
ತೈಲ ಬೆಲೆ ಏರಿಕೆ ಭೀತಿ ಬೇಡ! ಭಾರತದ ಬಳಿ ಇದೆ ಸಾಕಷ್ಟು ದಾಸ್ತಾನು- ಪ್ರಧಾನಿ ಮೋದಿ ಅಭಯ
PM Narendra Modi|ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ, ಭಾರತದ ಇಂಧನ ಭದ್ರತೆಯ ಬಗ್ಗೆ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಮಹತ್ವದ ಮಾಹಿತಿ ನೀಡಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಇರಾನ್-ಇಸ್ರೇಲ್ ಸಂಘರ್ಷದ ನಡುವೆಯೇ, ಭಾರತದ ಇಂಧನ ಭದ್ರತೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಭರವಸೆ ನೀಡಿದ್ದಾರೆ. ಸಂಸತ್ನಲ್ಲಿ ಮಂಗಳವಾರ ಮಾತನಾಡಿದ ಅವರು, ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಭಾರತ ಸಜ್ಜಾಗಿದೆ ಎಂದು ಘೋಷಿಸಿದರು.
ಸಾಕಷ್ಟು ದಾಸ್ತಾನು ಇದೆ ಎಂದ ಮೋದಿ
ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಏರುಪೇರುಗಳ ಕುರಿತು ಕಳವಳ ವ್ಯಕ್ತಪಡಿಸಿದ ಪ್ರಧಾನಿ, "ಭಾರತದ ಬಳಿ ಕಚ್ಚಾ ತೈಲದ (Crude Oil) ಸಮರ್ಪಕ ದಾಸ್ತಾನು ಇದೆ ಮತ್ತು ನಿರಂತರ ಪೂರೈಕೆಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ನಾನು ಸದನಕ್ಕೆ ಮತ್ತು ದೇಶಕ್ಕೆ ಭರವಸೆ ನೀಡಲು ಬಯಸುತ್ತೇನೆ" ಎಂದರು. ಯುದ್ಧದ ಭೀತಿಯಿಂದ ತೈಲ ಬೆಲೆ ಏರಿಕೆಯಾಗಬಹುದು ಎಂಬ ಆತಂಕದಲ್ಲಿರುವ ಜನತೆಗೆ ಇದು ದೊಡ್ಡ ಸಮಾಧಾನ ತಂದಿದೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ವಿಶ್ವದಾದ್ಯಂತ "ತೀವ್ರ ಇಂಧನ ಬಿಕ್ಕಟ್ಟಿಗೆ" ಕಾರಣವಾಗಿದೆ. ಇದು ಭಾರತದ ಪಾಲಿಗೂ ಕಳವಳಕಾರಿ ವಿಷಯವಾಗಿದೆ ಫೆಬ್ರವರಿ ಅಂತ್ಯದಲ್ಲಿ ಇರಾನ್ ಯುದ್ಧ ಆರಂಭವಾದಾಗಿನಿಂದ, ಜಾಗತಿಕ ಕಚ್ಚಾ ತೈಲದ ಐದನೇ ಒಂದು ಭಾಗದಷ್ಟು ಪೂರೈಕೆಯಾಗುವ 'ಹಾರ್ಮುಜ್ ಜಲಸಂಧಿ' (Strait of Hormuz) ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಇದು ಭಾರತದ ವ್ಯಾಪಾರ ಮಾರ್ಗಗಳ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಪ್ರಧಾನಿ ಆತಂಕ ವ್ಯಕ್ತಪಡಿಸಿದ್ದಾರೆ.
ತೈಲ ಮತ್ತು ಅಗತ್ಯ ವಸ್ತುಗಳ ಪೂರೈಕೆಗೆ ವ್ಯತ್ಯಯ
ನಾಲ್ಕನೇ ವಾರಕ್ಕೆ ಕಾಲಿಟ್ಟಿರುವ ಈ ಯುದ್ಧದಿಂದಾಗಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ರಸಗೊಬ್ಬರಗಳಂತಹ ಅಗತ್ಯ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. "ಹಾರ್ಮುಜ್ ಜಲಸಂಧಿಯಲ್ಲಿ ವಿಶ್ವದ ಹಲವಾರು ಹಡಗುಗಳು ಸಿಲುಕಿಕೊಂಡಿವೆ. ಈ ಹಡಗುಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಸಿಬ್ಬಂದಿ ಇದ್ದಾರೆ, ಇದು ನಮಗೆ ಚಿಂತೆಯ ವಿಷಯವಾಗಿದೆ" ಎಂದು ಮೋದಿ ಹೇಳಿದರು. ಅಲ್ಲದೆ, ಗಲ್ಫ್ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ 1 ಕೋಟಿಗೂ ಹೆಚ್ಚು ಭಾರತೀಯರ ಸುರಕ್ಷತೆ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಅವರು ಪುನರುಚ್ಚರಿಸಿದರು.
ರಾಜತಾಂತ್ರಿಕ ಪ್ರಯತ್ನಗಳು ಮತ್ತು ಶಾಂತಿಯ ಕರೆ
ಬಿಕ್ಕಟ್ಟು ಶಮನಗೊಳಿಸಲು ತಾನು ಪಶ್ಚಿಮ ಏಷ್ಯಾದ ನಾಯಕರು, ಇರಾನ್, ಇಸ್ರೇಲ್ ಮತ್ತು ಅಮೆರಿಕದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಪ್ರಧಾನಿ ತಿಳಿಸಿದರು. "ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಶಾಂತಿ ಮರುಸ್ಥಾಪಿಸುವುದು ನಮ್ಮ ಗುರಿ. ವಾಣಿಜ್ಯ ಹಡಗುಗಳ ಮೇಲಿನ ದಾಳಿ ಮತ್ತು ಅಂತರಾಷ್ಟ್ರೀಯ ನೌಕಾಯಾನಕ್ಕೆ ಅಡ್ಡಿಪಡಿಸುವುದು ಸ್ವೀಕಾರಾರ್ಹವಲ್ಲ" ಎಂದು ಅವರು ಸ್ಪಷ್ಟಪಡಿಸಿದರು.
ಇಷ್ಟೆಲ್ಲಾ ಸವಾಲುಗಳ ನಡುವೆ ಪ್ರಮುಖವಾಗಿ ಗಮನಿಸಬೇಕಾದ ಸಂಗತಿ ಏನಂದರೆ ನಾವು ಇಂಧನಕ್ಕಾಗಿ ಕೇವಲ ಒಂದು ಮೂಲವನ್ನು ಅವಲಂಬಿಸಿಲ್ಲ. ಮೊದಲು 27 ದೇಶಗಳಿಂದ ತೈಲ ಆಮದು ಮಾಡಿಕೊಳ್ಳುತ್ತಿದ್ದ ನಾವು, ಇಂದು 41 ದೇಶಗಳಿಂದ ಇಂಧನವನ್ನು ಪಡೆಯುತ್ತಿದ್ದೇವೆ" ಎಂದು ಮಾಹಿತಿ ನೀಡಿದರು. ಕಳೆದ 11 ವರ್ಷಗಳಲ್ಲಿ ಭಾರತವು 5.3 ಮಿಲಿಯನ್ ಮೆಟ್ರಿಕ್ ಟನ್ ಯುದ್ಧತಂತ್ರದ ಪೆಟ್ರೋಲಿಯಂ ದಾಸ್ತಾನು ಮಾಡಿದೆ ಎಂದು ಅವರು ತಿಳಿಸಿದರು.
ಆರ್ಥಿಕತೆ ಸದೃಢ; 'ಆತ್ಮನಿರ್ಭರ'ತೆಗೆ ಒತ್ತು
ಪಶ್ಚಿಮ ಏಷ್ಯಾದಲ್ಲಿ ಉಂಟಾದ ಹಾನಿಯಿಂದ ಚೇತರಿಸಿಕೊಳ್ಳಲು ಜಗತ್ತಿಗೆ ದೀರ್ಘಕಾಲ ಬೇಕಾಗಬಹುದು. ಆದರೆ ಭಾರತದ ಆರ್ಥಿಕತೆಯ ಅಡಿಪಾಯ ಸದೃಢವಾಗಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಅಂತರ-ಸಚಿವಾಲಯಗಳ ಗುಂಪನ್ನು ರಚಿಸಲಾಗಿದೆ ಎಂದರು.
ಇದೇ ವೇಳೆ 'ಆತ್ಮನಿರ್ಭರ ಭಾರತ'ದ ಅಗತ್ಯತೆಯನ್ನು ಒತ್ತಿ ಹೇಳಿದ ಪ್ರಧಾನಿ, "ಪ್ರಸ್ತುತ ಭಾರತದ ಶೇ. 90ರಷ್ಟು ವ್ಯಾಪಾರವು ವಿದೇಶಿ ಹಡಗುಗಳ ಮೂಲಕ ನಡೆಯುತ್ತಿದೆ. ಇದು ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ನಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ. ಇದನ್ನು ಸರಿಪಡಿಸಲು 70,000 ಕೋಟಿ ರೂ. ವೆಚ್ಚದಲ್ಲಿ 'ಮೇಡ್-ಇನ್-ಇಂಡಿಯಾ' ಹಡಗುಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸರ್ಕಾರ ಪ್ರಾರಂಭಿಸಿದೆ" ಎಂದು ಘೋಷಿಸಿದರು.

