
ಮೃತ ಬಾಲಕ ಜಯಕುಮಾರ್ ಜೈಸ್ವಾಲ್
ಕಟ್ಟಡದ ಛಾವಣಿ ಕುಸಿದು 12 ವರ್ಷದ ಬಾಲಕ ಸಾವು, ಇಬ್ಬರಿಗೆ ಗಂಭೀರ ಗಾಯ
ಘಟನೆಯಲ್ಲಿ ಗಾಯಗೊಂಡ ಇನ್ನಿಬ್ಬರನ್ನು ಊರ್ಮಿಳಾ ಜೈಸ್ವಾಲ್ (35) ಮತ್ತು ವಿನಿತ್ ಜೈಸ್ವಾಲ್ (9) ಎಂದು ಗುರುತಿಸಲಾಗಿದೆ. ಇಬ್ಬರ ತಲೆಗೂ ಬಲವಾದ ಪೆಟ್ಟು ಬಿದ್ದಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಹಾರಾಷ್ಟ್ರದ ಥಾಣೆಯಲ್ಲಿ ನಡೆದ ಭೀಕರ ದುರಂತವೊಂದರಲ್ಲಿ ಹಳೆಯ ಮನೆಯ ಛಾವಣಿ ಭಾಗ ಕುಸಿದು ಬಿದ್ದು, 12 ವರ್ಷದ ಬಾಲಕನೊಬ್ಬ ದುರ್ಮರಣಕ್ಕೀಡಾಗಿದ್ದಾನೆ. ಘಟನೆಯಲ್ಲಿ ಬಾಲಕನ ಕುಟುಂಬದ ಇಬ್ಬರು ಸದಸ್ಯರು ತೀವ್ರವಾಗಿ ಗಾಯಗೊಂಡಿದ್ದಾರೆ.
ಆಜಾದ್ ನಗರದ ಮದ್ರಾಸ್ ಚಾಲ್ನಲ್ಲಿ ಶುಕ್ರವಾರ ಮಧ್ಯಾಹ್ನ 3.35 ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಸುಮಾರು 25 ರಿಂದ 30 ವರ್ಷ ಹಳೆಯದಾದ ನೆಲ ಮತ್ತು ಒಂದು ಅಂತಸ್ತಿನ ಈ ಕಟ್ಟಡದ ಛಾವಣಿ ಭಾಗವು ಇದ್ದಕ್ಕಿದ್ದಂತೆ ಪಕ್ಕದ ಮನೆಯ ಮೇಲೆ ಕುಸಿದು ಬಿದ್ದಿದೆ. ದುರದೃಷ್ಟವಶಾತ್, ಆ ಸಮಯದಲ್ಲಿ ಮನೆಯೊಳಗೆ ಕುಟುಂಬಸ್ಥರು ಮಲಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಕಿತ್ಸೆ ಫಲಿಸದೆ ಬಾಲಕ ಸಾವು
ಈ ಅವಘಡದಲ್ಲಿ 12 ವರ್ಷದ ಜಯಕುಮಾರ್ ಜೈಸ್ವಾಲ್ ಎಂಬ ಬಾಲಕನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ತಕ್ಷಣವೇ ಆತನನ್ನು ಸಮೀಪದ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಆರಂಭಿಸುವ ಮುನ್ನವೇ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಇನ್ನಿಬ್ಬರನ್ನು ಊರ್ಮಿಳಾ ಜೈಸ್ವಾಲ್ (35) ಮತ್ತು ವಿನಿತ್ ಜೈಸ್ವಾಲ್ (9) ಎಂದು ಗುರುತಿಸಲಾಗಿದೆ. ಇಬ್ಬರ ತಲೆಗೂ ಬಲವಾದ ಪೆಟ್ಟು ಬಿದ್ದಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡ
ಘಟನೆ ನಡೆದ ತಕ್ಷಣವೇ ಎರಡು ಅಗ್ನಿಶಾಮಕ ವಾಹನಗಳು, ರಕ್ಷಣಾ ವಾಹನ, ವಿಪತ್ತು ನಿರ್ವಹಣಾ ವಾಹನ ಹಾಗೂ ಆಂಬ್ಯುಲೆನ್ಸ್ನೊಂದಿಗೆ ತುರ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಮದ್ರಾಸ್ ಚಾಲ್ನ ಒಳಗಿರುವ ಪಕ್ಕದ ಮೂರು ಮನೆಗಳನ್ನು ಸದ್ಯ ತೆರವುಗೊಳಿಸಲಾಗಿದೆ. ಮಜಿವಾಡಾ ವಾರ್ಡ್ ಸಮಿತಿ, ಲೋಕೋಪಯೋಗಿ ಇಲಾಖೆ ಮತ್ತು ಅತಿಕ್ರಮಣ ವಿರೋಧಿ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಕಟ್ಟಡದ ಸ್ಥಿರತೆಯ ಮೌಲ್ಯಮಾಪನ ಹಾಗೂ ಅವಶೇಷಗಳ ತೆರವು ಕಾರ್ಯಾಚರಣೆ ಮುಂದುವರಿಸಿದ್ದಾರೆ.

