ನೇಪಾಳ-ಟಿಬೆಟ್ ಪ್ರವಾಹ: ಸಾವಿನ ಸಂಖ್ಯೆ 1,243ಕ್ಕೆ ಏರಿಕೆ
x

ನೇಪಾಳ-ಟಿಬೆಟ್ ಭೀಕರ ಪ್ರವಾಹದಲ್ಲಿ ಸಾವಿನ ಸಂಖ್ಯೆ 1,243ಕ್ಕೆ ಏರಿದೆ.

ನೇಪಾಳ-ಟಿಬೆಟ್ ಪ್ರವಾಹ: ಸಾವಿನ ಸಂಖ್ಯೆ 1,243ಕ್ಕೆ ಏರಿಕೆ

ನಾಪತ್ತೆಯಾದವರ ಪೈಕಿ 583 ಮಂದಿ ವಿದೇಶಿಗರಿದ್ದಾರೆ. ನೇಪಾಳ ಸೇನೆ ಸೇರಿದಂತೆ ಭದ್ರತಾ ಪಡೆಗಳು ಈವರೆಗೆ ಹೆಲಿಕಾಪ್ಟರ್ ಮತ್ತು ಭೂಮಾರ್ಗಗಳ ಮೂಲಕ 11,993 ಮಂದಿಯನ್ನು ರಕ್ಷಿಸಿವೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸುಮಾರು 21,314 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.


Click the Play button to hear this message in audio format

ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಿಂದ ನೇಪಾಳದಲ್ಲಿ ಸಾವಿನ ಸಂಖ್ಯೆ 1,243ಕ್ಕೆ ಏರಿಕೆಯಾಗಿದೆ. ಸುಮಾರು 4,875 ಮಂದಿ ಇನ್ನೂ ನಾಪತ್ತೆಯಾಗಿದ್ದು, ಅವರಲ್ಲಿ ವಿವಿಧ ಜಲವಿದ್ಯುತ್ ಯೋಜನೆಗಳ 947 ಮಂದಿ ಕಾರ್ಮಿಕರೂ ಸೇರಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿದ್ದರೂ, ನಿರಂತರ ಮಳೆ ಮತ್ತು ಭೂಕುಸಿತದಿಂದ ಕಾರ್ಯಕ್ಕೆ ಅಡ್ಡಿಯಾಗಿದೆ.

ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರು ಪ್ರವಾಹ ದುರಂತಕ್ಕೂ ಹವಾಮಾನ ಬದಲಾವಣೆಯ ಹೆಚ್ಚುತ್ತಿರುವ ಪರಿಣಾಮಕ್ಕೂ ಇರುವ ನಂಟನ್ನು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಬಲವಾಗಿ ಪ್ರಸ್ತಾಪಿಸಬೇಕಾಗಿದೆ ಎಂದು ಹೇಳಿದ್ದಾರೆ. ಸಂಸತ್‌ನಲ್ಲಿ ಮಾತನಾಡಿದ ಅವರು, ಹಿಮಾಲಯ ಪ್ರದೇಶದಲ್ಲಿ ಹವಾಮಾನ ಬದಲಾವಣೆಯಿಂದ ಇಂತಹ ದುರಂತಗಳ ಅಪಾಯ ಹೆಚ್ಚುತ್ತಿದೆ ಎಂದು ಎಚ್ಚರಿಸಿದರು.

ಆಗಸ್ಟ್ 26ರಂದು ನೇಪಾಳ-ಟಿಬೆಟ್ ಗಡಿಯ ಸಮೀಪ ಸಂಭವಿಸಿದ ಹಿಮ-ಬಂಡೆ ಕುಸಿತದಿಂದ ಭೋಟೆಕೋಶಿ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿ ಉತ್ತರ ಮತ್ತು ಮಧ್ಯ ನೇಪಾಳದ ಹಲವು ಪಟ್ಟಣಗಳು ಹಾಗೂ ಗ್ರಾಮಗಳು ತೀವ್ರವಾಗಿ ಹಾನಿಗೊಳಗಾಗಿದ್ದವು.

ಎಂಟು ಜಿಲ್ಲೆಗಳಲ್ಲಿ ಭಾರೀ ಸಾವು-ನೋವು

ನೇಪಾಳ ಪೊಲೀಸ್ ಮಾಹಿತಿ ಪ್ರಕಾರ, ಚಿತ್ವಾನ್ ಜಿಲ್ಲೆಯಲ್ಲಿ 348, ನವಲ್‌ಪರಾಸಿ ಪೂರ್ವದಲ್ಲಿ 218, ನವಲ್‌ಪರಾಸಿ ಪಶ್ಚಿಮದಲ್ಲಿ 208 ಹಾಗೂ ನುವಾಕೋಟ್‌ನಲ್ಲಿ 155 ಮೃತದೇಹಗಳು ಪತ್ತೆಯಾಗಿವೆ. ರಸುವಾದಲ್ಲಿ 127, ಗೋರಖಾದಲ್ಲಿ 69, ಧಾದಿಂಗ್‌ನಲ್ಲಿ 60 ಮತ್ತು ತನಹುದಲ್ಲಿ 38 ಮೃತದೇಹಗಳು ಪತ್ತೆಯಾಗಿವೆ.

ನಾಪತ್ತೆಯಾದವರ ಪೈಕಿ 583 ಮಂದಿ ವಿದೇಶಿಯರಾಗಿದ್ದಾರೆ. ನೇಪಾಳ ಸೇನೆ ಸೇರಿದಂತೆ ಭದ್ರತಾ ಪಡೆಗಳು ಈವರೆಗೆ ಹೆಲಿಕಾಪ್ಟರ್ ಮತ್ತು ಭೂಮಾರ್ಗಗಳ ಮೂಲಕ 11,993 ಮಂದಿಯನ್ನು ರಕ್ಷಿಸಿವೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸುಮಾರು 21,314 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಜಲವಿದ್ಯುತ್ ಯೋಜನೆಗಳ ನೂರಾರು ಕಾರ್ಮಿಕರು ನಾಪತ್ತೆ

ಭೋಟೆಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ಇರುವ ಜಲವಿದ್ಯುತ್ ಯೋಜನೆಗಳ ಸುರಂಗಗಳು ಮತ್ತು ಭೂಗತ ವಿದ್ಯುತ್ ಘಟಕಗಳಲ್ಲಿ ಸಿಲುಕಿರುವವರಿಗಾಗಿ ರಕ್ಷಣಾ ತಂಡಗಳು ಶೋಧ ನಡೆಸುತ್ತಿವೆ. ವಿವಿಧ ಜಲವಿದ್ಯುತ್ ಯೋಜನೆಗಳ 947 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ಇಂಡಿಪೆಂಡೆಂಟ್ ಪವರ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್, ನೇಪಾಳ ತಿಳಿಸಿದೆ.

216 ಮೆಗಾವ್ಯಾಟ್ ಸಾಮರ್ಥ್ಯದ ಅಪ್ಪರ್ ತ್ರಿಶೂಲಿ-1 ಯೋಜನೆಯೊಂದರಲ್ಲೇ 557ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. 60 ಮೆಗಾವ್ಯಾಟ್ ಅಪ್ಪರ್ ತ್ರಿಶೂಲಿ-3ಎ ಯೋಜನೆಯ ಭೂಗತ ವಿದ್ಯುತ್ ಘಟಕದಲ್ಲಿ 42 ಮಂದಿ ಸಿಲುಕಿರುವ ಶಂಕೆಯಿದೆ. ಅಪ್ಪರ್ ತ್ರಿಶೂಲಿ-3ಬಿಯಲ್ಲಿ 191 ಮಂದಿ ಹಾಗೂ ರಸುವಾಗಢಿ ಜಲವಿದ್ಯುತ್ ಯೋಜನೆಯಲ್ಲಿ 93 ಮಂದಿ ನಾಪತ್ತೆಯಾಗಿದ್ದಾರೆ. 20 ಮೆಗಾವ್ಯಾಟ್ ಲಾಂಗ್‌ಟಾಂಗ್ ಖೋಲಾ ಯೋಜನೆಯಲ್ಲಿ 41 ಮಂದಿ ಸಿಲುಕಿರುವ ಭೀತಿ ಇದೆ.

ಸುರಂಗಗಳ ಪ್ರವೇಶ ದ್ವಾರಗಳೇ ಪತ್ತೆಯಾಗದ ಸ್ಥಿತಿ

ಪ್ರವಾಹದೊಂದಿಗೆ ಕೊಚ್ಚಿಕೊಂಡು ಬಂದ ಮಣ್ಣು ಮತ್ತು ಅವಶೇಷಗಳು ಸುರಂಗಗಳ ಮೇಲೆ ಸಂಪೂರ್ಣವಾಗಿ ಹರಡಿರುವುದರಿಂದ ಪ್ರವೇಶ ದ್ವಾರಗಳನ್ನು ಗುರುತಿಸುವುದೇ ಕಷ್ಟವಾಗಿದೆ. ಭಾರೀ ಉಪಕರಣಗಳನ್ನು ಸ್ಥಳಕ್ಕೆ ಸಾಗಿಸುವಲ್ಲಿಯೂ ಸಮಸ್ಯೆ ಎದುರಾಗಿದ್ದು, ರಕ್ಷಣಾ ಕಾರ್ಯ ನಿಧಾನಗತಿಯಲ್ಲಿದೆ.

ನೇಪಾಳ ಪೊಲೀಸರು 1,113 ಮೃತದೇಹಗಳ ಮರಣೋತ್ತರ ಪರೀಕ್ಷೆ ಮತ್ತು ಕಾನೂನುಬದ್ಧ ಗುರುತಿನ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಈವರೆಗೆ 95 ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಗುರುತಿಸಲಾಗದ 911 ಮೃತದೇಹಗಳ ವಿವರಗಳನ್ನು ಕುಟುಂಬಗಳು ತಮ್ಮವರನ್ನು ಗುರುತಿಸಲು ನೇಪಾಳ ಪೊಲೀಸ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಟಿಬೆಟ್‌ನಲ್ಲೂ 21 ಮಂದಿ ಸಾವು

ನೇಪಾಳ ಗಡಿಯ ಸಮೀಪದ ಟಿಬೆಟ್‌ನ ಗೈರಾಂಗ್ ಕೌಂಟಿಯಲ್ಲಿ ಸಂಭವಿಸಿದ ಪ್ರವಾಹದಲ್ಲಿ ಸಾವಿನ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಇನ್ನೂ 541 ಮಂದಿ ನಾಪತ್ತೆಯಾಗಿದ್ದಾರೆ. ನೇಪಾಳದಲ್ಲಿರುವ ಸುಮಾರು 100 ಚೀನೀ ಪ್ರಜೆಗಳ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಮಳೆ ಮತ್ತಷ್ಟು ಅಡ್ಡಿ

ರಸುವಾ ಮತ್ತು ನುವಾಕೋಟ್‌ನಲ್ಲಿ ಮುಂದುವರಿದ ಮಳೆಯಿಂದ ರಕ್ಷಣಾ ಕಾರ್ಯಾಚರಣೆಗಳಿಗೆ ಮತ್ತಷ್ಟು ತೊಂದರೆಯಾಗಿದೆ. ಸಿಂಧುಪಾಲ್ಚೋಕ್‌ನ ನೋಸ್ಯಾಮ್ ಪಾಟಿಯಲ್ಲಿ ಕಳೆದ 12 ಗಂಟೆಗಳಲ್ಲಿ 60.2 ಮಿ.ಮೀ. ಮಳೆ ದಾಖಲಾಗಿದ್ದು, ಈ ಅವಧಿಯಲ್ಲಿನ ಗರಿಷ್ಠ ಮಳೆಯಾಗಿದೆ.

ನೇಪಾಳದ ಕೋಶಿ, ಬಾಗ್ಮತಿ ಮತ್ತು ಗಂಡಕಿ ಪ್ರಾಂತ್ಯಗಳ ಪರ್ವತ ಪ್ರದೇಶಗಳಲ್ಲಿ ಬುಧವಾರ ರಾತ್ರಿ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಹೊಡೆತ

ಪ್ರವಾಹದಿಂದ ಸುಮಾರು 400 ಮೆಗಾವ್ಯಾಟ್ ಜಲವಿದ್ಯುತ್ ಸಾಮರ್ಥ್ಯಕ್ಕೆ ಹಾನಿಯಾಗಿದೆ. ರಸುವಾ-ನುವಾಕೋಟ್ ಪ್ರದೇಶದಲ್ಲಿ ಸುಮಾರು 40 ಕಿ.ಮೀ. ಡಾಂಬರು ರಸ್ತೆಗಳು ಸಂಪೂರ್ಣ ನಾಶವಾಗಿದ್ದು, ಮತ್ತೊಂದು 16 ಕಿ.ಮೀ. ರಸ್ತೆ ಭಾಗಶಃ ಹಾನಿಗೊಂಡಿದೆ. 42 ತೂಗು ಸೇತುವೆಗಳು ಮತ್ತು 31 ವಾಹನ ಸಂಚಾರಕ್ಕೆ ಬಳಸುವ ಸೇತುವೆಗಳೂ ಹಾನಿಗೊಳಗಾಗಿವೆ.

ಭಾರತ, ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಅಮೆರಿಕ, ಆಸ್ಟ್ರೇಲಿಯಾ, ಕತಾರ್, ಸ್ವಿಟ್ಜರ್ಲೆಂಡ್, ಬ್ರಿಟನ್, ಜಪಾನ್ ಮತ್ತು ಸಿಂಗಾಪುರ ಸೇರಿದಂತೆ ಹಲವು ದೇಶಗಳು ನೆರವು ನೀಡಿವೆ. ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್, ವಿಶ್ವ ಬ್ಯಾಂಕ್, ಯುರೋಪಿಯನ್ ಯೂನಿಯನ್ ಮತ್ತು ವಿಶ್ವಸಂಸ್ಥೆಯೂ ನೆರವು ಘೋಷಿಸಿವೆ.

Read More
Next Story