ಪ್ರೇಮಿಗಳ ದಿನದಂದೇ ಪ್ರೇಯಸಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಯುವಕ? ಕೊಲೆ ಆರೋಪ
x

ಪ್ರೇಮಿಗಳ ದಿನದಂದೇ ಪ್ರೇಯಸಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಯುವಕ? ಕೊಲೆ ಆರೋಪ

ಸುಮಿತ್ ಕುಟುಂಬಸ್ಥರು ಪೊಲೀಸರ ವಾದವನ್ನು ಅಲ್ಲಗಳೆದಿದ್ದಾರೆ. "ಇದು ಆತ್ಮಹತ್ಯೆಯಲ್ಲ, ಜಾತಿ ಕಾರಣಕ್ಕಾಗಿ ನಡೆದ ಕೊಲೆ," ಎಂದು ಅವರು ಆರೋಪಿಸಿದ್ದಾರೆ.


Click the Play button to hear this message in audio format

ಪ್ರೇಮಿಗಳ ದಿನದಂದೇ (ಫೆಬ್ರವರಿ 14) ನೋಯ್ಡಾದಲ್ಲಿ ಕಾರಿನೊಳಗೆ ಯುವಕ ಮತ್ತು ಯುವತಿ ಶವವಾಗಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ಯುವಕನೇ ಪ್ರೇಯಸಿಯನ್ನು ಗುಂಡಿಕ್ಕಿ ಕೊಂದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಮೃತ ಯುವಕನ ಕುಟುಂಬಸ್ಥರು ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ.

ನೋಯ್ಡಾದ ಸೆಕ್ಟರ್ 39 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗುಂಡಿನ ಶಬ್ದ ಕೇಳಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ, ಲಾಕ್ ಆಗಿದ್ದ ಕಾರಿನೊಳಗೆ ಜೋಡಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕಾರಿನೊಳಗೆ ಪಿಸ್ತೂಲ್ ಮತ್ತು ಕಾಟ್ರಿಡ್ಜ್‌ಗಳು ಪತ್ತೆಯಾಗಿವೆ. ಮೃತ ಸುಮಿತ್ (32) ದೆಹಲಿಯ ತ್ರಿಲೋಕ್‌ಪುರಿ ನಿವಾಸಿಯಾಗಿದ್ದು, ರೇಖಾ (26) ನೋಯ್ಡಾದ ಸೆಕ್ಟರ್ 58ರ ನಿವಾಸಿಯಾಗಿದ್ದರು.

ವಾಟ್ಸ್​ಆ್ಯಪ್ ಸಂದೇಶದಲ್ಲಿ ಏನಿದೆ?

ಘಟನೆಗೂ ಮುನ್ನ ಸುಮಿತ್ ವಾಟ್ಸ್​​ಆ್ಯಪ್​ ಸ್ಟೇಟಸ್ ಅಥವಾ ಮೆಸೇಜ್ ಮೂಲಕ ತನ್ನ ಸಾವಿಗೆ ಕಾರಣ ತಿಳಿಸಿದ್ದಾನೆ ಎನ್ನಲಾಗಿದೆ. "ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇದಕ್ಕೆ ರೇಖಾ ಕಾರಣ. 15 ವರ್ಷಗಳಿಂದ ನಾವು ಪ್ರೀತಿಸುತ್ತಿದ್ದೆವು. ಮದುವೆಯಾಗುವುದಾಗಿ ನಂಬಿಸಿ ಈಗ ಬೇರೆಯವರನ್ನು ಮದುವೆಯಾಗಲು ಹೊರಟಿದ್ದಾಳೆ. ಇದು ನನಗೆ ಮಾಡಿದ ದ್ರೋಹ," ಎಂದು ಸಂದೇಶದಲ್ಲಿ ಬರೆಯಲಾಗಿದೆ ಎಂದು ವರದಿಯಾಗಿದೆ.

ಕುಟುಂಬಸ್ಥರ ಗಂಭೀರ ಆರೋಪ

ಸುಮಿತ್ ಕುಟುಂಬಸ್ಥರು ಪೊಲೀಸರ ವಾದವನ್ನು ಅಲ್ಲಗಳೆದಿದ್ದಾರೆ. "ಇದು ಆತ್ಮಹತ್ಯೆಯಲ್ಲ, ಜಾತಿ ಕಾರಣಕ್ಕಾಗಿ ನಡೆದ ಕೊಲೆ," ಎಂದು ಅವರು ಆರೋಪಿಸಿದ್ದಾರೆ. ರೇಖಾ ಕುಟುಂಬದವರು ಇವರಿಬ್ಬರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು ಮತ್ತು ಜಾತಿ ನಿಂದನೆ ಮಾಡುತ್ತಿದ್ದರು. ಅಲ್ಲದೆ, ಅಂತಾರಾಷ್ಟ್ರೀಯ ನಂಬರ್‌ಗಳಿಂದ ಬೆದರಿಕೆ ಕರೆಗಳು ಬರುತ್ತಿದ್ದವು ಎಂದು ಸುಮಿತ್ ಸಹೋದರ ಆರೋಪಿಸಿದ್ದಾರೆ.

ಪೊಲೀಸ್ ತನಿಖೆ

ಕಾರು ಒಳಗಿನಿಂದ ಲಾಕ್ ಆಗಿತ್ತು ಮತ್ತು ಸುಮಿತ್ ಕೈಯಲ್ಲಿ ಪಿಸ್ತೂಲ್ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ವಿಧಿವಿಜ್ಞಾನ ತಂಡ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನಾ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳಿಲ್ಲದ ಕಾರಣ, ಅಕ್ಕಪಕ್ಕದ ರಸ್ತೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

Read More
Next Story