
ಘಟನಾ ಸ್ಥಳದಲ್ಲಿ ಅಸ್ವಸ್ಥರಾದವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು
ತಮಿಳುನಾಡಿನ ಕಾರ್ಖಾನೆಯಲ್ಲಿ ಅಮೋನಿಯಾ ಸೋರಿಕೆ: ಇಬ್ಬರು ಸಾವು, 67 ಮಂದಿ ಚಿಂತಾಜನಕ
ಅಸ್ವಸ್ಥರ ಪೈಕಿ ಆರು ಮಂದಿಯ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಘಟನೆಯ ಗಂಭೀರತೆಯನ್ನು ಅರಿತ ತಮಿಳುನಾಡು ಸಿಎಂ ವಿಜಯ್ ಅವರು ತಕ್ಷಣವೇ ತ್ರಿಸದಸ್ಯ ತನಿಖಾ ಸಮಿತಿಯನ್ನು ರಚಿಸಿದ್ದು, ತ್ವರಿತವಾಗಿ ವರದಿ ನೀಡುವಂತೆ ಆದೇಶಿಸಿದ್ದಾರೆ.
ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಸಮುದ್ರ ಆಹಾರಗಳ ಸಂಸ್ಕರಣೆ ಮತ್ತು ರಫ್ತು ಘಟಕವೊಂದರಲ್ಲಿ ಭಾನುವಾರ ಅಮೋನಿಯಾ ಅನಿಲ ಸೋರಿಕೆ ಸಂಭವಿಸಿದ್ದು, ಕನಿಷ್ಠ ಇಬ್ಬರು ಕಾರ್ಮಿಕರು ಮೃತಪಟ್ಟು 67ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಅಸ್ವಸ್ಥಗೊಂಡಿರುವ ದಾರುಣ ಘಟನೆ ವರದಿಯಾಗಿದೆ.
ಅಸ್ವಸ್ಥರ ಪೈಕಿ ಆರು ಮಂದಿಯ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಘಟನೆಯ ಗಂಭೀರತೆಯನ್ನು ಅರಿತ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ತಕ್ಷಣವೇ ತ್ರಿಸದಸ್ಯ ತನಿಖಾ ಸಮಿತಿಯನ್ನು ರಚಿಸಿದ್ದು, ತ್ವರಿತವಾಗಿ ವರದಿ ನೀಡುವಂತೆ ಆದೇಶಿಸಿದ್ದಾರೆ.
ಪೆರಿಯಪಾಳ್ಯಂ ಬಳಿ ದುರಂತ
ತಿರುವಳ್ಳೂರು ಜಿಲ್ಲೆಯ ಪೆರಿಯಪಾಳ್ಯಂ ಸಮೀಪದ ಕನ್ನಿಗೈಪೇರ್ ಎಂಬಲ್ಲಿರುವ 'ಸೇಂಟ್ ಪೀಟರ್ಸ್ ಪಾಲ್ ಸೀಫುಡ್ಸ್ ಎಕ್ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್' ಘಟಕದಲ್ಲಿ ಈ ಭಾರಿ ಅನಾಹುತ ಸಂಭವಿಸಿದೆ. ಭಾನುವಾರ ಕಾರ್ಖಾನೆಯ ರಜಾದಿನವಾಗಿದ್ದರೂ, ಅಲ್ಲಿನ ಆವರಣದಲ್ಲಿಯೇ ವಾಸವಿದ್ದ ಸುಮಾರು 120 ವಲಸೆ ಕಾರ್ಮಿಕರು ಈ ದುರಂತಕ್ಕೆ ಸಿಲುಕಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಕಾರ್ಖಾನೆಯ ಶೈತ್ಯೀಕರಣ ಅಥವಾ ಸಂಸ್ಕರಣಾ ವ್ಯವಸ್ಥೆಯಲ್ಲಿ ಬಳಸಲಾಗುತ್ತಿದ್ದ ಅಮೋನಿಯಾ ಅನಿಲ ಸೋರಿಕೆಯಾಗಿದ್ದು, ಕ್ಷಣಾರ್ಧದಲ್ಲಿಯೇ ಇಡೀ ಆವರಣವನ್ನು ಆವರಿಸಿಕೊಂಡಿದೆ. ದಟ್ಟವಾದ ಅನಿಲ ಸೇವಿಸಿದ ತಕ್ಷಣವೇ ಉಸಿರಾಟದ ತೊಂದರೆ, ತಲೆತಿರುಗುವಿಕೆ ಮತ್ತು ಕಣ್ಣುಗಳ ಉರಿ ಕಾಣಿಸಿಕೊಂಡು ಕಾರ್ಮಿಕರು ಪ್ರಾಣಭಯದಿಂದ ಹೊರಗೆ ಓಡಿಬಂದಿದ್ದಾರೆ. ಅನಿಲದ ತೀವ್ರತೆಗೆ ಕೆಲವರು ಮೂಗು ಮತ್ತು ಬಾಯಿಯಿಂದ ರಕ್ತಸ್ರಾವವಾಗಿ ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ.
ವಲಸೆ ಕಾರ್ಮಿಕರೇ ಹೆಚ್ಚು ಬಲಿಪಶುಗಳು
ಈ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದವರಲ್ಲಿ ಬಹುಪಾಲು ಜನರು ಅಸ್ಸಾಂ, ಒಡಿಶಾ, ಜಾರ್ಖಂಡ್ ಮತ್ತು ಬಿಹಾರ ಮೂಲದ ವಲಸೆ ಕಾರ್ಮಿಕರಾಗಿದ್ದಾರೆ. ಮಹಿಳಾ ಕಾರ್ಮಿಕರೂ ಸೇರಿದಂತೆ ಅಸ್ವಸ್ಥಗೊಂಡ 65ಕ್ಕೂ ಹೆಚ್ಚು ಜನರನ್ನು ತಕ್ಷಣವೇ ಸಮೀಪದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಸ್ಥಿತಿ ಗಂಭೀರವಾಗಿರುವವರನ್ನು ಹೆಚ್ಚಿನ ಹಾಗೂ ತುರ್ತು ಚಿಕಿತ್ಸೆಗಾಗಿ ಚೆನ್ನೈನ ಸ್ಟಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆಡಳಿತ ಮಂಡಳಿಯ ಮೋಹನ್ ಮತ್ತು ಜೋಸೆಫ್ ಎಂಬಿಬ್ಬರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ರಚನೆಗೆ ತ್ರಿಸದಸ್ಯ ಸಮಿತಿ ರಚನೆ
ಘಟನೆಯ ಬಗ್ಗೆ ತೀವ್ರ ಆಘಾತ ಮತ್ತು ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು, ಸಮಗ್ರ ತನಿಖೆಗಾಗಿ ಮೂವರು ಉನ್ನತ ಅಧಿಕಾರಿಗಳನ್ನೊಳಗೊಂಡ ತನಿಖಾ ಸಮಿತಿಯನ್ನು ರಚಿಸಿದ್ದಾರೆ. ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ವಿಭಾಗದ ನಿರ್ದೇಶಕರು, ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಹಾಗೂ ಸಾರ್ವಜನಿಕ ಆರೋಗ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕರು ಈ ಸಮಿತಿಯಲ್ಲಿದ್ದಾರೆ. 24 ಗಂಟೆಯೊಳಗೆ ಪ್ರಾಥಮಿಕ ವರದಿ ಹಾಗೂ ಮೂರು ದಿನಗಳೊಳಗೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸಮಿತಿಗೆ ಖಡಕ್ ಸೂಚನೆ ನೀಡಲಾಗಿದೆ. ಇದರ ಜೊತೆಗೆ, ಸಂತ್ರಸ್ತರಿಗೆ ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿಗಳ ಪರಿಹಾರವನ್ನು ವಿಜಯ್ ಘೋಷಿಸಿದ್ದಾರೆ.
ಎನ್ಡಿಆರ್ಎಫ್ ಕಾರ್ಯಾಚರಣೆ
ಘಟನೆಯ ಮಾಹಿತಿ ತಿಳಿದ ಕೂಡಲೇ ಅರಕ್ಕೋಣಂನಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) 4ನೇ ಬೆಟಾಲಿಯನ್ನ ವಿಶೇಷ ತಂಡ ಘಟನಾ ಸ್ಥಳಕ್ಕೆ ದೌಡಾಯಿಸಿದೆ. ರಾಸಾಯನಿಕ ಮತ್ತು ಜೈವಿಕ ವಿಪತ್ತುಗಳನ್ನು (CBRN) ನಿಭಾಯಿಸುವಲ್ಲಿ ಪರಿಣತಿ ಹೊಂದಿರುವ 30 ಸಿಬ್ಬಂದಿಯ ತಂಡವು ಸುರಕ್ಷತಾ ಕವಚಗಳೊಂದಿಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಅನಿಲ ಸೋರಿಕೆಯನ್ನು ನಿಯಂತ್ರಿಸಲು ಮತ್ತು ಅಪಾಯಕಾರಿ ವಲಯವನ್ನು ಪ್ರತ್ಯೇಕಿಸಲು ಹಗಲಿರುಳು ಶ್ರಮಿಸುತ್ತಿದೆ. ಏತನ್ಮಧ್ಯೆ, ಐಟಿ ಸಚಿವ ಆರ್. ಕುಮಾರ್, ಉಸ್ತುವಾರಿ ಅಧಿಕಾರಿ ಡಾ. ಕೆ.ಪಿ. ಕಾರ್ತಿಕೇಯನ್ ಹಾಗೂ ಸಚಿವರುಗಳಾದ ಆಧವ್ ಅರ್ಜುನ ಮತ್ತು ರಾಜಮೋಹನ್ ಅವರುಗಳು ಆಸ್ಪತ್ರೆಗಳಿಗೆ ಭೇಟಿ ನೀಡಿ ಸಂತ್ರಸ್ತರ ಚಿಕಿತ್ಸಾ ವ್ಯವಸ್ಥೆಯನ್ನು ಖುದ್ದಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಕೂಡ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ.

