Karur tragedy: CM Vijay launches strong attack on DMK, announces memorial to commemorate the deceased
x

ಸಿಎಂ ವಿಜಯ್‌ ಮಾತನಾಡಿದರು.

ಕರೂರು ದುರಂತ: ಡಿಎಂಕೆ ವಿರುದ್ಧ ಸಿಎಂ ವಿಜಯ್ ತೀವ್ರ ವಾಗ್ದಾಳಿ, ಮೃತರ ಸ್ಮರಣಾರ್ಥ ಸ್ಮಾರಕ ಘೋಷಣೆ

ದುರಂತದ ಹೆಸರಿನಲ್ಲಿ ದ್ರಾವಿಡ ಪಕ್ಷವು (ಡಿಎಂಕೆ) ರಾಜಕೀಯ ಮಾಡುತ್ತಿದೆ ಎಂದು ನೇರವಾಗಿ ಬೆರಳು ಮಾಡಿದ ಮುಖ್ಯಮಂತ್ರಿ, ಕರೂರು ಕಾಲ್ತುಳಿತ ಘಟನೆ ತಮಗೆ ತೀವ್ರ ಮಾನಸಿಕ ನೋವು ಉಂಟುಮಾಡಿದೆ ಎಂದರು.


Click the Play button to hear this message in audio format

ಕಳೆದ ವರ್ಷ ಕರೂರಿನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ದುರಂತದಿಂದ ಡಿಎಂಕೆ ಪಕ್ಷವು "ರಾಜಕೀಯ ಲಾಭ" ಪಡೆಯಲು ಪ್ರಯತ್ನಿಸುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಶುಕ್ರವಾರ (ಜು. 10) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ತಮಗೆ ಜಿಲ್ಲೆಗೆ ಭೇಟಿ ನೀಡದಂತೆ ತಡೆಯೊಡ್ಡಲಾಗಿತ್ತು ಎಂದೂ ಅವರು ಆರೋಪಿಸಿದ್ದಾರೆ.

2025 ರ ದುರಂತದಲ್ಲಿ 41 ಜನರು ಪ್ರಾಣ ಕಳೆದುಕೊಂಡ ನಂತರ, ಕರೂರ್ ಜಿಲ್ಲೆಗೆ ಮುಖ್ಯಮಂತ್ರಿಯಾಗಿ ತಮ್ಮ ಮೊದಲ ಅಧಿಕೃತ ಭೇಟಿ ನೀಡಿದ ವಿಜಯ್, ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಳೆದ ವರ್ಷ ಸೆ.27 ರಂದು ತಮ್ಮ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷದ ಸಮಾವೇಶದಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದರೂ, ಅದನ್ನು ನಿಯಂತ್ರಿಸಲು ಅಥವಾ ಸಭೆಯನ್ನು ರದ್ದುಗೊಳಿಸಲು ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ದೂರಿದರು.

ಪೊಲೀಸರು ಮುನ್ನೆಚ್ಚರಿಕೆ ನೀಡಬೇಕಿತ್ತು

"ಸಮಾವೇಶದಲ್ಲಿ ಜನಸಂದಣಿ ಮಿತಿ ಮೀರುತ್ತಿದೆ ಮತ್ತು ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದೆ ಎಂದು ಪೊಲೀಸರು ನಮಗೆ ಮುನ್ನೆಚ್ಚರಿಕೆ ನೀಡಬಹುದಿತ್ತು. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಸಭೆಯನ್ನು ರದ್ದುಗೊಳಿಸುವ ಸಂಪೂರ್ಣ ಅಧಿಕಾರ ಪೊಲೀಸರಿಗಿತ್ತು. ಆದರೆ, ಹಾಗೆ ಮಾಡದ ಪೊಲೀಸರು, ನಮ್ಮನ್ನು ಉದ್ದೇಶಪೂರ್ವಕವಾಗಿ ಹೆದ್ದಾರಿಯ ಮೂಲಕ ಸಮಾವೇಶದ ಸ್ಥಳಕ್ಕೆ ಕರೆತಂದರು" ಎಂದು ಅಸಮಾಧಾನ ಹೊರಹಾಕಿದರು.

"ನಾನು ಪೊಲೀಸರನ್ನು ಸಂಪೂರ್ಣವಾಗಿ ನಂಬಿದ್ದೆ ಮತ್ತು ಅಂದಿನ ಸಭೆಯಲ್ಲಿ ಅವರಿಗೆ ಧನ್ಯವಾದವನ್ನೂ ತಿಳಿಸಿದ್ದೆ. ಆದರೆ ತೆರೆಯ ಮರೆಯಲ್ಲಿ ನಡೆದ ಈ ರಾಜಕೀಯ ನಾಟಕದ ಬಗ್ಗೆ ನನಗೆ ತಿಳಿದಿರಲಿಲ್ಲ. ಈ ಲೋಪಕ್ಕೆ ಯಾರು ಹೊಣೆ? ಇದನ್ನೆಲ್ಲಾ ಯಾರ ಸೂಚನೆಯ ಮೇರೆಗೆ ಮಾಡಲಾಗಿತ್ತು" ಎಂದು ಪ್ರಶ್ನಿಸಿದರು.

ಸಂತ್ರಸ್ತರಿಗೆ ಸ್ಮಾರಕ ಘೋಷಿಸಿದ ಮುಖ್ಯಮಂತ್ರಿ

ದುರಂತದ ಹೆಸರಿನಲ್ಲಿ ದ್ರಾವಿಡ ಪಕ್ಷವು (ಡಿಎಂಕೆ) ರಾಜಕೀಯ ಮಾಡುತ್ತಿದೆ ಎಂದು ನೇರವಾಗಿ ಬೆರಳು ಮಾಡಿದ ಮುಖ್ಯಮಂತ್ರಿ, ಕರೂರು ಕಾಲ್ತುಳಿತ ಘಟನೆ ತಮಗೆ ತೀವ್ರ ಮಾನಸಿಕ ನೋವು ಉಂಟುಮಾಡಿದೆ ಎಂದರು. "2025 ರ ಕರೂರು ಕಾಲ್ತುಳಿತದಲ್ಲಿ ನಾವು ನಮ್ಮ ಸಹೋದರಿಯರ ಮಕ್ಕಳನ್ನು ಕಳೆದುಕೊಂಡಿದ್ದೇವೆ" ಎಂದು ಅವರು ಭಾವುಕರಾದರು.

ದುರಂತದ ನೆನಪಿಗಾಗಿ ಮತ್ತು ಬಲಿಪಶುಗಳ ಗೌರವಾರ್ಥವಾಗಿ ತಮ್ಮ ಪಕ್ಷವಾದ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ವತಿಯಿಂದ ಕರೂರಿನಲ್ಲಿ ಸ್ಮಾರಕವನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ವಿಜಯ್ ಇದೇ ವೇಳೆ ಘೋಷಿಸಿದರು. ಸಮಾವೇಶದ ನಂತರ ಸಿಎಂ ವಿಜಯ್ ಭರ್ಜರಿ ರೋಡ್ ಶೋ ನಡೆಸಿದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳು ಹಾಗೂ ಸಾರ್ವಜನಿಕರತ್ತ ಅವರು ಕೈ ಬೀಸಿ, ಕೈ ಮುಗಿದು ಕೃತಜ್ಞತೆ ಸಲ್ಲಿಸಿದರು.

Read More
Next Story