
Today's news Feb 17: ಇಂದು 2026ರ ಮೊದಲ ಸೂರ್ಯ ಗ್ರಹಣ; ಭಾರತದಲ್ಲಿ ಗೋಚರಿಸುತ್ತದೆಯೇ?
ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.
ಇಂದು ಮಂಗಳವಾರ ಫೆಬ್ರುವರಿ 17, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪ್ರಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.
Live Updates
- 17 Feb 2026 8:25 AM IST
ಇಂದು 2026ರ ಮೊದಲ ಸೂರ್ಯ ಗ್ರಹಣ; ಭಾರತದಲ್ಲಿ ಗೋಚರಿಸುತ್ತದೆಯೇ?
ಇಂದು (ಫೆಬ್ರವರಿ 17, 2026) ಸಂಭವಿಸುತ್ತಿರುವ ವರ್ಷದ ಮೊದಲ ಪಾರ್ಶ್ವ ಸೂರ್ಯ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಇದು ಪ್ರಮುಖವಾಗಿ ಅಂಟಾರ್ಕ್ಟಿಕಾ, ದಕ್ಷಿಣ ಆಫ್ರಿಕಾ ಮತ್ತು ಹಿಂದೂ ಮಹಾಸಾಗರದ ಭಾಗಗಳಲ್ಲಿ ಮಾತ್ರ ಕಂಡುಬರಲಿದ್ದು, ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3:45ಕ್ಕೆ ಆರಂಭವಾಗಿ ಸಂಜೆ 5:43ಕ್ಕೆ ಗರಿಷ್ಠ ಮಟ್ಟ ತಲುಪಿ ರಾತ್ರಿ 7:41ಕ್ಕೆ ಮುಕ್ತಾಯವಾಗಲಿದೆ. ಭಾರತದಲ್ಲಿ ಈ ಗ್ರಹಣ ಗೋಚರಿಸದ ಹಿನ್ನೆಲೆಯಲ್ಲಿ ಯಾವುದೇ ಧಾರ್ಮಿಕ ನಿಯಮಗಳು ಅಥವಾ ಸೂತಕ ಅನ್ವಯಿಸುವುದಿಲ್ಲ ಎಂದು ಶಾಸ್ತ್ರಜ್ಞರು ತಿಳಿಸಿದ್ದಾರೆ. ವೈಜ್ಞಾನಿಕವಾಗಿ ಇದು ಪಾರ್ಶ್ವ ಗ್ರಹಣವಾಗಿದ್ದು, ಚಂದ್ರನು ಸೂರ್ಯನ ಒಂದು ಭಾಗವನ್ನು ಮಾತ್ರ ಮರೆಮಾಡುತ್ತಾನೆ.
- 17 Feb 2026 7:17 AM IST
ನ್ಯೂಸ್ಕ್ಲಿಕ್ ಪೋರ್ಟಲ್ ಮತ್ತು ಎಡಿಟರ್ 184 ಕೋಟಿ ರೂ. ದಂಡ ವಿಧಿಸಿದ ಇಡಿ
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆಯ ಆರೋಪದ ಮೇಲೆ ಸುದ್ದಿ ಜಾಲತಾಣ 'ನ್ಯೂಸ್ಕ್ಲಿಕ್' (NewsClick) ಮತ್ತು ಅದರ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರಿಗೆ ಜಾರಿ ನಿರ್ದೇಶನಾಲಯವು ಒಟ್ಟು 184 ಕೋಟಿ ರೂ. ದಂಡ ವಿಧಿಸಿದೆ. ಈ ಪೈಕಿ ಸುದ್ದಿ ಪೋರ್ಟಲ್ ಮಾಲೀಕತ್ವ ಹೊಂದಿರುವ 'ಪಿಪಿಕೆ ನ್ಯೂಸ್ಕ್ಲಿಕ್ ಸ್ಟುಡಿಯೋ ಪ್ರೈವೇಟ್ ಲಿಮಿಟೆಡ್'ಗೆ 120 ಕೋಟಿ ರೂ. ಮತ್ತು ಪ್ರಬೀರ್ ಪುರ್ಕಾಯಸ್ಥ ಅವರಿಗೆ ₹64 ಕೋಟಿ ದಂಡ ವಿಧಿಸಲಾಗಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ.
- 17 Feb 2026 7:15 AM IST
ವಿದ್ಯಾರ್ಥಿನಿಯ ಭೀಕರ ಕೊಲೆ ಮಾಡಿ ‘ಆತ್ಮ’ ಕರೆಯಲು ಯೂಟ್ಯೂಬ್ ನೋಡಿದ್ದ ಆರೋಪಿ!
ಇಂದೋರ್ನ ದ್ವಾರಕಾಪುರಿ ಪ್ರದೇಶದಲ್ಲಿ ಎಂ.ಬಿ.ಎ ವಿದ್ಯಾರ್ಥಿನಿಯ ಭೀಕರ ಕೊಲೆ ಪ್ರಕರಣದ ಆರೋಪಿ ಪಿಯೂಷ್ ಧಮ್ನೋಟಿಯಾ ವಿಚಾರಣೆಯ ವೇಳೆ ಬೆಚ್ಚಿಬೀಳಿಸುವ ಸತ್ಯಗಳನ್ನು ಬಾಯ್ಬಿಟ್ಟಿದ್ದಾನೆ. ಫೆಬ್ರವರಿ 10 ರಂದು ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ನಂತರ, ಆಕೆಗೆ "ಉಡುಗೊರೆ" ನೀಡುವ ನೆಪದಲ್ಲಿ ಕೈಕಾಲುಗಳನ್ನು ಕಟ್ಟಿ, ಕಣ್ಣಿಗೆ ಬಟ್ಟೆ ಕಟ್ಟಿ ಬರ್ಬರವಾಗಿ ಹತ್ಯೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಕೃತ್ಯದ ನಂತರ ಮುಂಬೈ ಸಮೀಪದ ಪನ್ವೇಲ್ನ ನಿರ್ಜನ ಪ್ರದೇಶಕ್ಕೆ ಪರಾರಿಯಾಗಿದ್ದ ಈತ, ಅಲ್ಲಿ ತಾನು ಕೊಂದ ಹುಡುಗಿಯ ಆತ್ಮದೊಂದಿಗೆ ಮಾತನಾಡಲು ಯೂಟ್ಯೂಬ್ನಲ್ಲಿ "ಆತ್ಮಗಳನ್ನು ಕರೆಯುವುದು ಹೇಗೆ" ಎಂಬ ವಿಡಿಯೋಗಳನ್ನು ನೋಡಿ, ಅಗರಬತ್ತಿ ಹಚ್ಚಿ ಕತ್ತಲಿನಲ್ಲಿ ಕ್ಷಮೆಯಾಚಿಸುತ್ತಾ ವಿಚಿತ್ರವಾಗಿ ವರ್ತಿಸುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಸದ್ಯ ಮೂರು ದಿನಗಳ ಪೊಲೀಸ್ ಕಸ್ಟಡಿಯಲ್ಲಿರುವ ಈತನ ಕ್ರೌರ್ಯ ಮತ್ತು ಕೊಲೆಯ ನಂತರದ ಈ ವಿಲಕ್ಷಣ ನಡವಳಿಕೆ ನಗರದಾದ್ಯಂತ ತೀವ್ರ ಸಂಚಲನ ಮೂಡಿಸಿದೆ.

