ವಯನಾಡ್ನಲ್ಲಿ ಮತ್ತೆ ಪ್ರಕೃತಿ ವಿಕೋಪ: ಮಳೆ ನಡುವೆಯೂ ಮುಂದುವರಿದ ಶೋಧ ಕಾರ್ಯ
ಕೇರಳದ ವಯನಾಡ್ನಲ್ಲಿ ಮತ್ತೆ ಪ್ರಕೃತಿ ವಿಕೋಪ. ಭೀಕರ ಭೂಕುಸಿತಕ್ಕೆ ಕನಿಷ್ಠ 6 ಜನ ಬಲಿಯಾಗಿದ್ದಾರೆ. ಹೌದು, ವಯನಾಡ್ ಮತ್ತು ಕೋಯಿಕ್ಕೋಡ್ ಸಂಪರ್ಕಿಸುವ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದ್ದ ಕಲ್ಲಾಡಿ ಬಳಿ ಈ ದುರಂತ ಸಂಭವಿಸಿದೆ. ಸದ್ಯ ಘಟನಾ ಸ್ಥಳದಲ್ಲಿ NDRF, SDRF ಮತ್ತು ಸ್ಥಳೀಯ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ.
ಕೇರಳದ ಪ್ರಕೃತಿ ಸೌಂದರ್ಯದ ನಾಡು ವಯನಾಡ್ನಲ್ಲಿ ಮತ್ತೊಮ್ಮೆ ಭೀಕರ ಭೂಕುಸಿತ ಸಂಭವಿಸಿದ್ದು, ಕಲ್ಲಾಡಿ ಬಳಿ ನಡೆಯುತ್ತಿದ್ದ ಸುರಂಗ ಮಾರ್ಗದ ಕಾಮಗಾರಿ ಸ್ಥಳದಲ್ಲಿ ಕನಿಷ್ಠ ಮೂರರಿಂದ ಆರು ಮಂದಿ ಜೀವ ಕಳೆದುಕೊಂಡಿದ್ದಾರೆ. ವಯನಾಡ್ ಮತ್ತು ಕೋಯಿಕ್ಕೋಡ್ ಜಿಲ್ಲೆಗಳನ್ನು ಸಂಪರ್ಕಿಸುವ ಅತ್ಯಾಧುನಿಕ ಅವಳಿ ಸುರಂಗ ರಸ್ತೆ ಯೋಜನೆಯ ಪ್ರವೇಶ ದ್ವಾರದ ಬಳಿ ಈ ದುರಂತ ಸಂಭವಿಸಿದೆ. ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗುಡ್ಡದ ಮಣ್ಣು ಮತ್ತು ಕಲ್ಲುಗಳು ಭಾರೀ ಪ್ರಮಾಣದಲ್ಲಿ ಕುಸಿದು ಬಿದ್ದಿದ್ದು, ಹಲವಾರು ಕಾರ್ಮಿಕರು ಮಣ್ಣಿನ ಅಡಿಯಲ್ಲಿ ಸಿಲುಕಿರುವ ಆತಂಕ ಎದುರಾಗಿದೆ.
ಮೃತರನ್ನು ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಬಂದಿದ್ದ ವಲಸೆ ಕಾರ್ಮಿಕರು ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಸುರಂಗ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಘಟನಾ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF), ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF), ಅಗ್ನಿಶಾಮಕ ದಳ ಮತ್ತು ಸ್ಥಳೀಯ ರಕ್ಷಣಾ ಪಡೆಗಳು ಧಾವಿಸಿದ್ದು, ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಆದರೆ, ಕಲ್ಲಾಡಿ ಪರಿಸರದಲ್ಲಿ ಬಿಡದೇ ಸುರಿಯುತ್ತಿರುವ ಮಳೆಯು ರಕ್ಷಣಾ ಸಿಬ್ಬಂದಿಗೆ ತೀವ್ರ ಸವಾಲಾಗಿ ಪರಿಣಮಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತಲಿನ ನಿವಾಸಿಗಳನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಮತ್ತು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ

