
Today's news Feb 27: ಕಾಬೂಲ್ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ
ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.
ಇಂದು ಗುರುವಾರ ಫೆಬ್ರುವರಿ 27, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.
Live Updates
- 27 Feb 2026 8:33 AM IST
ಕ್ರಿಕೆಟಿಗ ರಿಂಕು ಸಿಂಗ್ ತಂದೆ ನಿಧನ
ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ಅವರ ತಂದೆ ಖಾನ್ಚಂದ್ ಸಿಂಗ್ ಅವರು ಶುಕ್ರವಾರ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಅವರು ಕಳೆದ ಕೆಲವು ಸಮಯದಿಂದ ನಾಲ್ಕನೇ ಹಂತದ (Stage-4) ಯಕೃತ್ತಿನ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು.
ಸದ್ಯ ರಿಂಕು ಸಿಂಗ್ ಅವರು ಟಿ20 ವಿಶ್ವಕಪ್ಗಾಗಿ ಭಾರತ ತಂಡದೊಂದಿಗೆ ಇದ್ದಾರೆ. ಗುರುವಾರ ರಾತ್ರಿ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು ಜಿಂಬಾಬ್ವೆ ವಿರುದ್ಧ 72 ರನ್ಗಳ ಭರ್ಜರಿ ಜಯ ಸಾಧಿಸಿತ್ತು, ಆದರೆ ಈ ಪಂದ್ಯದ ಅಂತಿಮ 11ರ ಬಳಗದಲ್ಲಿ ರಿಂಕು ಸ್ಥಾನ ಪಡೆದಿರಲಿಲ್ಲ.
- 27 Feb 2026 7:28 AM IST
ಎಪ್ಸ್ಟೀನ್ ಅಪರಾಧಗಳ ಬಗ್ಗೆ ತಮಗೆ ಅರಿವಿಲ್ಲ ಎಂದ ಹಿಲರಿ ಕ್ಲಿಂಟನ್
ಜೆಫ್ರಿ ಎಪ್ಸ್ಟೀನ್ ಅಥವಾ ಗಿಸ್ಲೇನ್ ಮ್ಯಾಕ್ಸ್ವೆಲ್ ಅವರ ಅಪರಾಧ ಕೃತ್ಯಗಳ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಮತ್ತು ಎಪ್ಸ್ಟೀನ್ ಅವರನ್ನು ಭೇಟಿಯಾದ ನೆನಪೂ ತಮಗಿಲ್ಲ ಎಂದು ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಗುರುವಾರ ಕಾಂಗ್ರೆಸ್ ಸಮಿತಿಯ ಮುಂದೆ ಹೇಳಿಕೆ ನೀಡಿದ್ದಾರೆ. ನ್ಯೂಯಾರ್ಕ್ನ ಚಪ್ಪಾಕ್ವಾದಲ್ಲಿ ನಡೆದ ಆರು ಗಂಟೆಗಳ ಸುದೀರ್ಘ ವಿಚಾರಣೆಯ ಸಂದರ್ಭದಲ್ಲಿ ಅವರು ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಈ ವಿಚಾರಣೆಯ ಭಾಗವಾಗಿ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಕೂಡ ಸಾಕ್ಷ್ಯ ನುಡಿಯಲಿದ್ದಾರೆ. 2019 ರಲ್ಲಿ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಎಪ್ಸ್ಟೀನ್ ನಡೆಸುತ್ತಿದ್ದ ಅಪ್ರಾಪ್ತ ಬಾಲಕಿಯರ ಮೇಲಿನ ದೌರ್ಜನ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕನ್ ನೇತೃತ್ವದ ಹೌಸ್ ಓವರ್ಸೈಟ್ ಕಮಿಟಿ ಈ ತನಿಖೆ ನಡೆಸುತ್ತಿದ್ದು, ಅಮೆರಿಕದ ಇತಿಹಾಸದಲ್ಲಿ ಮಾಜಿ ಅಧ್ಯಕ್ಷರೊಬ್ಬರು ಈ ರೀತಿ ಕಾಂಗ್ರೆಸ್ ಮುಂದೆ ಸಾಕ್ಷ್ಯ ನೀಡುತ್ತಿರುವುದು ಇದೇ ಮೊದಲು.
- 27 Feb 2026 7:26 AM IST
ಅಫ್ಘಾನಿಸ್ತಾನ-ಪಾಕಿಸ್ತಾನ ನಡುವೆ ಸಂಘರ್ಷ ತೀವ್ರ: ಕಾಬೂಲ್ ಮೇಲೆ ವೈಮಾನಿಕ ದಾಳಿ
ಅಫ್ಘಾನಿಸ್ತಾನವು ಪಾಕಿಸ್ತಾನದ ಗಡಿ ಪೋಸ್ಟ್ಗಳ ಮೇಲೆ ಗುರುವಾರ ರಾತ್ರಿ ದಾಳಿ ನಡೆಸಿದ ಬೆನ್ನಲ್ಲೇ, ಪ್ರತಿಯಾಗಿ ಪಾಕಿಸ್ತಾನವು ಶುಕ್ರವಾರ ಮುಂಜಾನೆ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಸೇರಿದಂತೆ ಕಂದಹಾರ್ ಮತ್ತು ಪಕ್ತಿಯಾ ಪ್ರಾಂತ್ಯಗಳ ಮೇಲೆ ತೀವ್ರ ವೈಮಾನಿಕ ದಾಳಿ ನಡೆಸಿದೆ. ಕಳೆದ ಭಾನುವಾರ ಪಾಕಿಸ್ತಾನ ನಡೆಸಿದ್ದ ದಾಳಿಗೆ ಪ್ರತಿಕಾರವಾಗಿ ತಾವು ಈ ಕ್ರಮ ಕೈಗೊಂಡಿರುವುದಾಗಿ ಮತ್ತು ಪಾಕಿಸ್ತಾನದ ಹತ್ತಕ್ಕೂ ಹೆಚ್ಚು ಸೇನಾ ನೆಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಅಫ್ಘಾನ್ ವಕ್ತಾರ ಜಬಿವುಲ್ಲಾ ಮುಜಾಹಿದ್ ತಿಳಿಸಿದ್ದಾರೆ; ಆದರೆ ಪಾಕಿಸ್ತಾನವು ಅಫ್ಘಾನಿಸ್ತಾನದ ಈ ದಾಳಿಯನ್ನು "ಅಪ್ರಚೋದಿತ" ಎಂದು ಕರೆದಿದೆಯಲ್ಲದೆ ಸೇನಾ ನೆಲೆಗಳ ವಶದ ಸುದ್ದಿಯನ್ನು ನಿರಾಕರಿಸಿದೆ. ಡ್ಯುರಾಂಡ್ ಲೈನ್ ಗಡಿ ಭಾಗದಲ್ಲಿ ಉಭಯ ದೇಶಗಳ ನಡುವೆ ಈ ಸಂಘರ್ಷ ಏರ್ಪಟ್ಟಿದ್ದು, ಕತಾರ್ ಮಧ್ಯಸ್ಥಿಕೆಯಲ್ಲಿ ನಡೆದಿದ್ದ ಕದನ ವಿರಾಮ ಒಪ್ಪಂದವು ಈಗ ಸಂಪೂರ್ಣವಾಗಿ ಹಳಿ ತಪ್ಪುವ ಭೀತಿ ಎದುರಾಗಿದೆ.

