ಇಬ್ಬರು ಶಂಕಿತರನ್ನು ಚೆನ್ನೈಗೆ ಕರೆತರಲಾಗುತ್ತಿದೆ.
ಸಂಚು ಬಯಲಾದದ್ದು ಹೇಗೆ?
ಕೃಷ್ಣಗಿರಿ ಜಿಲ್ಲೆಯ ಉತ್ತಂಗರೈ ಕ್ಷೇತ್ರದ ಟಿವಿಕೆ ಶಾಸಕ ಎನ್. ಇಳಯರಾಜ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಈ ತ್ವರಿತ ಕ್ರಮ ಕೈಗೊಂಡಿದ್ದಾರೆ. "ವಿಧಾನಸಭಾ ಸ್ಪೀಕರ್ ವಿರುದ್ಧದ ಪ್ರಸ್ತಾವಿತ ಅವಿಶ್ವಾಸ ನಿರ್ಣಯದ ವೇಳೆ ವಿರೋಧ ಪಕ್ಷಕ್ಕೆ ಅನುಕೂಲವಾಗುವಂತೆ ಮತ ಚಲಾಯಿಸಲು ಅಥವಾ ಟಿವಿಕೆ ಪಕ್ಷವನ್ನು ತೊರೆಯಲು ಮಧ್ಯವರ್ತಿಗಳು ನನಗೆ 35 ಕೋಟಿ ರೂ. ಲಂಚದ ಆಮಿಷ ಒಡ್ಡಿದ್ದರು" ಎಂದು ಶಾಸಕ ಇಳಯರಾಜ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
10-15 ಶಾಸಕರ ರಾಜೀನಾಮೆಗೆ ಪ್ಲಾನ್!
ತಮಿಳುನಾಡು ಗುಪ್ತಚರ ಇಲಾಖೆಯ ತನಿಖೆಯ ಪ್ರಕಾರ, ಇದು ಕೇವಲ ಒಬ್ಬ ಶಾಸಕರನ್ನು ಸೆಳೆಯುವ ಯತ್ನವಾಗಿರಲಿಲ್ಲ. ಬದಲಿಗೆ 10 ರಿಂದ 15 ಟಿವಿಕೆ ಶಾಸಕರನ್ನು ಏಕಕಾಲದಲ್ಲಿ ರಾಜೀನಾಮೆ ಕೊಡಿಸಿ, ಆಡಳಿತಾರೂಢ ಮೈತ್ರಿಕೂಟದ ಸಂಖ್ಯಾಬಲವನ್ನು ಕುಸಿಯುವಂತೆ ಮಾಡಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುವ ದೊಡ್ಡ ಸಂಚು ಇದರ ಹಿಂದಿತ್ತು. ಕರೂರಿನಲ್ಲಿರುವ ಸೆಂಥಿಲ್ ಬಾಲಾಜಿ ಅವರ ಸಹೋದರ ಅಶೋಕ್ ಕುಮಾರ್ ನಿವಾಸದಲ್ಲಿ ಈ ಕುರಿತು ಪ್ರಮುಖ ಸಭೆಗಳು ನಡೆದಿದ್ದವು ಎನ್ನಲಾಗಿದೆ. ಪ್ರಸ್ತುತ ಅಶೋಕ್ ಕುಮಾರ್ ತಲೆಮರೆಸಿಕೊಂಡಿದ್ದು, ಅವರ ನಿವಾಸದ ಮೇಲೆ ದಾಳಿ ನಡೆಸಿರುವ ಪೊಲೀಸರು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಉದಯನಿಧಿ ಸ್ಟಾಲಿನ್ ವಿರುದ್ಧ ಆರೋಪ
ಈ ಆಪರೇಷನ್ ಹಿಂದೆ ಡಿಎಂಕೆ ಕೈವಾಡವಿದೆ ಎಂದು ಟಿವಿಕೆ ಸಚಿವ ಸಿಟಿಆರ್ ನಿರ್ಮಲ್ ಕುಮಾರ್ ನೇರ ಆರೋಪ ಮಾಡಿದ್ದಾರೆ. "ಹಲವಾರು ಟಿವಿಕೆ ಶಾಸಕರಿಗೆ 50 ಕೋಟಿ ವರೆಗೂ ಆಫರ್ ನೀಡಲಾಗಿತ್ತು. ಡಿಎಂಕೆ ಶಾಸಕ ಉದಯನಿಧಿ ಸ್ಟಾಲಿನ್ ಅವರ ಆದೇಶದ ಮೇರೆಗೆ ಈ ಇಡೀ ಕಾರ್ಯಾಚರಣೆ ನಡೆದಿದೆ. ಸೆಂಥಿಲ್ ಬಾಲಾಜಿ ಆಪ್ತರ ಕರೂರ್ ಮೂಲದ ಕಂಪನಿಯೊಂದು ಈ ಲಂಚದ ಯತ್ನದಲ್ಲಿ ಸಕ್ರಿಯವಾಗಿ ತೊಡಗಿತ್ತು. ಸರ್ಕಾರವನ್ನು ಉರುಳಿಸಲು ಡಿಎಂಕೆ ಕಾರ್ಯಕರ್ತರು ವ್ಯವಸ್ಥಿತವಾಗಿ ನಮ್ಮ ಶಾಸಕರನ್ನು ಗುರಿಯಾಗಿಸಿಕೊಂಡಿದ್ದರು" ಎಂದು ಕಿಡಿಕಾರಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ವಿಜಯ್ ಸರ್ಕಾರದ ಸಮರ
ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ವಿಜಯ್ ನೇತೃತ್ವದ ಟಿವಿಕೆ ಸರ್ಕಾರವು ಭ್ರಷ್ಟಾಚಾರದ ವಿರುದ್ಧ ತೀವ್ರ ನಿಲುವು ತಳೆದಿದೆ. ಡಿಎಂಕೆಯ ಮಾಜಿ ಸಚಿವರ ವಿರುದ್ಧದ ಹಳೆಯ ಪ್ರಕರಣಗಳನ್ನು ಮರುತನಿಖೆಗೆ ಒಳಪಡಿಸಲಾಗಿದೆ. ಮುಖ್ಯವಾಗಿ, ಹಿಂದಿನ ಡಿಎಂಕೆ ಆಡಳಿತದಲ್ಲಿ ವಿದ್ಯುತ್ ಮತ್ತು ಸಾರಿಗೆ ಸಚಿವರಾಗಿದ್ದ ಸೆಂಥಿಲ್ ಬಾಲಾಜಿ ವಿರುದ್ಧದ 397 ಕೋಟಿ ಟ್ರಾನ್ಸ್ಫಾರ್ಮರ್ ಖರೀದಿ ಹಗರಣ ಮತ್ತು ಉದ್ಯೋಗಕ್ಕಾಗಿ ನಗದು ಹಗರಣಗಳ ವಿಚಾರಣೆ ಚುರುಕುಗೊಂಡಿದೆ. ಅವರ ವಿರುದ್ಧ ಮೊಕದ್ದಮೆ ಹೂಡಲು ಟಿವಿಕೆ ಸರ್ಕಾರವು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರ ಅನುಮತಿಯನ್ನು ಕೋರಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಡಿಎಂಕೆ, ಹೊಸ ಸರ್ಕಾರವು "ಸೇಡಿನ ರಾಜಕೀಯ" ಮಾಡುತ್ತಿದೆ ಎಂದು ಆರೋಪಿಸಿದೆ.
ಮುಂದುವರಿದ ತನಿಖೆ
ಕಳೆದ 25 ದಿನಗಳಿಂದಲೇ ಟಿವಿಕೆ ಹೈಕಮಾಂಡ್ ತನ್ನ ಶಾಸಕರ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಟ್ಟಿತ್ತು. ಸದ್ಯ ಬಂಧಿತರಾಗಿರುವ ಆರೋಪಿಗಳ ಮೊಬೈಲ್ ಫೋನ್ ದಾಖಲೆಗಳು, ಕರೆ ವಿವರಗಳು ಮತ್ತು ಹಣಕಾಸಿನ ವಹಿವಾಟುಗಳನ್ನು ಪೊಲೀಸರು ಜಾಲಾಡುತ್ತಿದ್ದಾರೆ. ಈ ಜಾಲದಲ್ಲಿ ಇನ್ನೂ ದೊಡ್ಡ ರಾಜಕೀಯ ಮುಖಂಡರು ಭಾಗಿಯಾಗಿರುವ ಸಾಧ್ಯತೆಯನ್ನು ಪೊಲೀಸರು ತಳ್ಳಿಹಾಕಿಲ್ಲ. ಇತ್ತೀಚಿನ ದಿನಗಳಲ್ಲಿ ಎಐಎಡಿಎಂಕೆಯ ಹಲವು ಶಾಸಕರು ರಾಜೀನಾಮೆ ನೀಡಿ ಟಿವಿಕೆ ಸೇರುತ್ತಿರುವ ಬೆನ್ನಲ್ಲೇ ಈ ಹೈಡ್ರಾಮಾ ನಡೆದಿರುವುದು ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

