
ಶಿಕ್ಷಣವೇ ನಿಜವಾದ ರಾಷ್ಟ್ರಭಕ್ತಿ: ನಾಳೆ 'ಸ್ಕೂಲ್ ಥಿಕ್ ಕರೋ' ಅಭಿಯಾನಕ್ಕೆ ಚಾಲನೆ
ಇಂದಿಗೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಪರಿಸ್ಥಿತಿ ಹೇಳತೀರದಂತಿದೆ. ಹೀಗಾಗಿ ಸ್ವಾತಂತ್ರ್ಯ ದಿನದಂದು ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಹೊಸ ಆಯಾಮ ನೀಡಲು ಸಿಜೆಪಿ ಮುಂದಾಗಿದೆ.
80ನೇ ಸ್ವಾತಂತ್ರ್ಯೋತ್ಸವದ ವೇಳೆಯಲ್ಲಿಯೂ ಭಾರತದಲ್ಲಿ, ಇಂದಿಗೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಪರಿಸ್ಥಿತಿ ಹೇಳತೀರದಂತಿದೆ. ಈ ವಾಸ್ತವವನ್ನು ಪ್ರಶ್ನಿಸುತ್ತಾ, ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಹೊಸ ಆಯಾಮ ನೀಡಲು ಕಾಕರೋಚ್ ಜನತಾ ಪಾರ್ಟಿ (ಸಿಜೆಪಿ) ಮುಂದಾಗಿದೆ. ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು, ಶನಿವಾರ ಸ್ವಾತಂತ್ರ್ಯ ದಿನಾಚರಣೆಯಂದು ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಸಾಂತುಕ್ ಪಿಂಪ್ರಿ ಗ್ರಾಮದಿಂದ ‘ಸ್ಕೂಲ್ ಥಿಕ್ ಕರೋ’ (ಶಾಲೆಯನ್ನು ಸರಿಪಡಿಸಿ) ಎಂಬ ಮಹತ್ವಾಕಾಂಕ್ಷಿ ಅಭಿಯಾನಕ್ಕೆ ಚಾಲನೆ ನೀಡುವುದಾಗಿ ಘೋಷಿಸಿದ್ದಾರೆ.
ಪಕ್ಷದ ಸಂಸ್ಥಾಪಕರ ಸ್ವಗ್ರಾಮವಾದ ಸಾಂತುಕ್ ಪಿಂಪ್ರಿಯಲ್ಲಿ ಬೆಳಿಗ್ಗೆ 7.30ಕ್ಕೆ ಈ ಕಾರ್ಯಕ್ರಮ ಆರಂಭವಾಗಲಿದೆ. "ನನ್ನ ಗ್ರಾಮದ ಶಾಲೆಯಿಂದಲೇ ಈ ಹೋರಾಟವನ್ನು ಆರಂಭಿಸುತ್ತಿದ್ದೇನೆ. ಗ್ರಾಮ ಪಂಚಾಯಿತಿ ಸದಸ್ಯರಿಗೆ ಮನವಿ ಸಲ್ಲಿಸಿ, ಸ್ಥಳೀಯ ಸರ್ಕಾರಿ ಶಾಲೆಯ ದುರಸ್ತಿ ಕಾರ್ಯ ಕೈಗೊಳ್ಳಲು ಮತ್ತು ಕುಡಿಯುವ ನೀರು ಹಾಗೂ ಬೆಂಚ್ಗಳಂತಹ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕೋರುತ್ತೇನೆ" ಎಂದು ತಿಳಿಸಿದ್ದಾರೆ. ಈ ಅಭಿಯಾನವು ಕೇವಲ ಒಂದು ಗ್ರಾಮಕ್ಕೆ ಸೀಮಿತವಾಗಿಲ್ಲ. ಸಿಜೆಪಿ ಪಕ್ಷವು ತನ್ನ ತಂಡಗಳನ್ನು ವಿವಿಧ ಗ್ರಾಮಗಳಿಗೆ ಕಳುಹಿಸಲಿದೆ. ಆ ತಂಡಗಳು ಗ್ರಾಮಸ್ಥರು ಮತ್ತು ಗ್ರಾಮಪಂಚಾಯಿತಿಗಳೊಂದಿಗೆ ಚರ್ಚಿಸಿ, ಶಾಲೆಯ ಸ್ಥಿತಿಗತಿ ಸುಧಾರಿಸಲು ಸಾರ್ವಜನಿಕ ಸಹಭಾಗಿತ್ವವನ್ನು ಉತ್ತೇಜಿಸಲಿದೆ.
ಶಿಕ್ಷಣದ ಮೇಲಿನ ಕಾಳಜಿ ಮತ್ತು ಸರ್ಕಾರದ ಧೋರಣೆ
ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ನಡೆದ ತಿರಂಗ ಯಾತ್ರೆಯ ಬಗ್ಗೆ ಪ್ರತಿಕ್ರಿಯಿಸಿದ ದಿಪ್ಕೆ, ರಾಷ್ಟ್ರೀಯ ಹಬ್ಬಗಳಂದು ಇಂತಹ ರ್ಯಾಲಿಗಳು ನಡೆಯುವುದು ಸ್ವಾಗತಾರ್ಹವೇ ಆದರೂ, ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ಹರಿಸುವ ಅವಶ್ಯಕತೆಯಿದೆ ಎಂದು ಪ್ರತಿಪಾದಿಸಿದರು.
"ನಮಗೆ ನಿರಂತರವಾಗಿ ವೀಡಿಯೋ ದೂರುಗಳು ಬರುತ್ತಿವೆ. ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಶಾಲೆಗೆ ತೆರಳಲು ಪ್ರತಿದಿನ 7 ಕಿ.ಮೀ ದೂರದವರೆಗೆ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆಯಿದೆ, ಸರಿಯಾದ ರಸ್ತೆಗಳೂ ಇಲ್ಲ. ತ್ರಿವರ್ಣ ಧ್ವಜವನ್ನು ಗೌರವಿಸುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾಗಿ ಗ್ರಾಮೀಣ ಮಕ್ಕಳ ಶಿಕ್ಷಣ ಮತ್ತು ಮೂಲಭೂತ ಹಕ್ಕುಗಳಿಗೆ ಗಮನ ನೀಡುವುದು ಅಗತ್ಯ" ಎಂದು ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ.
ಸಾರ್ವಜನಿಕರ ಪಾಲ್ಗೊಳ್ಳುವಿಕೆ
ಸಿಜೆಪಿ ಪಕ್ಷವು ಈ ಅಭಿಯಾನವನ್ನು ಜನರ ಚಳವಳಿಯನ್ನಾಗಿ ಪರಿವರ್ತಿಸಲು ಬಯಸಿದೆ. ಪೋಷಕರು ಮತ್ತು ಗ್ರಾಮಸ್ಥರು ತಮ್ಮ ಹತ್ತಿರದ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ನ್ಯೂನತೆಗಳನ್ನು ಪರಿಶೀಲಿಸಬೇಕು ಮತ್ತು ಆ ಬಗ್ಗೆ ಪಕ್ಷಕ್ಕೆ ದೂರು ನೀಡಬೇಕು ಎಂದು ಮನವಿ ಮಾಡಿದ್ದಾರೆ. "ಸ್ವಾತಂತ್ರ್ಯ ಬಂದು ಎಂಟು ದಶಕಗಳಾದರೂ, ನಮ್ಮ ಗ್ರಾಮೀಣ ಮಕ್ಕಳು ಶಾಲೆಯಲ್ಲಿ ಕುಳಿತುಕೊಳ್ಳಲು ಬೆಂಚ್ ಕೇಳುವ ಸ್ಥಿತಿಯಲ್ಲಿರುವುದು ನಾಚಿಕೆಗೇಡಿನ ಸಂಗತಿ. ದೇಶವಾಗಿ ನಾವು ಗ್ರಾಮೀಣ ಮಕ್ಕಳ ಶಿಕ್ಷಣದ ವಿಚಾರದಲ್ಲಿ ಸಂಪೂರ್ಣ ವಿಫಲರಾಗಿದ್ದೇವೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಶಾಲಾ ಸುಧಾರಣೆಯ ಪ್ರತಿಜ್ಞೆಯೊಂದಿಗೆ ಆಚರಿಸೋಣ" ಎಂದು ಕರೆ ನೀಡಿದ್ದಾರೆ. "ನಮಗೆ ಅಂತಹ ಭಾರತ ಬೇಕಿದೆ, ಅಲ್ಲಿ ಮಕ್ಕಳು ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಿಡಿದು ಶಾಲೆಗೆ ಹೋಗಬೇಕು, ಬಡತನದ ಕಾರಣಕ್ಕೆ ಟ್ರಾಫಿಕ್ ಸಿಗ್ನಲ್ಗಳಲ್ಲಿ ಧ್ವಜ ಮಾರುವ ಪರಿಸ್ಥಿತಿ ಅವರಿಗೆ ಬರಬಾರದು" ಎಂಬ ಹೇಳಿಕೆಯು ದೇಶದ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಗಂಭೀರ ಚಿಂತನೆಗೆ ಹಚ್ಚುವಂತಿವೆ.

