
Plane Crash| ಏರ್ ಆಂಬ್ಯುಲೆನ್ಸ್ ಪತನ; ಏಳು ಮಂದಿ ದುರ್ಮರಣ
ಜಾರ್ಖಂಡ್ನ ಚತ್ರಾ ಜಿಲ್ಲೆಯಲ್ಲಿ ರೆಡ್ಬರ್ಡ್ ಏರ್ವೇಸ್ನ ಏರ್ ಆಂಬ್ಯುಲೆನ್ಸ್ ಪತನಗೊಂಡು ರೋಗಿ ಮತ್ತು ಪೈಲಟ್ ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ.
ಜಾರ್ಖಂಡ್ನ ಚತ್ರಾ ಜಿಲ್ಲೆಯ ಸಿಮಾರಿಯಾ ಎಂಬಲ್ಲಿ ಸೋಮವಾರ ಸಂಜೆ ಏರ್ ಆಂಬ್ಯುಲೆನ್ಸ್ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲಾ ಏಳು ಮಂದಿ ಸಾವನ್ನಪ್ಪಿದ್ದಾರೆ. ಈ ವಿಮಾನವು ರಾಂಚಿಯಿಂದ ದೆಹಲಿಗೆ ರೋಗಿಯೊಬ್ಬರನ್ನು ಕರೆದೊಯ್ಯುತ್ತಿತ್ತು ಎಂದು ಸರ್ಕಾರಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.
"ಏರ್ ಆಂಬ್ಯುಲೆನ್ಸ್ನಲ್ಲಿದ್ದ ಎಲ್ಲಾ ಏಳು ಜನರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ವಿಮಾನವು ರಾಂಚಿಯಿಂದ ದೆಹಲಿಗೆ ತೆರಳುತ್ತಿತ್ತು," ಎಂದು ಚತ್ರಾ ಜಿಲ್ಲಾಧಿಕಾರಿ ಕೀರ್ತಿಶ್ರೀ ಜಿ. ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಘಟನೆಯ ವಿವರ
ರೆಡ್ಬರ್ಡ್ ಏರ್ವೇಸ್ ಪ್ರೈವೇಟ್ ಲಿಮಿಟೆಡ್ಗೆ ಸೇರಿದ ಈ ಬೀಚ್ಕ್ರಾಫ್ಟ್ C90 (VT-AJV) ವಿಮಾನವು ಸಂಜೆ 7:11ಕ್ಕೆ ರಾಂಚಿ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿತ್ತು. ಸಂಜೆ 7:30ರ ಸುಮಾರಿಗೆ ವಿಮಾನವು ಸಂಪರ್ಕ ಕಳೆದುಕೊಂಡಿದ್ದು, ನಂತರ ಸಿಮಾರಿಯಾದ ಬರಿಯಾತು ಪಂಚಾಯತ್ ವ್ಯಾಪ್ತಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ.
ಮೃತರ ವಿವರಗಳು
ಸಬ್ ಡಿವಿಜನಲ್ ಪೊಲೀಸ್ ಅಧಿಕಾರಿ (SDPO) ಶುಭಂ ಖಂಡೇಲ್ವಾಲ್ ಅವರು ಎಲ್ಲಾ ಏಳು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಸಬ್ ಡಿವಿಜನಲ್ ಪೊಲೀಸ್ ಅಧಿಕಾರಿ (SDPO) ಶುಭಂ ಖಂಡೇಲ್ವಾಲ್ ಅವರು ಎಲ್ಲಾ ಏಳು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಖಚಿತಪಡಿಸಿದ್ದು, ಮೃತರನ್ನು ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್, ಕ್ಯಾಪ್ಟನ್ ಸವ್ರಾಜ್ದೀಪ್ ಸಿಂಗ್, ರೋಗಿ ಸಂಜಯ್ ಕುಮಾರ್, ಡಾ. ವಿಕಾಸ್ ಕುಮಾರ್ ಗುಪ್ತಾ, ಸಚಿನ್ ಕುಮಾರ್ ಮಿಶ್ರಾ, ಅರ್ಚನಾ ದೇವಿ ಮತ್ತು ಧುರು ಕುಮಾರ್ ಎಂದು ಗುರುತಿಸಲಾಗಿದೆ.
ಚಿಕಿತ್ಸೆಗಾಗಿ ದೆಹಲಿಗೆ ತೆರಳುತ್ತಿದ್ದ ರೋಗಿ
ರಾಂಚಿಯ ದೇವ್ಕಮಲ್ ಆಸ್ಪತ್ರೆಯ ಸಿಇಒ ಅನಂತ್ ಸಿನ್ಹಾ ಅವರ ಪ್ರಕಾರ, ಲಾತೆಹಾರ್ ಜಿಲ್ಲೆಯ ನಿವಾಸಿ ಸಂಜಯ್ ಕುಮಾರ್ (41) ಎಂಬುವವರಿಗಾಗಿ ಈ ಏರ್ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಫೆಬ್ರವರಿ 16 ರಂದು ಶೇ. 65 ರಷ್ಟು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿತ್ತು. ರಸ್ತೆ ಮೂಲಕ ಪ್ರಯಾಣಿಸುವುದು ಅಪಾಯಕಾರಿ ಎಂದು ವೈದ್ಯರು ಎಚ್ಚರಿಸಿದ್ದರಿಂದ ಕುಟುಂಬಸ್ಥರು ವಿಮಾನದ ವ್ಯವಸ್ಥೆ ಮಾಡಿದ್ದರು.
ಅಪಘಾತಕ್ಕೆ ಹವಾಮಾನ ವೈಪರೀತ್ಯ ಕಾರಣ?
ಅಪಘಾತದ ಸಮಯದಲ್ಲಿ ಆ ಪ್ರದೇಶದಲ್ಲಿ ಭಾರಿ ಮಳೆ, ಗುಡುಗು, ಮಿಂಚು ಮತ್ತು ಬಲವಾದ ಗಾಳಿ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ರಾಂಚಿ ವಿಮಾನ ನಿಲ್ದಾಣದ ನಿರ್ದೇಶಕ ವಿನೋದ್ ಕುಮಾರ್ ಮಾತನಾಡಿ, ಟೇಕ್ ಆಫ್ ಆದ 20 ನಿಮಿಷಗಳ ನಂತರ ವಿಮಾನವು ಏರ್ ಟ್ರಾಫಿಕ್ ಕಂಟ್ರೋಲ್ (ATC) ಜೊತೆಗಿನ ಸಂಪರ್ಕ ಕಳೆದುಕೊಂಡಿದೆ ಎಂದು ಹೇಳಿದ್ದಾರೆ.
DGCA ಸ್ಪಷ್ಟನೆ
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಹೊರಡಿಸಿದ ಪ್ರಕಟಣೆಯ ಪ್ರಕಾರ, ರಾಂಚಿಯಿಂದ ಹೊರಟ ವಿಮಾನವು ವಾರಣಾಸಿಯಿಂದ ಸುಮಾರು 100 ನಾಟಿಕಲ್ ಮೈಲಿ ಆಗ್ನೇಯ ದಿಕ್ಕಿನಲ್ಲಿ ರಾಡಾರ್ ಸಂಪರ್ಕ ಕಳೆದುಕೊಂಡಿದೆ. ಅಪಘಾತದ ಬಗ್ಗೆ ತನಿಖೆ ನಡೆಸಲು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತಂಡವನ್ನು ಸ್ಥಳಕ್ಕೆ ರವಾನಿಸಲಾಗಿದೆ. ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಚಂಪೈ ಸೊರೆನ್ ಅವರು ಈ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

