
ಕೇತನ್ ಅಗರ್ವಾಲ್ ಕೊಲೆ ಕೇಸ್: ಸಿಯಾ, ಚೇತನ್ಗೆ 14 ದಿನ ನ್ಯಾಯಾಂಗ ಬಂಧನ; ಲೈ ಡಿಟೆಕ್ಟರ್ ಟೆಸ್ಟ್ಗೆ ಕೋರ್ಟ್ ನೋ!
ಪುಣೆಯ ರಿಯಾಲ್ಟರ್ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಚೇತನ್ಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಗಳ ಮೊಬೈಲ್ನಲ್ಲಿ ಕೋಡೆಡ್ ಮೆಸೇಜ್ ಪತ್ತೆಯಾಗಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಅವರ ನಿಗೂಢ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇದೇ ವೇಳೆ, ಆರೋಪಿಗಳ ಒಪ್ಪಿಗೆಯಿಲ್ಲದೆ ಅವರ ಮೇಲೆ ಸುಳ್ಳು ಪತ್ತೆ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಕೋರ್ಟ್, ಪೊಲೀಸರ ಅರ್ಜಿಯನ್ನು ತಿರಸ್ಕರಿಸಿದೆ.
ಆರೋಪಿಗಳಿಬ್ಬರು ಲೈ ಡಿಟೆಕ್ಟರ್ ಟೆಸ್ಟ್ಗೆ ಒಪ್ಪದ ಹಿನ್ನೆಲೆಯಲ್ಲಿ, ಅವರನ್ನು ತಕ್ಷಣವೇ ಪುಣೆಯ ಪ್ರಸಿದ್ಧ ಯೆರವಾಡ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಪ್ರಕರಣದ ವಿಚಾರಣೆಯನ್ನು ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎ.ಎಂ. ವಿಭೂತೆ ನಡೆಸಿದರು.
ಮೊಬೈಲ್ ಡೇಟಾದಲ್ಲಿ ಸಿಕ್ಕಿತು 'ಕೋಡೆಡ್' ಭಾಷೆಯ ರಹಸ್ಯ!
ಲೋನಾವಾಲಾ ಗ್ರಾಮೀಣ ಪೊಲೀಸರು ತನಿಖೆಯ ವೇಳೆ ಆರೋಪಿಗಳ ಮೊಬೈಲ್ನಿಂದ ಡಿಲೀಟ್ ಆಗಿದ್ದ ಭಾರಿ ಪ್ರಮಾಣದ ಡೇಟಾವನ್ನು ಮರುಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಡೇಟಾದಲ್ಲಿ ಆರೋಪಿಗಳು ಸಾಂಕೇತಿಕ ಭಾಷೆಯಲ್ಲಿ ನಡೆಸಿರುವ ಚಾಟ್ಗಳು ಪತ್ತೆಯಾಗಿವೆ.
ಕೇತನ್ ಕೊಲೆಯ ಸಂಚಿನಲ್ಲಿ ಈ ಇಬ್ಬರಷ್ಟೇ ಅಲ್ಲದೆ, ಮೂರನೇ ವ್ಯಕ್ತಿಯೊಬ್ಬನ ಕೈವಾಡವೂ ಇರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆರೋಪಿ ಸಿಯಾ ಗೋಯಲ್ ಬಚ್ಚಿಟ್ಟಿದ್ದ ಮತ್ತೊಂದು ಮೊಬೈಲ್ ಫೋನ್ ಅನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದು, ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ.
ಕೊಲೆಗೆ ಸ್ಕೆಚ್ ಹಾಕಿ, ತಾಲೀಮು ನಡೆಸಿದ್ದ ಆರೋಪಿಗಳು!
ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಮನೋಜ್ ಪವಾರ್ ನೇತೃತ್ವದ ತನಿಖಾ ತಂಡವು ನ್ಯಾಯಾಲಯಕ್ಕೆ ಹಲವು ಆಘಾತಕಾರಿ ವಿವರಗಳನ್ನು ನೀಡಿದೆ. ಆರೋಪಿಗಳು ಕೇತನ್ನನ್ನು ಕೊಲೆ ಮಾಡಲು ಮುಂಚಿತವಾಗಿಯೇ ಒಂದು ನಿರ್ದಿಷ್ಟ ಸ್ಥಳದಲ್ಲಿ ಭೇಟಿಯಾಗಿ 'ಪ್ಲಾನ್ ರಿಹರ್ಸಲ್' ನಡೆಸಿದ್ದರು ಎಂದು ಪೊಲೀಸರು ಪಂಚನಾಮೆ ವೇಳೆ ಪತ್ತೆಹಚ್ಚಿದ್ದಾರೆ.
ಕೃತ್ಯದ ಸಮಯದಲ್ಲಿ ಧರಿಸಿದ್ದ ಬಟ್ಟೆಗಳು ಮತ್ತು ಸಿಯಾ ಗೋಯಲ್ ತನ್ನ ಪಾಸ್ಪೋರ್ಟ್ ಅನ್ನು ವಿಲೇವಾರಿ ಮಾಡಲು ಯತ್ನಿಸಿದ್ದ ಸ್ಥಳಗಳನ್ನು ಗುರುತಿಸಿ ಪೊಲೀಸರು ಮಹಜರು ನಡೆಸಿದ್ದಾರೆ.
ಆರೋಪಿಗಳ ಪರ ವಕೀಲರಾದ ವಿಪುಲ್ ದುಶಿಂಗ್ ಮತ್ತು ರಾಮ್ ಶಹಾನೆ ಅವರು ಪೊಲೀಸರು ಈಗಾಗಲೇ ಎಲ್ಲ ಮೊಬೈಲ್ ಮತ್ತು ಸಾಕ್ಷ್ಯಗಳನ್ನು ವಶಪಡಿಸಿಕೊಂಡಿರುವುದರಿಂದ ಇನ್ನು ಹೆಚ್ಚಿನ ಪೊಲೀಸ್ ಕಸ್ಟಡಿ ಅಗತ್ಯವಿಲ್ಲ ಎಂದು ವಾದಿಸಿದರು. ಇದನ್ನು ಪುರಸ್ಕರಿಸಿದ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತು.
ಏನಿದು ಪ್ರಕರಣ? ಪ್ರಪಾತಕ್ಕೆ ತಳ್ಳಿ ಕೊಲೆ!
ರಿಯಲ್ ಎಸ್ಟೇಟ್ ಸಂಸ್ಥೆಯ ನಿರ್ದೇಶಕರಾಗಿದ್ದ 25 ವರ್ಷದ ಕೇತನ್ ಅಗರ್ವಾಲ್, ಜೂನ್ 18 ರಂದು ಪುಣೆ ಜಿಲ್ಲೆಯ ಮಾವಲ್ ತಾಲೂಕಿನ ಲೋಹಗಢದ ಪ್ರಪಾತದಿಂದ ಬಿದ್ದು ಸಾವನ್ನಪ್ಪಿದ್ದರು. ಆರಂಭದಲ್ಲಿ ಇದನ್ನು ಆಕಸ್ಮಿಕ ಸಾವು ಎಂದು ನೋಂದಾಯಿಸಲಾಗಿತ್ತು. ಆದರೆ, ಪೊಲೀಸರು ತೀವ್ರ ತನಿಖೆ ನಡೆಸಿದಾಗ ಇದು ಆಕಸ್ಮಿಕ ಸಾವಲ್ಲ, ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಸೇರಿ ನಡೆಸಿರುವ ವ್ಯವಸ್ಥಿತ ಕೊಲೆ ಎಂಬುದು ಬಯಲಾಗಿತ್ತು. ಇದರ ಬೆನ್ನಲ್ಲೇ ಜೂನ್ 23 ರಂದು ಇಬ್ಬರನ್ನೂ ಬಂಧಿಸಲಾಗಿತ್ತು.

