
ಉದ್ಧವ್ ಠಾಕ್ರೆಗೆ ಭಾರಿ ಆಘಾತ: 6 ಶಿವಸೇನೆ (ಯುಬಿಟಿ) ಸಂಸದರು ಶಿಂಧೆ ಬಣಕ್ಕೆ ಸೇರ್ಪಡೆ ಸಾಧ್ಯತೆ
ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ಬೆಳವಣಿಗೆ. ಶಿವಸೇನೆ (UBT)ಯ ಆರು ಲೋಕಸಭಾ ಸದಸ್ಯರು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರುವ ಸಾಧ್ಯತೆ ಇದೆ. ‘ಆಪರೇಷನ್ ಟೈಗರ್’ ನಡುವೆ ಉದ್ಧವ್ ಠಾಕ್ರೆ ತುರ್ತು ಸಭೆ ಕರೆದಿದ್ದಾರೆ.
ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆಗೆ ಭಾರಿ ಹಿನ್ನಡೆಯಾಗುವ ಸಾಧ್ಯತೆ ಎದುರಾಗಿದ್ದು, ಪಕ್ಷದ ಆರು ಬಂಡಾಯ ಲೋಕಸಭಾ ಸದಸ್ಯರು ಸೋಮವಾರ ಮಧ್ಯಾಹ್ನ 3 ಗಂಟೆಗೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಆರು ಸಂಸದರು ಅಧಿಕೃತವಾಗಿ ಶಿಂಧೆ ಬಣದೊಂದಿಗೆ ವಿಲೀನಗೊಂಡರೆ, ಪಕ್ಷಾಂತರ ನಿಷೇಧ ಕಾಯ್ದೆಯಿಂದ ಅನರ್ಹತೆ ತಪ್ಪಿಸಿಕೊಳ್ಳಲು ಅಗತ್ಯವಿರುವ ಮೂರರಲ್ಲಿ ಎರಡು ಭಾಗದ ಸಂಖ್ಯಾಬಲ ಬಂಡಾಯ ಗುಂಪಿಗೆ ದೊರೆಯಲಿದೆ.
‘ಆಪರೇಷನ್ ಟೈಗರ್’ ರಾಜಕೀಯ ಸಂಚಲನ
‘ಆಪರೇಷನ್ ಟೈಗರ್’ ಹೆಸರಿನಲ್ಲಿ ಮಹಾರಾಷ್ಟ್ರ ರಾಜಕೀಯದಲ್ಲಿ ಉಂಟಾಗಿರುವ ಸಂಚಲನದ ನಡುವೆ, ಶಿವಸೇನೆ (ಯುಬಿಟಿ) ತನ್ನ ಎಲ್ಲಾ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ತುರ್ತು ಸಭೆಯನ್ನು ಸೋಮವಾರ ಮಧ್ಯಾಹ್ನ 2.30ಕ್ಕೆ ಮುಂಬೈನ ನರಿಮನ್ ಪಾಯಿಂಟ್ನಲ್ಲಿರುವ ಪಕ್ಷದ ಕಚೇರಿ ‘ಶಿವಾಲಯ’ದಲ್ಲಿ ಕರೆದಿದೆ.
ಮಹಾರಾಷ್ಟ್ರ ವಿಧಾನಮಂಡಲದ ಮುಂಗಾರು ಅಧಿವೇಶನದ ಮೊದಲ ದಿನವೇ ನಡೆಯುತ್ತಿರುವ ಈ ಸಭೆ, ಪಕ್ಷದೊಳಗಿನ ಅಸಮಾಧಾನ ಮತ್ತು ಪಕ್ಷಾಂತರದ ಭೀತಿಯ ನಡುವೆ ಉದ್ಧವ್ ಠಾಕ್ರೆ ತಮ್ಮ ಶಾಸಕರನ್ನು ಒಗ್ಗೂಡಿಸಿಕೊಳ್ಳುವ ಪ್ರಯತ್ನವೆಂದು ವಿಶ್ಲೇಷಿಸಲಾಗುತ್ತಿದೆ.
ಇಬ್ಬರು ಸಂಸದರ ಬಹಿರಂಗ ಘೋಷಣೆ
ಬಂಡಾಯ ಎದ್ದಿರುವ ಸಂಸದರಾದ ನಾಗೇಶ್ ಪಾಟೀಲ್ ಅಷ್ಟಿಕರ್ ಹಾಗೂ ಓಂಪ್ರಕಾಶ್ ರಾಜೆ ನಿಂಬಾಳ್ಕರ್ ಭಾನುವಾರವೇ ತಾವು ಶಿಂಧೆ ಬಣವನ್ನು ಸೇರುತ್ತಿರುವುದಾಗಿ ಬಹಿರಂಗವಾಗಿ ಘೋಷಿಸಿದ್ದಾರೆ.
ಜೂನ್ 17ರಂದು ದೆಹಲಿಯಲ್ಲಿ ನಡೆದ ಶಿವಸೇನೆ (ಯುಬಿಟಿ) ಸಂಸದರ ಸಭೆಗೆ ಗೈರಾಗಿದ್ದ ಆರು ಸಂಸದರು ಸಂಜಯ್ ದಿನಾ ಪಾಟೀಲ್, ಸಂಜಯ್ ದೇಶಮುಖ್, ಸಂಜಯ್ ಜಾಧವ್, ಭಾವುಸಾಹೇಬ್ ವಾಕ್ಚೌರೆ, ನಾಗೇಶ್ ಪಾಟೀಲ್ ಅಷ್ಟಿಕರ್, ಓಂಪ್ರಕಾಶ್ ರಾಜೆ ನಿಂಬಾಳ್ಕರ್ ಪ್ರಸ್ತುತ ಶಿವಸೇನೆ (ಯುಬಿಟಿ)ಗೆ ಒಂಬತ್ತು ಲೋಕಸಭಾ ಸದಸ್ಯರಿದ್ದು, ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗಲು ಕನಿಷ್ಠ ಆರು ಸದಸ್ಯರ ಬೆಂಬಲ ಅಗತ್ಯವಾಗಿದೆ.
ಹಿಂಗೋಲಿ ಸಂಸದ ನಾಗೇಶ್ ಪಾಟೀಲ್ ಅಷ್ಟಿಕರ್ ಮಾತನಾಡಿ, ಜೂನ್ 18ರ ನಂತರ ತಮ್ಮ ವಿರುದ್ಧ ಮತ್ತು ಇತರ ಸಂಸದರ ವಿರುದ್ಧ ನಡೆದ ಟೀಕೆಗಳಿಂದ ಪಕ್ಷದಲ್ಲಿ ಉಳಿಯುವ ಮನಸ್ಸು ಬದಲಾಗಿದೆ ಎಂದು ಹೇಳಿದ್ದಾರೆ.
"ಜೂನ್ 18ರವರೆಗೆ ನಾವು ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ಆದರೆ ನಮ್ಮ ವಿರುದ್ಧ ಬಂದ ಕೆಲವು ಹೇಳಿಕೆಗಳು ಇಲ್ಲಿ ಉಳಿಯುವುದಕ್ಕೆ ಅರ್ಥವಿಲ್ಲ ಎಂಬ ಭಾವನೆ ಮೂಡಿಸಿತು" ಎಂದು ಅವರು ಹೇಳಿದ್ದಾರೆ. ಅವರು ಉದ್ಧವ್ ಠಾಕ್ರೆ ಅಥವಾ ಸಂಜಯ್ ರಾವತ್ ವಿರುದ್ಧ ಯಾವುದೇ ಅಸಮಾಧಾನ ಇಲ್ಲ ಎಂದರೂ, ಇತ್ತೀಚಿನ ಟೀಕೆಗಳು ತಮ್ಮ ನಿರ್ಧಾರಕ್ಕೆ ಕಾರಣವಾಗಿವೆ ಎಂದು ಸೂಚಿಸಿದ್ದಾರೆ.
ಒಂದು ಶಿವಸೇನೆಯಿಂದ ಮತ್ತೊಂದು ಶಿವಸೇನೆಗೆ
ತಾವು ತಮ್ಮ ಸಿದ್ಧಾಂತದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಿಲ್ಲ ಎಂದು ಹೇಳಿರುವ ಅಷ್ಟಿಕರ್, "ನಾನು ಒಂದು ಶಿವಸೇನೆಯಿಂದ ಮತ್ತೊಂದು ಶಿವಸೇನೆಗೆ ಹೋಗಿದ್ದೇನೆ" ಎಂದು ಸ್ಪಷ್ಟಪಡಿಸಿದ್ದಾರೆ. ಧಾರಾಶಿವ್ ಸಂಸದ ಓಂಪ್ರಕಾಶ್ ರಾಜೆ ನಿಂಬಾಳ್ಕರ್ ಕೂಡ ಕ್ಷೇತ್ರದ ಬೆಂಬಲಿಗರೊಂದಿಗೆ ಚರ್ಚಿಸಿ ಶಿಂಧೆ ಬಣ ಸೇರುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಉದ್ಧವ್ ಬಣದ ಕೊನೆಯ ಪ್ರಯತ್ನ
ನಿಂಬಾಳ್ಕರ್ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಉದ್ಧವ್ ಬಣ ಕೊನೆಯ ಕ್ಷಣದ ಪ್ರಯತ್ನ ನಡೆಸಿತ್ತು. ಶಿವಸೇನೆ (ಯುಬಿಟಿ) ಶಾಸಕರಾದ ಕೈಲಾಸ್ ಪಾಟೀಲ್ ಮತ್ತು ವರುಣ್ ಸರ್ದೇಸಾಯಿ ಭಾನುವಾರ ಬೆಳಗ್ಗೆ ಪುಣೆಯಲ್ಲಿರುವ ನಿಂಬಾಳ್ಕರ್ ನಿವಾಸಕ್ಕೆ ಭೇಟಿ ನೀಡಿ ಉದ್ಧವ್ ಠಾಕ್ರೆಯ ಸಂದೇಶವನ್ನು ತಲುಪಿಸಿದ್ದರು.
‘ಆಪರೇಷನ್ ಟೈಗರ್’ ಯಶಸ್ವಿ: ಫಡ್ನವಿಸ್
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ‘ಆಪರೇಷನ್ ಟೈಗರ್’ ಯಶಸ್ವಿಯಾಗಿದೆ ಎಂಬ ಸೂಚನೆ ನೀಡಿದ್ದಾರೆ. "ಆಪರೇಷನ್ ಯಶಸ್ವಿಯಾಗಿದೆ. ದೇಹವೂ ಉತ್ತಮ ಆರೋಗ್ಯದಲ್ಲಿದೆ. ಯಾರೂ ಚಿಂತಿಸುವ ಅಗತ್ಯವಿಲ್ಲ. ಆತ್ಮಾವಲೋಕನ ಮಾಡಿಕೊಳ್ಳಬೇಕಾದವರು ಮಾಡಿಕೊಳ್ಳಲಿ" ಎಂದು ಅವರು ಹೇಳಿದ್ದಾರೆ. ಉದ್ಧವ್ ಠಾಕ್ರೆ ಅವರೇ ಈ ಪರಿಸ್ಥಿತಿಗೆ ಕಾರಣ ಎಂದು ಆರೋಪಿಸಿರುವ ಫಡ್ನವಿಸ್, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಜನರಲ್ಲಿ ವಿಶ್ವಾಸ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಶಿಂಧೆಯೂ ಸುಳಿವು
ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೂಡ ‘ಆಪರೇಷನ್ ಟೈಗರ್’ ಯಶಸ್ಸಿನ ಕುರಿತು ಪರೋಕ್ಷವಾಗಿ ಮಾತನಾಡಿದ್ದಾರೆ. "ನಾನು ಯಾವ ಕಾರ್ಯಾಚರಣೆ ಕೈಗೊಂಡರೂ ಅದನ್ನು ಸಂಪೂರ್ಣಗೊಳಿಸುತ್ತೇನೆ. ನಾವು ಅದನ್ನು ಈಗಾಗಲೇ ತೋರಿಸಿದ್ದೇವೆ" ಎಂದು ಶಿಂಧೆ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಉದ್ಧವ್ ಠಾಕ್ರೆ, ತಾವು ಯಾವುದೇ ಕಾರಣಕ್ಕೂ ಕುಗ್ಗಿಲ್ಲ ಎಂದು ಹೇಳಿದ್ದಾರೆ. "ಇದು ಬಿಜೆಪಿಯ ಪಾಪ. ನನ್ನ ನೇತೃತ್ವದ ಶಿವಸೇನೆ ಮಾತ್ರ ನಿಜವಾದ ಶಿವಸೇನೆ" ಎಂದು ಅವರು ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದಾರೆ.
ಬಿಜೆಪಿ ಶಿವಸೇನೆಯನ್ನು ಕಬಳಿಸಲು ಅಥವಾ ನಾಶ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಉದ್ಧವ್, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮಾತ್ರ ನಿಜವಾದ ಶಿವಸೇನೆ ಎಂಬ ಹೇಳಿಕೆಗಳಿಗೂ ತಿರುಗೇಟು ನೀಡಿದ್ದಾರೆ. ಮಹಾರಾಷ್ಟ್ರ ರಾಜಕೀಯದಲ್ಲಿ ಈ ಬೆಳವಣಿಗೆಗಳು ಹೊಸ ರಾಜಕೀಯ ಸಮೀಕರಣಗಳಿಗೆ ಕಾರಣವಾಗುವ ಸಾಧ್ಯತೆ ಇದ್ದು, ಸೋಮವಾರದ ಬೆಳವಣಿಗೆಗಳತ್ತ ಎಲ್ಲರ ಗಮನ ನೆಟ್ಟಿದೆ.

