Rao Inderjeet Yadav| ಕುಖ್ಯಾತ ಗ್ಯಾಂಗ್‌ಸ್ಟರ್ ದುಬೈನಲ್ಲಿ ಅರೆಸ್ಟ್‌: ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರ
x

 ಕುಖ್ಯಾತ ಗ್ಯಾಂಗ್‌ಸ್ಟರ್ ರಾವ್ ಇಂದರ್ಜೀತ್ ಯಾದವ್‌ನನ್ನು ದುಬೈನಲ್ಲಿ ಬಂಧಿಸಲಾಗಿದೆ. 

Rao Inderjeet Yadav| ಕುಖ್ಯಾತ ಗ್ಯಾಂಗ್‌ಸ್ಟರ್ ದುಬೈನಲ್ಲಿ ಅರೆಸ್ಟ್‌: ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರ

ಅದ್ದೂರಿ ಜೀವನ ಮತ್ತು ಬಾಲಿವುಡ್ ನಂಟು ಹೊಂದಿದ್ದ 'ಜೆಮ್ ಟ್ಯೂನ್ಸ್' ಮಾಲೀಕ, ಕುಖ್ಯಾತ ಗ್ಯಾಂಗ್‌ಸ್ಟರ್ ರಾವ್ ಇಂದರ್ಜೀತ್ ಯಾದವ್‌ನನ್ನು ದುಬೈನಲ್ಲಿ ಬಂಧಿಸಲಾಗಿದೆ.


Click the Play button to hear this message in audio format

ಭಾರತೀಯ ಕಾನೂನು ಜಾರಿ ಸಂಸ್ಥೆಗಳಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಹರಿಯಾಣದ ರೋಹ್ಟಕ್ ಉದ್ಯಮಿಯ ಕೊಲೆ ಪ್ರಕರಣದ ನಂತರ ವಿದೇಶಕ್ಕೆ ಪರಾರಿಯಾಗಿದ್ದ ಕುಖ್ಯಾತ ಗ್ಯಾಂಗ್‌ಸ್ಟರ್ ರಾವ್ ಇಂದರ್ಜೀತ್ ಯಾದವ್‌ನನ್ನು ದುಬೈನಲ್ಲಿ ಬಂಧಿಸಲಾಗಿದೆ. ದುಬೈ ಅಧಿಕಾರಿಗಳು ಭಾರತೀಯ ಪೊಲೀಸರಿಂದ ಅಗತ್ಯ ದಾಖಲೆಗಳನ್ನು ಕೇಳಿದ್ದು, ಶೀಘ್ರದಲ್ಲೇ ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆಯಿದೆ.

ಯಾರು ಈ ರಾವ್ ಇಂದರ್ಜೀತ್ ಯಾದವ್?

ಇಂದರ್ಜೀತ್ ಯಾದವ್ ಕೇವಲ ಗ್ಯಾಂಗ್‌ಸ್ಟರ್ ಮಾತ್ರವಲ್ಲ, ಮನರಂಜನಾ ಲೋಕದಲ್ಲೂ ಗುರುತಿಸಿಕೊಂಡಿದ್ದ ವ್ಯಕ್ತಿ. ಈತ 'ಜೆಮ್ ಟ್ಯೂನ್ಸ್' ಎಂಬ ವಿಡಿಯೋ ಆನ್ ಡಿಮಾಂಡ್ ಪ್ಲಾಟ್‌ಫಾರ್ಮ್‌ನ ಮಾಲೀಕ. ಹರಿಯಾಣವಿ, ಪಂಜಾಬಿ ಮತ್ತು ಹಿಂದಿ ಸಂಗೀತ ಕ್ಷೇತ್ರದಲ್ಲಿ ಈ ಸಂಸ್ಥೆ ಹೆಸರುವಾಸಿಯಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ 15 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿರುವ ಈತ, ಬಾಲಿವುಡ್ ಸೆಲೆಬ್ರಿಟಿಗಳ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅದ್ದೂರಿ ಜೀವನ ನಡೆಸುತ್ತಿದ್ದ.

ಅಪರಾಧ ಲೋಕದ ಕರಾಳ ಮುಖ:

ಗ್ಲಾಮರ್ ಲೋಕದ ಹಿಂದೆ ಈತ ಕರಾಳ ಅಪರಾಧ ಸಾಮ್ರಾಜ್ಯವನ್ನೇ ನಡೆಸುತ್ತಿದ್ದ ಎಂದು ಜಾರಿ ನಿರ್ದೇಶನಾಲಯ (ED) ಆರೋಪಿಸಿದೆ. ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಈತನ ವಿರುದ್ಧ ಕೊಲೆ, ಸುಲಿಗೆ, ಭೂಕಬಳಿಕೆ ಸೇರಿದಂತೆ 15ಕ್ಕೂ ಹೆಚ್ಚು ಗಂಭೀರ ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಲದೇ ಉದ್ಯಮಿಗಳ ನಡುವಿನ ನೂರಾರು ಕೋಟಿ ರೂಪಾಯಿಗಳ ಸಾಲದ ವಿವಾದಗಳನ್ನು ಬಲವಂತವಾಗಿ ಇತ್ಯರ್ಥಪಡಿಸುವ 'ಎನ್‌ಫೋರ್ಸರ್' ಆಗಿ ಈತ ಕೆಲಸ ಮಾಡುತ್ತಿದ್ದ. ಈ ಸಂಬಂಧ ಇಡಿ (ED) ಹಣ ವರ್ಗಾವಣೆ ತನಿಖೆ ನಡೆಸುತ್ತಿದೆ.

ದೆಹಲಿ ಮತ್ತು ಗುರುಗ್ರಾಮದಲ್ಲಿ ನಡೆದ ದಾಳಿಯ ವೇಳೆ ಇವನಿಗೆ ಸೇರಿದ 5 ಐಷಾರಾಮಿ ಕಾರುಗಳು, 17 ಲಕ್ಷ ರೂ. ನಗದು ಮತ್ತು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೊಲೆ ಪ್ರಕರಣ ಮತ್ತು ಪರಾರಿ:

2024ರಲ್ಲಿ ರೋಹ್ಟಕ್ ಉದ್ಯಮಿ ಮಂಜೀತ್ ದಿಘಾಲ್ ಕೊಲೆಯಾದ ನಂತರ ಈತನ ಹೆಸರು ಬಲವಾಗಿ ಕೇಳಿಬಂದಿತ್ತು. ಗ್ಯಾಂಗ್‌ಸ್ಟರ್ ಹಿಮಾಂಶು ಭಾವು ತಂಡ ಈ ಕೊಲೆಯ ಜವಾಬ್ದಾರಿ ಹೊತ್ತುಕೊಂಡ ಬೆನ್ನಲ್ಲೇ ಯಾದವ್ ಭಾರತ ಬಿಟ್ಟು ಪರಾರಿಯಾಗಿದ್ದ.

2025ರಲ್ಲಿ ಗಾಯಕ ರಾಹುಲ್ ಫಾಜಿಲ್‌ಪುರಿಯಾ ಮನೆಯ ಮೇಲೆ ಗುಂಡಿನ ದಾಳಿ, ಆತನ ಆಪ್ತ ರೋಹಿತ್ ಶೋಕೀನ್ ಕೊಲೆ ಮತ್ತು ಯೂಟ್ಯೂಬರ್ ಎಲ್ವಿಷ್ ಯಾದವ್ ನಿವಾಸದ ಬಳಿ ನಡೆದ ಗುಂಡಿನ ಚಕಮಕಿಯಲ್ಲೂ ಈತನ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.

ಸದ್ಯ ದುಬೈ ಪೊಲೀಸರ ವಶದಲ್ಲಿರುವ ಯಾದವ್‌ನನ್ನು ಭಾರತಕ್ಕೆ ಕರೆತಂದ ನಂತರ, ಈತನ ಭೂಗತ ಜಾಲ ಮತ್ತು ಹೂಡಿಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.

Read More
Next Story