ವಿಮಾನ ಅವಘಡ: ಗುರುವಾರ ಅಜಿತ್‌ ಪವಾರ್‌ ಅಂತ್ಯ ಸಂಸ್ಕಾರ;  ಸಾವಿನ ತನಿಖೆಗೆ ಖರ್ಗೆ ಅಗ್ರಹ,
x
ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್

ವಿಮಾನ ಅವಘಡ: ಗುರುವಾರ ಅಜಿತ್‌ ಪವಾರ್‌ ಅಂತ್ಯ ಸಂಸ್ಕಾರ; ಸಾವಿನ ತನಿಖೆಗೆ ಖರ್ಗೆ ಅಗ್ರಹ,

ಮಹಾರಾಷ್ಟ್ರದ ಬಾರಾಮತಿಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಲ್ಯಾಂಡಿಂಗ್ ವೇಳೆ ಪತನಗೊಂಡಿದೆ. ವಿಮಾನದಲ್ಲಿದ್ದ ನಾಲ್ಕೈದು ಮಂದಿಗೆ ಗಂಭೀರ ಗಾಯಗಳಾಗಿವೆ.


Click the Play button to hear this message in audio format

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನವು ಪತನಗೊಂಡಿದೆ. ಮಹಾರಾಷ್ಟ್ರದ ಭಾರಾಮತಿಯಲ್ಲಿ ಈ ದುರಂತ ಸಂಭವಿಸಿದೆ. ಲ್ಯಾಂಡಿಂಗ್ ಆಗುವ ಸಂದರ್ಭದಲ್ಲಿ ತಾಂತ್ರಿಕ ದೋಷಗಳಿಂದ ಅಪಘಾತಕ್ಕೀಡಾಗಿದೆ.

ಭೀಕರ ದುರಂತದ ದೃಶ್ಯ

ಘಟನೆ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.ಇನ್ನು ವಿಮಾನದಲ್ಲಿ ನಾಲ್ಕರಿಂದ ಐದು ಜನರಿದ್ದರು. ವಿಮಾನದಲ್ಲಿದ್ದವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ದುರ್ಘಟನೆ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ.

Live Updates

  • 28 Jan 2026 7:34 PM IST

    ವಿಮಾನ ಅಪಘಾತದಲ್ಲಿ ಅಜಿತ್‌ ಪವಾರ್ ಮೃತ| ತನಿಖೆಗೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದು, ಈ ಘಟನೆ ಕುರಿತು ತನಿಖೆ ನಡೆಸಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

    ಬುಧವಾರ(ಜ.28) ಸಂಸತ್‌ ಭವನದ ಬಳಿ ಮಾತನಾಡಿದ ಅವರು, ಅಜಿತ್‌ ಪವಾರ್ ಅವರ ಸಾವು ಅಕಾಲಿಕವಾಗಿದ್ದು, ಅವರು ಜನರಿಗಾಗಿ ಕೆಲಸ ಮಾಡಿದ ವ್ಯಕ್ತಿ.  "ಇದು ಅವರ ಕುಟುಂಬ ಸದಸ್ಯರು ಸೇರಿದಂತೆ ಎಲ್ಲರಿಗೂ ನೋವುಂಟು ಮಾಡಿದೆ ಮತ್ತು ನಾವು ಅವರ ದುಃಖದಲ್ಲಿ ಪಾಲುದಾರರಾಗಿದ್ದೇವೆ. ಕುಟುಂಬಕ್ಕೆ ಆಗಿರುವ ನಷ್ಟವನ್ನು ಅವರು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ" ಎಂದು ತಿಳಿಸಿದರು.

    ಪವಾರ್ ವಿಮಾನ ಅಪಘಾತದಲ್ಲಿ ಮೃತಪಟ್ಟಿರುವ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಅಪಘಾತವಾದ್ದರಿಂದ ತನಿಖೆ ನಡೆಸಬೇಕು. "ಎಲ್ಲರೂ, ಎಲ್ಲಾ ನಾಯಕರು, ತುರ್ತು ಕೆಲಸಕ್ಕಾಗಿ ಪ್ರಯಾಣಿಸುತ್ತಲೇ ಇರುತ್ತಾರೆ. ಆದರೆ ಹಲವು ಸಂದರ್ಭಗಳಲ್ಲಿ, ಅಹಮದಾಬಾದ್‌ನಲ್ಲಿ ದೊಡ್ಡ ವಿಮಾನ ಹೇಗೆ ಅಪಘಾತಕ್ಕೀಡಾಯಿತು ಎಂಬುದನ್ನು ನಾವು ನೋಡಿದ್ದೇವೆ. ಇದು ಸಣ್ಣ ವಿಮಾನ, ಇದು ಏಕೆ ಸಂಭವಿಸಿತು? ಇದನ್ನು ತನಿಖೆ ಮಾಡಬೇಕು. ನಾವು ತನಿಖೆಗೆ ಒತ್ತಾಯಿಸುತ್ತೇವೆ" ಎಂದರು.

  • 28 Jan 2026 4:46 PM IST

    ಸುನೇತ್ರಾ ಪವಾರ್ ಕಣ್ಣೀರು

    ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಭೀಕರ ವಿಮಾನ ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್, ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಮತ್ತು ಸಂಸದೆ ಸುಪ್ರಿಯಾ ಸುಳೆ ಅವರು ಬುಧವಾರ ಬಾರಾಮತಿಗೆ ಆಗಮಿಸಿದರು. ಅನಿರೀಕ್ಷಿತ ದುರಂತದಿಂದ ಆಘಾತಕ್ಕೊಳಗಾದ ಸುನೇತ್ರಾ ಪವಾರ್ ಮತ್ತು ಸುಪ್ರಿಯಾ ಸುಳೆ ಅವರು ಕಣ್ಣೀರು ಹಾಕುತ್ತಾ ಪರಸ್ಪರ ಸಾಂತ್ವನ ಹೇಳಿಕೊಳ್ಳುತ್ತಿದ್ದ ದೃಶ್ಯಗಳು ಮನಕಲಕುವಂತಿದ್ದವು. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು ಶರದ್ ಪವಾರ್ ಅವರು ಈ ಕಷ್ಟದ ಸಮಯದಲ್ಲಿ ಕುಟುಂಬದ ಜೊತೆ ನಿಂತಿದ್ದು, ಬಾರಾಮತಿಯ ಆಸ್ಪತ್ರೆಯ ಆವರಣದಲ್ಲಿ ಶೋಕದ ವಾತಾವರಣ ಮನೆಮಾಡಿದೆ.

  • 28 Jan 2026 3:30 PM IST

    ವಾಚ್ ಮೂಲಕ ಅಜಿತ್ ಪವಾರ್ ಪಾರ್ಥೀವ ಶರೀರ ಪತ್ತೆ

    ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಅಧ್ಯಕ್ಷ ಅಜಿತ್ ಪವಾರ್ (66) ಅವರು ಬುಧವಾರ ಬೆಳಿಗ್ಗೆ ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮುಂಬೈನಿಂದ ಬೆಳಿಗ್ಗೆ 8:10ಕ್ಕೆ ಹೊರಟಿದ್ದ ವಿಎಸ್‌ಆರ್ ವೆಂಚರ್ಸ್ ಸಂಸ್ಥೆಗೆ ಸೇರಿದ ಲಿಯರ್ ಜೆಟ್ 45 ವಿಮಾನವು, ಸುಮಾರು 35 ನಿಮಿಷಗಳ ಪ್ರಯಾಣದ ನಂತರ 8:45ಕ್ಕೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ದಟ್ಟ ಮಂಜು ಮತ್ತು ಕಳಪೆ ದೃಶ್ಯಮಾನದ ಕಾರಣದಿಂದಾಗಿ ಪತನಗೊಂಡು ಸ್ಫೋಟಿಸಿದೆ. ಈ ದುರಂತದಲ್ಲಿ ಅಜಿತ್ ಪವಾರ್ ಅವರೊಂದಿಗೆ ಅವರ ಇಬ್ಬರು ಸಿಬ್ಬಂದಿ ಹಾಗೂ ಇಬ್ಬರು ಪೈಲಟ್‌ಗಳು ಸೇರಿ ಒಟ್ಟು ಐವರು ಸಜೀವ ದಹನವಾಗಿದ್ದು, ಪವಾರ್ ಅವರ ಗುರುತನ್ನು ಅವರು ಧರಿಸಿದ್ದ ವಾಚ್‌ ಮೂಲಕ ಪತ್ತೆಹಚ್ಚಲಾಗಿದೆ.

  • 28 Jan 2026 2:11 PM IST

    ಸಿಸಿಟಿವಿಯಲ್ಲಿ ಸೆರೆಯಾಯ್ತು ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಸ್ಫೋಟದ ಭೀಕರ ದೃಶ್ಯ!

    ಮಹಾರಾಷ್ಟ್ರದ ಬಾರಾಮತಿಯಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ (66) ಅವರು ಸಾವನ್ನಪ್ಪಿದ್ದಾರೆ. ಬೆಳಿಗ್ಗೆ 8:10ಕ್ಕೆ ಮುಂಬೈನಿಂದ ಹೊರಟಿದ್ದ ಅವರ ಲಿಯರ್ ಜೆಟ್ 45 ವಿಮಾನವು, 8:46:02ರ ಸುಮಾರಿಗೆ ಬಾರಾಮತಿ ವಿಮಾನ ನಿಲ್ದಾಣದ ಬಳಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾಗ ಪತನಗೊಂಡು ಸ್ಫೋಟಿಸಿದೆ. ಈ ಭೀಕರ ದೃಶ್ಯವು ಹತ್ತಿರದ ಹೆದ್ದಾರಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಮಾನವು ಬೆಂಕಿಯ ಉಂಡೆಯಾಗಿ ಮಾರ್ಪಟ್ಟು ದಟ್ಟವಾದ ಹೊಗೆ ಆವರಿಸಿಕೊಂಡಿರುವುದು ಕಂಡುಬಂದಿದೆ. ಈ ದುರಂತದಲ್ಲಿ ಅಜಿತ್ ಪವಾರ್ ಸೇರಿದಂತೆ ವಿಮಾನದಲ್ಲಿದ್ದ ಒಟ್ಟು ಐವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

  • 28 Jan 2026 11:10 AM IST

    ಅಜಿತ್ ಪವಾರ್ ನಿಧನ| ರಾಷ್ಟ್ರಪತಿಗಳಿಂದ ಸಂತಾಪ

    ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ ಸೇರಿದಂತೆ ಹಲವರು ಮೃತಪಟ್ಟಿದ್ದಾರೆ. ಬುಧವಾರ ಬೆಳಿಗ್ಗೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ವಿಮಾನವು ತುರ್ತು ಭೂಸ್ಪರ್ಶ ಮಾಡಲು ಪ್ರಯತ್ನಿಸಿದಾಗ ಈ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.

    ಈ ಘಟನೆಯ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. "ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ವಿಮಾನ ದುರಂತದಲ್ಲಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಹಲವರು ಮೃತಪಟ್ಟಿರುವ ಸುದ್ದಿ ಕೇಳಿ ಅತ್ಯಂತ ದುಃಖವಾಗಿದೆ. ಅಜಿತ್ ಪವಾರ್ ಅವರ ಅಕಾಲಿಕ ನಿಧನವು ದೇಶಕ್ಕೆ ಮತ್ತು ಮಹಾರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ. ಮಹಾರಾಷ್ಟ್ರದ ಅಭಿವೃದ್ಧಿಯಲ್ಲಿ, ವಿಶೇಷವಾಗಿ ಸಹಕಾರ ಕ್ಷೇತ್ರದಲ್ಲಿ ಅವರ ಕೊಡುಗೆ ಸ್ಮರಣೀಯ. ಅವರ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ" ಎಂದು ರಾಷ್ಟ್ರಪತಿ ಭವನದ ಅಧಿಕೃತ ಪ್ರಕಟಣೆ ತಿಳಿಸಿದೆ.


  • 28 Jan 2026 11:01 AM IST

    ಅಜಿತ್ ಪವಾರ್ ಅಕಾಲಿಕ ನಿಧನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಸಂತಾಪ

    ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅನಿರೀಕ್ಷಿತ ನಿಧನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಮೃತಪಟ್ಟ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ ಎಂದು ತಿಳಿಸಿರುವ ಖರ್ಗೆಯವರು, ಇದೊಂದು ಅಕಾಲಿಕ ನಿಧನ. ಮಹಾರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪವಾರ್ ಅವರು ಒಬ್ಬ ಅನುಭವಿ ಮತ್ತು ಚತುರ ರಾಜಕಾರಣಿಯಾಗಿದ್ದರು. ವಿವಿಧ ಸಾಂವಿಧಾನಿಕ ಹುದ್ದೆಗಳಲ್ಲಿ ಜನಸೇವೆ ಮಾಡಿದ ಅವರ ಕಾರ್ಯವೈಖರಿ ಸ್ಮರಣೀಯವಾಗಿದೆ. ಈ ಕಠಿಣ ಸಮಯದಲ್ಲಿ ಪವಾರ್ ಕುಟುಂಬದವರಿಗೆ, ಅವರ ಬೆಂಬಲಿಗರಿಗೆ ಹಾಗೂ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಮೃತರ ಆತ್ಮಕ್ಕೆ ಶಾಂತಿ ಕೋರಿ ತಮ್ಮ ಸಂತಾಪ ಸೂಚಿಸಿದ್ದಾರೆ.

  • 28 Jan 2026 10:57 AM IST

    ಅಜಿತ್‌ ಪವಾರ್‌ ನಿಧನ: ಮಾಜಿ ಪ್ರಧಾನಿ ದೇವೇಗೌಡ ಸಂತಾಪ

    ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ಅಜಿತ್ ಪವಾರ್ ಅವರ ನೇತೃತ್ವದ ಎನ್‌ಸಿಪಿ (NCP) ಪಕ್ಷದ ನಾಯಕರ ವಾಹನ ಅಪಘಾತಕ್ಕೀಡಾದ ಘಟನೆಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಅವರು ಸಂತಾಪ ಸೂಚಿಸಿದ್ದು, "ಬಾರಾಮತಿಯಲ್ಲಿ ಇಳಿಯಲು ಯತ್ನಿಸುತ್ತಿದ್ದಾಗ ಸಂಭವಿಸಿದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ನಿಧನರಾದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ದಶಕಗಳ ಕಾಲದ ಅವರ ಸಾರ್ವಜನಿಕ ಸೇವೆ ಮತ್ತು ಜನರ ಬಗೆಗಿನ ಅವರ ಬದ್ಧತೆಯನ್ನು ಸದಾ ಸ್ಮರಿಸಲಾಗುವುದುʼʼ ಎಂದು ತಿಳಿಸಿದ್ದಾರೆ. 


  • 28 Jan 2026 10:49 AM IST

    ಕಂಬನಿ ಮಿಡಿದ ಕಂಗನಾ ರಣಾವತ್‌

  • 28 Jan 2026 10:46 AM IST

    ಅಜಿತ್‌ ಪವಾರ್‌ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ

    ಅಜಿತ್ ಪವಾರ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಅಜಿತ್ ಪವಾರ್‌ಅವರು ಜನಸಾಮಾನ್ಯರ ನಾಯಕರಾಗಿದ್ದರು ಮತ್ತು ತಳಮಟ್ಟದಲ್ಲಿ ಬಲವಾದ ಸಂಪರ್ಕವನ್ನು ಹೊಂದಿದ್ದರು. ಮಹಾರಾಷ್ಟ್ರದ ಜನರ ಸೇವೆ ಮಾಡುವಲ್ಲಿ ಮುಂಚೂಣಿಯಲ್ಲಿದ್ದ ಕಷ್ಟಪಟ್ಟು ದುಡಿಯುವ ವ್ಯಕ್ತಿತ್ವ ಎಂದು ಅವರು ವ್ಯಾಪಕವಾಗಿ ಗೌರವಿಸಲ್ಪಟ್ಟಿದ್ದರು. ಆಡಳಿತಾತ್ಮಕ ವಿಷಯಗಳ ಬಗ್ಗೆ ಅವರಿಗಿದ್ದ ತಿಳುವಳಿಕೆ ಮತ್ತು ಬಡವರ ಹಾಗೂ ತುಳಿತಕ್ಕೊಳಗಾದವರ ಸಬಲೀಕರಣದ ಬಗ್ಗೆ ಅವರಿಗಿದ್ದ ಉತ್ಸಾಹ ಗಮನಾರ್ಹವಾಗಿತ್ತು. ಅವರ ಅಕಾಲಿಕ ನಿಧನವು ತುಂಬಾ ಆಘಾತಕಾರಿ ಮತ್ತು ಬೇಸರ ತಂದಿದೆ. ಅವರ ಕುಟುಂಬಕ್ಕೆ ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ಮೋದಿ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. 

  • 28 Jan 2026 10:34 AM IST

    ಅಜಿತ್‌ ಸಾವಿನ ಸುದ್ದಿ ಕೇಳಿ ಗಳಗಳನೇ ಅತ್ತ ಮಹಾರಾಷ್ಟ್ರ ಗೃಹಸಚಿವ

Read More
Next Story