
Today's news LIVE Jan 27: ಭಾರತ-EU ಮುಕ್ತ ವ್ಯಾಪಾರ ಒಪ್ಪಂದ ಘೋಷಿಸಿದ ಪ್ರಧಾನಿ ಮೋದಿ
ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.
ಇಂದು ಮಂಗಳವಾರ, ಜನವರಿ 27, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪ್ರಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.
Live Updates
- 27 Jan 2026 11:46 AM IST
ಭಾರತ-EU ಮುಕ್ತ ವ್ಯಾಪಾರ ಒಪ್ಪಂದ ಘೋಷಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಜನವರಿ 27) ಭಾರತ ಮತ್ತು ಯುರೋಪಿಯನ್ ಒಕ್ಕೂಟದ (EU) ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಹಿ ಹಾಕಲಾಗಿದೆ ಎಂದು ಘೋಷಿಸಿದರು. ಜಾಗತಿಕ ಜಿಡಿಪಿಯ ಶೇಕಡಾ 25 ರಷ್ಟು ಮತ್ತು ಜಾಗತಿಕ ವ್ಯಾಪಾರದ ಮೂರನೇ ಒಂದು ಭಾಗವನ್ನು ಪ್ರತಿನಿಧಿಸುವ ಈ ಒಪ್ಪಂದವನ್ನು ವಿಶ್ವದಾದ್ಯಂತ 'ಎಲ್ಲಾ ಒಪ್ಪಂದಗಳ ತಾಯಿ' (Mother of all deals) ಎಂದು ಬಣ್ಣಿಸಲಾಗುತ್ತಿದೆ. ಭಾರತ ಇಂಧನ ಸಪ್ತಾಹವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಈ ಬೃಹತ್ ಬೆಳವಣಿಗೆಯು 140 ಕೋಟಿ ಭಾರತೀಯರಿಗೆ ಮತ್ತು ಕೋಟ್ಯಂತರ ಯುರೋಪಿಯನ್ನರಿಗೆ ಅಪಾರ ಉದ್ಯೋಗ ಹಾಗೂ ಹೂಡಿಕೆಯ ಅವಕಾಶಗಳನ್ನು ತರಲಿದೆ ಎಂದು ತಿಳಿಸಿದರು.
ಜವಳಿ, ರತ್ನ ಮತ್ತು ಆಭರಣ, ಚರ್ಮ ಹಾಗೂ ಪಾದರಕ್ಷೆಗಳಂತಹ ವಲಯಗಳಿಗೆ ಈ ಒಪ್ಪಂದವು ವರದಾನವಾಗಲಿದ್ದು, ದೇಶದಲ್ಲಿ ಉತ್ಪಾದನಾ ಕ್ಷೇತ್ರವನ್ನು ಬಲಪಡಿಸುವುದಲ್ಲದೆ, ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತದ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
- 27 Jan 2026 11:43 AM IST
ವಿಶ್ವದ ಪೆಟ್ರೋಲಿಯಂ ರಫ್ತಿನಲ್ಲಿ ಭಾರತಕ್ಕೆ ಟಾಪ್ 5 ಸ್ಥಾನ- ಪ್ರಧಾನಿ ಮೋದಿ
ಭಾರತ ಇಂಧನ ವಲಯದಲ್ಲಿ ಅಪಾರ ಅವಕಾಶಗಳ ಭೂಮಿಯಾಗಿದೆ. ದೇಶದ ಆರ್ಥಿಕತೆಯು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದಕ್ಷಿಣ ಗೋವಾದ ಬೆಟುಲ್ ಗ್ರಾಮದಲ್ಲಿ ಇಂದಿನಿಂದ ಆರಂಭವಾದ ನಾಲ್ಕನೇ ಆವೃತ್ತಿಯ 'ಭಾರತ ಇಂಧನ ಸಪ್ತಾಹ 2026' ಸಮಾವೇಶವನ್ನು ವರ್ಚುವಲ್ ಆಗಿ ಉದ್ಘಾಟಿಸಿದ ಪ್ರಧಾನಿ, ಇಂಧನ ಸಂಬಂಧಿತ ಉತ್ಪನ್ನಗಳಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಭಾರತವು ಜಾಗತಿಕ ಬೇಡಿಕೆಯನ್ನು ಪೂರೈಸುವ ಮತ್ತು ಅವಕಾಶಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದರು.
ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ಉತ್ಪಾದನೆ ಮತ್ತು ಸೇವಾ ವಲಯವನ್ನು ಉತ್ತೇಜಿಸುತ್ತದೆ. ಈ ವ್ಯಾಪಾರ ಒಪ್ಪಂದವು ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ಸಮನ್ವಯವಾಗಿದ್ದು, ಜಾಗತಿಕ ವ್ಯಾಪಾರ ಮತ್ತು ಪೂರೈಕೆ ಸರಪಳಿಯ ಮೂರನೇ ಒಂದು ಭಾಗದಷ್ಟು ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು.
ಭಾರತದ ರಫ್ತು ಸಾಮರ್ಥ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಪ್ರಧಾನಿ, "ಇಂದು ನಾವು ವಿಶ್ವದ ಪೆಟ್ರೋಲಿಯಂ ಉತ್ಪನ್ನಗಳ ಅಗ್ರ ಐದು ರಫ್ತುದಾರರಲ್ಲಿ ಒಬ್ಬರಾಗಿದ್ದೇವೆ. ಭಾರತವು 150 ಕ್ಕೂ ಹೆಚ್ಚು ದೇಶಗಳಿಗೆ ಸರಕುಗಳನ್ನು ರಫ್ತು ಮಾಡುತ್ತದೆ. ಈ ಇಂಧನ ಸಪ್ತಾಹ ವೇದಿಕೆಯು ಪಾಲುದಾರಿಕೆಗಳನ್ನು ಅನ್ವೇಷಿಸಲು ಅತ್ಯುತ್ತಮ ಸ್ಥಳವಾಗಿದೆ ಎಂದು ಹೇಳಿದರು.
ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವೆ ದೊಡ್ಡ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಪ್ರಪಂಚದಾದ್ಯಂತ ಜನರು ಇದನ್ನು "ಎಲ್ಲಾ ಒಪ್ಪಂದಗಳ ತಾಯಿ" ಎಂದೇ ಬಣ್ಣಿಸುತ್ತಿದ್ದಾರೆ. ಈ ಒಪ್ಪಂದವು ಭಾರತದ 1.4 ಶತಕೋಟಿ ಜನರಿಗೆ ಮತ್ತು ಯುರೋಪಿಯನ್ ರಾಷ್ಟ್ರಗಳ ಲಕ್ಷಾಂತರ ಜನರಿಗೆ ಅಗಾಧ ಅವಕಾಶಗಳನ್ನು ತರುತ್ತದೆ. ಇದು ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ಸಹಯೋಗದ ಪ್ರಮುಖ ಉದಾಹರಣೆಯಾಗಿದೆ. ಈ ಒಪ್ಪಂದವು ಜಾಗತಿಕ GDP ಯ ಸರಿಸುಮಾರು ಶೇಕಡಾ 25ರಷ್ಟು ಮತ್ತು ಜಾಗತಿಕ ವ್ಯಾಪಾರದ ಮೂರನೇ ಒಂದು ಭಾಗವನ್ನು ಪ್ರತಿನಿಧಿಸುತ್ತದೆ ಎಂದು ಪ್ರಧಾನಿ ಹೇಳಿದರು.
- 27 Jan 2026 11:00 AM IST
ಜನ ನಾಯಕನ್ ರಿಲೀಸ್ ಅನುಮಾನ? ಹೈಕೋರ್ಟ್ ತೀರ್ಪಿನಿಂದ ವಿಜಯ್ ಫ್ಯಾನ್ಸ್ಗೆ ಶಾಕ್!
ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರ ಎನ್ನಲಾದ 'ಜನ ನಾಯಕನ್' ಬಿಡುಗಡೆಗೆ ಎದುರಾಗಿದ್ದ ಸಂಕಷ್ಟ ಮತ್ತಷ್ಟು ಜಟಿಲಗೊಂಡಿದೆ. ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡುವಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್ನ ವಿಭಾಗೀಯ ಪೀಠವು ರದ್ದುಗೊಳಿಸಿದೆ. ಇದರಿಂದಾಗಿ ಸಿನಿಮಾ ಬಿಡುಗಡೆ ಮತ್ತಷ್ಟು ವಿಳಂಬವಾಗುವುದು ಖಚಿತವಾಗಿದೆ.
ಈ ಮೊದಲು ಹೈಕೋರ್ಟ್ನ ಏಕಸದಸ್ಯ ಪೀಠವು ಚಿತ್ರದಲ್ಲಿನ ಕೆಲವು ಬದಲಾವಣೆಗಳ ನಂತರ 'UA' ಪ್ರಮಾಣಪತ್ರ ನೀಡುವಂತೆ ಸೆನ್ಸಾರ್ ಮಂಡಳಿಗೆ ಸೂಚಿಸಿತ್ತು. ಇದು ಚಿತ್ರತಂಡಕ್ಕೆ ಆರಂಭಿಕ ಜಯ ತಂದುಕೊಟ್ಟಿತ್ತು. ಈ ಆದೇಶದ ವಿರುದ್ಧ ಸೆನ್ಸಾರ್ ಮಂಡಳಿ ಮೇಲ್ಮನವಿ ಸಲ್ಲಿಸಿತ್ತು. ಇದನ್ನು ವಿಚಾರಣೆ ನಡೆಸಿದ ಇಬ್ಬರು ನ್ಯಾಯಾಧೀಶರ ಪೀಠವು, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿ, ಪ್ರಮಾಣಪತ್ರ ನೀಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ.
ಸುಪ್ರೀಂ ಕೋರ್ಟ್ನಲ್ಲೂ ಹಿನ್ನಡೆ
ಈ ಹಿಂದೆ ಚಿತ್ರತಂಡ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಆದರೆ, ಪ್ರಕರಣವು ಹೈಕೋರ್ಟ್ನಲ್ಲಿ ಬಾಕಿ ಇರುವುದರಿಂದ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿ, ಹೈಕೋರ್ಟ್ನಲ್ಲೇ ಇತ್ಯರ್ಥ ಪಡಿಸಿಕೊಳ್ಳುವಂತೆ ಸೂಚಿಸಿತ್ತು.
- 27 Jan 2026 10:07 AM IST
ಜನ ನಾಯಗನ್: ಮದ್ರಾಸ್ ಹೈಕೋರ್ಟ್ನಿಂದ ಇಂದು ಮಹತ್ವದ ತೀರ್ಪು
ಕಳೆದ ಕೆಲವು ವಾರಗಳಿಂದ ಬಿಡುಗಡೆಯ ಸಂಕಷ್ಟಕ್ಕೆ ಸಿಲುಕಿ ಬಿಡುಗಡೆಗೆ ಕಾಯುತ್ತಿದ್ದ ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾದ ಭವಿಷ್ಯ ಇಂದು ನಿರ್ಧಾರವಾಗಲಿದೆ. ಚಿತ್ರದ ಸೆನ್ಸಾರ್ ಪ್ರಮಾಣಪತ್ರ ವಿವಾದಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಮಂಗಳವಾರ 10.30ಕ್ಕೆ ತನ್ನ ಅಂತಿಮ ತೀರ್ಪನ್ನು ಪ್ರಕಟಿಸುವ ನಿರೀಕ್ಷೆಯಿದೆ.
- 27 Jan 2026 7:26 AM IST
ಭೀಕರ ಅಗ್ನಿ ಅನಾಹುತ: 8 ಕಾರ್ಮಿಕರ ಸಾವು
ಪಶ್ಚಿಮ ಬಂಗಾಳದ ಸೌತ್ 24 ಪರಗಣ ಜಿಲ್ಲೆಯ ನರೇಂದ್ರಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಜಿರಾಬಾದ್ ಪ್ರದೇಶದ ಎರಡು ಪಕ್ಕದ ಗೋದಾಮುಗಳಲ್ಲಿ ಸೋಮವಾರ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ ಎಂಟು ಕಾರ್ಮಿಕರು ಸುಟ್ಟು ಕರಕಲಾಗಿದ್ದು, ಹಲವಾರು ಜನರು ನಾಪತ್ತೆಯಾಗಿದ್ದಾರೆ. ಅಲಂಕಾರಿಕ ಸಂಸ್ಥೆ ಮತ್ತು ಪ್ರಸಿದ್ಧ ಮೊಮೊ ತಯಾರಿಕಾ ಘಟಕಕ್ಕೆ ಸೇರಿದ ಈ ಗೋದಾಮುಗಳಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ಸತತ ಏಳು ಗಂಟೆಗಳ ಕಾಲ ಹೋರಾಡಿ ಹತೋಟಿಗೆ ತಂದಿದ್ದು, ಮೃತದೇಹಗಳು ಗುರುತು ಪತ್ತೆಹಚ್ಚಲಾಗದಷ್ಟು ಸುಟ್ಟು ಹೋಗಿವೆ ಎಂದು ಎಸ್ಪಿ ಶುಭೇಂದು ಕುಮಾರ್ ತಿಳಿಸಿದ್ದಾರೆ. ಆರಂಭದಲ್ಲಿ ಆರು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿತ್ತಾದರೂ, ಗೋದಾಮಿನ ಒಳಗೆ ಹತ್ತಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಸಾಧ್ಯತೆಯಿದೆ ಎಂದು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದು, ಅವಶೇಷಗಳ ತೆರವು ಕಾರ್ಯಾಚರಣೆ ಮುಂದುವರಿದಿದೆ.
- 27 Jan 2026 7:22 AM IST
ಇರಾನ್ಗೆ ಎಂಟ್ರಿ ಕೊಟ್ಟ ಅಮೆರಿಕದ ಬೃಹತ್ ಯುದ್ಧ ನೌಕೆ
ಇರಾನ್ನಲ್ಲಿ ಪ್ರತಿಭಟನಾಕಾರರ ಮೇಲೆ ನಡೆಯುತ್ತಿರುವ ದಮನಕಾರಿ ಕ್ರಮಗಳ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು, ಅಮೆರಿಕದ ಬೃಹತ್ ವಿಮಾನವಾಹಕ ನೌಕೆ USS ಅಬ್ರಹಾಂ ಲಿಂಕನ್ ಮತ್ತು ಮೂರು ಯುದ್ಧನೌಕೆಗಳು ಮಧ್ಯಪ್ರಾಚ್ಯಕ್ಕೆ ಆಗಮಿಸಿವೆ. ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯನ್ನು ಉತ್ತೇಜಿಸಲು ಈ ನೌಕಾಪಡೆಯನ್ನು ನಿಯೋಜಿಸಲಾಗಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ತಿಳಿಸಿದೆ. ಇರಾನ್ ಜೈಲಿನಲ್ಲಿರುವ ಕೈದಿಗಳ ಸಾಮೂಹಿಕ ಮರಣದಂಡನೆ ಅಥವಾ ಶಾಂತಿಯುತ ಪ್ರತಿಭಟನಾಕಾರರ ಹತ್ಯೆ ನಡೆದರೆ ಮಿಲಿಟರಿ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಸದ್ಯ ಹಿಂದೂ ಮಹಾಸಾಗರದಲ್ಲಿ ಬೀಡುಬಿಟ್ಟಿರುವ ಈ ನೌಕಾಪಡೆಯು ಸಾವಿರಾರು ಹೆಚ್ಚುವರಿ ಸೈನಿಕರನ್ನು ಒಳಗೊಂಡಿದ್ದು, ಇರಾನ್ನಲ್ಲಿ ಸುಮಾರು 5,973ಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಹತರಾಗಿದ್ದಾರೆ.
- 27 Jan 2026 7:17 AM IST
ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ಪೋಷಕರು ಅರೆಸ್ಟ್
ಪಂಜಾಬ್ನ ಮುಕ್ತಸರ್ ಜಿಲ್ಲೆಯ ಪೊಲೀಸರು ವಿದೇಶದಲ್ಲಿರುವ ಕುಖ್ಯಾತ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ನ ಪೋಷಕರಾದ ಶಂಶೇರ್ ಸಿಂಗ್ ಮತ್ತು ಪ್ರೀತ್ಪಾಲ್ ಕೌರ್ ಅವರನ್ನು 2024ರ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಬಂಧಿಸಿದ್ದಾರೆ. 2022ರಲ್ಲಿ ನಡೆದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಗೋಲ್ಡಿ ಬ್ರಾರ್ ವಿರುದ್ಧದ ತನಿಖೆ ತೀವ್ರಗೊಂಡಿರುವ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದ್ದು, ಸದ್ಯ ಅಮೆರಿಕಾದಲ್ಲಿದ್ದಾನೆ ಎನ್ನಲಾದ ಬ್ರಾರ್ನ ಕುಟುಂಬದ ವಿರುದ್ಧ ಮುಕ್ತಸರ್ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿತ್ತು.
ಗ್ಯಾಂಗ್ಸ್ಟರ್ಗಳ ವಿರುದ್ಧ ಪಂಜಾಬ್ ಪೊಲೀಸ್ ನಡೆಸುತ್ತಿರುವ ಬೃಹತ್ ಕಾರ್ಯಾಚರಣೆಯ ಭಾಗವಾಗಿ, ವಿದೇಶಿ ಮೂಲದ 60 ಗ್ಯಾಂಗ್ಸ್ಟರ್ಗಳ ಸುಮಾರು 1,200 ಸಹಚರರು ಮತ್ತು 600 ಕುಟುಂಬ ಸದಸ್ಯರ ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗಿದ್ದು, ಈ ಬಂಧನವು ಆ ತನಿಖೆಯ ಪ್ರಮುಖ ಹಂತವಾಗಿದೆ ಎಂದು ಎಸ್ಎಸ್ಪಿ ಅಭಿಮನ್ಯು ರಾಣಾ ತಿಳಿಸಿದ್ದಾರೆ.


