
ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಾಗೂ ಪಶ್ಚಿಮ ಬಂಗಾಳ ವಿಧಾನಸಭೆ ಪ್ರತಿಪಕ್ಷದ ನಾಯಕ ರುತಬ್ರತ ಬ್ಯಾನರ್ಜಿ
ಟಿಎಂಸಿ ಚಿಹ್ನೆ, ಹೆಸರು ಯಾರಿಗೆ? ಚುನಾವಣಾ ಆಯೋಗಕ್ಕೆ ಮಮತಾ, ಬಂಡಾಯ ಬಣದಿಂದ ಇಂದು ದಾಖಲೆ ಸಲ್ಲಿಕೆ
ಪಕ್ಷದ ಸಾಂಪ್ರದಾಯಿಕ ಚಿಹ್ನೆ, ಪಕ್ಷದ ಕಚೇರಿಗಳು, ಬ್ಯಾಂಕ್ ಖಾತೆಗಳು ಮತ್ತು ಪ್ರಧಾನ ಕಚೇರಿಯ ಮೇಲಿನ ಹಕ್ಕಿಗಾಗಿ ಈ ಜಿದ್ದಾಜಿದ್ದಿ ನಡೆಯುತ್ತಿದೆ. ಬಂಡಾಯ ಬಣವು ಶಾಸಕಾಂಗದಲ್ಲಿ ತಮಗಿರುವ ಸಂಖ್ಯಾಬಲದ ಆಧಾರದ ಮೇಲೆ ಹಕ್ಕು ಮಂಡಿಸುತ್ತಿದೆ.
ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿ ಭುಗಿಲೆದ್ದಿರುವ ಭಿನ್ನಮತ ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ಪಕ್ಷದ ಹೆಸರು, ಅಧಿಕೃತ ಚಿಹ್ನೆ (ಹುಲ್ಲು ಮತ್ತು ಹೂವು) ಹಾಗೂ ಪಕ್ಷದ ನಿಯಂತ್ರಣ ಯಾರಿಗೆ ಸೇರಬೇಕು ಎಂಬ ಹೋರಾಟ ಸೋಮವಾರ (ಜು. 6) ನಿರ್ಣಾಯಕ ಹಂತ ಪ್ರವೇಶಿಸಲಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಅಧಿಕೃತ ಬಣ ಹಾಗೂ ಬಂಡಾಯ ನಾಯಕ ರುತಬ್ರತ ಬ್ಯಾನರ್ಜಿ ನೇತೃತ್ವದ ವಿರೋಧಿ ಬಣಗಳು ಇಂದು ಸಂಜೆ 5:30 ರೊಳಗೆ ಅಂತಿಮ ದಾಖಲೆಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ (ECI) ಸಲ್ಲಿಸಬೇಕಾಗಿದೆ.
ಪಕ್ಷದ 28 ವರ್ಷಗಳ ಸುದೀರ್ಘ ಇತಿಹಾಸದಲ್ಲೇ ಇಂತಹದೊಂದು ರಾಜಕೀಯ ಹಾಗೂ ಕಾನೂನು ಸಂಘರ್ಷ ನಡೆದಿರುವುದು ಇದೇ ಮೊದಲು. ಎರಡೂ ಬಣಗಳು ತಾವೇ ‘ನಿಜವಾದ ಟಿಎಂಸಿ’ ಎಂದು ವಾದಿಸುತ್ತಿರುವುದರಿಂದ, ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿದೆ. ಕಳೆದ ವಾರ ಉಭಯ ಬಣಗಳ ಪ್ರಾಥಮಿಕ ವಾದ ಆಲಿಸಿದ್ದ ಚುನಾವಣಾ ಆಯೋಗ, ಶಾಸಕರು ಮತ್ತು ಸಂಸದರ ಬೆಂಬಲದ ಅಫಿಡವಿಟ್ಗಳು ಹಾಗೂ ದಾಖಲೆಗಳನ್ನು ಒದಗಿಸಲು ಜು.6ರ ಸಂಜೆ 5 ಗಂಟೆ 30 ನಿಮಿಷದವರೆಗೆ ಗಡುವು ನೀಡಿದೆ.
ಪ್ರತಿಷ್ಠೆಯ ಕದನ
ಪಕ್ಷದ ಸಾಂಪ್ರದಾಯಿಕ ಚಿಹ್ನೆ, ಪಕ್ಷದ ಕಚೇರಿಗಳು, ಬ್ಯಾಂಕ್ ಖಾತೆಗಳು ಮತ್ತು ಪ್ರಧಾನ ಕಚೇರಿಯ ಮೇಲಿನ ಹಕ್ಕಿಗಾಗಿ ಈ ಜಿದ್ದಾಜಿದ್ದಿ ನಡೆಯುತ್ತಿದೆ. ಬಂಡಾಯ ಬಣವು ಶಾಸಕಾಂಗದಲ್ಲಿ ತಮಗಿರುವ ಸಂಖ್ಯಾಬಲದ ಆಧಾರದ ಮೇಲೆ ಹಕ್ಕು ಮಂಡಿಸುತ್ತಿದೆ. ಒಟ್ಟು 80 ಟಿಎಂಸಿ ಶಾಸಕರಲ್ಲಿ ಈಗಾಗಲೇ 58 ಮಂದಿ ಬಂಡಾಯ ನಾಯಕ ರುತಬ್ರತ ಬ್ಯಾನರ್ಜಿ ಅವರ ವಿರೋಧ ಪಕ್ಷದ ನಾಯಕನ ಹುದ್ದೆಯ ಹಕ್ಕನ್ನು ಬೆಂಬಲಿಸಿದ್ದರು. ಸದ್ಯ ತಮಗೆ 65 ಶಾಸಕರ ಬೆಂಬಲವಿದೆ ಎಂದು ಬಂಡಾಯ ಬಣ ದಾವೆ ಹೂಡಿದೆ. ಮತ್ತೊಂದೆಡೆ, ಮಮತಾ ಬ್ಯಾನರ್ಜಿ ನೇತೃತ್ವದ ಕಾಳಿಘಾಟ್ ಶಿಬಿರವು ತಾವೇ ಪಕ್ಷದ ಸ್ಥಾಪಕರು ಮತ್ತು ಪಕ್ಷದ ಮೂಲ ನಾಯಕರು ತಮ್ಮೊಂದಿಗಿದ್ದಾರೆ ಎಂದು ವಾದಿಸುತ್ತಿದೆ.
ತೃಣಮೂಲ ಭವನ ವಶಕ್ಕೆ ಪಡೆದ ಬಂಡಾಯ ನಾಯಕರು
ಪಶ್ಚಿಮ ಬಂಗಾಳದ ಇತ್ತೀಚಿನ ದಶಕಗಳ ಇತಿಹಾಸದಲ್ಲೇ ಅತ್ಯಂತ ನಾಟಕೀಯ ರಾಜಕೀಯ ಬಿರುಕು ಇದಾಗಿದೆ. ಬಂಡಾಯ ಬಣವು ಕಳೆದ ತಿಂಗಳು ವಿಶೇಷ ಅಧಿವೇಶನ ಕರೆದು, ಹಿರಿಯ ಶಾಸಕ ಅರುಪ್ ರಾಯ್ ಅವರನ್ನು ಪಕ್ಷದ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತ್ತು. ಅಷ್ಟೇ ಅಲ್ಲದೆ, ಕಳೆದ ಶುಕ್ರವಾರ ಕೋಲ್ಕತ್ತಾದಲ್ಲಿರುವ ಪಕ್ಷದ ಪ್ರಧಾನ ಕಚೇರಿಯಾದ ‘ತೃಣಮೂಲ ಭವನ’ಕ್ಕೆ ಮುತ್ತಿಗೆ ಹಾಕಿದ್ದ ಬಂಡಾಯಗಾರರು, ಕಚೇರಿಯ ಬೀಗಗಳನ್ನು ಬದಲಾಯಿಸಿ, ಹೊಸ ಪೋಸ್ಟರ್ಗಳನ್ನು ಅಂಟಿಸುವ ಮೂಲಕ ಕಚೇರಿಯನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ. ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಭೇಟಿಯಾದ ಬೆನ್ನಲ್ಲೇ ಈ ಹೈಡ್ರಾಮಾ ನಡೆದಿತ್ತು.
ಮಮತಾ ಬಣ ತೀವ್ರ ಆಕ್ಷೇಪ
"ಪಕ್ಷ ವಿರೋಧಿ ಚಟುವಟಿಕೆಗಾಗಿ ಉಚ್ಚಾಟನೆಗೊಂಡಿರುವ ನಾಯಕರು ಚುನಾವಣಾ ಆಯೋಗದ ಮುಂದೆ ಪಕ್ಷವನ್ನು ಪ್ರತಿನಿಧಿಸಲು ಸಾಧ್ಯವೇ ಇಲ್ಲ" ಎಂದು ಮಮತಾ ಬ್ಯಾನರ್ಜಿ ಬಣ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇಂದು ಆಯೋಗದ ಮುಂದೆ ಮಮತಾ ಬಣದ ಹಿರಿಯ ನಾಯಕರು ತಮ್ಮ ಪ್ರಬಲ ಪ್ರತಿವಾದವನ್ನು ಮಂಡಿಸಲಿದ್ದಾರೆ. ಚುನಾವಣಾ ಆಯೋಗವು ಈ ಹಿಂದೆ ಶಿವಸೇನೆ ಮತ್ತು ಎನ್ಸಿಪಿ ವಿವಾದಗಳಲ್ಲಿ ಬಳಸಿದ "ಬಹುಮತದ ಪರೀಕ್ಷೆ" ಸೂತ್ರವನ್ನೇ ಇಲ್ಲೂ ಬಳಸುವ ಸಾಧ್ಯತೆಯಿದೆ. ಒಟ್ಟಾರೆಯಾಗಿ, ಒಂದೂವರೆ ದಶಕಗಳ ಕಾಲ ಬಂಗಾಳವನ್ನು ಆಳಿದ ದೀದಿಯ ರಾಜಕೀಯ ಸಾಮ್ರಾಜ್ಯದ ನಿಜವಾದ ವಾರಸುದಾರರು ಯಾರು ಎಂಬ ತೀರ್ಪು ಪ್ರಕ್ರಿಯೆಗೆ ಇಂದು ಅಧಿಕೃತ ಚಾಲನೆ ಸಿಗಲಿದೆ.

